#🔱 ಭಕ್ತಿ ಲೋಕ #ದಿನಕ್ಕೊಂದು ಕಥೆ
ಕಟುಕನ ಬಾಯಲ್ಲಿ ಹರಿ ಶ್ರೀಮನ್ನಾರಾಯಣ :-
ಗುಜರಾತ್ ರಾಜ್ಯದ ಒಂದು ಗ್ರಾಮದಲ್ಲಿ "ದಾರುಬ್ರಹ್ಮ" ಎಂಬ ವ್ಯಕ್ತಿಯು ಮಾಂಸದ ವ್ಯಾಪಾರ ಮಾಡುತ್ತಿದ್ದನು. ತುಂಬಾ ಪ್ರಾಮಾಣಿಕ ವ್ಯಕ್ತಿ. ಅವನು ಮಹಾವಿಷ್ಣುವಿನ ಪರಮ ಭಕ್ತನಾಗಿದ್ದನು. ಅವನು ಬೆಳಿಗ್ಗೆಯಿಂದ ರಾತ್ರಿ ಮಲಗುವ ತನಕ ಹಾಗೂ ಮಾಂಸದ ವ್ಯಾಪಾರ ಮಾಡುವಾಗ ಭಗವಂತನ ನಾಮಸ್ಮರಣೆ ಮಾಡುತ್ತಿದ್ದನು. ಸದಾ ಅವನ ಬಾಯಲ್ಲಿ, "ಶ್ರೀಮನ್ನಾರಾಯಣ ಹರಿ, ಶ್ರೀಮನ್ನಾರಾಯಣ ಶ್ರೀಮನ್ನಾರಾಯಣ ಹರಿ ಶ್ರೀಮನ್ನಾರಾಯಣ ಹರಿ ಶ್ರೀಮನ್ನಾರಾಯಣ" ಎಂದು ಪುಂಖಾನುಪುಂಕವಾಗಿ ಅವನ ಬಾಯಲ್ಲಿ ಬರುತ್ತಿತ್ತು. ಇದು ಅಲ್ಲಿ ಬರುವ ಎಲ್ಲಾ ವ್ಯಾಪಾರಿಗಳಿಗೂ, ಸುತ್ತುಮುತ್ತು ಇರುವವರಿಗೂ ತಿಳಿದಿತ್ತು. ಅವರೆಲ್ಲರೂ ದಾರುಬ್ರಹ್ಮನ ಕುರಿತು ಮಾತನಾಡುತ್ತಿದ್ದರು. ಅವನು ನಾರಾಯಣನ ಪರಮಭಕ್ತ. ವ್ಯಾಪಾರ ಮಾಡುವಾಗ ಹಣ ಎಷ್ಟು ಕೊಟ್ಟರು ಎಂದು ನೋಡುವುದಿಲ್ಲ, ಮತ್ತು ಮಾಂಸದ ವ್ಯಾಪಾರ ಮಾಡುತ್ತಾನೆ. ಆದರೆ ತಾನು ತಿನ್ನುವುದಿಲ್ಲ. ಅವನ ಭಕ್ತಿಗೋ, ಒಳ್ಳೆಯತನಕ್ಕೋ, ಮುಗ್ಧತೆಗೋ, ಯಾವುದೇ ಗಿರಾಕಿಗಳು ಅವನಿಗೆ ಎಂದೂ ಮೋಸ ಮಾಡುತ್ತಿರಲಿಲ್ಲ. ಗಿರಾಕಿಗಳು ಅರ್ದ ಕಿಲೋ ಕೊಡು ಎಂದರೆ, ಈಗ್ಲೇ ಕೊಡುತ್ತೀನಿ, ಜೈ ಶ್ರೀ ಹರಿ ಎಂದು, ಅವರಿಂದ ಹಣ ತೆಗೆದುಕೊಳ್ಳುವಾಗ, ಚಿಲ್ಲರೆ ಕೊಡುವಾಗ, ಜೈ ಶ್ರೀ ಹರಿ, ಎಂದು ಹೇಳುತ್ತಿದ್ದನು. ಅಂಗಡಿಯ ಸುತ್ತಮುತ್ತಲು ಭಕ್ತಿಯ ವಾತಾವರಣ ತುಂಬಿತ್ತು.
