ShareChat
click to see wallet page
search
#🔱 ಭಕ್ತಿ ಲೋಕ #ವೈಶಾಖ ಮಾಸ #ಶ್ರೀನಿವಾಸ ಕಲ್ಯಾಣ 🌷🙏 ಹೇ! ಜನಕ ಮಹಾರಾಜ ಶೇಷದೇವನ ಗರ್ವ ಅಳಿದ ಕಾರಣದಿಂದ ಈ ಪರ್ವತಕ್ಕೆ ಶೇಷಾಚಲವೆಂದು ಪ್ರಸಿದ್ಧ ಆಯಿತು" ಎಂದು ಶತಾನಂದರು ಜನಕನಿಗೆ ಹೇಳಿದರು. ಜನಕ ಮಹಾರಾಜ!! ಕಲಿಯುಗದಲ್ಲಿ ಇದಕ್ಕೆ ವೆಂಕಟಾಚಲವೆಂದು ಹೆಸರು ಬರಲು ಕಾರಣವಾದ ಸಂಗತಿಯನ್ನು ಹೇಳುತ್ತೇನೆ ಕೇಳು. ಹಿಂದೆ ಕಾಳಹಸ್ತಿ ಎಂಬ ಪಟ್ಟಣದಲ್ಲಿ ಪುರಂದರನೆಂಬ ಬ್ರಾಹ್ಮಣನಿದ್ದನು. ಅವನಿಗೆ ಮಾಧವ ಎಂಬ ಮಗನಿದ್ದನು. ಅವನ ಪತ್ನಿ ಚಂದ್ರ ರೇಖೆ. ವೇದವೇದಾಂಗ ಪಾರಂಗತನು, ಸದಾಚಾರಯುತನು ಆದ ಮಾಧವನು ಒಂದು ದಿನ ಪತ್ನಿಯೊಂದಿಗೆ ದಿವಾ ಸಂಗಮವನ್ನು ಅಪೇಕ್ಷೆ ಪಡಲು ಅದಕ್ಕೆ ಅವನ ಪತ್ನಿಯು "ಅದು ಈ ಸಮಯದಲ್ಲಿ ಯೋಗ್ಯವಲ್ಲ" ಎಂದು ಬಹು ಹಿತನುಡಿಗಳನ್ನು ಹೇಳಿದರೂ, ಮಾಧವನು ಒಪ್ಪದೆ ವಿಹಾರಕ್ಕೆ ಕರೆದನು. ಆಗ ಅವನ ಪತ್ನಿಯು ಧರ್ಭೆ ತರುವ ನೆಪದಲ್ಲಿ ನೀವು ನದಿಯ ಕಡೆ ಹೋಗಿ ನಾನು ನೀರಿನ ನೆಪದಿಂದ ಬರುತ್ತೇನೆ ಎಂದು ಹೇಳಿ ಅದರಂತೆ ಬಂದಳು. ಅದೇ ಸಮಯದಲ್ಲಿ ವನದಲ್ಲಿ ಶ್ವೇತವಸ್ತ್ರ ಧಾರಿಣಿಯಾಗಿಯು, ಸುಂದರಿಯು ಆದ ಕುಂತಳಾ ಎಂಬ ಚಂಡಾಲ ಕನ್ಯೆಯನ್ನು ಮಾಧವನು ನೋಡಿ ಅವಳಲ್ಲಿ ಮೋಹಗೊಳ್ಳುವನು. ಅವಳಲ್ಲಿ ಅನುರಕ್ತನಾದ ಮಾಧವನು ಹೆಂಡತಿಯು ಬಂದದ್ದು ನೋಡಿ “ಪ್ರಿಯೆ!! ನಿನ್ನ ಪತಿಭಕ್ತಿಯನ್ನು ಪರೀಕ್ಷೆ ಮಾಡಲು ಇಲ್ಲಿಗೆ ಬರಹೇಳಿದ್ದು. ನಿನ್ನ ಭಕ್ತಿ ಯನ್ನು ಕಂಡು