#📜ಪ್ರಚಲಿತ ವಿದ್ಯಮಾನ📜
ವಿಷ್ಣುವರ್ಧನ್ ಸ್ಮಾರಕ ಕುರಿತು ನಮ್ಮ ಕುಟುಂಬದಿಂದ ಯಾವುದೇ ಸ್ಪಷ್ಟನೆ ನಿರೀಕ್ಷೆ ಮಾಡಬೇಡಿ: ಅನಿರುದ್ಧ
ಪುಣ್ಯಭೂಮಿಯ ಬಗ್ಗೆ ನನ್ನ ಸಾಮಾಜಿಕ ಜಾಲತಾಣದಲ್ಲಿ ಕೆಲವರು ಕೇಳಿದ್ದಾರೆ. ಹಾಗಾಗಿ…
ಪುಣ್ಯಭೂಮಿಯ ಬಗ್ಗೆ ಈಗಾಗಲೇ ನಾವು ಮಾನ್ಯ ಮಂತ್ರಿರವರನ್ನು ಕೇಳಿದ್ದೇವೆ… ಕೆಲವು ಅಧಿಕಾರಿಗಳನ್ನೂ ಸಂಪರ್ಕಿಸಿ ಕೇಳಿದ್ದೇವೆ. ಆದರೆ ಅದು ಈಗ ಅರಣ್ಯ ಇಲಾಖೆಗೆ ಸೇರಿದೆ ಎಂದು ತಿಳಿಸಿದ್ದಾರೆ. ಅದರಿಂದಾಗಿ ಸಾಕಷ್ಟು ಅಡಚಣೆಗಳಿವೆ.
ಸ್ಮಾರಕ ಅಲ್ಲೇ ಆಗಬೇಕು ಅಂತ ನಾವು 6½ ವರ್ಷಗಳ ಕಾಲ ನಿರಂತರವಾಗಿ ಪ್ರಯತ್ನ ಪಟ್ಟಿದ್ದೇವೆ. “ಅಲ್ಲಿ ಸಾಧ್ಯವಿಲ್ಲ” ಅಂತ ಮಾನ್ಯ ಮುಖ್ಯಮಂತ್ರಿಗಳು ಹಲವಾರು ಬಾರಿ ಸೂಚಿಸಿದ್ದರೂ, ನಾವು ನಮ್ಮ ಪ್ರಯತ್ನವನ್ನು ಬಿಡಲಿಲ್ಲ. ಈಗಲೂ ಅದೇ ಪರಿಸ್ಥಿತಿ… ಆದರೂ ನಾವು ಅವರಿಗೆ ಕೇಳಿದ್ದೇವೆ.
ಹಾಗೆಯೇ ಅಧಿಕಾರಿಗಳು ಹೇಳಿರುವುದೇನೆಂದರೆ — ಸರ್ಕಾರ ಈಗಾಗಲೇ ಸ್ಮಾರಕವನ್ನು ಮೈಸೂರಿನಲ್ಲಿ ನಿರ್ಮಿಸಿದೆ. ಇನ್ನು ಮುಂದೆ ನಾವು, ಅಂದರೆ ಕುಟುಂಬದವರು, ಅಭಿಮಾನ ಸ್ಟೂಡಿಯೋ ಬಗ್ಗೆ ಮತ್ತೆ ಕೇಳುತ್ತಾ ಹೋದರೆ ಅದು ಒಳ್ಳೆಯದಾಗಿ ಕಾಣುವುದಿಲ್ಲ ಎಂದು.
ಹಾಗಾಗಿ, ಅಭಿಮಾನಿಗಳಾಗಿ ಇದರ ಸಂಪೂರ್ಣ ಜವಾಬ್ದಾರಿ ಈಗ ಕೇವಲ ತಮ್ಮದಾಗಿದೆ. ತಾವೆಲ್ಲರೂ ಕೂಡ ಪ್ರಯತ್ನ ಮಾಡಿ… ಅದು ಆದರೆ ನಾವೂ ಸಂತೋಷಪಡುತ್ತೇವೆ. ಜೊತೆಗೆ ಅಭಿಮಾನಿಗಳಿಂದ ಆಯಿತು ಅನ್ನೋ ಹೆಗ್ಗಳಿಕೆಗೂ ತಾವೆಲ್ಲರೂ ಪಾತ್ರರಾಗುತ್ತೀರಿ, ಮಾದರಿ ಆಗುತ್ತೀರಿ… ಈಗಾಗಲೇ ತಾವು ಅಪ್ಪ ಅವರ ಬಗ್ಗೆ ಇರುವ ತಮ್ಮ ಅಭಿಮಾನವನ್ನು ಬೇರೆ ಬೇರೆ ರೀತಿಯಲ್ಲಿ ತೋರಿಸಿ ಎಲ್ಲರಿಗೂ ಪ್ರೇರಣೆ ಆಗಿದ್ದೀರಿ, ದಾಖಲೆಗಳನ್ನೂ ಸೃಷ್ಟಿ ಮಾಡಿದ್ದೀರಿ… ಈ ಕೆಲಸವೂ ತಮ್ಮಿಂದ ಆಗಲಿ ಎಂದು ಆಶಿಸುತ್ತೇನೆ.
ತಮಗೆ ಗೊತ್ತಿರಲಿ, ಅಭಿಮಾನ ಸ್ಟೂಡಿಯೋದಲ್ಲಿ ಇದ್ದ ಮಂಟಪವನ್ನು ಭಾರತಿ ಅಮ್ಮ ಸ್ವಂತ ಖರ್ಚಿನಲ್ಲೇ ಕಟ್ಟಿಸಿದ್ದರು. ನಾವು ಕೆಲ ಕಾರಣಗಳಿಂದ ಅಲ್ಲಿ ಹೋಗದೇ ಇದ್ದರೂ, ಅಭಿಮಾನಿಗಳಿಗೋಸ್ಕರ ಅದು ಹಾಗೆಯೇ ಇರಲಿ ಅಂದುಕೊಂಡಿದ್ವಿ. ಆದರೆ ಅದು ತೆರವುಗೊಂಡಿದ್ದು ಖಂಡನೀಯ.
ಇನ್ನೂ ಮೈಸೂರಿನ ಸ್ಮಾರಕದ ವಿಷಯಕ್ಕೆ ಬಂದರೆ, ಅಲ್ಲೂ ನಮಗೆ ಸುಲಭವಾಗಿರಲಿಲ್ಲ. ತುಂಬಾ ಪರಿಶ್ರಮ ಪಟ್ಟಿದ್ದೇವೆ. “ಅಭಿಮಾನ ಸ್ಟೂಡಿಯೋದಲ್ಲೇ ಆಗಬೇಕು” ಅಂತ ಹಠ ಹಿಡಿದಿದ್ದರೆ ಅಥವಾ ನಾವು ಪ್ರಯತ್ನಿಸದೇ ಇದ್ದಿದ್ದರೆ, ಇವತ್ತಿಗೂ ಸ್ಮಾರಕವೇ ನಿರ್ಮಾಣವಾಗುತ್ತಿರಲಿಲ್ಲ. ಅಷ್ಟೇ ಯಾಕೆ, ಬನಶಂಕರಿಯಿಂದ ಕೆಂಗೇರಿವರೆಗೆ 14.3 ಕಿ.ಮೀ. ರಸ್ತೆಗೆ ನಾಮಕರಣ ಕೂಡ ಆಗುತ್ತಿರಲಿಲ್ಲ.
ದಯವಿಟ್ಟು ಇದನ್ನು ಅರ್ಥಮಾಡಿಕೊಳ್ಳಿ. ನಮ್ಮ ಪ್ರಾಮಾಣಿಕತೆ, ಪರಿಶ್ರಮದ ಬಗ್ಗೆ ಏನೂ ಗೊತ್ತಿಲ್ಲದೇ, ಕೆಲವರು ಮಾತಾಡುವುದು, ಆರೋಪಗಳನ್ನು ಮಾಡುವುದು, ಏನೂ ಮಾಡದೇ ಹೇಳಿಕೆಗಳನ್ನು ಕೊಟ್ಟು ಚಪ್ಪಾಳೆ ಗಿಟ್ಟಿಸಿಕೊಂಡು ಪ್ರಚಾರ ಪಡೆಯುವ ವ್ಯಕ್ತಿಗಳ ಬಗ್ಗೆ ತಮಲ್ಲಿ ಕೆಲವರಿಗೆ ವಿಶ್ವಾಸವಿರುವುದು ನಮಗೆ ನಿಜಕ್ಕೂ ತುಂಬಾ ಬೇಸರ ತಂದಿದೆ, ಸಾಕಾಗಿದೆ.
ಕೆಲವರು ಅಭಿಮಾನಿಗಳ ವೇಷ ತೊಟ್ಟು ತಮ್ಮ ತಮ್ಮ ಸ್ವಾರ್ಥಕ್ಕಾಗಿ ನಮ್ಮ ಮಧ್ಯೆ ಬಿರುಕು ಮೂಡಿಸಲು ಪ್ರಯತ್ನಿಸುತ್ತಿದ್ದಾರೆ. ದಯವಿಟ್ಟು ಎಚ್ಚರಿಕೆಯಿಂದಿರಿ.
