#🎥 Motivational ಸ್ಟೇಟಸ್ 15 ಮಹಾತಪಸ್ವಿ ಸಮಾಜ ಸುಧಾರಕ ಸಂತ್ ಸೇವಾಲಾಲ್ ಮಹಾರಾಜ ಅವರ ಜಯಂತಿಯ ಶುಭಾಶಯಗಳು*
ಸೇವಾಲಾಲ ಮಹಾರಾಜರು 1739 ರ ಫೆಬ್ರವರಿ 15 ರಂದು ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಸೂರಗೊಂಡನಕೊಪ್ಪದಲ್ಲಿ ಭೀಮಾನಾಯಕ ಧರ್ಮಿಣಿಬಾಯಿಯವರ ಉದರದಲ್ಲಿ ಜನಿಸಿದರು. ರಾಮಸಿ ರಾಮಾವತ್ (ರಾಥೋಡ್) ಗೋತ್ರದ ರಾಮಜಿನಾಯಕರ ಹಿರಿಯ ಮಗ ಭೀಮಾನಾಯಕ. ಭೀಮಾನಾಯಕ ಧರ್ಮೀಣಿಬಾಯಿ ಮದುವೆಯಾದ 12 ವರ್ಷಗಳ ನಂತರ ಮರಿಯಮ್ಮಾ ದೇವಿಯ ಕೃಪೆಯಿಂದ ಸೇವಾಲಾಲರು ಜನಿಸುತ್ತಾರೆ. ನಂತರ ಹಾಪಾ, ಬದ್ದು, ಪೂರಾ ಎಂಬ ಮಕ್ಕಳು ಜನಿಸುತ್ತಾರೆ.
ಸೇವಾಲಾಲರಿಗೆ 12 ವರ್ಷ ತುಂಬಿದಾಗ ಮರಿಯಮ್ಮ ತನ್ನ ಷರತನ್ನು ಈಡೇರಿಸಬೇಕೆಂದು ಧರ್ಮಿಣಿಬಾಯಿಯವರ ಕನಸಿನಲ್ಲಿ ಬಂದು ಸೇವಾಲಾಲರನ್ನು ತನ್ನ ಸೇವೆಗೆ ಬಿಡಬೇಕೆಂದು ಒತ್ತಾಯಿಸುತ್ತಾಳೆ.
ಭೀಮಾನಾಯಕ ದಂಪತಿಯ ಮುದ್ದಿನ ಮಗ ಸೇವಾಲಾಲ್ ಆಗಿದ್ದರು. ದೇವಿ ಭೀಮಾನಾಯಕನಿಗೆ ನೀಡಿದ ಸೂಚನೆಯಂತೆ ಹರಕೆ ಈಡೇರಿಸಲು ಕೇಳಿದರೂ ಭೀಮಾನಾಯಕ ಹಿಂದೇಟು ಹಾಕುತ್ತಿರುತ್ತಾರೆ. ಸೇವಾಲಾಲರು ಸದಾ ಭಗವಂತನ ಧ್ಯಾನದಲ್ಲಿ ನಿರತರಾಗಿರುತ್ತಾರೆ. 12 ವರ್ಷಗಳಾದರೂ ಭೀಮಾನಾಯಕ ಹರಕೆ ತೀರಿಸಿದೆ ಇರುವುದರಿಂದ ದೇವಿ ಕುಪಿತಗೊಳ್ಳುತ್ತಾಳೆ. ಇದರಿಂದಾಗಿ ಭೀಮಾನಾಯಕನಿಗೆ ಬಗೆಬಗೆಯ ಕಂಟಕಗಳು ಬರಲಾರಂಭಿಸುತ್ತದೆ.ಹಲವಾರು ದನಗಳು ಕಣ್ಮರೆಯಾಗುತ್ತವೆ.
*#ಬಾಲ್ಯಜೀವನ#*
ಸೇವಾಲಾಲ ಮಹಾರಾಜರು ಬಾಲಕನಾಗಿ ಬೆಳೆಯುತ್ತಿದ್ದಾಗ ಗೋವುಗಳನ್ನು ಮೇಯಿಸಲು ಹೋಗುತ್ತಿದ್ದಾಗಲೇ ತನ್ನ ಸಹಪಾಠಿಗಳೊಂದಿಗೆ ಆಟವಾಡುತ್ತಾ ಪವಾಡಗಳ್ನು ತೋರುತ್ತಿದ್ದರು. ದೇವಿ ಮರಿಯಮ್ಮ ಅವರಿಂದ ದೊರೆತ ದಿವ್ಯಶಕ್ತಿಯಿಂದಾಗಿ ಬಂಡಿಯನ್ನು ನಗಾರಿಯನ್ನಾಗಿ ಬಾರಿಸುವುದು, ಕೆಸರನ್ನು ಹುಗ್ಗಿ ಪಾಯಸವನ್ನಾಗಿಸುವುದು, ನೀರನ್ನು ತುಪ್ಪ ಮಾಡಿ ಯಜ್ಞ ಮಾಡುತ್ತಿದ್ದರು. ಅವರು ಒಂದಲ್ಲಾ ಹಲವಾರು ಪವಾಡಗಳನ್ನು ಮಾಡುತ್ತಾ ಬಂಜಾರಾ ಸಮುದಾಯದ ಆರಾಧ್ಯ ದೈವರಾಗಿದ್ದಾರೆ.