#🙏🦚 «ಶ್ರೀ ಹರಿ ನಾರಾಯಣ» 🦚🙏 #ಕಾಮದಾ ಏಕಾದಶಿ #ಏಕಾದಶಿ
ಕಾಮದಾ ಏಕಾದಶಿ ಕಥೆ:-
ಶ್ರೀ ಪರಾಭವ ಸಂವತ್ಸರ ಚೈತ್ರ ಮಾಸ ಶುದ್ಧ ಪಕ್ಷ 29- ೦3- 2026 ಭಾನುವಾರ ‘ಏಕಾದಶಿ’ ಬಂದಿದೆ. ಇದನ್ನು ‘ಕಾಮದಾ’ ಏಕಾದಶಿ ಎನ್ನುತ್ತಾರೆ.
ಶ್ರೀ ಗುರುಭ್ಯೋ ನಮಃ ಹರಿ: ಓಂ
ಓಂ ಗಂ ಗಣಪತಿಯೇ ನಮಃ
ಓಂ ಲಕ್ಷ್ಮೀನಾರಾಯಣಾಯ ನಮಃ|
ಒಮ್ಮೆ ಮಧ್ಯಮ ಪಾಂಡವ ಅರ್ಜುನ ಶ್ರೀ ಕೃಷ್ಣನನ್ನು ಕುರಿತು ಹೇ ಗೋವಿಂದ ಈ ಜಗತ್ತಿನಲ್ಲಿ ಯಾವ ವ್ರತದಿಂದ ಸಕಲ ಇಷ್ಟಾರ್ಥ ಸಿದ್ಧಿಸುವುದು ಅಂತಹ ಒಂದು ವ್ರತ ಶ್ರೇಷ್ಠವನ್ನು ತಿಳಿಸು ಎಂದು ಪ್ರಾರ್ಥಿಸಿದನು. ಆಗ ಶ್ರೀ ಕೃಷ್ಣ, ಅರ್ಜುನ ಕೇಳು ಈ ಲೋಕದಲ್ಲಿ ಎಲ್ಲರ ಮನೋರತಗಳನ್ನು ಪೂರೈಸುವಂತಹ ‘ಕಾಮದಾ ಏಕಾದಶಿ’ ಎಂಬ ಉತ್ತಮವಾದ ವ್ರತ ಇದೆ .ಇದನ್ನು ಆಚರಿಸುವುದರಿಂದ ಇಷ್ಟಾರ್ಥ ಸಿದ್ಧಿಸುವುದಲ್ಲದೆ ಭಗವಂತನ ಕೃಪೆಗೆ ಪಾತ್ರರಾಗುತ್ತಾರೆ ಎಂದನು. ಕೇಳಿದ ಅರ್ಜುನನು ಎಲೈ ಮಾಧವ ಈ ವ್ರತದ ವೃತ್ತಾಂತವನ್ನು ಮತ್ತು ಆಚರಿಸುವ ಕ್ರಮವನ್ನು ತಿಳಿಸುವ ಕೃಪೆ ಮಾಡು ಎಂದನು.
ಅರ್ಜುನ, ಪೂರ್ವದಲ್ಲಿ ದಿಲೀಪ ಮಹಾರಾಜರು ಗುರು ವಶಿಷ್ಠರನ್ನು ಇದೇ ಪ್ರಶ್ನೆಯನ್ನು ಕೇಳಿದಾಗ, ವಶಿಷ್ಠ ಮಹರ್ಷಿಗಳು ಏಕಾದಶಿ ಮಹಿಮೆ ಬಗ್ಗೆ ಉಪದೇಶಿಸಿದ್ದರು. ಈ ಲೋಕದಲ್ಲಿ ದೇವತೆಗಳೇ ಗೌರವದಿಂದ ಆಚರಿಸುವ ಅತ್ಯುತ್ತಮ ವ್ರತವೆಂದರೆ ಏಕಾದಶಿ ವ್ರತ. ಎಲ್ಲ ವ್ರತಗಳಲ್ಲಿ ಮನೋರಥಗಳನ್ನು ಪೂರ್ಣಗೊಳಿಸುವ ಶ್ರೇಷ್ಠವಾದುದು ಚೈತ್ರ ಮಾಸದ ಶುಕ್ಲ ಪಕ್ಷದ ಏಕಾದಶಿ—ಇದನ್ನೇ ಕಾಮದ ಏಕಾದಶಿ ಎಂದು ಕರೆಯುತ್ತಾರೆ.