ಹಾಗೆಯೇ ಮೈಸೂರಲ್ಲೇ ಆಗಬೇಕು ಅನ್ನೋದು ಅಪ್ಪ ಅವರ ಆಸೆಯಾಗಿರಬಹುದು. ಅದಕ್ಕಾಗಿಯೇ ಅವರು ತಮ್ಮ ಕೊನೆಯ ಉಸಿರನ್ನು ಅಲ್ಲೇ ತೆಗೆದುಕೊಂಡರು. ಅಲ್ಲಿ ಅವರ ಅಸ್ತಿ ಇರಿಸಲಾಗಿದೆ; ಅದರ ಮೇಲೆಯೇ ಅವರ ಪ್ರತಿಮೆ ನಿಂತಿದೆ. ಅತ್ಯಂತ ಸೂಕ್ತವಾದ, ಬೃಹತ್ ಸ್ಮಾರಕ ಅದಾಗಿದೆ. ಅಪಾರ ಶ್ರದ್ಧೆಯಿಂದ ಮಾಡಿದ್ದೇವೆ… ಕ್ಷಮಿಸಿ, ಅಪ್ಪ ಅವರೇ ನಮ್ಮಿಂದ ಮಾಡಿಸಿದ್ದಾರೆ. ಅವರಿಗೆ ಗೌರವ ಕೊಡಿ. ದಯವಿಟ್ಟು ಅಲ್ಲಿ ಭೇಟಿ ನೀಡಿ… ಅಪ್ಪ ಅವರ ಆಶೀರ್ವಾದ ಪಡೆಯಿರಿ.
ಇಷ್ಟಕ್ಕೂ ಕೆಲವರು ಇನ್ನೂ ಕೂಡ ಏನೂ ಮಾಡದೇ, ಅಥವಾ ಮಾಡುತ್ತಿದ್ದೇವೆ, ಮಾಡ್ತೀವಿ ಎಂದು ಹೇಳಿ, ಕುತಂತ್ರ ಮಾಡೋ ಅಥವಾ ಮಾಡಿದ ವ್ಯಕ್ತಿಗಳು ಮತ್ತೆ ನಮ್ಮ ಮೇಲೆ ಆರೋಪ ಮಾಡಿದರೆ, ಅವರ ಮೇಲೆ ನಂಬಿಕೆ ಇಡಬೇಕೋ, ಬಿಡಬೇಕೋ ತಮಗೇ ಬಿಟ್ಟದ್ದು.
ಆದರೆ ಇನ್ನೂ ಮುಂದೆ ನಮ್ಮ ಕುಟುಂಬದಿಂದ ಇದರ ಬಗ್ಗೆ ಯಾವುದೇ ಸ್ಪಷ್ಟನೆ ನಿರೀಕ್ಷೆ ಮಾಡಬೇಡಿ. ಅಪ್ಪ ಅವರ ಮೇಲೆ ನಮಗಿರುವ ಪ್ರೀತಿ, ಅಭಿಮಾನ ಯಾರಿಗೂ ಸಾಬೀತುಪಡಿಸೋ ಅವಶ್ಯಕತೆ ನಮಗಿಲ್ಲ…
ಅಪ್ಪ ಅವರ ಆಶೀರ್ವಾದ ಅವರ ನಿಜವಾದ ಅಭಿಮಾನಿಗಳ ಮೇಲೆ ಸದಾ ಇರಲಿ.
- ಅನಿರುದ್ಧ, ನಟ
#Dontexpect #clarification #family #regarding #Vishnuvardhan #memorial #Aniruddha #malgudiexpress #malgudinews #news #TopNews
#📜ಪ್ರಚಲಿತ ವಿದ್ಯಮಾನ📜
ಕುಡಿಯುವ ನೀರಿಗೆ ಸರ್ಕಾರ ಅನುದಾನ ಬಿಡುಗಡೆ ಮಾಡಿಲ್ಲ: ಆರ್ ಅಶೋಕ್
#rashok #drinkingwater #malgudiexpress #malgudinews #news #TopNews
| Subscribe | Comment | Like | Share |
#📜ಪ್ರಚಲಿತ ವಿದ್ಯಮಾನ📜
ತಳವಾರ ಸಮುದಾಯದ ಜನ ತಪ್ಪಾಗಿ ರಾಜಕೀಯ ಪ್ರೇರಣೆಗೆ ಬಲಿಯಾಗದೆ ಸತ್ಯ ಅರಿಯಬೇಕು: ಪ್ರಿಯಾಂಕ್ ಖರ್ಗೆ
ತಳವಾರ ಸಮುದಾಯಕ್ಕೆ ಉದ್ದೇಶಪೂರ್ವಕವಾಗಿ ಎಸ್ಟಿ ಪ್ರಮಾಣ ಪತ್ರ ನೀಡುತ್ತಿಲ್ಲ ಎಂಬ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಇದು ರಾಜಕೀಯ ಪ್ರೇರಿತ ಆರೋಪವಾಗಿದ್ದು, ತಳವಾರ ಸಮುದಾಯ ಸೇರಿದಂತೆ ಎಲ್ಲ ಅರ್ಹ ಸಮುದಾಯಗಳಿಗೂ ಪರಿಶಿಷ್ಟ ಪಂಗಡ ಪ್ರಮಾಣಪತ್ರ ದೊರಕಿಸಲು ಎಲ್ಲ ಕ್ರಮಗಳನ್ನೂ ಕೈಗೊಳ್ಳಲಾಗಿದೆ. ನಮ್ಮ ಸರ್ಕಾರ ನಡೆಸಿದ ಪ್ರಾಮಾಣಿಕ ಪ್ರಯತ್ನಗಳ ವಿವರ ನಿಮ್ಮ ಮುಂದಿದೆ.
1. ತಳವಾರ ಸಮುದಾಯದವರಿಗೆ ST ಜಾತಿ ಪ್ರಮಾಣ ಪತ್ರ ವಿತರಣೆಯಲ್ಲಿ ಇರುವ ಸಮಸ್ಯೆ ಕುರಿತು ಮಾನ್ಯ ಲೋಕೋಪಯೋಗಿ ಇಲಾಖೆ ಸಚಿವರು ಹಾಗೂ ಇತರೆ ಹಿರಿಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಬೆಳಗಾವಿ ಅಧಿವೇಶನದ ಸಮಯದಲ್ಲಿ ಒಂದು ಸಭೆ ನಡೆದಿದೆ. ಇದಲ್ಲದೆ ಇದೇ ವಿಷಯವಾಗಿ ಬೆಂಗಳೂರಿನಲ್ಲಿ 03 ಬಾರಿ ಸಭೆ ಸೇರಲಾಗಿದೆ. ಒಟ್ಟಾರೆ 04 ಸಭೆಗಳನ್ನು ನಡೆಸಿ, ಸಂಬಂಧಿಸಿದ ಇಲಾಖೆಯಿಂದ ಅರ್ಹ ಅಭ್ಯರ್ಥಿಗಳಿಗೆ ನಿಯಮಾನುಸಾರ ST ಪ್ರಮಾಣ ಪತ್ರ ವಿತರಿಸಲು ಸ್ಪಷ್ಟ ಸೂಚನೆ ನೀಡಲಾಗಿರುತ್ತದೆ.
2. ಮುಖ್ಯಮಂತ್ರಿಗಳ ಸಭೆ ನಂತರವೂ ಹೋರಾಟ ಮಾಡುವ ಮುಂಚೂಣಿಯಲ್ಲಿರುವ ನಾಯಕರಿಗೆ ಹಾಗೂ ಸಮಾಜದ ಮುಖಂಡರಿಗೆ ಇಲಾಖೆಯ ಕಾರ್ಯದರ್ಶಿಗಳಿಗೆ 2-3 ಬಾರಿ ಭೇಟಿ ಮಾಡಿಸಿ, ಸಮಾಲೋಚಿಸಿ, ಸಲಹೆ ನೀಡಿದ ನಂತರವೇ ಸರ್ಕಾರಿ ಆದೇಶವನ್ನು ಹೊರಡಿಸಲಾಯಿತು.
3. ದಿನಾಂಕ: 01.01.2023 ರಿಂದ ಇಲ್ಲಿಯವರೆಗೆ ಕಲಬುರಗಿ ಜಿಲ್ಲೆಯಲ್ಲಿ ಒಟ್ಟು 14,282 ಜನರಿಗೆ Naikda (including Parivara and Talawara) ST ಜಾತಿ ಪ್ರಮಾಣಪತ್ರ ನೀಡಲಾಗಿರುತ್ತದೆ.
4. ದಿನಾಂಕ: 01.01.2023 ರಿಂದ ಇಲ್ಲಿಯವರೆಗೆ ಕಲಬುರಗಿ ಜಿಲ್ಲೆಯಲ್ಲಿ ಒಟ್ಟು 1,624 ಜನರಿಗೆ Talwar_Boya CAT-1 ನಲ್ಲಿ ಜಾತಿ ಪ್ರಮಾಣ ಪತ್ರ ನೀಡಲಾಗಿರುತ್ತದೆ.
5. ದಿನಾಂಕ: 01.03.2020 ರಿಂದ ಇಲ್ಲಿಯವರೆಗೆ ಕಲಬುರಗಿ ಜಿಲ್ಲೆಯಲ್ಲಿ ಒಟ್ಟು 29,306 ಜನರಿಗೆ Naikda (including Parivara and Talawara) ST ಜಾತಿ ಪ್ರಮಾಣ ಪತ್ರ ನೀಡಲಾಗಿರುತ್ತದೆ.
6. ದಿನಾಂಕ: 01.03.2020 ರಿಂದ ಇಲ್ಲಿಯವರೆಗೆ ಕಲಬುರಗಿ ಜಿಲ್ಲೆಯಲ್ಲಿ ಒಟ್ಟು 12,126 ಜನರಿಗೆ Talwar_Boya CAT-1 ನಲ್ಲಿ ಜಾತಿ ಪ್ರಮಾಣ ಪತ್ರ ನೀಡಲಾಗಿರುತ್ತದೆ.