ಒಂದು ದಿನ ಅವನು ಮನೆಯಿಂದ ಅಂಗಡಿಗೆ ಬರುತ್ತಿರುವಾಗ, ದಾರಿಯಲ್ಲಿ ಒಂದು ಕಲ್ಲು ಎಡವಿದನು. ಬಗ್ಗಿ ಕಲ್ಲನ್ನು ಎತ್ತಿ ಬದಿಗೆ ಹಾಕಲು ಹೊರಟಿದ್ದನು.
ಆದರೆ ಅವನ ಕಣ್ಣಿಗೆ ಕಲ್ಲು ಆಕರ್ಷಣೀಯವಾಗಿ ಕಂಡಿತು. ಖುಷಿಯಾದ
ಅವನು ವಾಹ್ ಗೋಲಾಕಾರದ ಈ ಕಪ್ಪನೆಯ ಕಲ್ಲು ಎಷ್ಟು ಚೆನ್ನಾಗಿದೆ ಹಾಗೂ ದೊಡ್ಡದಾಗಿದೆ. ಅಂಗಡಿಯಲ್ಲಿ ಯಾವುದಾದರೂ ಕೆಲಸಕ್ಕೆ ಬರುತ್ತದೆ. ಎಂದು ಕೊಂಡು ಅಂಗಡಿಗೆ ತಂದನು. ಅದೇ ವೇಳೆಗೆ ವ್ಯಾಪಾರಿಯೊಬ್ಬ ಬಂದು, ಒಂದು ಕಿಲೋ ಮಟನ್ ಕೊಡಲು ಹೇಳಿದ. ದಾರುಬ್ರಹ್ಮ ತೂಗು ತಕ್ಕಡಿಯಲ್ಲಿ ತನಗೆ ಸಿಕ್ಕ ಕಲ್ಲು ಇಟ್ಟನು. ಇನ್ನೊಂದು ಬದಿ ಮಟನ್ ಹಾಕಿದ. ಅದು ಒಂದು ಕಿಲೋ ತೂಗಿತು. ಆಗ ದಾರು ಅಂದುಕೊಂಡ, ಓಹೋ ಈ ಕಲ್ಲು ಒಂದು ಕಿಲೋ ತೂಗುತ್ತದೆ ಎಂದು.
ಅದಾಗಲೇ ಮತ್ತೊಬ್ಬ ಬಂದು, ಅರ್ಧ ಕಿಲೋ ಕೊಡು ಎಂದು ಕೇಳಿದ. ತೂಕದ
ತಕ್ಕಡಿಗೆ ಮಟನ್ ಹಾಕಿದ, ಆ ಕಲ್ಲು ಅರ್ದ ಕಿಲೋ ತೂಕ ತೋರಿಸಿತು. ತುಂಬಾ ಆಶ್ಚರ್ಯವಾಯಿತು. ಮೊದಲೇ ಬಂದಿದ್ದ ಗಿರಾಕಿ, ಈ ಕಲ್ಲು ಜಾದು ಮಾಡುತ್ತದೆ. ಆಗ ನನಗೆ ಕೇಳಿದಾಗ 1 ಕಿಲೋ ತೋರಿಸಿತು, ಇವನು ಅರ್ಧ
ಕಿಲೋ ಕೇಳಿದ ಅದು ಈಗ ಅರ್ಧ ಕಿಲೋ ತೂಕ ತೋರಿಸುತ್ತಿದೆ. ತಕ್ಷಣ ದಾರುಬ್ರಹ್ಮ 5 ಕೆಜಿ ಮಟನ್ ಹಾಕಿದ. ಕಲ್ಲು ಸಹ 5 ಕೆಜಿ ತೂಕ ತೋರಿಸಿತು. ಇದಂತೂ ತುಂಬಾ ಆಶ್ಚರ್ಯವಾದ ವಿಚಾರ. ಒಬ್ಬರಿಂದ ಒಬ್ಬರಿಗೆ ಹೋಗಿ ಊರೆಲ್ಲ ಹರಡಿ ಎಲ್ಲರೂ ಈ ವಿಚಿತ್ರವನ್ನು ನೋಡಲು ಬಂದರು, ಮತ್ತು ಬರುತ್ತಲೇ ಇದ್ದರು. ಅಂಗಡಿಯ ಸುತ್ತಮುತ್ತ ಜಾತ್ರೆಯಂತೆ ಜನ ಸೇರುತ್ತಿದ್ದರು. ದಾರುಬ್ರಹ್ಮ ಕಲ್ಲನ್ನು ನೋಡಿ, ಇದು ನಿಜವಾಗಿ ಜಾದು ಕಲ್ಲು, ರಸ್ತೆಯಲ್ಲಿ ಬಿದ್ದಿತ್ತು ನನಗೆ ಸಿಕ್ಕಿತು. ಈ ಕಲ್ಲು ಬಂದ ಮೇಲೆ ನನಗೆ ವ್ಯಾಪಾರ ಹೆಚ್ಚಳವಾಗಿದೆ. ಶ್ರೀಮನ್ನಾರಾಯಣ ತಂದೆ ಎಲ್ಲಾ ನಿನ್ನ ಕರುಣೆ ಎಂದನು.
