#🕉️ ಜೈ ಶ್ರೀ ರಾಮ🙏
ಶ್ರೀರಾಮ ಕಥಾ ಮಹಿಮೆ:- ಅಧ್ಯಾಯ 2 .
ಶ್ರೀರಾಮಚಂದ್ರನ ಅನುಗ್ರಹದಿಂದ ಸಕಲೈಶ್ವರ್ಯವನ್ನು ಪಡೆದ ಕೇಶವ ಭಟ್ಟನು, ಪುಣ್ಯ ಕ್ಷೇತ್ರಗಳ ದರ್ಶನ ಮಾಡಲು ಯಾತ್ರೆಗೆ ಹೊರಡುವ ಮುನ್ನ ಮಗ ನಾರಾಯಣನನ್ನು ಕರೆದು ನಾನು ಯಾತ್ರೆ ಮುಗಿಸಿ ಬರುವ ತನಕ ಶ್ರೀರಾಮ ಪೂಜೆಯನ್ನು ತಪ್ಪದೆ ಮಾಡುವಂತೆ ಹೇಳಿ ಹೊರಟನು.
ಇಲ್ಲಿಂದ ಮುಂದೆ:- ತಂದೆಯಿಂದ ಆಜ್ಞೆ ಪಡೆದ ನಾರಾಯಣ ಭಟ್ಟನು ವಿಧಿ ಪ್ರಕಾರ ಶ್ರೀರಾಮ ಪೂಜೆಯನ್ನು ಪ್ರತಿ ಶನಿವಾರವು ತಪ್ಪದೇ ಆಚರಿಸುತ್ತಿದ್ದನು.
ಹೀಗಿರಲಾಗಿ ಒಂದು ಶನಿವಾರ ದಿನ ಪದ್ಧತಿಯಂತೆ ಶ್ರೀರಾಮ ಪೂಜೆಯನ್ನು ಮಾಡಿ, ತಾಯಿಯನ್ನು ಕುರಿತು, ನಾರಾಯಣ ಭಟ್ಟ, ಅಮ್ಮಾ, ಶ್ರೀರಾಮನ ಕಥೆ ಹೇಳುವೆ ಬಾ ಎಂದು ಕರೆದನು. ಅದಕ್ಕೆ ತಾಯಿ, ಈಗೆಲ್ಲಿ ಹೇಳುವೆ ಆಗಲೇ ಮಧ್ಯಾಹ್ನವಾಗಿದೆ. ಊಟವಾದ ನಂತರ ಕೇಳುವೆ, ಈಗ ಬೇಡ ಎಂದಳು.
ಮಧ್ಯಾಹ್ನದ ಭೋಜನಾ ನಂತರ ಮತ್ತೆ ನಾರಾಯಣ ಭಟ್ಟ, ಅಮ್ಮ ಈಗ ಊಟವಾಗಿದೆಯಲ್ಲ ಶ್ರೀರಾಮನ ಕಥೆಯನ್ನು ಹೇಳುವೆನು ಕೇಳು ಎಂದನು. ಅದಕ್ಕೆ ತಾಯಿಯು, ಮಗನೇ! ಊಟ ಮಾಡಿ ಹೊಟ್ಟೆ ಭಾರವಾಗಿದೆ ಸ್ವಲ್ಪ ಮಗ್ಗುಲಾಗಿ ನಂತರ ಮಕ್ಕಳ ಬಟ್ಟೆ ,ಪಾತ್ರೆಗಳನ್ನೆಲ್ಲ ತೊಳೆದು ಬಾವಿಯಿಂದ ಸಿಹಿ ನೀರು ತರಬೇಕು ಸಾಯಂಕಾಲ ಕೇಳುವೆ. ನಾರಾಯಣ ಭಟ್ಟ ಸಾಯಂಕಾಲ ಸಂಧ್ಯಾವಂದನೆ ಶ್ರೀರಾಮಗೆ ಮಂಗಳಾರತಿ ಪ್ರದಕ್ಷಿಣೆ ನಮಸ್ಕಾರ ಮುಗಿಸಿ, ಅಮ್ಮ ಈಗ ಹೇಳುವೆ ಕೇಳಲು ಸಮಯವಿದೆಯೇ? ತಾಯಿ, ಮಗು! ಈಗ ರಾತ್ರಿ ಅಡಿಗೆ ಮಾಡಬೇಕು ಮಕ್ಕಳು ಅಳುತ್ತಿದ್ದಾರೆ ಊಟವಾದ ನಂತರ ಕೇಳುವೆನು.