7. ಮಾನ್ಯ ಉಚ್ಚ ನ್ಯಾಯಾಲಯ, ಬೆಂಗಳೂರಿನಲ್ಲಿ ರಿಟ್ ಪಿಟಿಷನ್ ನಂ. 13777/2023 ರಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರ ರದ್ದು ಪಡಿಸುವ ಕುರಿತು ಪ್ರಕರಣ ದಾಖಲಾಗಿರುತ್ತದೆ. ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಕಲಬುರಗಿ ಜಿಲ್ಲೆಯಲ್ಲಿ 17 ಸುಳ್ಳು ಜಾತಿ ಪ್ರಮಾಣ ಪತ್ರಗಳನ್ನು ಸಕ್ಷಮ ಪ್ರಾಧಿಕಾರವಾಗಿರುವ ಸಹಾಯಕ ಆಯುಕ್ತರು ಉಪವಿಭಾಗ ಕಲಬುರಗಿ ಮತ್ತು ಸೇಡಂ ಅವರಿಂದ ರದ್ದುಗೊಳಿಸಲಾಗಿರುತ್ತದೆ.
8. ಕಲ್ಯಾಣ ಕರ್ನಾಟಕ ಪ್ರದೇಶ ವಾಲ್ಮೀಕಿ ನಾಯಕರ ಸಂಘ (ರಿ) ಇವರು ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಕೆಲವರು ಸುಳ್ಳು ಜಾತಿ ಪ್ರಮಾಣ ಪತ್ರ ಪಡೆಯಲು ಪುಯತ್ನಿಸುತ್ತಿದ್ದು, ಇದರಿಂದ ನಿಜವಾದ ಪರಿಶಿಷ್ಟ ಪಂಗಡ ಸಮುದಾಯದ ಜನರಿಗೆ ಅನ್ಯಾಯವಾಗುತ್ತಿದೆ. ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿರುತ್ತಾರೆ.
9. ಜಾತಿ ಪ್ರಮಾಣ ಪತ್ರ ಕೋರಿ ಸಲ್ಲಿಕೆಯಾಗುವ ಪ್ರತಿಯೊಂದು ಅರ್ಜಿಯನ್ನು ತಹಸೀಲ್ದಾರರ ಹಂತದಲ್ಲಿ ನಿಯಮಾವಳಿಗಳ ಪ್ರಕಾರ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲು ಈಗಾಗಲೇ ಸ್ಪಷ್ಟವಾದ ಸೂಚನೆ ನೀಡಲಾಗಿರುತ್ತದೆ.
10. ಸರ್ಕಾರದಿಂದ ಅರ್ಹರಿಗೆ ST ಜಾತಿ ಪ್ರಮಾಣ ಪತ್ರ ನೀಡಲು ನಮ್ಮ ಸರ್ಕಾರ ಮತ್ತು ನಾನು ಪ್ರಾಮಾಣಿಕ ಪ್ರಯತ್ನ ಮಾಡಿದಾಗಲೂ ಸಹ ಕೆಲವು ಸಂಘ-ಸಂಸ್ಥೆಗಳು, ಹೋರಾಟಗಾರರು ವಾಸ್ತವಿಕ ಸತ್ಯ ಅರಿಯದೆ ಸಾರ್ವಜನಿಕರಲ್ಲಿ ಗೊಂದಲ ಮೂಡಿಸುತ್ತಿರುವುದು ನೋಡಿದರೆ ಇದು ರಾಜಕೀಯ ಪ್ರೇರಿತ ಎಂಬುದು ಸ್ಪಷ್ಟವಾಗಿ ಕಂಡುಬರುತ್ತಿದೆ.
ತಳವಾರ ಸಮುದಾಯದ ಜನರು ತಪ್ಪಾಗಿ ರಾಜಕೀಯ ಪ್ರೇರಣೆಗೆ ಬಲಿಯಾಗದೆ ಸತ್ಯವನ್ನು ಅರಿಯಬೇಕು. ಗ್ಯಾರಂಟಿ ಸರ್ಕಾರವು ಸದಾ ನಿಮ್ಮೊಂದಿಗೆ ಇರಲಿದೆ ಎಂದು ಈ ಮೂಲಕ ತಿಳಿಸಲು ಇಚ್ಛಿಸುತ್ತೇನೆ.
- ಪ್ರಿಯಾಂಕ್ ಖರ್ಗೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ
#People #Talawara #community #know #truth #prey #political #persuasion #PriyankKharge #malgudiexpress #malgudinews #news #TopNews
#📜ಪ್ರಚಲಿತ ವಿದ್ಯಮಾನ📜
ಕುವೆಂಪು ವಿವಿಯಲ್ಲಿ ಪಿಎಚ್ಡಿ ಪೂರೈಸಿದ ಐಜಿಪಿ ಹರ್ಷ ಪಿ.ಎಸ್
ಬಳ್ಳಾರಿ: ಬಳ್ಳಾರಿ ವಲಯದ ಪೊಲೀಸ್ ಉಪಮಹಾನಿರೀಕ್ಷಕ (ಐಜಿಪಿ) ಹರ್ಷ ಪಿ.ಎಸ್ ಅವರು ಕೇವಲ ಕಾನೂನು ಸುವ್ಯವಸ್ಥೆಯಲ್ಲಷ್ಟೇ ಅಲ್ಲ, ಶೈಕ್ಷಣಿಕ ಕ್ಷೇತ್ರದಲ್ಲೂ ಅಪೂರ್ವ ಸಾಧನೆ ಮಾಡಿದ್ದಾರೆ. ವನ್ಯಜೀವಿ ಸಂರಕ್ಷಣೆ ಕುರಿತಾದ ಅವರ ಸುದೀರ್ಘ ಸಂಶೋಧನೆಯನ್ನು ಪರಿಗಣಿಸಿರುವ ಕುವೆಂಪು ವಿಶ್ವವಿದ್ಯಾನಿಲಯವು ಅವರಿಗೆ ಡಾಕ್ಟರ್ ಆಫ್ ಫಿಲಾಸಫಿ (ಪಿಎಚ್ಡಿ) ಪದವಿಯನ್ನು ಘೋಷಿಸಿದೆ.
ಸಂಶೋಧನೆಯ ಹೂರಣ: ಹರ್ಷ ಪಿ.ಎಸ್ ಅವರು ಕುವೆಂಪು ವಿವಿಯ ವನ್ಯಜೀವಿ ಮತ್ತು ನಿರ್ವಹಣಾ ವಿಭಾಗದ ಪ್ರಾಧ್ಯಾಪಕ ಡಾ. ವಿಜಯ ಕುಮಾರ್ ಅವರ ಮಾರ್ಗದರ್ಶನದಲ್ಲಿ ಕಳೆದ ಐದು ವರ್ಷಗಳಿಂದ ಶ್ರಮದಾಯಕ ಅಧ್ಯಯನ ನಡೆಸಿದ್ದರು.
ಪ್ರಬಂಧದ ಶೀರ್ಷಿಕೆ: "ನಾಗರಹೊಳೆ, ಬಂಡೀಪುರ ಮತ್ತು ಬಿಆರ್ಟಿ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಹುಲಿಗಳ ಜನಸಂಖ್ಯೆಯ ಸ್ಥಿರತೆಯ ಕುರಿತು ಒಂದು ಅಧ್ಯಯನ, ಮಾನವ-ಹುಲಿ ಸಂಘರ್ಷಕ್ಕೆ ವಿಶೇಷ ಉಲ್ಲೇಖದೊಂದಿಗೆ."
ಕ್ಷೇತ್ರಕಾರ್ಯದ ಮುಖ್ಯಾಂಶಗಳು: ಒಬ್ಬ ಪೊಲೀಸ್ ಅಧಿಕಾರಿಯಾಗಿ ಬಿಡುವಿಲ್ಲದ ಕೆಲಸದ ನಡುವೆಯೂ ಹರ್ಷ ಅವರು ಕಾಡಿನ ಆಳಕ್ಕಿಳಿದು ಸಂಶೋಧನೆ ನಡೆಸಿದ್ದಾರೆ. ಈ ಪ್ರಬಂಧವು ಈ ಕೆಳಗಿನ ಪ್ರಮುಖ ಅಂಶಗಳನ್ನು ಒಳಗೊಂಡಿದೆ:
ಕ್ಯಾಮೆರಾ ಟ್ರ್ಯಾಪಿಂಗ್: ಬೃಹತ್ ಪ್ರಮಾಣದಲ್ಲಿ ಕ್ಯಾಮೆರಾ ಟ್ರ್ಯಾಪಿಂಗ್ ಬಳಸಿ ಹುಲಿಗಳ ಚಲನವಲನ ಪತ್ತೆ.
ಸಂಘರ್ಷ ತಾಣಗಳ ವಿಶ್ಲೇಷಣೆ: ಮಾನವ ಮತ್ತು ಹುಲಿಗಳ ನಡುವಿನ ಸಂಘರ್ಷ ನಡೆಯುವ ಸೂಕ್ಷ್ಮ ಪ್ರದೇಶಗಳ ಸಮಗ್ರ ಅಧ್ಯಯನ.
ಸ್ಥಿರತೆಯ ವಿಶ್ಲೇಷಣೆ: ಸಂರಕ್ಷಿತ ಪ್ರದೇಶಗಳಲ್ಲಿ ಹುಲಿಗಳ ಸಂಖ್ಯೆ ಮತ್ತು ಅವುಗಳ ಜೀವನ ಕ್ರಮದ ಸ್ಥಿರತೆಯ ಕುರಿತು ವೈಜ್ಞಾನಿಕ ವರದಿ.
