shashipriya
835 views • 4 days ago
ಅಂಬೇಡ್ಕರ್ ಎಂಬ ನೈಜ ದೇಶಪ್ರೇಮಿ
ಸ್ವಾತಂತ್ರ್ಯ ದಿನಾಚರಣೆ ಬಂದರೆ ಬಹುಶಃ ಪ್ರತಿಯೊಬ್ಬರೂ ಗಮನಿಸುವವರೆ. ಅಲ್ಲಿ ಪ್ರಮುಖವಾಗಿ ಗಾಂಧೀಜಿ ಫೋಟೋ ಇಟ್ಟಿರುತ್ತಾರೆ. ನೆಹರೂ, ವಲ್ಲಭಭಾಯಿ ಪಟೇಲ್, ಲಾಲ್ ಬಹದ್ದೂರ್ ಶಾಸ್ತ್ರಿ ಹೀಗೆ ಫೋಟೋಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಆದರೆ ಅಪ್ಪಿತಪ್ಪಿಯೂ ಆ ಫೋಟೋಗಳ ಪಟ್ಟಿಯಲ್ಲಿ ಅಂಬೇಡ್ಕರ್ ಫೋಟೋ ಇರುವುದಿಲ್ಲ! ಕಾರಣ? ಅಂಬೇಡ್ಕರ್ ಸ್ವಾತಂತ್ರ್ಯಕ್ಕಾಗಿ ಎಲ್ಲಿ ಹೋರಾಡಿದ್ದಾರೆ ಎಂಬ ಪ್ರಶ್ನೆ! ಆದರೆ ವಾಸ್ತವ?
ಅಂಬೇಡ್ಕರರ ಪ್ರಕಾರ ಹೇಳುವುದಾದರೆ ಭಾರತಕ್ಕೆ ಸ್ವಾತಂತ್ರ್ಯ ಬಹಳ ಹಿಂದೆಯೇ ಬರಬೇಕಿತ್ತು! ಅದು 1931-32ರ ದುಂಡುಮೇಜಿನ ಸಭೆಯ ಸಂದರ್ಭದಲ್ಲಿ. ಯಾಕೆಂದರೆ ಇಂಗ್ಲೆಂಡಿನ ಲಂಡನ್ನಿನಲ್ಲಿ ಭಾರತದ ಸಂವಿಧಾನ ರಚನೆಗೆ ಸಂಬಂಧಿಸಿದಂತೆ, ಆಗುಹೋಗುಗಳಿಗೆ ಸಂಬಂಧಿಸಿದಂತೆ ಕರೆದಿದ್ದ ಆ ಸಭೆಯಲ್ಲಿ ಭಾರತೀಯ ಪ್ರತಿನಿಧಿಗಳು ವಿಶೇಷವಾಗಿ ಗಾಂಧೀಜಿಯವರು ಅಲ್ಲಿನ ಆಡಳಿತರೂಢ ಸರ್ಕಾರ ಹಾಗೂ ಲೇಬರ್ ಪಕ್ಷ, ಕನ್ಸರ್ವೇಟಿವ್ ಪಕ್ಷ ಇತ್ಯಾದಿ ಪಕ್ಷಗಳ ಮುಖಂಡರ ಎದುರು ಹಾಗೂ ಅಲ್ಲಿನ ದೊರೆಯ ಎದುರು ನಮಗೆ ಸಂಪೂರ್ಣ ಸ್ವಾತಂತ್ರ್ಯ ಬೇಕು, ಸ್ವಾತಂತ್ರ್ಯ ಬಿಟ್ಟು ಬೇರೇನು ಬೇಕಿಲ್ಲ ಎಂದು ಕೇಳಬೇಕಿತ್ತು. ಆದರೆ ಕೇಳಿದ್ದು ಮಾತ್ರ ಬರೀ ಪ್ರಾಂತೀಯ ಸ್ವಾತಂತ್ರ್ಯವನ್ನು. ಅಂದರೆ ಭಾರತದ ರಾಜ್ಯಗಳಿಗೆ ಸ್ವಾಯತ್ತತೆಯನ್ನು! ಕೇಂದ್ರ ಸರ್ಕಾರದ ಜವಾಬ್ದಾರಿ ಬ್ರಿಟಿಷರ ಬಳಿ ಇರಲಿ, ಆದರೆ ರಾಜ್ಯ ಸರ್ಕಾರಗಳಿಗೆ ಸ್ವಾಯತ್ತತೆ ಸಿಗಲಿ ಎಂದು! ಖಂಡಿತ ದುಂಡುಮೇಜಿನ ಸಭೆಯಲ್ಲಿ ಗಾಂಧೀಜಿಯವರ ಈ ಬೇಡಿಕೆ ಅಂಬೇಡ್ಕರರನ್ನು ಒಳಗೊಂಡಂತೆ ಅಲ್ಲಿದ್ದ ಎಲ್ಲರನ್ನು ಚಕಿತಗೊಳಿಸಿತ್ತು. ಯಾಕೆಂದರೆ ಗಾಂಧೀಜಿಯವರು ಸಭೆಗೆ ಹೋಗುವ ಮುನ್ನ ಭಾರತದಲ್ಲಿ “ನಾನು ಸ್ವಾತಂತ್ರ್ಯವನ್ನು ಬಿಟ್ಟು ಬೇರೇನು ಕೇಳುವುದಿಲ್ಲ” ಎಂದು ವೀರಾವೇಶದಿಂದ ಹೇಳಿ ಹೋಗಿದ್ದರು. ಆದರೆ ಲಂಡನ್ನಿಗೆ ತೆರಳುತ್ತಲೆ, ಬ್ರಿಟಿಷ್ ಪ್ರಧಾನಿಯ ಪಕ್ಕ ಕೂರುತ್ತಲೆ ಅವರ ವೀರಾವೇಶ ಸೊರಗಿಹೋಗಿತ್ತು. ಹಾಗೆಯೇ ಪ್ರಾಂತೀಯ ಸರ್ಕಾರಗಳಿಗೆ ಮಾತ್ರ ಸ್ವಾಯತ್ತತೆ ಕೇಳಿದ ಗಾಂಧಿಜಿಯವರ ಈ “ಅಲ್ಪ” ಈ ನಿಲುವಿನಿಂದಾಗಿ ಕೇಂದ್ರದಲ್ಲೂ ಸ್ವಾಯತ್ತ ಸರ್ಕಾರ ಕೇಳಿದ್ದ ಅಂಬೇಡ್ಕರ್ ಮತ್ತು ಇತರ ನಾಯಕರ ಬೇಡಿಕೆ ಮೌಲ್ಯ ಕಳೆದುಕೊಂಡಿತ್ತು.