‘ಕಾಮ’ ಎಂದರೆ ಇಷ್ಟಾರ್ಥ, ‘ದ’ ಎಂದರೆ ನೀಡುವುದು. ಆದ್ದರಿಂದ ಈ ವ್ರತವನ್ನು ಭಕ್ತಿಯಿಂದ ಆಚರಿಸುವವರ ಇಷ್ಟಾರ್ಥಗಳು ಭಗವಂತನ ಕೃಪೆಯಿಂದ ನೆರವೇರುತ್ತವೆ.
ಹಿಂದೆ ಭಾರ್ಗವಪುರಿ ಅಥವಾ ರತ್ನಪುರಿ ಎಂಬಲ್ಲಿ ಪುಂಡಲೀಕ ಮಹಾರಾಜನು ಸಕಲ ಸಂಪತ್ಭರಿತನಾಗಿ ಯಕ್ಷರು, ನಾಗರು, ಕಿನ್ನರರು, ಕಿಂಪುರುಷರು, ಗಂಧರ್ವಾದಿಗಳಿಂದ ಕೂಡಿಕೊಂಡು ವೈಭವಯುತವಾಗಿ ಆಳುತ್ತಿದ್ದನು. ಅವನ ಆಸ್ಥಾನದಲ್ಲಿ ‘ಲಲಿತೇಶ’ ಮತ್ತು ‘ಲಲಿತಾ’ ಎಂಬ ಗಂಧರ್ವ ದಂಪತಿಗಳಿದ್ದರು. ಇವರಿಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಇವರಲ್ಲಿ ಲಲಿತೆಯು ಪತಿಪರಾಯಣಳು, ಮೃದುಭಾಷಿಣಿಯಾಗಿದ್ದಳು.
ಒಮ್ಮೆ ಗಂಧರ್ವರಿಂದ ಕೂಡಿದ ರಾಜನ ಆಸ್ಥಾನದಲ್ಲಿ, ಗಂಧರ್ವರೊಂದಿಗೆ ಲಲಿತೇಶನು ಗಾಯನ ಮಾಡುತ್ತಿದ್ದ. ಹೀಗೆ ಗಾಯನ ಮಾಡುತ್ತಿರುವ ಸಮಯದಲ್ಲಿ ಪತ್ನಿ ಲಲಿತಾ ನೃತ್ಯ ಮಾಡುತ್ತಿದ್ದಳು. ಲಲಿತೇಶನು ನೃತ್ಯ ಮಾಡುತ್ತಿದ್ದ ಪತ್ನಿ ಲಲಿತೆಯ ಮುಖವನ್ನು ನೋಡಿದ. ಅವಳ ಮುಖದಲ್ಲಿ ಬೇಸರ ಕಂಡಿತು. ಇದೇ ಯೋಚನೆಯಲ್ಲಿ ಅವನ ಗಾಯನದ ತಾಳ ತಪ್ಪಿತು. ಇದನ್ನು ಗಮನಿಸಿದ ನಾಗರಾಜ ಕಾರ್ಕೋಟಕನು ರಾಜನಿಗೆ ತಿಳಿಸಿದನು. ತುಂಬಿದ ಸಭೆಯಲ್ಲಿ ತನ್ನನ್ನು ನಿರ್ಲಕ್ಷಿಸಿದನೆಂದು ರಾಜ ಪುಂಡರೀಕನಿಗೆ ಕೋಪ ಬಂದಿತು. “ನೀನು ಮೈಮರೆತು ಅಪಸ್ವರ ಹಾಡಿದ್ದರಿಂದ ಸಂಗೀತ ಆರಾಧಕರಿಗೂ ಸರಸ್ವತಿ ದೇವಿಗೂ ಅಪಚಾರವಾಗಿದೆ. ಆದ್ದರಿಂದ ನೀನು ಭ್ರಮನಿರಸನಾಗಿ ಮನುಷ್ಯರನ್ನು ಕೊಂದು ತಿನ್ನುವ ನರಭಕ್ಷಕ ರಾಕ್ಷಸನಾಗು” ಎಂದು ಲಲಿತೇಶನಿಗೆ ಶಾಪ ಕೊಟ್ಟನು.