ಘಟಿಕೋತ್ಸವದ ವಿವರ: ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಈಗಾಗಲೇ ಈ ಪದವಿಗೆ ಔಪಚಾರಿಕ ಅನುಮೋದನೆ ನೀಡಿದೆ. ಮೇ 06, 2026ರಂದು ನಡೆಯಲಿರುವ ಕುವೆಂಪು ವಿಶ್ವವಿದ್ಯಾನಿಲಯದ ವಾರ್ಷಿಕ ಘಟಿಕೋತ್ಸವ ಸಮಾರಂಭದಲ್ಲಿ ಐಜಿಪಿ ಹರ್ಷ ಪಿ.ಎಸ್ ಅವರಿಗೆ ಅಧಿಕೃತವಾಗಿ ಪಿಎಚ್ಡಿ ಪ್ರಮಾಣಪತ್ರವನ್ನು ಪ್ರದಾನ ಮಾಡಲಿದೆ.
ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಯೊಬ್ಬರು ಪರಿಸರ ಮತ್ತು ವನ್ಯಜೀವಿಗಳ ಬಗ್ಗೆ ಇಂತಹ ಗಂಭೀರ ಸಂಶೋಧನೆ ನಡೆಸಿರುವುದು ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.
#IGP #HarshaPS #completes #PhD #KuvempuUniversity #malgudiexpress #malgudinews #news #TopNews
#📜ಪ್ರಚಲಿತ ವಿದ್ಯಮಾನ📜
ಬಿಜೆಪಿ ನಾಯಕನಿಂದ 'ಹಾಸಿಗೆ ಹಂಚಿಕೊಂಡರೆ ಪದವಿ' ಆಮಿಷ
ಉತ್ತರ ಪ್ರದೇಶದಲ್ಲಿ ಕೇಸರಿ ಪಡೆಯ ಅಸಲಿ ಮುಖವಾಡ ಕಳಚಿದೆಯೇ?
ಲಕ್ನೋ: "ಬೇಟಿ ಬಚಾವೋ, ಬೇಟಿ ಪಢಾವೋ" ಎಂದು ಘೋಷಣೆ ಕೂಗುವ ಬಿಜೆಪಿ ಪಡಯ ಒಳಗಿನ ಕರಾಳ ಮುಖವೊಂದು ಈಗ ಉತ್ತರ ಪ್ರದೇಶದ ಮಹೋಬಾದಲ್ಲಿ ಬಹಿರಂಗವಾಗಿದೆ. ಪಕ್ಷದ ಹಿರಿಯ ನಾಯಕನೊಬ್ಬ ಮಹಿಳಾ ಕಾರ್ಯಕರ್ತೆಗೆ ನೀಡಿದ ಅಸಭ್ಯ ಆಮಿಷ ಇಡೀ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.
ಘಟನೆಯ ಹಿನ್ನೆಲೆ: ಏನಿದು ಹಗರಣ?: ಮಹೋಬಾ ಜಿಲ್ಲೆಯ ಬಿಜೆಪಿ ಮಾಜಿ ಜಿಲ್ಲಾ ಮಂತ್ರಿ ದೀಪಾಲಿ ತಿವಾರಿ ಅವರು ಜಿಲ್ಲಾಧ್ಯಕ್ಷ ಮೋಹನ್ ಲಾಲ್ ಕುಶವಾಹ ವಿರುದ್ಧ ಗಂಭೀರ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ. ದೀಪಾಲಿ ತಿವಾರಿ ಅವರ ಪ್ರಕಾರ, ಮೋಹನ್ ಲಾಲ್ ಕುಶವಾಹ ಅವರು ರಾಜಕೀಯ ಉನ್ನತಿಗಾಗಿ ಅತ್ಯಂತ ಕೆಳಮಟ್ಟದ ಬೇಡಿಕೆಯನ್ನಿಟ್ಟಿದ್ದಾರೆ.
"ನನ್ನೊಂದಿಗೆ ಹಾಸಿಗೆ ಹಂಚಿಕೊ, ನಿನಗೆ ಜಿಲ್ಲಾ ಉಪಾಧ್ಯಕ್ಷ ಸ್ಥಾನ ನೀಡುತ್ತೇನೆ ಮತ್ತು ಜಿಲ್ಲಾ ಪಂಚಾಯತ್ ಅಧ್ಯಕ್ಷ ಟಿಕೆಟ್ ಕೊಡಿಸುತ್ತೇನೆ" ಎಂದು ಕುಶವಾಹ ಬಹಿರಂಗವಾಗಿ ಆಮಿಷ ಒಡ್ಡಿದ್ದಾರೆ ಎಂದು ದೀಪಾಲಿ ತಿವಾರಿ ಗದ್ಗದಿತರಾಗಿ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದಾರೆ.
ಮಹಿಳಾ ಗೌರವದ ಮಾತು ಬರೀ ಬೂಟಾಟಿಕೆಯೇ?: ಈ ಘಟನೆಯು ಬಿಜೆಪಿ ಪ್ರತಿಪಾದಿಸುವ 'ಮಹಿಳಾ ಸಬಲೀಕರಣ' ಮತ್ತು 'ನಾರಿ ಶಕ್ತಿ'ಯ ಘೋಷಣೆಗಳನ್ನು ಪ್ರಶ್ನಿಸುವಂತೆ ಮಾಡಿದೆ. ಸ್ವಪಕ್ಷದ ಮಹಿಳಾ ಮಂತ್ರಿಯೇ ಸುರಕ್ಷಿತವಾಗಿಲ್ಲದಿದ್ದರೆ, ಸಾಮಾನ್ಯ ಮಹಿಳೆಯರ ಗತಿ ಏನು ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಅಧಿಕಾರದ ದುರ್ಬಳಕೆ: ಸಾಂಸ್ಥಿಕ ಹುದ್ದೆಗಳನ್ನು ಲೈಂಗಿಕ ತೃಪ್ತಿಗಾಗಿ ದಾಳವಾಗಿ ಬಳಸಿಕೊಳ್ಳುತ್ತಿರುವ ಆರೋಪ.
ಸಂತ್ರಸ್ತೆಯ ಆಕ್ರೋಶ: ಪಕ್ಷಕ್ಕಾಗಿ ದುಡಿದ ಮಹಿಳೆಗೆ ಸಿಕ್ಕ ಪ್ರತಿಫಲ ಅಪಮಾನ ಮತ್ತು ಶೋಷಣೆಯೇ?
ಪಕ್ಷದ ಮೌನ: ಈ ಗಂಭೀರ ಆರೋಪದ ಬಗ್ಗೆ ರಾಜ್ಯ ಬಿಜೆಪಿ ಘಟಕ ಇನ್ನೂ ಸ್ಪಷ್ಟವಾದ ಶಿಸ್ತು ಕ್ರಮ ಜರುಗಿಸದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ವಿರೋಧ ಪಕ್ಷಗಳ ವಾಗ್ದಾಳಿ: ಈಗಾಗಲೇ ಈ ವಿಷಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ವಿರೋಧ ಪಕ್ಷಗಳು ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿವೆ. "ಮಹಿಳಾ ಗೌರವದ ಬಗ್ಗೆ ಭಾಷಣ ಮಾಡುವ ಬಿಜೆಪಿ ನಾಯಕರು, ತಮ್ಮದೇ ಪಕ್ಷದ ಮಹಿಳೆಯರನ್ನು ಯಾವ ಕಣ್ಣಿನಿಂದ ನೋಡುತ್ತಾರೆ ಎಂಬುದು ದೀಪಾಲಿ ತಿವಾರಿ ಅವರ ಕಣ್ಣೀರಿನಲ್ಲಿ ಎದ್ದು ಕಾಣುತ್ತಿದೆ" ಎಂದು ಟೀಕಿಸಲಾಗಿದೆ.
ರಾಜಕೀಯದಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡುವ ಬಗ್ಗೆ ಮಾತನಾಡುವ ಹೊತ್ತಲ್ಲೇ, ಇಂತಹ ಘಟನೆಗಳು ಮಹಿಳೆಯರನ್ನು ಸಕ್ರಿಯ ರಾಜಕಾರಣದಿಂದ ದೂರ ತಳ್ಳುವಂತೆ ಮಾಡುತ್ತವೆ. ಆರೋಪಿತ ಜಿಲ್ಲಾಧ್ಯಕ್ಷನ ಮೇಲೆ ಕಠಿಣ ಕ್ರಮ ಕೈಗೊಳ್ಳುವ ಮೂಲಕ ಬಿಜೆಪಿ ತನ್ನ 'ನೈತಿಕತೆ'ಯನ್ನು ಸಾಬೀತುಪಡಿಸುತ್ತದೆಯೇ ಅಥವಾ ಪ್ರಕರಣವನ್ನು ಹಳ್ಳ ಹಿಡಿಸುತ್ತದೆಯೇ ಎಂದು ಕಾದು ನೋಡಬೇಕಿದೆ.
#BJP #leader #offers #post #shareabed #MohanlalKushwah #DeepaliTiwari #malgudiexpress #malgudinews #news #TopNews
#📜ಪ್ರಚಲಿತ ವಿದ್ಯಮಾನ📜
53 ಸೆಕೆಂಡ್ ಗಳಲ್ಲಿ 9 ಬಾರಿ ಪೋಷಕಿಗೆ 'Shut Up' ಎಂದು ಕಿರುಚಾಡಿದ ಪ್ರಾಂಶುಪಾಲೆ
ಲಕ್ನೋ: ಶಿಕ್ಷಣದ ದೇಗುಲ ಎನಿಸಿಕೊಳ್ಳುವ ಶಾಲೆಯಲ್ಲಿ ಪ್ರೀತಿ, ತಾಳ್ಮೆಯ ಮಾತುಗಳಿರಬೇಕು ಎಂಬುದು ಎಲ್ಲರ ಆಶಯ. ಆದರೆ ಉತ್ತರ ಪ್ರದೇಶದ ಹರ್ದೋಯಿಯ ಪ್ರತಿಷ್ಠಿತ ಸನ್ಬೀಮ್ ಶಾಲೆಯಲ್ಲಿ ನಡೆದ ಘಟನೆ ಮಾತ್ರ ನಾಗರಿಕ ಸಮಾಜ ತಲೆತಗ್ಗಿಸುವಂತಿದೆ. ಶಾಲೆಯ ಪ್ರಾಂಶುಪಾಲರಾದ ಮಮತಾ ಮಿಶ್ರಾ ಅವರು ಪೋಷಕಿಯೊಬ್ಬರ ಮೇಲೆ ಕಿರುಚಾಡಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಘಟನೆಯ ಹಿನ್ನೆಲೆ: ಏನಿದು ವಿವಾದ?