ಮತ್ತೆ ಊಟವಾದ ನಂತರ, ಅಮ್ಮ ಈಗ ನಿನ್ನ ಕೆಲಸವೆಲ್ಲ ಮುಗಿದಿದೆ ಊಟವು ಆಗಿದೆ ಈಗಲಾದರೂ ಶ್ರೀರಾಮಕತೆ ಹೇಳುವೆನು ಕೇಳುತ್ತೀಯಾ? ತಾಯಿ! ಮಗು ನಿನಗೆ ಬುದ್ಧಿ ಇಲ್ಲ ಬೆಳಗ್ಗೆಯಿಂದ ಕೆಲಸ ಮಾಡಿ ಸೋತು ಸುಣ್ಣವಾಗಿದ್ದೇನೆ ಮನೆಯ ಕೆಲಸಗಳನ್ನು ಮುಗಿಸಿ ಸ್ವಲ್ಪ ವಿಶ್ರಾಂತಿ ಮಾಡಲು ಬಿಡುವುದಿಲ್ಲ ನೀನು ನನಗೆ ತೊಂದರೆ ಕೊಡುತ್ತಿರುವೆ .
ಈ ರಾಮಕತೆಯನ್ನು ಪ್ರತಿದಿನವೂ ಕೇಳುತ್ತಿರುವೆನು ಕೇಳಿ ಕೇಳಿ ನನಗೆ
ಬೇಜಾರಾಗಿದೆ ಈ ಕಥೆಯು ನಿನಗೆ ಇರಲಿ ನಾನು ಮಲಗುವೆನು ಎಂದು ಹೇಳಿ ತನ್ನ ಕೋಣೆಗೆ ಹೋಗಿ ನಿದ್ರಿಸಿದಳು. ಅಂದು ಶ್ರೀರಾಮಕತೆಯ ಪಠಣ ಮತ್ತು ಶ್ರವಣಕ್ಕೆ ವಿಜ್ಞ ಆಗಿದ್ದಕ್ಕೆ ಬಹಳ ಪಶ್ಚಾತಾಪ ಪಟ್ಟು ಮಗ ತಾನು ನಿದ್ರಿಸಿದನು.
ಶ್ರೀರಾಮ ಕಥಾ ಮತ್ತು ಪಠಣ-ಶ್ರವಣವನ್ನು ಕೇಶವ ಭಟ್ಟನ ಮನೆಯಲ್ಲಿ ಆತನ ಮಗನೂ, ಸತಿಯೂ ಸಹ ಬಿಟ್ಟಿದ್ದರಿಂದ, ಶ್ರೀ ರಾಮನು ಇವರಿಗೆ ತನ್ನಲ್ಲಿ ಪುನಃ ಹೆಚ್ಚಿನ ಭಕ್ತಿ ಹುಟ್ಟಲೆಂದು ಹಿಂದಿದ್ದ ಬಡತನಕ್ಕಿಂತಲೂ ಹೆಚ್ಚಿನ ಬಡತನ ವನ್ನು ಕೊಟ್ಟನು. ಬಡತನವನ್ನು ಲೆಕ್ಕಿಸದೆ ನಾರಾಯಣ ಭಟ್ಟನು ನದಿಗೆ ಸ್ನಾನ ಕ್ಕೆ ಹೊರಟಿರಲು, ತಾಯಿ ಮಗನನ್ನು ಕರೆದು, ನೀನು ಸ್ನಾನಕ್ಕೆ ಹೊರಟಿರುವೆ ಆದರೆ ನಿನ್ನ ಮಗಳು ಹಸಿವೆ ಎಂದು ಅಳುತ್ತಿದ್ದಾಳೆ. ಮನೆಯಲ್ಲಿ ಒಂದು ಕಾಳು ಅಕ್ಕಿ ಇಲ್ಲ ನಾನೇನು ಮಾಡಲಿ ಎಂದು ಕೇಳಿದಳು. ನಾರಾಯಣ ಭಟ್ಟ ಹೇಳಿದನು ಹಾಗಿದ್ದರೆ, ಒಂದು ಸೇರು ಅಕ್ಕಿಯನ್ನು ನೆರೆಮನೆಯಲ್ಲಿ ಸಾಲವಾಗಿ ತೆಗೆದು ಕೊಂಡು ಬಂದು ಇಂದಿನ ಅಡಿಗೆಯನ್ನು ಮಾಡು ಎಂದನು.
