ShareChat
click to see wallet page
search
#ದಿನಕ್ಕೊಂದು ಕಥೆ ಆತ್ಮ ಸಮರ್ಪಣೆ:- ಮುಂಜಾನೆ ಗಂಗಾ ನದಿಯಲ್ಲಿ ಒಬ್ಬ ಸನ್ಯಾಸಿ ಲಂಗೋಟಿ ಹಾಕಿಕೊಂಡು ಸ್ನಾನ ಮಾಡುತ್ತಿದ್ದನು. ಲಂಗೋಟಿ ಅಂದುಕೊಂಡಿತು. ಛೆ ಈ ಮನುಷ್ಯ ನನ್ನನ್ನು ಎಷ್ಟು ತುಚ್ಚವಾಗಿ ಕಾಣುತ್ತಾನೆ. ನನಗೆ ಎಂತಹ ಸ್ಥಾನ ಕೊಟ್ಟಿದ್ದಾನೆ. ಇವನನ್ನು ಬಿಟ್ಟು ಹೋಗಬೇಕು ಎಂದು ಸಿಟ್ಟಿನಿಂದ ಅದು ಅವನಿಂದ ಕಳಚಿ ಕೊಂಡು ಗಂಗಾ ನದಿಯ ಅಂಚಿನಲ್ಲಿ ಬಿದ್ದುಕೊಂಡಿತು. ಸ್ವಲ್ಪ ಸಮಯಕ್ಕೆ ಇನ್ನೊಬ್ಬ ಸಾಧು ಸ್ನಾನಕ್ಕೆ ಬಂದನು. ಆತನು ಲಂಗೋಟಿ ಧರಿಸಿ ಸ್ನಾನ ಮಾಡುವಾಗ ಅಕಸ್ಮಾತ್ ಅವನ ಲಂಗೋಟಿ ಕೂಡ ಕೊಚ್ಚಿಕೊಂಡು ಹೋಯಿತು. ಅವನಿಗೆ ಲಂಗೋಟಿ ಬೇಕಾಗಿತ್ತು. ಮರಳ ಮೇಲೆ ಬಿದ್ದುಕೊಂಡಿದ್ದ ಲಂಗೋಟಿ ಕಣ್ಣಿಗೆ ಕಂಡು ಹರ್ಷದಿಂದ ಅದನ್ನು ಹಾಕಿಕೊಂಡು ಸದ್ಯ ಪಾರದೆ ಎಂದುಕೊಂಡನು. ಅವನು ಹಾಕಿಕೊಂಡ ಮೇಲೆ ಮತ್ತೆ ಲಂಗೋಟಿಗೆ ದುಃಖವಾಯಿತು. ತನಗೆ ಹಿಂದಿನ ಮಾಲೀಕ ಕೊಟ್ಟಿದ್ದ ಸ್ಥಾನವನ್ನೆ ಇವನು ಕೊಡುತ್ತಿದ್ದಾನೆ ಎಂದು. ಎರಡು ದಿನ ಕಳೆಯಿತು ಲಂಗೋಟಿಗೆ ಅಲ್ಲಿ ಇರುವುದು ಬಹಳ ಕಷ್ಟವಾಯಿತು. ಏಕೆಂದರೆ ಹಿಂದಿನ ಯಜಮಾನ ಇವನಿಗಿಂತ ಅದನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದ. ಅವನ ಬಳಿ ಎರಡು ಲಂಗೋಟಿ ಇದ್ದು ದಿನವು ಬದಲಾಯಿಸುತ್ತಿದ್ದ. ಒಂದು ದಿನವಾದರೂ ಲಂಗೋಟಿಗೆ ಬಿಡುವು ಸಿಗುತ್ತಿತ್ತು.