ವರದಿಗಳ ಪ್ರಕಾರ, ನೀಲಂ ವರ್ಮಾ ಎಂಬ ಪೋಷಕಿ ತನ್ನ ಮಗುವಿನ ಶಾಲಾ ಶುಲ್ಕ ಪಾವತಿಸಲು ಸ್ವಲ್ಪ ಕಾಲಾವಕಾಶ ಕೇಳಲು ಪ್ರಾಂಶುಪಾಲರ ಬಳಿ ಹೋಗಿದ್ದರು. ಈ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದು, ಪ್ರಾಂಶುಪಾಲ ಮಮತಾ ಮಿಶ್ರಾ ಅವರು ತಾಳ್ಮೆ ಕಳೆದುಕೊಂಡಿದ್ದಾರೆ. ಕೇವಲ 53 ಸೆಕೆಂಡ್ಗಳ ಅವಧಿಯಲ್ಲಿ ಬರೋಬ್ಬರಿ 9 ಬಾರಿ ಅತಿ ಜೋರಾಗಿ "Shut Up" (ಬಾಯಿ ಮುಚ್ಚು) ಎಂದು ಕಿರುಚಾಡಿದ್ದಾರೆ.
ಇಬ್ಬರ ವಾದಗಳೇನು?
ಪೋಷಕಿ ನೀಲಂ ವರ್ಮಾ: "ನಾನು ಶ್ರೀಮಂತಳಲ್ಲ, ಪರಿಸ್ಥಿತಿ ಸರಿಯಿಲ್ಲದ ಕಾರಣ ಶುಲ್ಕ ಕಟ್ಟಲು ಸ್ವಲ್ಪ ಸಮಯ ಕೇಳಲು ಹೋಗಿದ್ದೆ. ಆದರೆ ಪ್ರಾಂಶುಪಾಲರು ನನ್ನನ್ನು ಕನಿಷ್ಠ ಮನುಷ್ಯಳಂತೆ ಕಾಣದೆ ದುರ್ವರ್ತನೆ ತೋರಿದ್ದಾರೆ" ಎಂದು ಅಳಲು ತೋಡಿಕೊಂಡಿದ್ದಾರೆ.
ಪ್ರಾಂಶುಪಾಲ ಮಮತಾ ಮಿಶ್ರಾ: ಶಾಲೆಯಲ್ಲಿ ವ್ಯಾಕ್ಸಿನೇಷನ್ (ಲಸಿಕೆ) ಕಾರ್ಯಕ್ರಮ ನಡೆಯುತ್ತಿತ್ತು. ಈ ವೇಳೆ ಪೋಷಕರು ಅನಗತ್ಯವಾಗಿ ಅಡ್ಡಿಪಡಿಸುತ್ತಿದ್ದರು, ಶಿಸ್ತು ಕಾಪಾಡುವ ಉದ್ದೇಶದಿಂದ ನಾನು ಕಠಿಣವಾಗಿ ವರ್ತಿಸಬೇಕಾಯಿತು ಎಂಬುದು ಅವರ ಸಮರ್ಥನೆ.
ಶಿಕ್ಷಣ ವ್ಯಾಪಾರವಾಗಬಾರದು: ಹಣವಿದ್ದವರಿಗೆ ಮಾತ್ರವೇ ಶಿಕ್ಷಣ ಎಂಬಂತಾಗಬಾರದು. ಪ್ರತಿಯೊಬ್ಬ ಪೋಷಕರಿಗೂ ತಮ್ಮ ಮಗುವನ್ನು ಓದಿಸುವ ಹಕ್ಕಿದೆ. ಎಲ್ಲರೂ 'ಧನಿಕರೇ' ಆಗಿರುವುದಿಲ್ಲ. ಸಣ್ಣ ಸಾಲ ಅಥವಾ ಸಮಯ ಕೇಳುವುದು ಅಪರಾಧವಲ್ಲ. ಅದನ್ನು ಸೌಜನ್ಯದಿಂದ ನಿರಾಕರಿಸಬಹುದಿತ್ತು ಅಥವಾ ವಿವರಿಸಬಹುದಿತ್ತು. ಆದರೆ ಒಬ್ಬ ಜವಾಬ್ದಾರಿಯುತ ಸ್ಥಾನದಲ್ಲಿರುವ ಪ್ರಾಂಶುಪಾಲರು ಈ ರೀತಿ ಕಿರುಚಾಡುವುದು ಎಷ್ಟು ಸರಿ?
"ಶಿಕ್ಷಣ ಎನ್ನುವುದು ಕೇವಲ ಅಕ್ಷರ ಕಲಿಕೆಯಲ್ಲ, ಅದು ಮನುಷ್ಯತ್ವವನ್ನು ಕಲಿಸುವ ದಾರಿ. ಇಲ್ಲಿ ಅಹಂಕಾರಕ್ಕಿಂತ ಪ್ರೀತಿಯ ಮಾತುಗಳಿಗೆ ಬೆಲೆ ಇರಲಿ."
ಈ ಘಟನೆಯ ಬಗ್ಗೆ ನಿಮ್ಮ ಅಭಿಪ್ರಾಯವೇನು? ಕಾಮೆಂಟ್ ಮೂಲಕ ನಮಗೆ ತಿಳಿಸಿ.
#Principal #yells #ShutUp #parent #malgudiexpress #malgudinews #news #TopNews
#📜ಪ್ರಚಲಿತ ವಿದ್ಯಮಾನ📜
ವಿಳಂಬ ನೀತಿ ಭ್ರಷ್ಟಾಚಾರಕ್ಕೆ ಎಡೆಮಾಡಿಕೊಡುತ್ತದೆ: ಸಿದ್ದರಾಮಯ್ಯ
ಅಧಿಕಾರಿಗಳು ಯಾವುದೇ ಕಾರಣಕ್ಕೂ ವಿಳಂಬ ಮಾಡದೇ, ಶೀಘ್ರವಾಗಿ ಕಡತಗಳನ್ನು ವಿಲೇವಾರಿ ಮಾಡಬೇಕು
ಮಧ್ಯವರ್ತಿಗಳ ಹಾವಳಿ ತಪ್ಪಿಸುವ ನಿಟ್ಟಿನಲ್ಲಿ ಗ್ಯಾರಂಟಿ ಯೋಜನೆಗಳು ಸಹಕಾರಿಯಾಗಿವೆ. ನೇರವಾಗಿ ಫಲಾನುಭವಿಗಳ ಖಾತೆಗೆ ಹಣ ವರ್ಗಾಯಿಸಲಾಗುತ್ತಿದೆ
ನಾಲ್ವಡಿ ಕೃಷ್ಣರಾಜ ಒಡೆಯರ್ ಮೈಸೂರು ರಾಜ್ಯಕ್ಕೆ ಅಪಾರ ಕೊಡುಗೆ ಕೊಟ್ಟಿದ್ದಾರೆ
ಬೆಂಗಳೂರು: ಮಧ್ಯವರ್ತಿಗಳು ಎಲ್ಲೆಡೆ ಇರುತ್ತಾರೆ ಆದರೆ ಅವರನ್ನು ಕಚೇರಿಯೊಳಗೆ ಬಿಟ್ಟುಕೊಳ್ಳದೇ ಹೊರಗೆ ಕಳಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಕರ್ನಾಟಕ ಆಡಳಿತ ಸೇವೆ ಅಧಿಕಾರಿಗಳ ಒಕ್ಕೂಟ ಸಂಘವು ಆಯೋಜಿಸಿದ್ದ ಸಮಾರಂಭದಲ್ಲಿ ಮಾತನಾಡಿದ ಅವರು, ಅಧಿಕಾರಿಗಳು ಯಾವುದೇ ಕಾರಣಕ್ಕೂ ವಿಳಂಬ ಮಾಡದೇ, ಶೀಘ್ರವಾಗಿ ಕಡತಗಳನ್ನು ವಿಲೇವಾರಿ ಮಾಡಬೇಕು. ವಿಳಂಬ ನೀತಿ ಭ್ರಷ್ಟಾಚಾರಕ್ಕೆ ಎಡೆಮಾಡಿಕೊಡುತ್ತದೆ ಎಂದರು.
ಕೆಎಎಸ್ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ, ಪ್ರಾಮಾಣಿಕವಾಗಿ ಮಾಡಬೇಕು. ಕೆಎಎಸ್ ಅಧಿಕಾರಿಗಳ ಸಂಘಕ್ಕೆ ನೂರು ವರ್ಷಗಳ ಇತಿಹಾಸವಿದ್ದು, ನಾಲ್ವಡಿ ಕೃಷ್ಣರಾಜ ಒಡೆಯರ್ ಮೈಸೂರು ರಾಜ್ಯಕ್ಕೆ ಅಪಾರ ಕೊಡುಗೆ ಕೊಟ್ಟಿದ್ದಾರೆ. ಸಾಮಾಜಿಕ, ಆರ್ಥಿಕ , ಮೂಲಭೂತ ಸೌಕರ್ಯಗಳು, ಕೈಗಾರಿಕೆಗಳ ಬೆಳವಣಿಗೆಗೆ ಕಾರಣೀಭೂತಗಿದ್ದಾರೆ. ಅವರ ಕಾಲದಲ್ಲಿ ದಿವಾನರಾಗಿದ್ದವರು ಸಂಘದ ಅಧ್ಯಕ್ಷರಾಗಿದ್ದರು ಎನ್ನುವುದು ಈ ಸಂಘದ ಹೆಗ್ಗಳಿಕೆ. ಅವರೆಲ್ಲರು ದಕ್ಷ ಆಡಳಿತದ ಮೂಲಕ ನಮಗೆ ದಾರಿದೀಪವಾಗಿದ್ದಾರೆ ಎಂದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಾರ್ಯಾಂಗ ಹಾಗೂ ಶಾಸಕಾಂಗ ಒಟ್ಟಾಗಿ ಕೆಲಸ ಮಾಡಬೇಕು. ಈ ಎರಡೂ ಜನರ ಪ್ರತಿನಿಧಿಗಳಾಗಿ ಜನರ ಹಿತವನ್ನು ಕಾಪಾಡುವುದು ನಮ್ಮ ಕರ್ತವ್ಯ ಎಂದರು.