ಕೆಲವು ಜನರು ಕಲ್ಲಿನ ಚಮತ್ಕಾರಿ ವಿಚಾರವನ್ನು ಹಳ್ಳಿಯಲ್ಲಿದ್ದ ದೇವಸ್ಥಾನದ
ಮುಖ್ಯ ಪುರೋಹಿತರಿಗೆ ತಿಳಿಸಿದರು. ದೇವಸ್ಥಾನದಲ್ಲಿದ್ದ ಅರ್ಚಕರಿಗೆ ಆ ಕಲ್ಲನ್ನು ನೋಡಬೇಕೆಂದು ಕುತೂಹಲವಾಯಿತು. ಅವನ ಅಂಗಡಿಗೆ ಬಂದು, ಅಂಗಡಿಯಿಂದ ದೂರದಲ್ಲಿ ನಿಂತು ನೋಡಿದರು. ಅವನು ಹರಿಭಜನೆ ಮಾಡುತ್ತಾ, ಮಾಂಸ ಕತ್ತರಿಸುವುದನ್ನು, ತೂಕ ಮಾಡಿ ಮಾರುವುದನ್ನು, ಎಲ್ಲಾ ನೋಡಿದರು. ಅವನು ಕಲ್ಲನ್ನು ತೆಗೆಯದೆ. ಎಷ್ಟು ಬೇಕು ಎಂದು ಹಾಕಿದರೆ ಆ ಕಲ್ಲು ಅಷ್ಟೇ ತೂಗುತ್ತಿತ್ತು. ಈ ಚಮತ್ಕಾರವನ್ನು ನೋಡಿದ ದೇವಾಲಯದ ಅರ್ಚಕರಿಗೆ ಮೈ ರೋಮಾಂಚನವಾಯಿತು. ಭಾವುಕರಾದ ಅವರು, ಕಸಾಯಿ ದಾರುಬ್ರಹ್ಮ ನ ಅಂಗಡಿ ಸಮೀಪ ಬಂದರು. ತನ್ನ ಕೆಲಸದಲ್ಲಿಯೇ ನಿರತನಾಗಿದ್ದ ದಾರುಬ್ರಹ್ಮ ಪಕ್ಕನೆ ತಿರುಗಿ ದೇವಸ್ಥಾನದ ಮುಖ್ಯಸ್ಥರನ್ನು ನೋಡಿ ಆಶ್ಚರ್ಯವಾಯಿತು. ಓಡಿಬಂದು, ಬ್ರಾಹ್ಮಣ ದೇವ, ಕಸಾಯಿ ಅಂಗಡಿಯಲ್ಲಿ, ನೀವು? ಗಾಬರಿಯಿಂದ ನನ್ನಿಂದ ಏನಾಗಬೇಕು? ಏನಾದರೂ ತಪ್ಪಾಯಿತೆ ಎಂದು ಕೈಮುಗಿದು ಕೇಳಿದ.