ಸಂತೋಷವಾಗಿದೆ. ನೀನಿನ್ನು ಮನೆಗೆ ತೆರಳು” ಎಂದು ಹೇಳಲು ಹರ್ಷಿತಳಾದ ಅವಳು ಮನೆಗೆ ತೆರಳಿದಳು. ನಂತರ ಪತ್ನಿ ಹೋಗಿದ್ದು ನೋಡಿ ಆ ಕುಂತಳೆಯ ಬಳಿ ಸಾರಿ ತನ್ನ ಆಸೆಯನ್ನು ಅವಳಿಗೆ ತಿಳಿಸುವನು. ಅವಳಾದರು ಅನೇಕ ಧರ್ಮ ಶಾಸ್ತ್ರ ,ನೀತಿ, ತತ್ವಗಳನ್ನು, ಹೇಳಿ ಚಂಡಾಲ ಸ್ತ್ರೀಯ ಸಂಗಮ ನಿನಗೆ ವಿಹಿತವಲ್ಲವೆಂದು ಹೇಳಿದರೂ ಮಾಧವನು ಕಾಮಾಂಧನಾಗಿ ಅವಳನ್ನು ಬಲಾತ್ಕರಿಸುತ್ತಾನೆ. ಆಗ ಕುಂತಳೆಯು ಅವನಿಗೆ "ಇಂದಿನಿಂದ ನೀನೆ ನನ್ನ ಪತಿ ನಿನ್ನ ಬ್ರಾಹ್ಮಣ್ಯವನ್ನು ತ್ಯಜಿಸಿ ಚಂಡಾಲ ಕರ್ಮವನ್ನು ಸ್ವೀಕರಿಸು" ಎಂದು ಹೇಳಿದಳು. ವಿಧಿಯಿಂದ ಪ್ರೇರಿತನಾದ ವೇದಪಂಡಿತನಾದ ಮಾಧವನು ಅವಳ ಮೇಲಿನ ಮೋಹದಿಂದ ತನ್ನ ಯಜ್ನೋಪವಿತವನ್ನು ಕಿತ್ತು ಎಸೆದು, ತಲೆಯನ್ನು ಬೋಳಿಸಿಕೊಂಡು, ಮಾಂಸ ಮಧ್ಯವನ್ನು ಸೇವಿಸುತ್ತಾ ಅವಳ ಜೊತೆಯಲ್ಲಿ ವಾಸ ಮಾಡಿದ. ಹೀಗೆ ಅವಳ ಅಂಗ ಸಂಗ ಮಾಡಿ ಹನ್ನೆರಡು ವರ್ಷಗಳ ಕಾಲ ಸಂಸಾರವನ್ನು ಅವಳ ಜೊತೆಯಲ್ಲಿ ಮಾಡುತ್ತಾನೆ. ಆವ ಕಾಲ ತಪ್ಪಿಸಿದರು ಸಾವ ಕಾಲ ತಪ್ಪಿಸನು ಅನ್ನುವಂತೆ ಈ ದೇಹವು ಅಶಾಶ್ವತವಾದ್ದರಿಂದ ಕುಂತಳೆಯು ಕೃಷ್ಣ ವೇಣಿ ತೀರದಲ್ಲಿ ಇರುವಾಗ ಮರಣ ಹೊಂದಿದಳು. ಪ್ರಿಯಕರಳ ಮರಣದಿಂದ ದುಃಖದಿಂದ ಮಾಧವನು ಹುಚ್ಚು ಹಿಡಿದವನಂತೆ ಅಲೆಯುತ್ತಾ ಉತ್ತರ ದೇಶದ ರಾಜರು ಶೇಷಾಚಲ ಯಾತ್ರೆ ಹೊರಟಿರುವದನ್ನು ನೋಡಿ ಅವರ ಜೊತೆಯಲ್ಲಿ ತಾನು ಹೊರಡುತ್ತಾನೆ. ಅವರು ಉಂಡು ಉಳಿಸಿದ ಎಂಜಲನ್ನವನ್ನು ತಿನ್ನುತ್ತಾ ದೈವಯೋಗದಿಂದ ಶೇಷಾಚಲ ಪರ್ವತಕ್ಕೆ ಬರುತ್ತಾನೆ. ಆ ರಾಜರು ಕಪಿಲ ತೀರ್ಥದಲ್ಲಿ ಸ್ನಾನ ಮಾಡಿ ಭಕ್ತಿಯಿಂದ ತೀರ್ಥ ಕ್ಷೇತ್ರದ ಪದ್ದತಿಯ ಪ್ರಕಾರ ಕೇಶ ಮುಂಡನ ಮಾಡಿಸಿಕೊಂಡು ತಮ್ಮ ಹಿರಿಯರ ಶ್ರಾದ್ಧ ಕರ್ಮಗಳನ್ನು ಮಾಡಿ ಪಿಂಡ ಪ್ರಧಾನ ಮಾಡುತ್ತಾರೆ. ಮಾಧವನು ಸಹ ಅವರಂತೆ ಕಪಿಲ ತೀರ್ಥದಲ್ಲಿ ಸ್ನಾನ ಮಾಡಿ ಶಿರೋ ಮುಂಡನ ಮಾಡಿಸಿಕೊಂಡು ತನ್ನ ಪಿತೃಗಳಿಗೆ ಮಣ್ಣಿನಿಂದ ಪಿಂಡ ಪ್ರಧಾನ ಮಾಡಿದನು. ಪೂರ್ವಜನ್ಮದಲ್ಲಿ ಮಾಡಿದ ಸುಕೃತದ ಫಲದಿಂದ ಅವನ ಪಾಪಗಳೆಲ್ಲ ಪರಿಹಾರವಾಯಿತು. ಆದುದರಿಂದ ಯಾರೇ ಆಗಲಿ ಭಕ್ತಿ ಇಂದ ಕಪಿಲ ತೀರ್ಥದಲ್ಲಿ ಅವಗಾಹನ ಮಾಡಿ ಸ್ನಾನ ಮಾಡಿದರೆ ಅವರ ಪಾಪರಾಶಿ ನಾಶವಾಗುವದು. ಅನಾದಿಯು ಪುಣ್ಯ ಪ್ರದವು ಆದ ಶೇಷಾದ್ರಿಯಲ್ಲಿ ಮಾಧವನು ಮಣ್ಣಿನಿಂದ ಮಾಡಿದ ಪಿಂಡ ಪ್ರಧಾನ ಮಾಡಿದ್ದಕ್ಕಾಗಿ ಅವನ ಪಿತೃಗಳು ಶ್ರೀ ಹರಿಯ ಕೃಪೆ ಇಂದ ಶಾಶ್ವತವಾದ ಸುಖವನ್ನು ಪಡೆದರು. ಮರುದಿನ‌ರಾಜನ ಪರಿವಾರ ಆ ಬೆಟ್ಟವನ್ನು ಏರುವಾಗ ಇವನು ಸಹ ಅವರನ್ನು ಅನುಸರಿಸಿ ಬೆಟ್ಟದ ತುದಿಯ ಭಾಗಕ್ಕೆ ಬಂದಾಗ, ಆ ಪರ್ವತದ ಸ್ಪರ್ಶ ಮಾತ್ರದಿಂದ ಅವನ ಪಾಪರಾಶಿಯೆಲ್ಲವು ಸುಟ್ಟು ಬೂದಿಯಾಯಿತು. "ಹೇಗೆ ನೊಣವನ್ನು ನುಂಗಿದವನು ವಾಂತಿ ಮಾಡುವನೊ", ಅದರಂತೆ ಅವನ ಹೊಟ್ಟೆಯಲ್ಲಿ ಇದ್ದ ಪಾಪ ಕಲ್ಮಶವೆಲ್ಲ ಹೊರ ಹೊಮ್ಮಿದವು. ವೆಂಕಟಗಿರಿಯ ಮಹಿಮೆ ಇಂದ ಅವನ ದೇಹದಿಂದ ಉದ್ಬವಿಸಿದ ಒಂದಾನೊಂದು ಬೆಂಕಿಯು ಪ್ರಜ್ವಲಿಸಿ ಅಂತ್ಯಜಳಾದ ಸ್ತ್ರೀ ಸಂಗಮ, ಮದ್ಯ , ಮಾಂಸ ಭಕ್ಷಣದಿಂದ ಬಂದ ಪಾಪ ಇವುಗಳನ್ನು ಸುಟ್ಟು ಹಾಕಿತು. ಆಗ ಬಂದ ದುರ್ವಾಸನೆಯ ದಟ್ಟ ಹೊಗೆ ಸಕಲ ಲೋಕಗಳಿಗು ತಲುಪಿತು. ತನ್ನ ಪಾಪವನ್ನು ವೆಂಕಟಗಿರಿಯ ಮಹಿಮೆ ಇಂದ ಕಳೆದುಕೊಂಡ ಮಾಧವನಿಗೆ ಅನುಗ್ರಹ ಮಾಡಲು ಸಕಲ ದೇವತೆಗಳು, ಬ್ರಹ್ಮ ರುದ್ರಾದಿ ದೇವತೆಗಳು ತಮ್ಮ ಕಾಂತಿಯಿಂದ ಅಲ್ಲಿಗೆ ಆಗಮಿಸಿದರು. ದೇವತೆಗಳು ಅವನ ಮೇಲೆ ಪುಷ್ಪ ವೃಷ್ಟಿಯನ್ನು ಕರೆದರು. ವೇದ ಪ್ರತಿಪಾದ್ಯನು ಕಾಂತಿ ಸಂಪನ್ನನು, ಸರಸ್ವತಿ ದೇವಿಯ ಪತಿಯಾದ ಭಗವಂತನ ನಾಭಿ ಕಮಲದಿಂದ ಜನಿಸಿದ ಬ್ರಹ್ಮ ದೇವನು ಮಾಧವನ ಸಮೀಪಕ್ಕೆ ಬಂದು ಅವನ ತಲೆಯನ್ನು ಸ್ಪರ್ಶಿಸಿ ಇಂತೆಂದು ಹೇಳುತ್ತಾರೆ.. ವತ್ಸ!! ಮಾಧವ!! ನಿನ್ನ ಪಾಪಗಳು ಪರಿಹಾರವಾದವು. ನೀನು ಸ್ವಾಮಿ ಪುಷ್ಕರಣಿಯಲ್ಲಿ ಸ್ನಾನ ಮಾಡಿ ಶ್ರೀ ವರಾಹ ರೂಪಿಯಾದ ಶ್ರೀ ಹರಿಯನ್ನು ಧ್ಯಾನಿಸುತ್ತಾ ನಿನ್ನ ದೇಹವನ್ನು ತ್ಯಜಿಸು... ಮುಂದೆ ಪಾಂಡವರ ದೌಹಿತ್ರರ ವಂಶದಲ್ಲಿ ನೀನು ಜನಿಸಿ ಅತ್ಯಂತ ಕೀರ್ತಿ ಸಂಪನ್ನನಾಗಿ ಮಹಾರಾಜನಾಗಿ ರಾಜ್ಯ ಭಾರವನ್ನು ಮಾಡುವೆ. ಸುಧರ್ಮರಾಜನ ಮಗನಾಗಿ ಆಕಾಶರಾಜನೆಂಬ ಹೆಸರಿನಿಂದ ದಕ್ಷಿಣ ದೇಶದಲ್ಲಿ ಇರುವ ತೋಂಡದೇಶಕ್ಕೆ ಅಧಿಪತಿಯಾಗುವೆ. ಎಲೈ !!ಮಾಧವನೇ ನಿನ್ನ ಭಾಗ್ಯವೇನೆಂದು ಹೇಳಲಿ!! ಲೋಕಕ್ಕೆ ಹಾಗು ನನಗು ಜನನಿಯಾದ ಸಾಕ್ಷಾತ್ ಮಹಾಲಕ್ಷ್ಮಿ ದೇವಿಯು ನಿನಗೆ ಮಗಳಾಗಿ ಬರುವಳು. ಸಕಲ ಜಗತ್ತಿನ ಹಾಗು ನನಗೆ ಸಹ ಪ್ರಭುವಾದ, ನನ್ನ ಪಿತನಾದ ಆ ದೇವ ದೇವನಾದ ಶ್ರೀಮನ್ ನಾರಾಯಣನು