*ಮದ್ದೂರು ವಡೆ ಹುಟ್ಟಿದ ಕಥೆ*
ಬೆಂಗಳೂರು-ಮೈಸೂರು ರೈಲು ಸಂಚಾರ (ಕ್ರಿಶ 1881ರಲ್ಲಿ) ಆರಂಭಗೊಂಡು 128 ವರುಷಗಳಾಯಿತು. ಆ ಕಾಲದಲ್ಲೇ ದಕ್ಷಿಣ ಕನ್ನಡ ಜಿಲ್ಲೆಯ ಕುಂದಾಪುರದ *ಬೀಜಾಡಿಯ* *ಮಧ್ವಾಚಾರ್ಯರು (ಮಧ್ವರಾಯ ಬಿಳಿಯರು - ನನ್ನ ತಂದೆಯ ತಂದೆ )* ಮಂಡ್ಯದಲ್ಲಿ ರೈಲ್ವೆ ಕ್ಯಾಂಟೀನ್ ನಡೆಸುತ್ತಿದ್ದರು. ರೈಲು ನಿಲ್ಲುತ್ತಿದ್ದುದು ಐದು ನಿಮಿಷ. ಡಿಮ್ಯಾಂಡ್ ಇದ್ದದ್ದು ಬೋಂಡ ಹಾಗೂ ಬೈಟು ಬೆಲ್ಲದ ಕಾಫಿಗೆ. ಅಂದಿನ ಕಾಲದಲ್ಲಿ ರೈಲ್ವೇ ನಿಲ್ದಾಣ ಊರಿನಿಂದ ದೂರವಿತ್ತು.
ಮೈಸೂರು ಮಹಾರಾಜರು ಆಗಾಗ ಕಪ್ಪ ಕಟ್ಟಲು ಮದರಾಸಿಗೆ (ಚೆನೈ) ಹೋಗಬೇಕಾಗಿತ್ತು. ಅವರದ್ದೇ ಆದ ರೈಲಿನಲ್ಲಿ ಹೋಗುತ್ತಿದ್ದರು. ಅವರೊಂದಿಗೆ ಅವರ ಪರಿವಾರದವರು ತುಂಬಾ ಜನ ಇರುತ್ತಿದ್ದರು.
ಅವರು ಪ್ರತೀಸಲ ಹೋಗುವಾಗ ನಮ್ಮ ಹೋಟೆಲ್ ನಲ್ಲಿ ಉಪಾಹಾರ ಸೇವಿಸಿಯೇ ಹೋಗುತ್ತಿದ್ದರು.
ಒಂದು ದಿನ ಅವರು ಬರುವ ಸಮಯದಲ್ಲಿ ಕಡಲೆಹಿಟ್ಟು ಮುಗಿದು ಹೋಗಿತ್ತು. ದಿವಾನ್ ಮಿರ್ಜಾ ಇಸ್ಮಾಯಿಲ್ ಅವರು ಕೂಡಲೇ ಏನಾದರೂ ತಯಾರು ಮಾಡಿ ಎಂದು ನನ್ನ ತಾತನಿಗೆ ಹೇಳಿದರು.
ಏನು ಮಾಡುವುದು ಎಂದು ಯೋಚನೆಗೀಡಾದ ನನ್ನ ಅಜ್ಜನಿಗೆ ಹೊಳೆದದ್ದು ಹೊಸ ರೆಸಿಪಿ. ಇದ್ದ ರವೆ, ಹಿಟ್ಟು, ಈರುಳ್ಳಿ, ತುಪ್ಪ, ಮೆಣಸಿನಕಾಯಿಗಳ ಮಿಶ್ರಣ ಸೇರಿಸಿ ಕೈಯ್ಯಲ್ಲಿ ಚಪಾತಿಯಂತೆ ತಟ್ಟಿ ಎಣ್ಣೆಗೆ ಇಳಿ ಬಿಡಲು ಅಡಿಗೆ ಭಟ್ಟರಾದ ಪದ್ಮನಾಭ ಅವರಿಗೆ ಹೇಳಿದರು. ಬಿಸಿ ಬಿಸಿ ವಡೆ ಸವಿದ ಮಹಾರಾಜರು ಅದರ ಹೆಸರು ? ಕೇಳಿದರು.
"ಇದು ಇಂದು ತಾನೇ ಹುಟ್ಟಿದೆ ಇನ್ನೂ ಹೆಸರಿಟ್ಟಿಲ್ಲ", ಎಂದಾಗ ಮಿರ್ಜಾ ಇಸ್ಮಾಯಿಲರು ,"ಇದು *ಮಧ್ವರ ವಡೆ* " ಎಂದು ಹೇಳಿದರು.
ನಂತರ ಅದು ಪ್ರಸಿದ್ಧಿಯನ್ನು ಪಡೆದು ಬಾಯಿಯಿಂದ ಬಾಯಿಗೆ ಹೋಗುವಾಗ ( *ಮಧ್ವರ* ಎಂಬ ಮೂಲ ಪದದ ಅರಿವು ಇಲ್ಲದೆ ಮಧ್ವರ ಎಂಬುದೇ ಅಪಭ್ರಶಗೊಂಡು , ಅದು ಹುಟ್ಟಿದ ಮದ್ದೂರು ಎಂಬ)ಊರಿನ ಹೆಸರು ಸೇರಿಕೊಂಡು *"ಮದ್ದೂರು ವಡೆ"* ಎಂದಾಯಿತು.
ಇಂದಿಗೂ ಮಂಡ್ಯದ ಕಡೆ ನಮ್ಮ ಕುಟುಂಬದವರನ್ನು *ಮದ್ದೂರು ಹೋಟೆಲ್ ನವರು* ಅಂತಾನೇ ಕರೆಯುತ್ತಾರೆ.
ಇದೀಗ *ಮಧ್ವರ ವಡೆ* ಪರದೇಶಕ್ಕೂ ಹಾರಿದೆ. ಪಿಜ್ಜಾ, ಮಂಚೂರಿಯನ್, ಪಾನಿಪೂರಿ ಹಾಗೂ ದಿನಂಪ್ರತಿ ಹೊಸರುಚಿಗಳ ಕಾಂಪಿಟೇಷನ್ ಕಾಲದಲ್ಲೂ ಹಳತೆನಿಸದೆ ಎಲ್ಲ ವಯ(=ಪ್ರಾಯ)ದವರೂ ನಾಲಿಗೆ ಚಪ್ಪರಿಸುವ ಮದ್ದೂರು ವಡೆಗೆ ನೂರು ವರುಷಗಳ ಇತಿಹಾಸ. ಮದ್ದೂರು ವಡೆ ಮದ್ದೂರಿನ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ಮದ್ದೂರಿನ ವಡೆಯ ಘಮಲು ಮೈಸೂರು-ಬೆಂಗಳೂರು ರೈಲಿನಲ್ಲಿ ರಾಮನಗರ ದಾಟಿದಂತೆ ಯಾರ್ಗೆಬೇಕು ಮದ್ದೂರ್ವಡೆ...ರಾಗ ಕೇಳಿ ಬರುತ್ತೆ. ದಶಕಗಳ ಹಿಂದೆ ಬರೀ ಮದ್ದೂರಿನಲ್ಲೇ ಸಿಗುತ್ತಿದ್ದ ವಡೆ ಇಂದು ಎಲ್ಲೆಡೆಗಳಲ್ಲಿ ಮಾಡಲ್ಪಡುತ್ತಿದೆ.
✍🏽: (ಕುಂದಾಪುರ ಸುಧೀಂದ್ರ ಎಂಬ ಮಧ್ವ ಸಂಪ್ರದಾಯದ ವ್ಯಕ್ತಿಯ ಬರಹಗಳಿಂದ.)
#Maddur vada