ದಾರು, ನಿನ್ನ ಅಂಗಡಿಯಲ್ಲಿ ಒಂದು ಚಮತ್ಕಾರಿ ಕಲ್ಲು ಇದೆ ಎಂದು ಜನ ಹೇಳಿದರು. ಅದನ್ನು ನೋಡಲು ಬಂದಿದ್ದೆ, ದೂರದಿಂದಲೇ ನಿಂತು ನಾನು ನೋಡಿದೆ ಅದು ಸಾಧಾರಣ ಕಲ್ಲಲ್ಲ. ಭಗವಾನ್ ವಿಷ್ಣುವಿನ ಅಂಶವಾದ ಸಾಲಿಗ್ರಾಮ. ಅಂತಹ ಪವಿತ್ರವಾದ ಮಹಾವಿಷ್ಣುವಿನ ವಾಸವಿರುವ ಸಾಲಿಗ್ರಾಮವನ್ನು ಇಂಥ ಮಲಿನ ಜಾಗದಲ್ಲಿ ಇಟ್ಟುಕೊಳ್ಳಬಾರದು ಮಹಾಪಾಪ ಎಂದರು. ಅರ್ಚಕರು ಹೇಳಿದುದನ್ನು ಕೇಳಿದ ದಾರುಬ್ರಹ್ಮ ನು ಸ್ವಾಮಿ ನನ್ನನ್ನು ಕ್ಷಮಿಸಿ. ನನಗೆ ಗೊತ್ತಿಲ್ಲದೆ ಭಗವಾನ್ ಮಹಾವಿಷ್ಣುವಿನ ಸಾಲಿಗ್ರಾಮವನ್ನು ನನ್ನ ಕಸಾಯಿಖಾನೆ ಅಂಗಡಿಯಲ್ಲಿ ಇಟ್ಟುಕೊಂಡು ಘೋರ ಅಪರಾಧ ಎಸಗಿದ್ದೇನೆ. ಶ್ರೀಮನ್ನಾರಾಯಣ ಹರಿ ಶ್ರೀಮನ್ನಾರಾಯಣ ನನ್ನನ್ನು ಕ್ಷಮಿಸು ತಂದೆ ಎಂದು ಬಹಳ ನೊಂದುಕೊಂಡು, ಬ್ರಾಹ್ಮಣ ದೇವ, ನೀವು ಮಂದಿರದಲ್ಲಿ ಭಗವಂತನ ಪೂಜೆ ಮಾಡುವವರು. ಈ ವಿಷ್ಣುವಿನ ಕಲ್ಲನ್ನು ನೀವೇ ತೆಗೆದುಕೊಂಡು ಹೋಗಿ, ಪೂಜೆ ಮಾಡಿ ನನ್ನನ್ನು ಅನುಗ್ರಹಿಸಿ ಎಂದು ಕೈಮುಗಿದನು. ಈ ಕಥೆಯನ್ನು ಬರಹ ರೂಪಕ್ಕೆ ತಂದವರು — ಆಶಾ ನಾಗಭೂಷಣ. ಆಗ ಅರ್ಚಕರು, ದಾರುಬ್ರಹ್ಮ ನಿನ್ನದೇನೂ ತಪ್ಪಿಲ್ಲ . ನಿನಗೆ ಸಾಲಿಗ್ರಾಮ ಎಂದು ತಿಳಿಯದು. ಅದಕ್ಕೆ ಹಾಗಾಗಿದೆ ಇನ್ನು ಮುಂದೆ, ಭಗವಾನ್ ಮಹಾವಿಷ್ಣು ವಾಸವಿರುವ ಸಾಲಿಗ್ರಾಮವನ್ನು ಮಂದಿರದಲ್ಲಿಟ್ಟು ಅಭಿಷೇಕ, ಪೂಜೆ, ಅರ್ಚನೆ ನೈವೇದ್ಯ , ಮಂಗಳಾರತಿ ಮಾಡುವೆ. ಆಗ ಎಲ್ಲರಿಗೂ ಒಳ್ಳೆಯದಾಗುತ್ತದೆ. ನಿನಗೂ ಒಳ್ಳೆಯದಾಗುತ್ತದೆ ಎಂದರು.
ದಾರು ಭಕ್ತಿಯಿಂದ ಸಾಲಿಗ್ರಾಮವನ್ನು ಅರ್ಚಕರಿಗೆ ಕೊಟ್ಟನು. ಅವರು ಅದನ್ನು ಶ್ರದ್ಧಾಭಕ್ತಿಂದ ತೆಗೆದುಕೊಂಡು ಹೋಗಿ ಗರ್ಭಗುಡಿಯಲ್ಲಿಟ್ಟು
ಭಕ್ತಿ ಹಾಗೂ ಸಂತೋಷದಿಂದ ಪೂಜೆ ಅರ್ಚನೆ ಮಾಡುತ್ತಾ ಬಂದರು.