ನಿಮಗೆ ನಿವೃತ್ತರಾಗುವವರೆಗೆ ಜನಸೇವೆಯಲ್ಲಿ ತೊಡಗಿಸಿಕೊಳ್ಳುವ ಅವಕಾಶವಿದೆ. ಅಸಮಾನತೆ ಇರುವ ಸಮಾಜದಲ್ಲಿ ದುರ್ಬಲ ವರ್ಗಕ್ಕೆ ಸ್ಪಂದಿಸಬೇಕು. ಅಧಿಕಾರಿಗಳಿಗೆ ಕಾನೂನಿನ ಅರಿವಿನ ಜೊತೆಗೆ ಬಡವರ ಕಾಳಜಿ, ಸಮಾಜದ ಬಗ್ಗೆ ಅರಿವು ಇರಬೇಕು. ಆಗ ಮಾತ್ರ ಜನರಿಗೆ ಸ್ಪಂದಿಸಲು ಸಾಧ್ಯ ಎಂದರು.
ನಮ್ಮ ಕೆಲಸವನ್ನು ನಾವು ಪ್ರೀತಿಸಬೇಕು. ಗ್ರಾಮೀಣ ಜನರನ್ನು ಪ್ರೀತಿಯಿಂದ ಮಾತನಾಡಿಸಿ ಅವರ ಸಮಸ್ಯೆ ಅರ್ಥೈಸಿಕೊಂಡು ಬಗೆಹರಿಸಿದರೆ ಅವರು ನಿಮ್ಮನ್ನು ಮರೆಯುವುದಿಲ್ಲ. ಮಧ್ಯವರ್ತಿಗಳ ಹಾವಳಿ ತಪ್ಪಿಸುವ ನಿಟ್ಟಿನಲ್ಲಿ ಗ್ಯಾರಂಟಿ ಯೋಜನೆಗಳು ಸಹಕಾರಿಯಾಗಿವೆ. ನೇರವಾಗಿ ಫಲಾನುಭವಿಗಳ ಖಾತೆಗೆ ಹಣ ವರ್ಗಾಯಿಸಲಾಗುತ್ತಿದೆ ಎಂದರು.
ಸರ್ಕಾರ ರೂಪಿಸುವ ನೀತಿಗಳು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರುವಲ್ಲಿ ಅಧಿಕಾರಿಗಳ ಪಾತ್ರ ಹಿರಿದು. ಜನಸೇವೆಗೆ ದೊರಕಿರುವ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಬೇಕು. ತೃಪ್ತಿದಾಯಕವಾಗಿ ಕೆಲಸ ಮಾಡಿರುವುದಕ್ಕಿಂತ ದೊಡ್ಡ ಪ್ರಮಾಣಪತ್ರ ಇನ್ನೊಂದಿಲ್ಲ. ಈ ಬಗ್ಗೆ ಅಧಿಕಾರಿಗಳು ಆತ್ಮಾವಲೋಕನ ಮಾಡಿಕೊಳ್ಳಬೇಕು. ಜೀವನ ಸಾರ್ಥಕವಾಗಿ ಸೇವೆ ತೃಪಿಕರವಾಗಿ ಮಾಡಿದ್ದೇನೆ ಎಂಬ ಭಾವನೆ ನಿಮ್ಮಲ್ಲಿ ಇರಬೇಕು ಎಂದರು.
ಪದೋನ್ನತಿ ಬಗ್ಗೆ ಕಂದಾಯ ಸಚಿವರು ಕಾರ್ಯೋನ್ಮುಖರಾಗಿದ್ದು, ಶ್ರೀಘ್ರವಾಗಿ ಪದೋನ್ನತಿ ಆಗಲಿದೆ. ಶೇ. 33% ಅಧಿಕಾರಿಗಳನ್ನು ಸಿಇಒಗಳಾಗಿ ಬಡ್ತಿ ನೀಡಲು ಸರ್ಕಾರ ಕ್ರಮ ವಹಿಸಲಿದೆ ಎಂದರು.
#Delay #policy #leads #corruption #Siddaramaiah #malgudiexpress #malgudinews #news #TopNews
#📜ಪ್ರಚಲಿತ ವಿದ್ಯಮಾನ📜
ಅಮೆರಿಕದಿಂದ 1 ಲಕ್ಷ ಕೋಟಿ ರೂ. ವಾಪಸ್ ಪಡೆಯುವುದಾಗಿ ಮೋದಿ ಶಪಥ ಮಾಡಿದ್ದಾರೆಯೇ?
ಫ್ಯಾಕ್ಟ್ ಚೆಕ್: ಅಮೆರಿಕದಿಂದ 1 ಲಕ್ಷ ಕೋಟಿ ರೂ. ವಾಪಸ್ ಪಡೆಯುವುದಾಗಿ ಪ್ರಧಾನಿ ಮೋದಿ ಶಪಥ ಮಾಡಿದ್ದಾರೆಯೇ?
ಸುದ್ದಿಯ ಹಿನ್ನೆಲೆ: ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಫೋಟೋ ಇರುವ ಪೋಸ್ಟ್ ಒಂದು ವೈರಲ್ ಆಗುತ್ತಿದೆ. ಅದರಲ್ಲಿ, "ಅಮೆರಿಕ ನಮ್ಮಿಂದ ವಸೂಲಿ ಮಾಡಿದ ಎಲ್ಲಾ ಟಾರಿಫ್ ಹಣವನ್ನು ವಸೂಲಿ ಮಾಡುತ್ತೇನೆ ಮತ್ತು ಭಾರತ ಸುಮಾರು 1 ಲಕ್ಷ ಕೋಟಿ ಹಣ ವಾಪಸ್ ಪಡೆದುಕೊಳ್ಳಲಿದೆ ಎಂದು ಮೋದಿ ಶಪಥ ಮಾಡಿದ್ದಾರೆ" ಎಂಬ ಒಕ್ಕಣೆಯಿದೆ. ಮೈತ್ರಿ ಸರ್ಕಾರದ ಬಲದಿಂದ ಮೋದಿ ಅಮೆರಿಕಕ್ಕೆ ಎಚ್ಚರಿಕೆ ನೀಡಿದ್ದಾರೆ ಎಂಬರ್ಥದಲ್ಲಿ ಈ ಸುದ್ದಿಯನ್ನು ಹಂಚಿಕೊಳ್ಳಲಾಗುತ್ತಿದೆ.
ಮಾಲ್ಗುಡಿ ಎಕ್ಸ್ಪ್ರೆಸ್ ಈ ಸುದ್ದಿಯ ಸತ್ಯಾಸತ್ಯತೆಯನ್ನು ಪರಿಶೀಲಿಸಿದ್ದು, ವಾಸ್ತವ ಅಂಶಗಳು ಇಲ್ಲಿವೆ.
ನೈಜಾಂಶಗಳು (The Facts): ಅಮೆರಿಕ ಸುಪ್ರೀಂ ಕೋರ್ಟ್ ತೀರ್ಪು: ಫೆಬ್ರವರಿ 20, 2026 ರಂದು ಅಮೆರಿಕದ ಸುಪ್ರೀಂ ಕೋರ್ಟ್ ಒಂದು ಮಹತ್ವದ ತೀರ್ಪು ನೀಡಿದೆ. ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಿದೇಶಿ ಸರಕುಗಳ ಮೇಲೆ ಹೇರಿದ್ದ 'ತುರ್ತು ಸುಂಕ' (Emergency Tariffs) ಕಾನೂನುಬಾಹಿರ ಎಂದು ಕೋರ್ಟ್ ಘೋಷಿಸಿದೆ. ಇದರಿಂದಾಗಿ ಅಮೆರಿಕ ಸರ್ಕಾರ ಸಂಗ್ರಹಿಸಿರುವ ಸುಮಾರು 166 ಬಿಲಿಯನ್ ಡಾಲರ್ (ಅಂದಾಜು 13.8 ಲಕ್ಷ ಕೋಟಿ ರೂ.) ಹಣವನ್ನು ಮರುಪಾವತಿಸುವ ಪ್ರಕ್ರಿಯೆ ಆರಂಭವಾಗಿದೆ.
ಭಾರತಕ್ಕೆ ಸಿಗುವ ಪಾಲು: ಈ ಒಟ್ಟು ಮೊತ್ತದಲ್ಲಿ ಭಾರತದ ರಫ್ತುದಾರರಿಗೆ ಸಂಬಂಧಿಸಿದ ಸುಮಾರು 12 ಬಿಲಿಯನ್ ಡಾಲರ್ (ಅಂದಾಜು 1.12 ಲಕ್ಷ ಕೋಟಿ ರೂ.) ಮರುಪಾವತಿಯಾಗುವ ನಿರೀಕ್ಷೆಯಿದೆ. ಇದು ಜವಳಿ (Textiles), ಇಂಜಿನಿಯರಿಂಗ್ ಸರಕುಗಳು ಮತ್ತು ರಾಸಾಯನಿಕ ವಲಯಕ್ಕೆ ದೊಡ್ಡ ಲಾಭ ತರಲಿದೆ.