ಶಾಪದ ಕಾರಣ ಅವನ ಮನುಷ್ಯತ್ವ ಹೋಗಿ, ಭಯಂಕರ ರಾಕ್ಷಸನಾಗಿ—ಎಂಟು ಯೋಜನೆ ಅಗಲವುಳ್ಳ ದೇಹ, ಎರಡು ಯೋಜನೆ ಅಗಲವುಳ್ಳ ಕೈಗಳನ್ನು ಚಾಚಿಕೊಂಡು, ಕಣ್ಣಿನಿಂದ ಬೆಂಕಿ ಉಗುಳುತ್ತಾ, ಅನೇಕ ಬಾಧೆಗಳಿಂದ ಬಳಲುತ್ತಾ, ಮತಿಹೀನನಾಗಿ ವಿಕಾರವಾಗಿ ಕೂಗುತ್ತಾ—ಕಾಡಿನತ್ತ ಓಡಿದನು. ಅವನ ಪತ್ನಿ ಲಲಿತಾ ಪತಿಯ ಕಷ್ಟಗಳನ್ನು ಕಂಡು ನೊಂದು, ಅವನನ್ನು ಅಗಲಲಾರದೆ ಹಿಂಬಾಲಿಸುತ್ತಾ ಹೋದಳು. ಹೀಗೆ ಹೋದ ಆತ ವಿಂಧ್ಯಾಚಲದತ್ತ ನಡೆದನು. ಲಲಿತೆಯೂ ಅವನ ಜೊತೆಯಲ್ಲಿ ಹೋದಳು.
ಅಲ್ಲಿ ಅವಳಿಗೆ ಶೃಂಗ ಮುನಿಗಳ ಆಶ್ರಮ ಕಂಡಿತು. ಅಲ್ಲಿ ಶಾಂತಚಿತ್ತರಾದ ‘ಶೃಂಗೀ’ ಎಂಬ ಮಹರ್ಷಿಗಳು ಇದ್ದರು. ಅವರ ಬಳಿಗೆ ಹೋಗಿ ತನ್ನ ಪರಿಚಯ ಮಾಡಿಕೊಂಡು ನಮಸ್ಕರಿಸಿ, “ಹೇ ಮಹರ್ಷಿಗಳೇ, ನಾನು ಗಂಧರ್ವ ವೀರ ಧನ್ವರ ಮಗಳಾದ ಲಲಿತೆ, ಮತ್ತು ನನ್ನ ಪತಿ ಗಂಧರ್ವ ಪುರುಷ ಲಲಿತೇಶ. ವಿಧಿ ವಿಪರ್ಯಾಸದಿಂದ ನನ್ನ ಪತಿ ರಾಜ ಪುಂಡರೀಕನ ಶಾಪಕ್ಕೆ ತುತ್ತಾಗಿದ್ದಾರೆ” ಎಂದು ನಡೆದ ಸಂಗತಿಯನ್ನು ತಿಳಿಸಿ, “ಹೇಗಾದರೂ ನನ್ನ ಪತಿಯನ್ನು ಶಾಪವಿಮುಕ್ತರನ್ನಾಗಿ ಮಾಡಿ, ನನ್ನನ್ನು ಈ ಕಷ್ಟದಿಂದ ಪಾರು ಮಾಡಿ” ಎಂದು ಪ್ರಾರ್ಥಿಸಿ ಬೇಡಿಕೊಂಡಳು.
ಶೃಂಗ ಮಹರ್ಷಿಗಳು ಹೀಗೆ ಹೇಳಿದರು: “ಮಗಳೇ, ಚೈತ್ರ ಮಾಸದ ಶುಕ್ಲ ಪಕ್ಷದ ಏಕಾದಶಿಯನ್ನು ಕಾಮದ ಏಕಾದಶಿ ಎಂದು ಕರೆಯುತ್ತಾರೆ. ಈ ದಿನ ನೀನು ಉಪವಾಸವಿದ್ದು ವ್ರತವನ್ನು ಆಚರಿಸುವುದರಿಂದ ನಿನ್ನ ಎಲ್ಲ ಇಷ್ಟಾರ್ಥಗಳು ಈಡೇರುತ್ತವೆ. ಪಾಪಗಳು ಪರಿಹಾರವಾಗುತ್ತವೆ. ಈ ವ್ರತವನ್ನು ವಿಧಿವತ್ತಾಗಿ ಮಾಡಿ, ಆ ಪುಣ್ಯವನ್ನು ಪತಿಗೆ ಧಾರೆ ಎರೆದರೆ ಕ್ಷಣಮಾತ್ರದಲ್ಲಿ ಆತನು ಶಾಪದಿಂದ ಮುಕ್ತಿ ಹೊಂದುತ್ತಾನೆ” ಎಂದರು.
ಇದನ್ನು ಕೇಳಿ ಲಲಿತಳು ತನ್ನ ಪತಿಯ ಪ್ರಾಯಶ್ಚಿತ್ತಕ್ಕಾಗಿ ಕಾಮದ ಏಕಾದಶಿ ವ್ರತದ ವಿಧಾನವನ್ನು ತಿಳಿದು, ವಿಧಿಪೂರ್ವಕವಾಗಿ ಆಚರಿಸಿ ಮಹರ್ಷಿಗಳ ಆಶೀರ್ವಾದ ಪಡೆದಳು. ಮಹರ್ಷಿಗಳು ಆಕೆ ಮಾಡಿದ ಕಾಮದ ಏಕಾದಶಿ ವ್ರತದ ಪುಣ್ಯವನ್ನು ಅವಳ ಪತಿಗೆ ಧಾರೆಯೆರೆಸಿದರು. ಏಕಾದಶಿ ವ್ರತದ ಪುಣ್ಯಫಲದಿಂದ ರಾಕ್ಷಸನಾಗಿದ್ದ ಲಲಿತೇಶನ ರಾಕ್ಷಸ ದೇಹ ಹೋಗಿ, ದಿವ್ಯದೇಹಧಾರಿಯಾಗಿ ಸ್ವರ್ಗಪ್ರಾಪ್ತಿಯಾಯಿತು. ಇದರಿಂದ ಸಂತೋಷಗೊಂಡ ದಂಪತಿಗಳು ನಮಸ್ಕರಿಸಿ ಆಶೀರ್ವಾದ ಪಡೆದುಕೊಂಡರು.
ಮಹರ್ಷಿಗಳು ಹೇಳಿದರು: “ಏಕಾದಶಿ ವ್ರತದ ಮಹಿಮೆ ಅಪಾರವಾದುದು. ಕಾಮದ ಏಕಾದಶಿ ವ್ರತ ಮಾಡುವುದರಿಂದ ಬ್ರಾಹ್ಮಣ ಹತ್ಯೆ ಮಾಡಿದ ಬ್ರಹ್ಮದೋಷವೂ ಪರಿಹಾರವಾಗುತ್ತದೆ. ವಾಜಪೇಯಿ ಯಜ್ಞ ಮಾಡಿದ ಫಲದ ಪುಣ್ಯವು ಸಿಗುತ್ತದೆ. ಇಂಥ ಮಹಾಮಹಿಮಾನ್ವಿತ ಕಾಮದ ಏಕಾದಶಿ ವ್ರತವನ್ನು ಮಾಡಿದರೆ ಭಗವಾನ್ ವಿಷ್ಣುವಿನ ಪ್ರೀತಿಗೆ ಪಾತ್ರರಾಗುತ್ತಾರೆ. ಸಕಲ ಪಾಪಗಳು ಕ್ಷಾಲನವಾಗುತ್ತವೆ” ಎಂದರು.
ಏಕಾದಶಿ ವ್ರತ ಮಾಡುವ ವಿಧಾನ:
ಈ ವ್ರತವೆಂದರೆ ವಿಷ್ಣುವನ್ನು ಆರಾಧಿಸುವುದು. ಶುದ್ಧವಾಗಿ ಸ್ನಾನ ಮಾಡಿ
ರಂಗೋಲಿ ಬರೆದ ಮಣೆಯ ಮೇಲೆ ಅಕ್ಕಿ ಹಾಕಿದ ಸಣ್ಣ ತಟ್ಟೆ ಇಟ್ಟು ಅದರ ಮೇಲೆ ಅಕ್ಷತೆಕಾಳು ಹಾಕಿ ಕೃಷ್ಣನ ವಿಗ್ರಹ ಅಥವಾ ಲಕ್ಷ್ಮೀನಾರಾಯಣನನ್ನು
ಇಟ್ಟು ಹೂವು ಗಂಧ ಅಕ್ಷತೆಗಳಿಂದ ಪೂಜಿಸಿ, ಅಷ್ಟೋತ್ತರ ಹೇಳಿ ಹಣ್ಣು ಅಥವಾ ಏನಾದರೂ ಸಿಹಿ ನೈವೇದ್ಯ ಮಂಗಳಾರತಿ ಮಾಡಿ ಪ್ರಾರ್ಥನೆ ಮಾಡಿ ನಮಸ್ಕಾರ ಮಾಡಿದರೆ ಪೂಜೆಯಾಗುತ್ತದೆ. ಅವರವರ ದೇಹಾ ಆರೋಗ್ಯಕ್ಕೆ ತಕ್ಕಂತೆ, ತೀರ ಉಪವಾಸವಿರಲು ಆಗದೆ ಇದ್ದವರು, ಈಗ ಶುರು ಮಾಡಬೇಕೆನ್ನುವರು, (ಚಿಕ್ಕಂದಿನಿಂದಲೂ ಉಪವಾಸ ಮಾಡುತ್ತಾ ಬಂದವರಿಗೆ ಅಭ್ಯಾಸವಿರುತ್ತದೆ ) ಹಣ್ಣು ಹಾಲು, ಫಲಹಾರ ಸೇವಿಸಿ ಅಂದರೆ ಉಪ್ಪಿಟ್ಟು, ಅವಲಕ್ಕಿ, ಅರಳು, ಸೀಮೆ ಅಕ್ಕಿ ಕಿಚಡಿ, ತರಕಾರಿಗಳ ಸಲಾಡ್, ಈ ತರಹ ತೆಗೆದುಕೊಳ್ಳುತ್ತಾರೆ. ಉಪವಾಸ ಮಾಡುವವರು ಉಪ್ಪಿಲ್ಲದ ಆಹಾರ ಭುಂಜಿಸಬೇಕು ಇಂಥ ನಿಯಮವಿದೆ."ಬಲವಂತವಾಗಿ ಆಹಾರ ಸೇವಿಸದೆ ಏಕಾದಶಿ ಮಾಡಿದರೆ ಏಕಾದಶಿಗಿಂತ ದ್ವಾದಶಿ ಚಿಂತೆ ಹೆಚ್ಚಾಗಿರುತ್ತದೆ" ಎಂದು ಡಾ. ಗುರುರಾಜ ಕರ್ಜಗಿಯವರು ಹೇಳಿದ ಮಾತು ನೆನಪಾಗುತ್ತದೆ. ವಿಷ್ಣುಸಹಸ್ರನಾಮವನ್ನು ಪಠಿಸಿ, ಭಜನೆ, ದೇವರ ನಾಮ ಕ ಹಾಡಿ, ಈ ದಿನವನ್ನು ದೇವರ ನಾಮ ಸ್ಮರಣೆಯಲ್ಲಿ ಕಳೆದರೆ ಒಳ್ಳೆಯದು. ಮರುದಿನ ದ್ವಾದಶಿಯಂದು, ಬೆಳಿಗ್ಗೆ ಸ್ನಾನ ಪೂಜಾರಿಗಳನ್ನು ಮಾಡಿ, ಬ್ರಾಹ್ಮಣರಿಗೆ(ಅಥವಾ ಗೋಗ್ರಾಸ) ಇಲ್ಲ ಬಡಬಗ್ಗರಿಗೆ ಆಹಾರ, ದಾನ ನೀಡಿ ನಂತರ ಉಪವಾಸವನ್ನು ಮುರಿಯುವುದು ಪದ್ಧತಿ.
'ಕಾಮದ ಏಕಾದಶಿ' ಸಕಲರಿಗೂ ಸನ್ಮಂಗಳವನ್ನುಂಟುಮಾಡಲಿ.
ನಾರಾಯಣಂ ನಮಸ್ಕೃತ್ಯ ನರಂ ಚೈವ ನರೋತ್ತಮಂ !
ದೇವೀಂ ಸರಸ್ವತೀಂ ವ್ಯಾಸಂ ತತೋ ಜಯಮುದೀರಯೇತ್!
ವ್ಯಾಸಂ ವಸಿಷ್ಟ ನಪ್ತಾರಂ ಶಕ್ತೇ ಪೌತ್ರಮಕಲ್ಮಮ್!
ಪರಾಶರಾತ್ಮಜಂ ವಂದೇ ಶುಕತಾತಂ ತಪೋ ನಿಧಿಂ!
ವ್ಯಾಸಾಯ ವಿಷ್ಣುರೂಪಾಯ ವ್ಯಾಸ ರೂಪಾಯ ವಿಷ್ಣುವೇ!
ನಮೋ ವೈ ಬ್ರಹ್ಮನಿಧಯೇ ವಾಸಿಷ್ಠಾಯ ನಮೋ ನಮಃ !
▬▬ஜ۩۞۩ஜ▬▬▬*▬▬▬ஜ۩۞۩ஜ▬▬
!! ಸರ್ವಂ ಶ್ರೀ ಕೃಷ್ಣಾರ್ಪಣಮಸ್ತು !!
🙏 ಸರ್ವೇ ಜನಾಃ ಸುಖಿನೋ ಭವಂತುಸರ್ವೇ
ಸಂತು ನಿರಾಮಯಾಃ 🙏
!! ಧರ್ಮೋ ರಕ್ಷತಿ ರಕ್ಷಿತಃ !!
▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬
🙏 ಹರಿ ಸರ್ವೋತ್ತಮ ವಾಯು ಜೀವೋತ್ತಮ 🙏