ತಾಯಿ ಹೇಳಿದಳು ನಾನು ಯಾರನ್ನು ಸಾಲ ಕೇಳುವುದಿಲ್ಲ. ಸಾಲ ಕೊಟ್ಟವರಿಗೆ ತೀರಿಸ ಬೇಕಲ್ಲವೇ ನೀನೇ ಎಲ್ಲಿಯಾದರೂ ಸಾಲ ತಂದುಕೊಟ್ಟು ಹೋಗು,
ಎಂದಾಗ ನಾರಾಯಣನು ಅಮ್ಮ ನನಗ್ಯಾರು ಸಾಲ ಕೊಡುವರು ಶ್ರೀರಾಮ ಕಟಾಕ್ಷವು ನಮಗೆ ತಪ್ಪಿ ಹೋಗಿದೆ ಎಂದನು. ತಾಯಿ, ರಾಮಕಟಾಕ್ಷ ತಪ್ಪಿ ಹೋದರೆ ನಾಲ್ಕು ಮನೆ ಭಿಕ್ಷೆ ಮಾಡಿಕೊಂಡು ಬಾ ಅದೆಲ್ಲ ನನಗೆ ಹೇಳ ಬೇಡ ಎಂದಳು. ಮಗನು ಅಮ್ಮ ಹಾಗಾದರೆ ಭಿಕ್ಷಕ್ಕೆ ಹೋಗುವೆನು ಒಂದು ತಂಬಿಗೆಯನ್ನು ಕೊಡು. ತಾಯಿ ಮನೆಯ ಪಾತ್ರಗಳನ್ನೆಲ್ಲ ಹುಡುಕಿ ಒಡಕು ತಾಮ್ರ ತಂಬಿಗೆ ಯೊಂದಕ್ಕೆ ಹುಣಸೆ ಹಣ್ಣನ್ನು ಮೆತ್ತಿ ಅದನ್ನೇ ತಂದು ಮಗನ ಕೈಗೆ ಕೊಟ್ಟಳು.
ನಾರಾಯಣ ಭಟ್ಟ ಒಡೆದ ತಂಬಿಗೆ ತೆಗೆದುಕೊಂಡು ಹಾ ರಾಮಚಂದ್ರ ನಿನ್ನಲ್ಲಿ ನನ್ನ ಅಪರಾಧ ಏನಿದೆ ! ನನ್ನನ್ನು ಮತ್ತಷ್ಟು ಪರೀಕ್ಷಿಸಲು ನನಗೆ ಈ ಗತಿಯನ್ನು ಕೊಟ್ಟೆಯಾ ? ಚಿಂತೆಯಿಲ್ಲ ಈ ಬಿಕ್ಷಾಟನೆಯಲ್ಲೂ ರಾಮ ನಾಮ ಸವಿಯನ್ನು ಬಿಡುವುದಿಲ್ಲ . ಜೈ ರಘುವೀರ ಸಮರ್ಥ ಎಂದು ಸುರಪುರದ ಬೀದಿಯಲ್ಲಿ ಭಿಕ್ಷೆಗೆ ಹೊರಟನು.
ರಾಗ :ಫೀಲು -ಏಕತಾಳ
ರಘುಪತಿ! ರಾಘವ !ರಾಜಾರಾಮ!