ಕೆಲವು ದಿನಗಳೇ ಕಳೆಯಿತು. ಒಂದು ರಾತ್ರಿ ಅರ್ಚಕರಿಗೆ ಕನಸು ಬಿತ್ತು.
ಅರ್ಚಕರು ಶೇಷಶಾಯಿಯಾದ ಮಹಾವಿಷ್ಣುವಿನ ಮುಂದೆ ನಿಂತಿದ್ದರು. ಹೇ ಬ್ರಾಹ್ಮಣೋತ್ತಮ , ಕಸಾಯಿಖಾನೆಯವನು ಕೊಟ್ಟ ಸಾಲಿಗ್ರಾಮವನ್ನು ನೀನು ಚೆನ್ನಾಗಿ ಪೂಜೆ ಅರ್ಚನೆ ಮಾಡುತ್ತಿರುವೆ ಅದರಿಂದ ನಾನು ಸಂತುಷ್ಟನಾಗಿದ್ದೇನೆ. ಆದರೆ ನನಗೆ ಕಸಾಯಿಖಾನೆಯ ದಾರು ಬ್ರಹ್ಮನ ಮುಗ್ಧ ಭಕ್ತಿ, ನಿತ್ಯ ವೂ ನನ್ನನ್ನು ವರ್ಣನೆ ಮಾಡಿ ಆನಂದಿಸುವುದು, ದಿನದ ಪ್ರತಿ ಕ್ಷಣವೂ ನನ್ನ ನಾಮಸ್ಮರಣೆ ಮಾಡುವುದು, ಅವನ ಅನಂತವಾದ ಭಕ್ತಿ ಶ್ರದ್ಧೆ ಪ್ರೀತಿ ಇವು ನನಗೆ ಬಹಳ ಇಷ್ಟ. ಆದುದರಿಂದ ಕಸಾಯಿಖಾನೆಯವನಿಗೆ ಸಾಲಿಗ್ರಾಮವನ್ನು ಕೊಡು ಎಂದನು.
ಬ್ರಾಹ್ಮಣನು ಹೆದರಿ, ಹೇ ಮಹಾವಿಷ್ಣು ನಾನು ಮಾಡುವ ಪೂಜೆಯಲ್ಲಿ ಲೋಪ ವಾಯಿತೇ, ನನಗೆ ತಿಳಿದ ಮಟ್ಟಿಗೆ ನಾನು ಶ್ರದ್ಧೆಯಿಂದ ಮಾಡಿದೆ
ಹೇ ಭಗವಂತ ನನ್ನನ್ನು ಕ್ಷಮಿಸು ತಂದೆ ಎನ್ನುತ ಕೈ ಮುಗಿದು
ಅಳುತ್ತಾ ಭಗವಂತನ ಪಾದಕಮಲಗಳನ್ನು ಕಣ್ಣೀರಿನಿಂದ ತೋಯಿಸಿದನು.