‌ ಇವನು ಮಹಾಕ್ರೂರಿ ಎರಡು ದಿನಗಳಾದರೂ ಬದಲಾಯಿಸುತ್ತಿರಲಿಲ್ಲ.‌ ಅದೂ ಇಲ್ಲವಾಯಿತು. ಈಗ ಅದಕ್ಕನ್ನಿಸಿತು. ನಾನು ಎಷ್ಟು ದೊಡ್ಡ ತಪ್ಪು ಮಾಡಿದೆ ನನ್ನ ಹಳೆ ಯಜಮಾನ ನನ್ನು ಬಿಟ್ಟು ಬರಬಾರದಾಗಿತ್ತು ಎಂದು ಅದು ತನ್ನಷ್ಟಕ್ಕೆ ನೊಂದುಕೊಂಡಿತು. ಹೀಗೆ ಒಂದು ಕೋಣ ತನ್ನ ಒಡೆಯನ ಗದ್ದೆಯನ್ನು ಮುಂಜಾನೆಯಿಂದ ಸಂಜೆವರೆಗೂ ಗೇಯುತ್ತಿತ್ತು. ಅದಕ್ಕೂ ಸಾಕಾಗಿ ಹೋಗಿತ್ತು. ಅದೊಂದು ಉಪಾಯ ಮಾಡಿತು. ಒಂದು ದಿನ ಅವನು ಮೇಯಲು ಬಿಟ್ಟಿದ್ದ. ಅಲ್ಲಿಂದ ತಪ್ಪಿಸಿಕೊಂಡು ದೂರ ಪ್ರದೇಶಕ್ಕೆ ಓಡಿಹೋಯಿತು. ಅಲ್ಲಿ ಇಲ್ಲಿ ಹುಲ್ಲು ತಿಂದು ಅಲೆದಾಡುತ್ತಿರುವಾಗ ಮತ್ತೊಬ್ಬ ರೈತನ ಕಣ್ಣಿಗೆ ಕೋಣ ಬಿದ್ದಿತು. ಇದು ಎಲ್ಲೋ ತಪ್ಪಿಸಿಕೊಂಡು ಬಂದಿದೆ ಎಂದು ತಿಳಿದು ಅವನೇ ಅದನ್ನು ಒಯ್ದನು. ಮತ್ತು ತನ್ನ ಹೊಲದಲ್ಲಿ ನೇಗಿಲಿಗೆ ಕಟ್ಟಿ, ಹಗಲು ರಾತ್ರಿ ಎನ್ನದೆ ಅದರಿಂದ ಕೆಲಸ ಮಾಡಿಸ ತೊಡಗಿದ. ಆಗ ಈ ಕೋಣಕ್ಕೆ ಅನ್ನಿಸಿತು ನನ್ನ ಹಳೆಯ ಯಜಮಾನ ಬೆಳಿಗ್ಗೆಯಿಂದ ಮುಂಜಾನೆವರೆಗೂ ಕೆಲಸ ಮಾಡಿಸಿ ರಾತ್ರಿ ಕೊಟ್ಟಿಗೆಯಲ್ಲಿ ಕಟ್ಟಿ ಹುಲ್ಲು ಮೇವು ಕೊಟ್ಟು ಮೈದಡವಿ ಆರೈಕೆ ಮಾಡುತ್ತಿದ್ದ ಇವನು ಮಹಾಕ್ರೂರಿ. ಹಗಲು ರಾತ್ರಿ ಎನ್ನದೆ ಕೆಲಸ ಮಾಡಿಸಿಕೊಳ್ಳುತ್ತಾನೆ ಸ್ವಲ್ಪ ನಿಂತರು ಚಾಟಿಯಿಂದ ಹೊಡೆಯುತ್ತಾನೆ. ಒಳ್ಳೆಯ ಆಹಾರವನ್ನು ಕೊಡುವುದಿಲ್ಲ ವಿಶ್ರಾಂತಿಯಂತೂ ಇಲ್ಲವೇ ಇಲ್ಲ ನಾನು ನನ್ನ ಹಳೆಯ ಯಜಮಾನನನ್ನು ಬಿಟ್ಟು ಬಂದು ದೊಡ್ಡ ತಪ್ಪು ಮಾಡಿದೆ ಅಲ್ಲಿ ಕಷ್ಟ ಎಂದು ಇಲ್ಲಿ ಬಂದು ಸಿಕ್ಕಿಕೊಂಡೆ, ಇನ್ನೂ ಕಷ್ಟ ಪಡುವಂತಾಯಿತು. ಇವನಿಂದ ಎಂದಿಗೂ ಬಿಡುಗಡೆ ಇಲ್ಲ ಎಂದು ನೊಂದಿತು. ಅದೊಂದು ಕಾಡು, ಕಾಡಿನ ಒಂದು ಮರದಲ್ಲಿ ಒಂದು ಪುಟ್ಟ ಮೈನಾ ಪಕ್ಷಿ ಹಲವು ಕಾಲದಿಂದ ವಾಸ ಮಾಡಿಕೊಂಡಿತ್ತು. ಆದರೆ ಆ ಕಾಡು ಎಂದೂ ಹಸಿರಿನಿಂದ ಕಂಗೊಳಿಸಿರಲಿಲ್ಲ. ಒಂದು ಹಸಿರೆಲೆ, ಹೂವು, ಕಾಯಿ,ಹಣ್ಣು ಎಂದೆಂದೂ ಆಗಿರಲಿಲ್ಲ. ಅಲ್ಲಿ ಏನೂ ಇಲ್ಲದಿದ್ದರೂ ಮೈನಾ ಮಾತ್ರ ಸದಾ ಚಿಂತೆ ಇಲ್ಲದೆ ಶಿವನಾಮ ಸ್ಮರಣೆಯನ್ನು ಮಾಡುತ್ತಾ ಜೀವನ ಕಳೆಯುತ್ತಿತ್ತು. ಒಂದು ದಿನ ನಾರದರು ಆ ಕಾಡಿಗೆ ಬಂದರು. ಮೈನಾ ಕೇಳಿತು. ನಾರದರೆ ಎಲ್ಲಿಗೆ ಹೋಗುತ್ತಿದ್ದೀರಿ? ನಾನು ಶಿವ ದರ್ಶನ ಮಾಡಲು ಕೈಲಾಸಕ್ಕೆ ಹೋಗುತ್ತಿದ್ದೇನೆ ಎಂದರು. ಮೈನಾ ಹೇಳಿದ್ದು ಹಾಗಾದರೆ ಶಿವನಿಗೆ ಹೇಳಿ, ಪರಮೇಶ್ವರನು ನನ್ನನ್ನು ಈ ಕಾಡಿನಲ್ಲಿ ಸಂತೋಷವಾಗಿ ಇಟ್ಟಿದ್ದಾನೆ. ಅದೇ ರೀತಿ ಪಾಪ ಈ ಕಾಡು ಸಹ ಹಸಿರಿನಿಂದ ಕಂಗೊಳಿಸುವಂತೆ, ಈ ಕಾಡಿನ ಮರಗಿಡಗಳಲ್ಲಿ ಹೂವು ಹಣ್ಣುಗಳು ಚಿಗುರುವಂತೆ ತಿಳಿಸಿ ಇದೇ ನನ್ನ ಬೇಡಿಕೆ ಎಂದಿತು. ನಾರದನು ಹಾಗೆ ಆಗಲಿ ಎಂದು ಕೈಲಾಸಕ್ಕೆ ಬಂದು, ಮೈನಾ ಪಕ್ಷಿ ಹೇಳಿದ್ದನ್ನು ಶಿವನಿಗೆ ಬಹಳ ಸಲ ಹೇಳಿದ ಮೇಲೆ, ಶಿವನು ಧ್ಯಾನದಿಂದ ಹೊರ ಬಂದನು. ಮತ್ತೆ ನಾರದರು ಹೇಳಿದಾಗ, ಶಿವನು ಹೇಳಿದನು ನಾನು ಏನು ಮಾಡಲು ಸಾಧ್ಯವಿಲ್ಲ ಅದು ಆ ಪಕ್ಷಿಯ ವಿಧಿಯೇ ಹಾಗಿದೆ. ಏಳು ಜನ್ಮಗಳ ಕಾಲ ಅದು ಹೀಗೆ ಒಣಗಿದ ಕಾಡಿನಲ್ಲಿ ಇರಬೇಕು ಎಂದನು. ಈ ಕಥೆಯನ್ನು ಬರಹ ರೂಪಕ್ಕೆ ತಂದವರು — ಆಶಾ ನಾಗಭೂಷಣ. ನಾರದನು ಅದೇ ವಿಚಾರವನ್ನು ಹೇಳಲು ಕಾಡಿಗೆ ಬಂದನು. ಕಾಡಿನೆಲ್ಲೆಡೆ ಹಸಿರು ಕಂಗೊಳಿಸುತ್ತಿತ್ತು. ಹಳ್ಳಕೊಳ್ಳಗಳು ತುಂಬಿದ್ದವು. ಮರ-ಗಿಡಗಳಲ್ಲಿ ಹೂವು- ಹಣ್ಣು- ಹಂಪಲು ತೊನೆದಾಡಿತ್ತು. ನಾರದರಿಗೆ ಆಶ್ಚರ್ಯವಾಯಿತು. ಇದೇನಿದು ಪರಮೇಶ್ವರ ನೋಡಿದರೆ, ಮೈನಾ ಹಾಕ್ಕಿಯ ವಿಧಿಯೇ ಹಾಗಿದೆ ಎಂದು ಹೇಳಿದ್ದರು ಆದರೆ ನಾ ಬರುವ ವೇಳೆಗೆ ಈ ರೀತಿಯಾಗಿದೆಯಲ್ಲ. ಮೈನಾ ಪಕ್ಷಿಯು ಬಹಳ ಸಂತೋಷದಿಂದ ಹಾಡು ಹೇಳುತ್ತಿತ್ತು. ನಾರದರು ಸೀದಾ ಕೈಲಾಸಕ್ಕೆ ಬಂದರು. ಹೇ ಪರಮೇಶ್ವರ ನೀನು ಹೇಳುವುದೊಂದು, ಮಾಡುವುದು ಇನ್ನೊಂದು, ನನ್ನ ಹತ್ತಿರ ಆ ಹಕ್ಕಿಯ ವಿಧಿ ಇರುವುದೇ ಹಾಗೆ ಎಂದು ಹೇಳಿದ್ದೆ, ಆದರೆ ನಾನು ಹೋಗಿ ನೋಡಿದಾಗ ಕಾಡು ಹಸಿರಿನಿಂದ ತುಂಬಿ ನಳನಳಿಸುತ್ತಿತ್ತು. ಮೈನಾ ಸಂತೋಷವಾಗಿತ್ತು. ಇದೇನು ಭಗವಂತ ನನಗೆ ಯಾಕೆ ಸುಳ್ಳು ಹೇಳಿದಿರಿ ಎಂದನು. ಆಗ ಪರಮೇಶ್ವರನ ನಕ್ಕು, ನಾರದ ನಾನು ಸುಳ್ಳು ಹೇಳಿಲ್ಲ ನಿಜವನ್ನೇ ಹೇಳಿದ್ದೇನೆ. ಮೈನಾ ಪಕ್ಷಿಯ ಹಣೆಬರಹವೇ ಹಾಗಿತ್ತು. ಆದರೆ ಅದು ತನ್ನನ್ನು ಸಂಪೂರ್ಣವಾಗಿ ಅದೇ ಜೀವನಕ್ಕೆ ಸಮರ್ಪಿಸಿಕೊಂಡಿತ್ತು. ಹಾಗಾಗಿ ಆ ಪುಟ್ಟ ಪಕ್ಷಿಯು ನನ್ನ ಧ್ಯಾನ ಮಾಡುತ್ತಾ ಅದರಲ್ಲೆ ಸಂತೋಷ ನೆಮ್ಮದಿಯನ್ನು ಕಂಡುಕೊಂಡಿತ್ತು. ಅದು ಅದಕ್ಕಿದ್ದ ಪರಿಸ್ಥಿತಿಯನ್ನೇ ಒಪ್ಪಿಕೊಂಡು ನನ್ನ ನಾಮಸ್ಮರಣೆಯನ್ನು ಮಾಡುತ್ತಾ ಜೀವಿಸಿದ್ದ ಕಾರಣ ಅದರ ಏಳು ಜನ್ಮಗಳು ಬಹಳ ಬೇಗ ಕಳೆದು ಎಂಟನೇ ಜನ್ಮದಲ್ಲಿದ್ದ ಸುಖ, ಸಂತೋಷ ಸಮೃದ್ಧಿ ಅದರ ಜೀವನದಲ್ಲಿ ದೊರಕಿತು. ಇದನ್ನು ಕೇಳಿದ ಮೇಲೆ ನಾರದನು, ಪರಮೇಶ್ವರ ಇರುವ ಕರ್ಮ ಫಲವನ್ನು ಅನುಭವಿಸದೆ ಬೇರೆ ಮಾರ್ಗವೇ ಇಲ್ಲವೇ ಎಂದನು. ಅದಕ್ಕೆ ಶಿವನು ದೇವಾನುದೇವತೆಗಳೇ ಕರ್ಮಫಲವನ್ನು ಅನುಭವಿಸಿದ್ದಾರೆ ಹಾಗಿರುವಾಗ ಇದು ಯಾರನ್ನು ಬಿಡುವುದಿಲ್ಲ. ಭೂಮಿಯಲ್ಲಿ ಜನ್ಮ ತಾಳಿದ ಪ್ರತಿಯೊಬ್ಬನೂ, ಪ್ರತಿಯೊಂದು ಜೀವಿಯು ತನಗೆ ಕೊಟ್ಟಿರುವ ಬದುಕನ್ನು ಸಂತೋಷದಿಂದ ಅನುಭವಿಸಿದರೆ ಕರ್ಮ ಶೇಷ ಗಳೆಲ್ಲ ಕಳೆದು ಸುಖ ಪ್ರಾಪ್ತಿಯಾಗುತ್ತದೆ ಎಂಬುದನ್ನು ಮನದಟ್ಟು ಮಾಡಿಸಿದನು. ಇದೊಂದು ಕಥೆ. ಮನುಷ್ಯನಿಗೂ ಹಾಗೆ ಆ ಭಗವಂತನೇ ನಿಗದಿ ಮಾಡಿರುವ ವಿಧಿಯನ್ನು ತಪ್ಪಿಸಿಕೊಳ್ಳಲು ಹೋದರೆ ಮತ್ತಷ್ಟು ಕಷ್ಟಗಳು ಒದಗಿ ಅವನು ಅನುಭವಿಸುವ ಪ್ರಸಂಗ ಬರುತ್ತದೆ. ‌ ಪರಮಾತ್ಮನ ಇಚ್ಛೆಗೆ ಬದ್ಧರಾಗಿ ಶರಣಾಗಬೇಕು. ನಮಗೆ ಸಿಕ್ಕ ಬದುಕನ್ನು ಎಡರು ತೊಡರುಗಳು ಬಂದರೂ ಸಹಿಸಿಕೊಂಡು ವಿಧಿ ನಿಯಮವನ್ನೇ ಪಾಲಿಸಬೇಕು ಎಂಬುದು ಲಂಗೋಟಿ, ಕೋಣ ಮತ್ತು ಪಕ್ಷಿಗೆ ಅರ್ಥವಾಯಿತು. ಇಲ್ಲಿ ಇಲ್ಲದ್ದು ಮತ್ತೆಲ್ಲೋ ಬಹಳವಿದೆ, ಅಂದುಕೊಂಡು ಹೋದರೆ ಅಲ್ಲೂ ಸಹ ಒಂದು ದೋಷ ಇದ್ದೇ ಇರುತ್ತದೆ ಆದುದರಿಂದ ಮನಸ್ಸನ್ನೆ ಒಂದು ಕಟ್ಟು- ನಿಟ್ಟು ಶಿಸ್ತಿಗೆ ಒಳಪಡಿಸಿಕೊಂಡು, ಬದ್ಧನಾಗಿ ಮಾಡಬೇಕಾದ ಕಾರ್ಯಗಳನ್ನು ಪ್ರಾಮಾಣಿವಾಗಿ ಮಾಡುತ್ತಿದ್ದರೆ, ಭಗವಂತನಿಗೆ ನಿಜ ಭಕ್ತನಾಗುತ್ತಾನೆ. ಭಕ್ತಿಯೆಂದರೆ ಆತ್ಮ ಸಮರ್ಪಣೆ ಭಗವಂತ ಕೊಟ್ಟಂಥ ಕೆಲಸವು ಕಷ್ಟವೆಂದು, ಕೀಳಾದ ಕೆಲಸವೆಂದು, ಗೊಣಗುಟ್ಟದೆ ಪರಮಾತ್ಮನ ವರಪ್ರಸಾದವೆಂದು, ಅವನ ಚಿಂತನೆಯಲ್ಲೇ ಒಳ್ಳೆಯ ಕಾಲಕ್ಕಾಗಿ ಕಾಯುತ್ತಾ ಶಾಂತಿಯಿಂದ ಕೆಲಸ ಮಾಡುತ್ತಾ ಬಂದರೆ ಸಂತೃಪ್ತಿ ದೊರೆಯುತ್ತದೆ. ವ್ರತಗಳಾಗಲಿ, ಯೋಗ–ಯಜ್ಞಗಳಾಗಲಿ, ಜ್ಞಾನೋಪದೇಶಗಳಾಗಲಿ—ಇವೆಲ್ಲವೂ ಆತ್ಮವನ್ನು ಶುದ್ಧಗೊಳಿಸುವ ಮಾರ್ಗಗಳು ಮಾತ್ರ. ಅವು ಮನಸ್ಸನ್ನು ಸಿದ್ಧಪಡಿಸುತ್ತವೆ, ಹೃದಯವನ್ನು ಮೃದುಗೊಳಿಸುತ್ತವೆ, ಜೀವನವನ್ನು ಧರ್ಮದತ್ತ ತಿರುಗಿಸುತ್ತವೆ. ಆದರೆ ಮುಕ್ತಿಯ ಅಂತಿಮ ಕೀಲಿಕೈ ಒಂದೇ, ಅದು ಭಗವಂತನ ಮೇಲಿನ ದೃಢ, ನಿಶ್ಚಲ, ನಿಷ್ಕಪಟ ಭಕ್ತಿ. ವಂದನೆಗಳೊಂದಿಗೆ, ಬರಹ: ©ಆಶಾ ನಾಗಭೂಷಣ ▬▬ஜ۩۞۩ஜ▬▬▬*▬▬▬ஜ۩۞۩ஜ▬▬ !! ಸರ್ವಂ ಶ್ರೀ ಕೃಷ್ಣಾರ್ಪಣಮಸ್ತು !! 🙏 ಸರ್ವೇ ಜನಾಃ ಸುಖಿನೋ ಭವಂತುಸರ್ವೇ ಸಂತು ನಿರಾಮಯಾಃ 🙏 !! ಧರ್ಮೋ ರಕ್ಷತಿ ರಕ್ಷಿತಃ !! ▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬ 🙏 ಹರಿ ಸರ್ವೋತ್ತಮ ವಾಯು ಜೀವೋತ್ತಮ 🙏
ದಿನಕ್ಕೊಂದು ಕಥೆ - Asha Nagabhushana Asha Nagabhushana - ShareChat