ಪತಿತ ಪಾವನ ಸೀತಾರಾಮ!!
ಭಕ್ತ ಪೋಷಕ ರಾಜಾರಾಮ!
ಮುಕ್ತಿ ಪ್ರದಾಯಕ ಸೀತಾ ರಾಮ! ಅ!
ಭವಭಯ ಭಂಜನ ರಾಜಾ ರಾಮ !
ಭವ್ಯವಿಭಂಜನ ಸೀತಾರಾಮ !!
ಜಾನಕಿ ವಲ್ಲಭ ಜೈ ಜೈ ರಾಮ !
ರಘುರಾಮ ವಿಠಲ ರಾಜ ರಾಮ !!
ಈ ರೀತಿ ಸ್ಮರಣೆ ಮಾಡುತ್ತಾ, ಆಯಾ ಕಾಲ ಕ್ಷೇಪಕ್ಕೆ ಬೇಕಾದಷ್ಟು ಮಾತ್ರ ಭಿಕ್ಷೆ ಬೇಡಿಕೊಂಡು ಬಂದು ತಂದಿದ್ದನ್ನು ತಾಯಿಗೆ ಕೊಟ್ಟು ರಾಮ ಧ್ಯಾನದಲ್ಲಿ ನಿರತನಾಗಿದ್ದನು. ( ನಾರಾಯಣನ ಭಟ್ಟನ ಕುರಿತು ಮುಂದೆ ನೋಡೋಣ)
ಯಾತ್ರೆ ಹೊರಟ ಕೇಶವ ಭಟ್ಟನು, ರಾಮಧ್ಯಾನ ಮಾಡುತ್ತಾ ಕಾಲ್ನಡಿಗೆಯಲ್ಲಿ ಆರು ತಿಂಗಳು ಪ್ರಯಾಣ ಮಾಡಿ ಕಾಶಿ ಕ್ಷೇತ್ರವನ್ನು ಸೇರಿ,ಅಲ್ಲಿರುವಷ್ಟು ದಿನವೂ ಪಾವನಳಾದ ಗಂಗೆಯಲ್ಲಿ ಸ್ನಾನ ಮಾಡಿ ತನ್ನ ಮಾತಾಪಿತೃಗಳಿಗೆ ಪಿಂಡ ಪ್ರಧಾನ ಕೊಟ್ಟು ವಿಶ್ವೇಶ್ವರನ ದರ್ಶನ ಮಾಡಿಕೊಂಡು ರಾಮ ಭಕ್ತ ಪಾರಾಯಣನಾಗಿ ಕಾಶಿಯಲ್ಲಿ 90 ದಿನಗಳಿದ್ದು, ನಂತರ ಕಾಶಿ ಗಂಗೆಯನ್ನು ತೆಗೆದುಕೊಂಡು ಕಾಲ್ನಡಿಗೆಯಲ್ಲಿಯೇ ತನ್ನ ಸ್ವ ಸ್ಥಾನ ಸುರಪುರಕ್ಕೆ ಬಂದನು.
ಊರೆಲ್ಲಾ ಹುಡುಕಿದರೂ ತನ್ನ ಮನೆಯ ಗುರುತು ಸಿಗಲಿಲ್ಲ ತನ್ನ ಹೆಂಡತಿಯ ಹೆಸರು ಹಿಡಿದು ಕೂಗುತ್ತಾ ಬೀದಿ ಬೀದಿಯಲ್ಲಿ ಅಲೆದನು. ಯಾವುದೋ ಒಂದು ಹಳೆ ಗುಡಿಸಲು ಮನೆಯೊಳಗಿಂದ ತಲೆಯ ಕೂದಲನ್ನು ಕೆದರಿಕೊಂಡು ಮಲಿನ ಬಟ್ಟೆಯುಟ್ಟ ಸ್ತ್ರೀಯೊಬ್ಬಳು ಈತನನ್ನು ಗುರುತಿಸಿ, ಇದ್ಯಾಕೆ ಹೀಗೆ ಕಿರುಚಿಕೊಳ್ಳುವಿರಿ? ಇಷ್ಟು ದಿವಸ ಯಾತ್ರೆ ಹೋದವರಿಗೆ ಮನೆಯು ಮರೆತು ಹೋಯಿತೇ? ಹುಡುಕಿಕೊಂಡು ಹೋದ ರಾಮನನ್ನು ಜೊತೆಯಲ್ಲೇ ಕರೆದು ತಂದಿರಾ? ಇದೇ ಮನೆ ಒಳಗೆ ಬನ್ನಿ, ಮನೆ ಕಡೆಯ ತಾಪತ್ರಯ ನಿಮ ಗೆ ಗೊತ್ತೇ? ಹೆಂಡತಿ ಮಕ್ಕಳನ್ನು ತಿಂಗಳುಗಟ್ಟಲೆ ಬಿಟ್ಟು ಯಾವ ಗಂಡಸಾದರೂ
ಹೋಗುವನೇ? ನಿಮಗೇಕೆ ಇಂಥ ದುರ್ಬುದ್ದಿ ಬಂದಿದೆಯೋ ನನಗೆ ಗೊತ್ತಿಲ್ಲ,
ಸದ್ಯ ಇಷ್ಟರಮಟ್ಟಿಗೆ ಜೀವಂತರಾಗಿ ಬಂದಿರಲ್ಲ ಅಷ್ಟು ಸಾಕು ಎಂದು ಬೀದಿ ಬಾಗಿಲಲ್ಲಿ ನಿಂತು ಗುಡುಗುಟ್ಟಿದಳು.
ಪತ್ನಿಯ ಮಾತು ಕೇಳಿ, ಕೇಶವಭಟ್ಟ ಸಮಾಧಾನದಿಂದ, ಮನೆ ಬಾಗಿಲಿಗೆ ಬರುವಾಗಲೇ ಇಷ್ಟೊಂದು ಕಠೋರ ನುಡಿಗಳನ್ನು ಆಡಬಾರದು. ಒಳಗೆ ನಡೆ, ಶ್ರೀ ರಾಮನನ್ನು ನಿಂದಿಸಬಾರದು ಹೇಳುತ್ತಾ ಒಳಗೆ ಬಂದು, ಕಾಶಿಯಿಂದ ತಂದ ಗಂಗೆಯನ್ನು ದೇವರ ಮುಂದಿಟ್ಟು ನಮಸ್ಕರಸಿದ ನಂತರ, ಪತ್ನಿಗೆ, ನಿನ್ನನ್ನು ನಾನು ಯಾತ್ರೆಗೆ ಕರೆದಾಗ ನಾನು ಇಲ್ಲಿ ಸುಖವನ್ನು ಅನುಭವಿಸುವೆ ಯಾತ್ರೆಗೆ ಬರುವುದಿಲ್ಲ ಎಂದು ಹೇಳಿದೆಯಲ್ಲ ಈಗ ಆ ಸೌಖ್ಯವಲ್ಲವೂ ಮಾಯವಾಗಲು ಕಾರಣವೇನು ಎಂಬುದನ್ನು ಹೇಳುವೆಯಾ? ಹೀಗೆ ಪತಿ-ಪತ್ನಿಯರು ಮಾತನಾಡುತ್ತಿದ್ದಾಗ ಭಿಕ್ಷಾಟನೆ ಮುಗಿಸಿ ನಾರಾಯಣಭಟ್ಟನು ಒಳಗೆ ಬಂದನು.
ನಾರಾಯಣ ಭಟ್ಟನು ತಂದೆಗೆ ಸಾಷ್ಟಾಂಗ ಪ್ರಣಾಮ ಮಾಡಿ ಕೈಮುಗಿದು ನಿಂತನು. ಮಗನನ್ನು ಕುರಿತು ಕೇಶವ ಭಟ್ಟನು, ಇದೇನು ಶ್ರೀರಾಮ ನಮಗೆ ಅನುಗ್ರಹಿಸಿದ ಐಶ್ವರ್ಯವೆಲ್ಲವೂ ಹೀಗೆ ಮಾಯವಾಗಲು ಕಾರಣವೇನು?
ನೀನು ನನ್ನ ಆಣತಿಯಂತೆ ಶ್ರೀರಾಮ ಪೂಜೆ ಮತ್ತು ಕಥೆಯನ್ನ ತಪ್ಪದೆ ಪ್ರತಿವಾರವೂ ಆಚರಿಸುತ್ತಿದ್ದೆಯಾ? ಎಂದು ಕೇಳಿದಾಗ ನಾರಾಯಣ ಭಟ್ಟನು ತಂದೆಯೇ ಏನು ಹೇಳಲಿ ನಿಮ್ಮ ಆಜ್ಞೆಯನ್ನು ತಪ್ಪದೇ ಮಾಡುತ್ತಿದ್ದೇ ಆದರೆ ದುರಾದೃಷ್ಟದಿಂದ ಮಾತೆಯು ಕಥನಕ್ಕೆ ಅವಕಾಶ ಕೊಡಲಿಲ್ಲ. ನಾನು ದಿಗ್ಬ್ರಾಂತನಾಗಿ ಕಥೆಯನ್ನು ಹೇಳದೆ ಮಲಗಿಬಿಟ್ಟೆನು. ಬೆಳಿಗ್ಗೆ ಎದ್ದು ನೋಡುವಾಗ ಮನೆಯ ಹೀಗೆ ಆಗಿತ್ತು ಎಂದು ತಪ್ಪಿತಸ್ಥನಂತೆ ತಲೆತಗ್ಗಿಸಿ ನಿಂತನು.
ಮಗನ ಮಾತುಗಳನ್ನು ಕೇಳಿ ಕೋಪಗೊಂಡು ತಂದೆ, ನೀನಾದರೂ ಸರಿ ನಿನ್ನ ತಾಯಿಯಾದರೂ ಸರಿಯೇ ನೀನು ಮಾಡಿದ ಈ ಅಪರಾಧಕ್ಕೆ ಈ ಕ್ಷಣವೇ ನನಗೆ ಮುಖವನ್ನು ತೋರಿಸದೆ ಹೊರಟು ಹೋಗು. ಎಂದು ಶ್ರೀರಾಮನ ದರ್ಶನವನ್ನು ಮಾಡಿಕೊಂಡು ಆತನಿಂದ ವರವನ್ನು ಪಡೆದುಕೊಂಡು ಬರುವೆಯೋ ಅಂದು ನಿನ್ನ ಮುಖವನ್ನು ತೋರಿಸು ಎಂದು ಹೇಳಿದನು.
ನಾರಾಯಣ ಭಟ್ಟನು ತಂದೆಯ ಮಾತನ್ನು ಶಿರಸಾವಹಿಸಿ ತಾಯಿ ತಂದೆಗೆ ನಮಸ್ಕರಿಸಿ ಶ್ರೀರಾಮನನ್ನು ಹುಡುಕುವ ಉದ್ದೇಶದಿಂದ ಹೊರಟನು ಹೊರಡುವ ಮುನ್ನ ಪತ್ನಿಗೆ ತಿಳಿಸಲು ಅವಳ ಕೋಣೆಗೆ ಬಂದನು. ಎಲ್ಲವನ್ನು ಕೇಳಿದ ಆಕೆ ನೀವು ಹೋಗಬಹುದು ನಿಮ್ಮ ಮಗಳನ್ನು ಕರೆದುಕೊಂಡು ಹೋಗಿ ಒಂದು ಘಳಿಗೆಯೂ ಬಿಡಕೂಡದು ಎಂದಳು. ನಾರಾಯಣ ಭಟ್ಟನು ಪತ್ನಿಗೆ ಇದೇನು ಹೇಳುವೆ ನಾನು ಅನ್ನ ನೀರು ಆಹಾರಗಳಿಲ್ಲದೆ ಅರಣ್ಯ ಸಂಚಾರ ಮಾಡುತ್ತಾ ಶ್ರೀ ರಾಮನನ್ನು ಹುಡುಕಬೇಕಾಗಿದೆ ಮಗಳನ್ನು ಹೇಗೆ ಕರೆದುಕೊಂಡು ಹೋಗಲಿ ನೀನೇ ಹೇಳು ಎಂದನು. ಅದಕ್ಕೆ ಪತ್ನಿಯು ಈ ಉಪದೇಶ ನನಗೆ ಬೇಡ ಎಂದು ನೆರೆಮನೆಯಲ್ಲಿ ಆಡುತ್ತಿದ್ದ ಮಗಳನ್ನು ತಂದು ಗಂಡನ ಬಳಿ ಬಿಟ್ಟಳು. ನಾರಾಯಣ ಭಟ್ಟನು ಎದುರು ಮಾತನಾಡದೆ ತನ್ನ ದುರವಸ್ಥೆಗೆ ನೊಂದು ಮಗಳನ್ನು ಹೆಗಲ ಮೇಲೆ ಕೂರಿಸಿ ಕೊಂಡು ಪಿತೃವಾಕ್ಯ ಪರಿಪಾಲನೆಯೊಂದಿಗೆ ರಾಮ ಭಜನೆ ಮಾಡುತ್ತಾ ಪ್ರಯಾಣ ಮಾಡಿದನು.