ಅಂದಹಾಗೆ ಗಾಂಧೀಜಿಯವರ ಈ ರೀತಿಯ ಕೇವಲ; ರಾಜ್ಯಗಳಿಗೆ ಮಾತ್ರ ಸ್ವಾಯತ್ತತೆಯ ಬೇಡಿಕೆಯಿಂದಾಗಿ ಸಭೆಯಲ್ಲಿ ಬ್ರಿಟಿಷ್ ಭಾರತದ ಅಂದಿನ ಕಾರ್ಯದರ್ಶಿ ಮತ್ತು ಕನ್ಸರ್ವೇಟಿವ್ ಪಕ್ಷದ ಮುಖಂಡ ಸಾಮುಯೆಲ್ ಹೋರ್ರವರು ಹೇಳಿದ್ದೇನು ಗೊತ್ತೆ?, “ಭಾರತದಲ್ಲಿ ಗಾಂಧೀಜಿಯವರಿಗಿಂತ ದೊಡ್ಡ ವ್ಯಕ್ತಿ ಬೇರೆ ಯಾರಿದ್ದಾರೆ? (ಸಭೆಯಲ್ಲಿ ಬಂದಿದ್ದ ಇತರರನ್ನುದ್ದೇಶಿಸಿ) ಆ ಸಪ್ರು(ತೇಜ್ ಬಹದ್ದೂರ್ ಸಪ್ರು) ಎನ್ನುವವರು ಯಾರು? ಆ ಅಂಬೇಡ್ಕರ್ ಅನ್ನುವವರು ಯಾರು? ಆ ಜಿನ್ನಾ ಯಾರು? (ಇವರೆಲ್ಲಾ ಏನು ಗಾಂಧೀಜಿಗಿಂತ ಬಹಳ ದೊಡ್ಡ ಮನುಷ್ಯರಾ?) ಗಾಂಧೀಜಿಯವರು ರಾಜ್ಯಗಳ ಸ್ವಾಯತ್ತತೆ ಬೇಡಿಕೆ ಮಾತ್ರ ಮಂಡಿಸಿದ್ದಾರೆಂದರೆ ಮತ್ತು ಅವರು ಅದಷ್ಟಕ್ಕೆ ತೃಪ್ತರಾದ್ದರೆಂದರೆ ಈ ದುಂಡುಮೇಜಿನ ಸಮ್ಮೇಳನವನ್ನು ಇನ್ನು ಮುಂದುವರೆಸುವ ಅಗತ್ಯವಿಲ್ಲ. ಇದನ್ನು ಇಲ್ಲಿಗೇ ಮುಗಿಸಬೇಕು. ಗಾಂಧೀಜಿಯವರ ಬೇಡಿಕೆ ಆಧರಿಸಿ ಸೈಮನ್ ಕಮಿಷನ್ ವರದಿಯ ಪ್ರಕಾರ ಬ್ರಿಟಿಷ್ ಸಂಸತ್ತು ಭಾರತಕ್ಕೆ ಸಂಬಂಧಿಸಿದಂತೆ ಮಸೂದೆಯೊಂದನ್ನು ಸಿದ್ಧಪಡಿಸಿ ಇಂದೇ ಅಂಗೀಕರಿಸಬೇಕು” ಎಂದು! ಖಂಡಿತ, ಸಾಮುಯೆಲ್ ಹೋರ್ರವರ ಈ ಮಾತನ್ನು ಅತ್ಯಂತ ಕಟು ಶಬ್ಧಗಳಲ್ಲಿ ಟೀಕಿಸಿ ಸಮ್ಮೇಳನ ಮುಂದುವರಿಯುವಂತೆ ಮಾಡಿ ಈ ದೇಶದ ಮಾನ ಕಾಪಾಡಿದ್ದು ಅಂಬೇಡ್ಕರ್!
ಅಂದಹಾಗೆ ಈ ಸಂದರ್ಭದಲ್ಲಿ ಗಾಂಧೀಜಿಯವರ ಇಂತಹ ದುರ್ಬಲ ಬೇಡಿಕೆ ಕುರಿತು ಅಂಬೇಡ್ಕರರು ಒಂದು ಕಟು ಮಾತನ್ನಾಡುತ್ತಾರೆ. ಅದೇನೆಂದರೆ “ಈ ಭಾರತವೇನಾದರೂ ಬೇರೆಯವರಿಗೆ ಮಾರಲ್ಪಟ್ಟಿದ್ದರೆ ಅಥವಾ ಅಭಿವೃದ್ಧಿ ಮತ್ತು ಆಡಳಿತದ ದೃಷ್ಟಿಯಿಂದ ನಿರಾಶೆಗೊಳಿಸಲ್ಪಟ್ಟಿದ್ದರೆ ಅದಕ್ಕೆ ನಾನಾಗಲಿ ಅಥವಾ ಪರಿಶಿಷ್ಟ ಜಾತಿಯ ನನ್ನ ಜನರಾಗಲಿ ಕಾರಣವಲ್ಲ. ಬದಲಿಗೆ ಗಾಂಧೀಜಿ ಮತ್ತು ಅವರ ಜನರೇ ಕಾರಣ” ಎಂದು!