ಪರಮಾತ್ಮನು ಬ್ರಾಹ್ಮಣನನ್ನು ಮೇಲೆತ್ತಿ, ಬ್ರಾಹ್ಮಣೋತ್ತಮ ನಿನ್ನ ಪೂಜೆ ಸೇವೆಯಿಂದ ನಾನು ಸಂತುಷ್ಟನಾಗಿದ್ದೇನೆ. ಆದರೆ, ಕಸಾಯಿಖಾನೆಯ ದಾರುಬ್ರಹ್ಮ ಮಾಡುವ ನಾಮಸ್ಮರಣೆ ನನಗೆ ಕೇಳುವುದು ತುಂಬಾ ಇಷ್ಟ. ಆದ್ದರಿಂದ ಸಾಲಿಗ್ರಾಮ ಅವನಿಗೆ ಕೊಡು ಎಂದನು. ಬ್ರಾಹ್ಮಣನಿಗೆ ಎಚ್ಚರವಾಯಿತು. ತಕ್ಷಣ ಸಾಲಿಗ್ರಾಮವನ್ನು ತೆಗೆದುಕೊಂಡು ಕಸಾಯಿಖಾನೆಯವನ ಅಂಗಡಿಗೆ
ಹೋಗಿ, ದಾರುಬ್ರಹ್ಮ, ಭಗವಾನ್ ಮಹಾವಿಷ್ಣುವಿಗೆ ನೀನು ಅಂತರಾಳದಿಂದ ಮಾಡುವ ನಾಮಸ್ಮರಣೆಯೇ ಅವನಿಗೆ ಬೇಕಂತೆ, ಅವನು ನಿನ್ನ ಬಾಯಿಂದ ಬರುವ ನಾಮಸ್ಮರಣೆ ಹಿತವಂತೆ. ಎಂತೆಂಥ ತಪಸ್ಸು ಮಾಡಿದ ಋಷಿಮುನಿಗಳಿಗೆ ಅಲಭ್ಯವಾಗಿರುವ ಶ್ರೀಮನ್ನಾರಾಯಣನಿಗೆ ನಿನ್ನ ಅಂತರಂಗದ ಭಕ್ತಿಯೇ ಇಷ್ಟ. ಆದುದರಿಂದ ಸಾಲಿಗ್ರಾಮವನ್ನು ನೀನೇ ಅಂಗಡಿಯಲ್ಲಿ ಇಟ್ಟುಕೋ ಎಂದು ಕೊಟ್ಟನು. ದಾರುಬ್ರಹ್ಮ ಸಾಲಿಗ್ರಾಮವನ್ನು ತೆಗೆದುಕೊಂಡು ಆನಂದಭಾಷ್ಪ ಸುರಿಸುತ್ತಾ ಎದೆಗೊತ್ತಿಕೊಂಡು ಶ್ರೀಮನ್ನಾರಾಯಣ ಶ್ರೀಮನ್ನಾರಾಯಣ
ಹರಿ ಶ್ರೀಮನ್ನಾರಾಯಣ ಹರಿ ಶ್ರೀಮನ್ನಾರಾಯಣ ಎಂದು ಮೈಮರೆತನು. ಮತ್ತೆ ದಾರು ಬ್ರಹ್ಮಮಾಡುವ ಭಗವಂತನ ನಾಮಸ್ಮರಣೆಯ ತರಂಗಗಳು ಅಲೆ ಅಲೆ ಯಾಗಿ ಎಲ್ಲೆಡೆ ವ್ಯಾಪಿಸಿತು.
ನಾರಾಯಣ ನಾರಾಯಣ ಜಯ ಗೋವಿಂದ ಹರೇ
ನಾರಾಯಣ ನಾರಾಯಣ ಜಯ ಗೋವಿಂದ ಹರೇ
ಕರುಣಾಪಾರಾವಾರ ವರುಣಾಲಯ ಗಂಭೀರ ನಾರಾಯಣ
ಘನನೀರದಸಂಕಾಶ ಕೃತಕಲಿ ಕಲ್ಮಶ ನಾಶನ ನಾರಾಯಣ
ಯಮುನಾ ತೀರ ವಿಹಾರ ! ಧೃತ ಕೌಸ್ತುಭ ಮಣಿಹಾರ ನಾರಾಯಣ
ಪಿತಾಂಬರ ಪರಿಧಾನ ಸುರ ಕಲ್ಯಾಣ ವಿಧಾನ ನಾರಾಯಣ!
ನಾರಾಯಣ ಹರಿ ನಾರಾಯಣ ಹರಿ ನಾರಾಯಣ ಹರಿ ನಾರಾಯಣ
ಶ್ರೀಮನ್ನಾರಾಯಣ ಹರಿ ಶ್ರೀಮನ್ನಾರಾಯಣ ಹರಿ
ಭಜಮನ ಶ್ರೀಮನ್ನಾರಾಯಣ ಭಜಮನ ಶ್ರೀಮನ್ನಾರಾಯಣಾಅಅಅ.
ವಂದನೆಗಳೊಂದಿಗೆ,
ಬರಹ: ©ಆಶಾ ನಾಗಭೂಷಣ — ಹಕ್ಕುಗಳು ಸಂರಕ್ಷಿತ