ತಾಳ ಅಟ್ಟ ತಾಳ:-
ರಾಮ ಮಂತ್ರವ ಜಪಿಸೋ ಹೇ ಮನುಜ!
ಆ ಮಂತ್ರ ಈ ಮಂತ್ರ ಎನ್ನುತ ನೀ ಕೆಡಬೇಡ !!ಅ!!
ಕುಲಹೀನನಾದರೂ ಕೂಗಿ ಜಪಿಸುವ ಮಂತ್ರ!
ಸಾಲೋದಿಯೋಳು ನಿಂದು ಸಾರಿ ಪೊಗಳುವ ಮಂತ್ರ !!
ಸುಲಭದಿಂದಲಿ ಸ್ವರ್ಗ ಸೂರೆಗೊಂಬುವ ಮಂತ್ರ !
ಸ್ಥಾನ ಮಾನಂಗಳಿಗೆ ಸಾಧನದ ಮಂತ್ರ!
ಏನೆಂಬೆ ವಿಭೀಷಣಗೆ ಪಟ್ಟ ಕಟ್ಟಿದ ಮಂತ್ರ !
ಸಕಲ ವೇದಂಗಳಿಗೆ ಸಾರವೆನಿಪ ಮಂತ್ರ !
ಮುಕ್ತಿ ಮಾರ್ಗಕ್ಕಿದು ಮೂಲ ಮಂತ್ರ!!
ಭಕ್ತಿ ಮಾರ್ಗಕ್ಕಿದು ದಾರಿ ತೋರುವ ಮಂತ್ರ
ಭಕ್ತ ವತ್ಸಲ ಪುರಂದರ ವಿಠಲನ ಮಂತ್ರ !!
(ಅನೇಕ ಓದುಗರು ರಾಮಕಥಾ ಮಹಿಮೆಯ 5 ಅಧ್ಯಾಯಗಳನ್ನೂ ಪ್ರತಿದಿನ ಹಾಕಲಿಕ್ಕೆ ಹೇಳಿದ್ದರು. )
ವಂದನೆಗಳೊಂದಿಗೆ,
ಬರಹ :- ಆಶಾ ನಾಗಭೂಷಣ.
▬▬ஜ۩۞۩ஜ▬▬▬*▬▬▬ஜ۩۞۩ஜ▬▬
!! ಸರ್ವಂ ಶ್ರೀ ಕೃಷ್ಣಾರ್ಪಣಮಸ್ತು !!
🙏 ಸರ್ವೇ ಜನಾಃ ಸುಖಿನೋ ಭವಂತುಸರ್ವೇ
ಸಂತು ನಿರಾಮಯಾಃ 🙏
!! ಧರ್ಮೋ ರಕ್ಷತಿ ರಕ್ಷಿತಃ !!
▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬
🙏 ಹರಿ ಸರ್ವೋತ್ತಮ ವಾಯು ಜೀವೋತ್ತಮ 🙏