ಖಂಡಿತ, ಯಾಕೆಂದರೆ ಗಾಂಧೀಜಿಯವರು ಯಾವಾಗಲು ಒಂದು ಮಾತು ಹೇಳುತ್ತಿದ್ದರು. ಅದೇನೆಂದರೆ “ನನಗೆ ಸ್ವಾತಂತ್ರ್ಯ ಬೇಕು, ಹಾಗೆಯೇ ನನಗೆ ಚಾತುರ್ವರ್ಣ ಧರ್ಮವೂ ಬೇಕು” ಎಂದು. ಅಂದಹಾಗೆ ಅಂಥ ಚಾತುರ್ವರ್ಣ ಧರ್ಮ ಭಾರತಕ್ಕೆ ನೀಡಿದ್ದೇನನ್ನು? ಯಾವುದೋ ಒಂದು ವರ್ಗಕ್ಕೆ(ಕ್ಷತ್ರಿಯ) ಕತ್ತಿ ಹಿಡಿಯುವ ಹಕ್ಕು ನೀಡಿ ಇತರರನ್ನು ನಿಶಸ್ತ್ರರನ್ನಾಗಿ ಮಾಡಿ ಈ ದೇಶವನ್ನು ಶತಮಾನಗಳವರೆಗೆ ಅನ್ಯರಿಗೆ ಕಳೆದುಕೊಳ್ಳುವಂತಹ ದುರಂತ ಸ್ಥೀತಿಗತಿಯನ್ನು! ಯಾಕೆಂದರೆ ಶೂದ್ರರು, ವೈಶ್ಯರು, ಬ್ರಾಹ್ಮಣರು, ಅಸ್ಪøಶ್ಯರು ಹೀಗೆ ಎಲ್ಲರಿಗೂ ಸಶ್ತ್ರ ಹಿಡಿಯುವ ಹಕ್ಕು ನೀಡಿದ್ದರೆ? ದೇಶವಾಳುವ ಹಕ್ಕು ನೀಡಿದ್ದರೆ? ದೇಶದ ರಕ್ಷಣೆ ತನ್ನಿಂತಾನೇ ಆಗುತ್ತಿತ್ತು. ಆದರೆ ಇಂತಿಂಥ ವರ್ಗಗಳಿಗೆ ಇಂತಿಂಥ ಕಸುಬು ಎಂದಾಗ ದೇಶರಕ್ಷಣೆ ಮಾಡಲು ಯಾರು ತಾನೆ ಮುಂದೆ ಬರುತ್ತಾರೆ? ಮಹಮ್ಮದ್ ಘೋರಿ ದಂಡೆತ್ತಿ ಬಂದಾಗ ಒಬ್ಬ ಪೃಥ್ವಿರಾಜ ಚೌಹಾಣ್ ಕತ್ತಿ ಹಿಡಿದನೆ ಹೊರತು ನಮ್ಮೂರ ಬಡ ಅಸ್ಪøಶ್ಯನಿಗೆ, ಶೂದ್ರನಿಗೆ ಅಂತಹ ಅವಕಾಶ ಸಿಕ್ಕಿರಲಿಲ್ಲ! ಈ ನಿಟ್ಟಿನಲಿ ಚಾತುರ್ವರ್ಣದಲ್ಲಿ ಶೂದ್ರರು ಶೂದ್ರರಾಗಿಯೇ ಇದ್ದರು, ಬ್ರಾಹ್ಮಣರು ಪೂಜೆ ಗೀಜೆ ಮಾಡುತ್ತಾ ಬ್ರಾಹ್ಮಣರಾಗಿಯೇ ಉಳಿದರು, ವೈಶ್ಯರು ವ್ಯಾಪಾರ ವ್ಯವಹಾರಗಳಲ್ಲಿ ಮುಳುಗಿದ್ದರು. ಹೀಗೇ ಆಯಾ ವರ್ಣಗಳವರು ಆಯಾ ವರ್ಣಗಳ ಉದ್ಯೋಗಳಲ್ಲೇ ಮುಳುಗಿದಾಗ ದೇಶ ಕಾಯುವವರು ಕಡಿಮೆಯಾದರು. ಪರಿಣಾಮವಾಗಿ ಅನ್ಯರು ಬಂದು ನಮ್ಮನ್ನು ಆಕ್ರಮಿಸಿದರು. “ಭಾರತ ಮಾರಲ್ಪಟ್ಟಿದ್ದರೆ ಅದಕ್ಕೆ ನನ್ನ ಜನ ಕಾರಣವಲ್ಲ” ಎಂದು ಅಂಬೇಡ್ಕರರು ಹೇಳಿದ್ದು ಇದನ್ನೆ!