ನಿನಗೆ ಅಳಿಯನಾಗುವನು. ಬಹುಕಾಲ ರಾಜ್ಯದ ಭಾರವನ್ನು ಮಾಡಿ ಅನಂತರ ಮೋಕ್ಷವನ್ನು ಪಡೆಯುತ್ತೀಯೇ ಎಂದು ಹೇಳಿ ವರವನ್ನು ಕರುಣಿಸಿ ಆಶೀರ್ವಾದ ಮಾಡಿ ಬ್ರಹ್ಮ ದೇವರು ಅದೃಶ್ಯರಾದರು. ಮಾಧವನ ಸಕಲ ಪಾಪವನ್ನು ಹರಣ ಮಾಡಿದ್ದರಿಂದ ಆ ಪರ್ವತಕ್ಕೆ ವೆಂಕಟಾಚಲವೆಂದು ಸಕಲ ದೇವತೆಗಳು ಹೆಸರನ್ನು ಇಟ್ಟರು. ಪಾಪವನ್ನು ಸುಡುವದರಿಂದ, ಪಾಪ ದಹನ ಶಕ್ತಿ ಯುಕ್ತವಾದ್ದರಿಂದ ಆ ಪರ್ವತಕ್ಕೆ ವೆಂಕಟಾಚಲವೆಂದು ಹೆಸರು ಬಂದಿತು. ಎಲೈ ಜನಕ ರಾಜನೇ! ಪ್ರಾತಃ ಕಾಲದಲ್ಲಿ ಯಾರು ಈ ವೆಂಕಟಗಿರಿಯನ್ನು ಸ್ತುತಿಸುವರೋ, ಕೀರ್ತಿಸುವರೋ ಅಂಥವರಿಗೆ ದೊರಕುವ ಸುಕೃತ ಫಲವನ್ನು ಹೇಳುವೆನು ಕೇಳು. ಸಮಗ್ರಭೂಮಿ, ಗಂಗಾನದಿ, ರಾಮಸೇತುಗಳ ಯಾತ್ರೆ ಮಾಡಿದರೆ ಎಷ್ಟು ಫಲವೋ ಅದಕ್ಕೆ ಸಾವಿರ ಪಟ್ಟು ಫಲವು ಅಧಿಕ ಪುಣ್ಯವು ಬರುವದು. ಬಹು ಪುಣ್ಯಕರವಾದ ಮಂಗಳಕರವಾದ ಈ ವೆಂಕಟಗಿರಿಯ ಮಹಾತ್ಮೆಯನ್ನು ನಿನಗೆ ಹೇಳಿದ್ದೇನೆ. ಇದನ್ನು ಶ್ರವಣ, ಪಾರಾಯಣ ವನ್ನು ಭಕ್ತಿ ಇಂದ ಮಾಡಿದರೆ ಶುಭ ಪ್ರದವಾಗುವದು ಎಂದು ಹೇಳಿದರು. ಇಂತು ಭವಿಷ್ಯೊತ್ತರ ಪುರಾಣದ ಶ್ರೀ ವೆಂಕಟೇಶ ಮಹಾತ್ಮೆ ಯ ಚತುರ್ಯುಗಗಳ ಮಹಿಮೆಯನ್ನು ವರ್ಣನೆ ಮಾಡುವ ಮೊದಲನೆಯ ಅಧ್ಯಾಯ ಮುಗಿಯಿತು. ಇದನ್ನು ಕೇಳಿ ಸಂತುಷ್ಟನಾದ ಜನಕನು ಆನಂದಾದ್ರಿ ಪರ್ವತಕ್ಕೆ ಶ್ರೀ ಹರಿಯು ಬಂದು ವಾಸ ಮಾಡಿದ ಬಗೆಯನ್ನು ಕೇಳುತ್ತಾನೆ. ಮುಂದುವರೆಯುತ್ತದೆ... ಶುಭವಾಗಲಿ ಶ್ರೀಮತಿ ನಿರ್ಮಲರಾಜೇಶ್
🔱 ಭಕ್ತಿ ಲೋಕ - ShareChat