ಮೋದಿ ಅವರ ಪ್ರತಿಕ್ರಿಯೆ: ಪ್ರಧಾನಿ ಮೋದಿಯವರು ಫೆಬ್ರವರಿ 2026 ರಲ್ಲಿ ಅಮೆರಿಕದೊಂದಿಗೆ ನಡೆದ ವ್ಯಾಪಾರ ಮಾತುಕತೆಯ ನಂತರ, ಭಾರತೀಯ ಸರಕುಗಳ ಮೇಲಿನ ಸುಂಕವನ್ನು ಶೇ. 50ರಿಂದ ಶೇ. 18ಕ್ಕೆ ಇಳಿಸಿದ್ದಕ್ಕಾಗಿ ಅಮೆರಿಕಕ್ಕೆ ಧನ್ಯವಾದ ಅರ್ಪಿಸಿದ್ದಾರೆ. ಆದರೆ, ಅಮೆರಿಕದ ವಿರುದ್ಧ ಯಾವುದೇ "ಶಪಥ" ಮಾಡಿದ ಅಥವಾ "ವಸೂಲಿ ಮಾಡುತ್ತೇನೆ" ಎಂದು ಎಚ್ಚರಿಕೆ ನೀಡಿದ ಅಧಿಕೃತ ಹೇಳಿಕೆಗಳು ಎಲ್ಲಿಯೂ ದಾಖಲಾಗಿಲ್ಲ.
ಹಣ ಯಾರಿಗೆ ಸಿಗುತ್ತದೆ?: ತಾಂತ್ರಿಕವಾಗಿ ಈ ಹಣವನ್ನು ಅಮೆರಿಕದ ಆಮದುದಾರರು (Importers) ಪಾವತಿಸಿರುತ್ತಾರೆ. ಆದ್ದರಿಂದ ಮರುಪಾವತಿಯು ನೇರವಾಗಿ ಅಮೆರಿಕದ ಕಂಪನಿಗಳಿಗೆ ಹೋಗುತ್ತದೆ. ಭಾರತೀಯ ರಫ್ತುದಾರರು ಈ ಹಣವನ್ನು ಪಡೆಯಲು ಆ ಕಂಪನಿಗಳೊಂದಿಗೆ ವಾಣಿಜ್ಯಿಕ ಮಾತುಕತೆ ನಡೆಸಬೇಕಾಗುತ್ತದೆ ಎಂದು ಆರ್ಥಿಕ ತಜ್ಞರು ಸ್ಪಷ್ಟಪಡಿಸಿದ್ದಾರೆ.
ತೀರ್ಪು (Verdict):
ಭಾಗಶಃ ನಿಜ (Partially True)
ಅಮೆರಿಕದಿಂದ ಭಾರತೀಯ ಸರಕುಗಳಿಗೆ ಸಂಬಂಧಿಸಿದಂತೆ ಸುಮಾರು 1.12 ಲಕ್ಷ ಕೋಟಿ ರೂಪಾಯಿ ಮರುಪಾವತಿಯಾಗುತ್ತಿರುವುದು ಮತ್ತು ಸುಂಕ ಇಳಿಕೆಯಾಗಿರುವುದು ನಿಜವಾದ ಸುದ್ದಿ. ಆದರೆ, ಪ್ರಧಾನಿ ಮೋದಿ ಅಮೆರಿಕದ ವಿರುದ್ಧ 'ಶಪಥ' ಮಾಡಿದ್ದಾರೆ ಅಥವಾ ಹಣ 'ವಸೂಲಿ' ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ ಎಂಬ ಬರಹವು ಉತ್ಪ್ರೇಕ್ಷಿತ ಮತ್ತು ಕಲ್ಪಿತವಾಗಿದೆ. ಇದು ರಾಜತಾಂತ್ರಿಕ ಮಾತುಕತೆ ಮತ್ತು ನ್ಯಾಯಾಲಯದ ತೀರ್ಪಿನ ಫಲಿತಾಂಶವೇ ಹೊರತು ಯಾವುದೇ ವ್ಯಕ್ತಿಯ ವೈಯಕ್ತಿಕ ಶಪಥವಲ್ಲ.
#Modi #vow #getback #Rs1lakhcrore #America #malgudiexpress #malgudinews #news #TopNews
#📜ಪ್ರಚಲಿತ ವಿದ್ಯಮಾನ📜
ಗ್ರಾಮ ಸ್ವರಾಜ್ಯ ಕನಸು ನನಸಾಗಿಸಲು ಗ್ರಾಮ ಆಡಳಿತಕ್ಕೆ ಹೆಚ್ಚಿನ ಒತ್ತು: ಸಚಿವ ಸತೀಶ ಜಾರಕಿಹೊಳಿ
ಬೆಳಗಾವಿ, ಏ.25: ಮಹಾತ್ಮಾ ಗಾಂಧೀಜಿ ಅವರ ಗ್ರಾಮ ಸ್ವರಾಜ್ಯದ ಕನಸು ನನಸಾಗಿಸಲು ಗ್ರಾಮ ಆಡಳಿತ ಬಲಪಡಿಸುವುದು ಅಗತ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಸುವರ್ಣ ವಿಧಾನಸೌಧದ ಸೆಂಟ್ರಲ್ ಹಾಲ್ನಲ್ಲಿ ರಾಷ್ಟ್ರೀಯ ಪಂಚಾಯತ ರಾಜ್ ದಿನಾಚರಣೆ–2026 ಅಂಗವಾಗಿ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮಗಳ ಸಮಗ್ರ ಅಭಿವೃದ್ಧಿಗಾಗಿ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳನ್ನು ತಳಮಟ್ಟದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಲ್ಲಿ ಪಂಚಾಯತ ರಾಜ್ ಇಲಾಖೆ ಮಹತ್ವದ ಪಾತ್ರ ವಹಿಸಬೇಕೆಂದು ತಿಳಿಸಿದರು.
ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಎಂಬ ಮೂರು ಹಂತದ ವ್ಯವಸ್ಥೆಯಡಿ ಗ್ರಾಮಾಭಿವೃದ್ಧಿಗೆ ಬಲವಾದ ಅಡಿಪಾಯ ಹಾಕಲಾಗಿದೆ ಎಂದು ಅವರು ಹೇಳಿದರು. ಗ್ರಾಮಗಳ ಸಬಲೀಕರಣದಲ್ಲಿ ಸ್ಥಳೀಯ ಆಡಳಿತಗಳ ಪಾತ್ರ ಮಹತ್ವದ್ದಾಗಿದ್ದು, ಶಾಸಕಾಂಗ ಹಾಗೂ ಕಾರ್ಯಾಂಗದ ಸಮನ್ವಯದಿಂದ ಜನಸಾಮಾನ್ಯರಿಗೆ ಮೂಲಭೂತ ಸೌಲಭ್ಯಗಳನ್ನು ತಲುಪಿಸುವ ಕಾರ್ಯ ಇನ್ನಷ್ಟು ಪರಿಣಾಮಕಾರಿಯಾಗಬೇಕೆಂದರು.
ಸರ್ಕಾರ ಜಾರಿಗೊಳಿಸಿರುವ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವಲ್ಲಿ ಬೆಳಗಾವಿ ಜಿಲ್ಲೆ ಮುಂಚೂಣಿಯಲ್ಲಿದೆ. ಅಧಿಕಾರಿಗಳು ಕಾನೂನು ವ್ಯಾಪ್ತಿಯಲ್ಲಿ ತಮ್ಮ ಕರ್ತವ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಜನಮನದಲ್ಲಿ ಶಾಶ್ವತವಾಗಿ ಉಳಿಯುವಂತೆ ಕೆಲಸ ಮಾಡಬೇಕು ಎಂದು ಸಚಿವರು ಕರೆ ನೀಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಮಾತನಾಡಿ, ಗ್ರಾಮ ಸ್ವರಾಜ್ಯ ಹಾಗೂ ಮಹಿಳಾ ಸಬಲೀಕರಣದಲ್ಲಿ ಪಂಚಾಯತ ರಾಜ್ ಇಲಾಖೆಯ ಪಾತ್ರ ಅಪಾರವಾಗಿದೆ ಎಂದರು. ಗ್ರಾಮ ಪಂಚಾಯತಗಳು ಬೇರುಮಟ್ಟದ ಅಭಿವೃದ್ಧಿಯ ಕೇಂದ್ರಬಿಂದುಗಳಾಗಿದ್ದು, ಸರ್ಕಾರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜನರಿಗೆ ತಲುಪಿಸುವ ಹೊಣೆ ಅಧಿಕಾರಿಗಳ ಮೇಲಿದೆ ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಮಾತನಾಡಿ, “ಗ್ರಾಮಗಳು ಸುಧಾರಿಸಿದರೆ ದೇಶ ಸುಧಾರಿಸುತ್ತದೆ” ಎಂಬ ಗಾಂಧೀಜಿಯವರ ಕನಸನ್ನು ನನಸಾಗಿಸಲು ರಾಜ್ಯ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ ಎಂದು ಹೇಳಿದರು. ಗ್ರಾಮ ಪಂಚಾಯತ ಕಟ್ಟಡವೇ ಗ್ರಾಮದ ಸಂಸತ್ ಆಗಿದ್ದು, ಗ್ರಾಮೀಣ ಜನರಿಗೆ ಆಡಳಿತಾತ್ಮಕ ಹಕ್ಕು ನೀಡಿದ ಪಂಚಾಯತ ರಾಜ್ ವ್ಯವಸ್ಥೆ ಜನಪರ ಆಡಳಿತಕ್ಕೆ ಮಾದರಿಯಾಗಿದೆ ಎಂದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ ಶಿಂಧೆ ಮಾತನಾಡಿ, ಪಂಚಾಯತ ರಾಜ್ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸುವ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಗುರುತಿಸಿ ಗೌರವಿಸುವ ಕಾರ್ಯಕ್ರಮ ಇದಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯ ಹಣಕಾಸು ಸಂಸ್ಥೆ ಅಧ್ಯಕ್ಷ ಮಹಾಂತೇಶ ಕೌಜಲಗಿ, ಶಾಸಕರಾದ ಬಾಬಾಸಾಹೇಬ ಪಾಟೀಲ, ಗಣೇಶ ಹುಕ್ಕೇರಿ, ಆಸೀಪ್ (ರಾಜು) ಸೇಠ, ಗ್ಯಾರಂಟಿ ಯೋಜನೆಗಳ ಜಿಲ್ಲಾ ಅಧ್ಯಕ್ಷ ವಿನಯ ನಾವಲಗಟ್ಟಿ, ಬುಡಾ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸಂಜಯ ಶೆಟ್ಟಣ್ಣವರ, ಪೊಲೀಸ್ ಆಯುಕ್ತ ಬೋರಸೆ ಗುಲಾಬರಾವ್ ಭೂಷಣ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್, ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿಗಳಾದ ಬಸವರಾಜ ಹೆಗನಾಯಕ, ಬಸವರಾಜ ಅಡವಿಮಠ, ಮುಖ್ಯ ಯೋಜನಾಧಿಕಾರಿ ಗಂಗಾಧರ ದಿವಟರ, ಯೋಜನಾಧಿಕಾರಿ ರವಿ ಬಂಗಾರಪ್ಪನವರ ಸೇರಿದಂತೆ ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿಗಳು, ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ರಾಜ್ಯ ಮಟ್ಟದಲ್ಲಿ ಉನ್ನತ ಸಾಧನೆಗೈದ ಪ್ರಾರ್ಥನಾ ಪಾಟೀಲ ಅವರನ್ನು ಸನ್ಮಾನಿಸಲಾಯಿತು. ಜೊತೆಗೆ ಪಂಚಾಯತ ರಾಜ್ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಗಣ್ಯರು ಗೌರವಿಸಿದರು.