ಅಂದಹಾಗೆ ಅಸ್ಪೃಶ್ಯ ಕುಲದಲ್ಲಿ ಹುಟ್ಟಿದ್ದ ಅಂಬೇಡ್ಕರರೇನಾದರೂ ಉನ್ನತ ವಿದ್ಯೆ ಕಲಿತು ದುಂಡುಮೇಜಿನ ಸಭೆಗೆ ಮತ್ತು ಇನ್ನಿತರ ಅಂತರಾಷ್ಟ್ರೀಯ ವೇದಿಕೆಗಳಿಗೆ ಭಾರತದ ಪರವಾಗಿ ಹೋಗದಿದ್ದರೆ ಭಾರತಕ್ಕೆ ಸ್ವಾತಂತ್ರ್ಯವೂ ಸಿಗುತ್ತಿರಲಿಲ್ಲ, ಹಾಗೆಯೇ ಜವಾಬ್ದಾರಿಯುತ ಸಂವಿಧಾನವೂ ಸಿಗುತ್ತಿರಲಿಲ್ಲ. ದುರಂತವೆಂದರೆ ಇದನ್ಯಾರೂ ಅಂಬೇಡ್ಕರರ ಸ್ವಾತಂತ್ರ್ಯ ಹೋರಾಟ ಎಂದು ಪರಿಗಣಿಸುತ್ತಲೇ ಇಲ್ಲ!
ಈ ಸಂದರ್ಭದಲ್ಲಿ ಅಂಬೇಡ್ಕರರು ಒಂದು ಘಟನೆ ಹೇಳುತ್ತಾರೆ. ಆ ಘಟನೆ 1916ರ ಐರ್ಲೆಂಡ್ ದೇಶಕ್ಕೆ ಸಂಬಂಧಿಸಿದ್ದು. ಐರಿಷ್ ನಾಯಕ ಎಡ್ಮಂಡ್ ಕಾರ್ಸನ್ ಮತ್ತು ದಕ್ಷಿಣ ಐರಿಷ್ ಕ್ಯಾಥೋಲಿಕರ ನಾಯಕ ರೆಡ್ಮಂಡ್ ನಡುವೆ ನಡೆದ ಸಂಭಾಷಣೆಯದು. ಕ್ಯಾಥೋಲಿಕರ ನಾಯಕ ರೆಡ್ಮಂಡ್ ಐರಿಷ್ ನಾಯಕ ಕಾರ್ಸನ್ನನಿಗೆ “ನೂತನ ಸಂವಿಧಾನದಲ್ಲಿ ನಿಮಗೆ(ಐರ್ಲೆಂಡಿಗರಿಗೆ) ಏನಾದರೂ ರಕ್ಷಣೋಪಾಯಗಳು ಬೇಕೆ?” ಎನ್ನುತ್ತಾನೆ. ಅದಕ್ಕೆ ಕಾರ್ಸನ್ “ನಿಮ್ಮ ರಕ್ಷಣೋಪಾಯಗಳಿಗೆ ಬೆಂಕಿ ಬೀಳಲಿ. ನಮಗೆ ನಿಮ್ಮ ಕೈಯಲ್ಲಿ ಆಳಿಸಿಕೊಳ್ಳಲು ಇಚ್ಛೆ ಇಲ್ಲ ಅಷ್ಟೆ” ಎನ್ನುತ್ತಾನೆ. ಕಾರ್ಸನ್ನನ ಈ ಮಾತನ್ನು ಉಲ್ಲೇಖಿಸುತ್ತಾ ಅಂಬೇಡ್ಕರರು ಕಾರ್ಸನ್ನನ ಹಾಗೆ ನಾವೂ ಕೂಡ ಹಿಂದೂಗಳನ್ನು “ನಿಮ್ಮ ರಕ್ಷಣೋಪಾಯಕ್ಕೆ ಬೆಂಕಿ ಬೀಳಲಿ. ನಿಮ್ಮ ಕೈಯಲ್ಲಿ ಆಳಿಸಿಕೊಳ್ಳಲು ನಮಗೆ ಇಚ್ಛೆ ಇಲ್ಲ ಎಂದು ಕೇಳಿದ್ದೇವೆಯೇ? ದೇಶ ವಿಭಜನೆಯ ಮಾತನ್ನಾಡಿದ್ದೇವೆಯೇ?”ಎನ್ನುತ್ತಾರೆ! ಹಾಗೆಯೇ “ನಮ್ಮ ಈ ನಡೆ ದೇಶಪ್ರೇಮದಲ್ಲವೆ? ಶ್ರೇಷ್ಠ ಮನಸ್ಸಿನದ್ದಲ್ಲವೆ? ಮಹೋನ್ನತ ಧ್ಯೇಯದ್ದಲ್ಲವೆ?” ಎಂದು ಗಾಂಧಿ ಮತ್ತು ಇತರ ಕಾಂಗ್ರೆಸ್ಸಿಗರನ್ನು ಅವರು ಪ್ರಶ್ನಿಸುತ್ತಾರೆ.
ಒಂದಂತು ನಿಜ, ಅಂಬೇಡ್ಕರರು ಈ ದೇಶದ ಇತರ ಸಮೂಹಗಳ ಸಹಾಯದಿಂದ ಈ ದೇಶಕ್ಕೆ ಮಾನವತೆಯ ಆಧಾರದ ಮೇಲೆ ನೈತಿಕತೆಯ ಆಧಾರದ ಮೇಲೆ ಒಂದು ಅದ್ಭುತ ವ್ಯವಸ್ಥೆಯನ್ನು(ಸಂವಿಧಾನವನ್ನು) ಕಲ್ಪಿಸಲು ಯತ್ನಿಸಿದರು. ಅದು ದೇಶಪ್ರೇಮದ ನೈಜ ಸಂಕೇತವಲ್ಲವೆ? “ನಮಗೆ ಸಂವಿಧಾನವೂ ಬೇಡ, ಸೌಲಭ್ಯವೂ ಬೇಡ” ಎಂದು ಐರ್ಲೆಂಡಿಗರ ಹಾಗೇ ಅವರು ಹೇಳಿದ್ದರೆ? ಅದು ಅರಾಜಕತೆಗೆ ಕಾರಣವಾಗುತ್ತಿರಲಿಲ್ಲವೆ? ಈ ನಿಟ್ಟಿನಲಿ ಹೇಳುವುದಾದರೆ ಅಂಬೇಡ್ಕರ್ ಈ ದೇಶ ಕಂಡ ಮಹಾನ್ ದೇಶಪ್ರೇಮಿ. ಈ ದೇಶದ ಆಗುಹೋಗುಗಳ ಬಗ್ಗೆ ಸೂಕ್ತ ವೇದಿಕೆಗಳಲ್ಲಿ ದನಿ ಎತ್ತಿದ ಗಟ್ಟಿಗ. ಈ ನಿಟ್ಟಿನಲಿ ತಮ್ಮ ಈ ದೇಶ ಪ್ರೇಮದ ನಡೆಯ ಬಗ್ಗೆ ಸ್ವತಃ ಅವರೇ ಒಂದೆಡೆ ಹೀಗೆ ಹೇಳಿಕೊಳ್ಳುತ್ತಾರೆ “ದುಂಡುಮೇಜಿನ ಸಭೆಯಲ್ಲಿ ಶ್ರೀ ಗಾಂಧೀಜಿಯವರು, ಶ್ರೀ ಶಾಸ್ತ್ರಿಯವರು, ಶ್ರೀ ತೇಜ್ ಬಹದ್ದೂರ್ ಸಪ್ರುರವರು ಹೀಗೆ ಕಾಂಗ್ರೆಸ್ಸಿನ ಘಟಾನುಘಟಿ ನಾಯಕರುಗಳಿದ್ದರು. ಒಬ್ಬ ರಾಷ್ಟ್ರಾಭಿಮಾನಿಯಾಗಿ ಅವರೆಲ್ಲ ಏನು ಮಾಡುವರೆಂದು ನಾನು ಕುತೂಹಲದಿಂದ ಗಮನಿಸುತ್ತಿದ್ದೆ. ಆದರೆ ಅಭಿಮಾನದಿಂದ, ಹಾಗೆಯೇ ಹೆಮ್ಮೆಯಿಂದ ಹೇಳುತ್ತೇನೆ, ಆ ಸಭೆಯಲ್ಲಿ ದೇಶಹಿತದ ಪ್ರಶ್ನೆ ಬಂದಾಗಲೆಲ್ಲ ದೇಶಪ್ರೇಮಿಗಳೆನಿಸಿಕೊಂಡವರಿಗಿಂತ ಅದರ ಪರವಾಗಿ ದನಿ ಎತ್ತುವುದರಲ್ಲಿ ನಾನೇ ಬಹಳ ಮುಂದಿರುತ್ತಿದ್ದೆ”!
ಅಂಬೇಡ್ಕರ್ ಎಂಬ ಆ ಮಹಾನ್ ದೇಶಪ್ರೇಮಿಯ ಅಂತಹ ದೇಶಪ್ರೇಮದ ಸಾಂಧರ್ಭಿಕ ನಿಲುವುಗಳಿಂದ ಭಾರತ ದೇಶ ಸಧ್ಯ ಇಂದು ಇಡೀ ವಿಶ್ವದ ಅತ್ಯಂತ ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಮೈದಳೆದಿದೆ. ಈ ನಿಟ್ಟಿನಲಿ ಅಂಬೇಡ್ಕರರ ದೇಶಪ್ರೇಮ ಸದಾ ಪ್ರಾತಃಸ್ಮರಣೀಯ.
ಅಗ್ರಗಣ್ಯ ರಾಷ್ಟ್ರ ನಾಯಕ ಡಾllಬಿ.ಆರ್.ಅಂಬೇಡ್ಕರ್
ಜಗದೀಶ. ಎಸ್
ಸಂಸ್ಥಾಪಕ ರಾಜ್ಯಾಧ್ಯಕ್ಷರು
ಜೈ ಭೀಮ್ ಕ್ರಾಂತಿ ಸೇನೆ(ರಿ). #ಸ್ವಾತಂತ್ರ್ಯ ದಿನಾಚರಣೆ #ಸ್ವಾತಂತ್ರ್ಯ ದಿನಾಚರಣೆ #ಆಗಸ್ಟ್ 15
• 11 shares