#belagavi #suvarnasoudha #nattionalpanchayatrajday
#malgudiexpressnews #satishjarkiholi
#📜ಪ್ರಚಲಿತ ವಿದ್ಯಮಾನ📜
ಅಲೆಮಾರಿಗಳು ಇನ್ನೂ ಅತ್ಯಂತ ಹೀನಾಯ ಸ್ಥಿತಿಗೆ ತಲುಪುವ ಸಾಧ್ಯತೆ: ವಡ್ಡಗೆರೆ ನಾಗರಾಜಯ್ಯ
ಸಚಿವ ಸಂಪುಟ ಸಭೆಯಲ್ಲಿ ಒಟ್ಟಾರೆ 15% ಮೀಸಲಾತಿಯಲ್ಲಿ ಎಡಗೈ 'ಎ' 5.25, ಬಲಗೈ 'ಬಿ' 5.25 ಹಾಗೂ ಸ್ಪೃಶ್ಯ ದಲಿತ ಮತ್ತು ಅಲೆಮಾರಿ 'ಸಿ' 4.5 ಪ್ರಮಾಣದಲ್ಲಿ ಹಂಚಿಕೆ ಮಾಡಲು ಸರ್ವಾನುಮತದಿಂದ ಒಪ್ಪಿ ಅನುಮೋದಿಸಲಾಗಿದೆ. ಎಡಗೈ ಮತ್ತು ಬಲಗೈ ಜಾತಿಗಳ ಜನಸಂಖ್ಯೆಯ ಪ್ರಮಾಣಕ್ಕೆ ಕನಿಷ್ಠ ಸಮೀಪ ಇಲ್ಲದಿರುವ, ಅಸ್ಪೃಶ್ಯರಲ್ಲದ ಸ್ಪೃಶ್ಯ ಸಮುದಾಯಗಳಿಗೆ ಹೆಚ್ಚೂಕಮ್ಮಿ ಅಸ್ಪೃಶ್ಯರಷ್ಟೇ ಸಮಾನವಾದ ಪಾಲು ಹಂಚಿಕೆ... ವಾರೆವ್ಹಾ !!
ಎಡಗೈ ಬಲಗೈ ಸಮುದಾಯಗಳಿಗಿಂತಲೂ ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಮುಂದುವರೆದಿರುವ ಸ್ಪೃಶ್ಯ ಸಮುದಾಯಗಳ ಜೊತೆಯಲ್ಲಿ ಅತಿ ಹಿಂದುಳಿದಿರುವ ಅಲೆಮಾರಿ ಸಮುದಾಯಗಳನ್ನು ಸೇರಿಸಿರುವುದರಿಂದ ಅಲೆಮಾರಿಗಳು ಇನ್ನೂ ಅತ್ಯಂತ ಹೀನಾಯ ಸ್ಥಿತಿಗೆ ತಲುಪುವ ಸಾಧ್ಯತೆ ಇದೆ.
"ಎಡಗೈ ಬಲಗೈ ಇಬ್ಬರ ನಡುವಿನ ಜಗಳ - ಮೂರನೇ ಸ್ಪೃಶ್ಯರಿಗೆ ಲಾಭ" ಎಂಬಂತಾಗಿದೆ. ಎಡಗೈ ಬಲಗೈ ಸಮುದಾಯಗಳಿಗಿಂತಲೂ ಮುಂದುವರೆದಿರುವ ಅಸ್ಪೃಶ್ಯರಲ್ಲದ ಸ್ಪೃಶ್ಯ ಜಾತಿಗಳು ಅಲೆಮಾರಿಗಳ ಅವಕಾಶಗಳನ್ನು ಕೂಡಾ ಕಬಳಿಸಿ ಅಲೆಮಾರಿಗಳನ್ನು ಮತ್ತು ಅಸ್ಪೃಶ್ಯರನ್ನು ಮತ್ತಷ್ಟು ಶೋಷಣೆಗೆ ಗುರಿಪಡಿಸಲು ದೊಡ್ಡ ಹೆದ್ದಾರಿ ನಿರ್ಮಾಣವಾಗಿದೆ.
ಅಲೆಮಾರಿಗಳ ಪ್ರತ್ಯೇಕ ಮೀಸಲಾತಿ ಹೋರಾಟವನ್ನು ಅನುಲಕ್ಷಿಸಿ 5.5 + 5.5 + 3 + 1 ಹೀಗೆ ಹಂಚಿಕೊಟ್ಟಿದ್ದರೆ ಒಪ್ಪಬಹುದಾಗಿತ್ತು. ಈಗ ಹಂಚಿಕೆಯಾಗಿರುವುದರಲ್ಲಿ ಯಾವುದೇ ಸಾಮಾಜಿಕ ನ್ಯಾಯ ಇದೆಯೆಂದು ನನಗೆ ಕಾಣಿಸುತ್ತಿಲ್ಲ. ಅಂಬೇಡ್ಕರರ ಸ್ಮರಣೆಯ ದಿನಗಳನ್ನು ಆಚರಿಸದಿರುವ, ಮನೆಗಳಲ್ಲಿ ಅಂಬೇಡ್ಕರ್ ಅವರ ಭಾವಚಿತ್ರ ಹಾಕಿಕೊಳ್ಳದಿರುವ, ಅಂಬೇಡ್ಕರ್ ಅವರ ಸಮಾನತೆಯ ಬೆಳಕನ್ನು ಎದೆಗಿಳಿಸಿಕೊಳ್ಳದಿರುವ, ಸಾಮಾಜಿಕ ನ್ಯಾಯಾಗ್ರಹದ ಬೀದಿ ಹೋರಾಟಗಳಲ್ಲಿ ಗುರುತಿಸಿಕೊಳ್ಳದಿರುವ, ಮೀಸಲಾತಿ ಹೋರಾಟಗಳಲ್ಲಿ ಪಾಲ್ಗೊಳ್ಳದ, ಯಾವತ್ತೂ ಬುದ್ಧ ಬಸವ ಅಂಬೇಡ್ಕರ್ ಚಿಂತನೆಗಳ ಸಂಘಟನೆಗಳನ್ನು ರೂಪಿಸದಿರುವ ಸ್ಪೃಶ್ಯ ಸಮುದಾಯಗಳು ಕುಂತಲ್ಲೇ ತಣ್ಣಗೆ ಮೀಸಲಾತಿಯ ದೊಡ್ಡ ಫಲಗಳನ್ನು ಗಳಿಸುವ ಮಹಾ ಮೋಸದ ಪ್ರಮೇಯವನ್ನು ಯಾವ ಆಯೋಗ ಅಂಗೀಕರಿಸಿದೆಯೋ ಗೊತ್ತಿಲ್ಲ. ಅಂತೂ ಅಲೆಮಾರಿಗಳ ಟೆಂಟುಗಳು ಈ ಬಿರುಗಾಳಿಗೆ ಎಗರಿ ಹೋಗುವ ಸಂಕಟ ಕಲ್ಪನೆಗೂ ನಿಲುಕುತ್ತಿಲ್ಲ.
- ಡಾ. ವಡ್ಡಗೆರೆ ನಾಗರಾಜಯ್ಯ, ಹಿರಿಯ ಸಾಹಿತಿಗಳು
#Nomads #likely #reach #InnerReservation #more #deplorable #state #VaddagereNagarajaiah #malgudiexpress #malgudinews #news #TopNews












