#ದಿನಕ್ಕೊಂದು ಕಥೆ
ಇದೊಂದು ಪುಟ್ಟ ಕಥೆ :-
ಪುಟ್ಟ ಕೋಗಿಲೆಗೆ, ಒಬ್ಬ ಚಿಕ್ಕಮ್ಮ ಇದ್ದಳು. ಚಿಕ್ಕಮ್ಮ, ಮಗ ತುಂಬಾ ಚೆನ್ನಾಗಿದ್ದರು. ದಿನನಿತ್ಯವೂ ಕೋಗಿಲೆ ಕಾಡಿಗೆ ಬಂದು ಹಣ್ಣು-ತರಕಾರಿ ಎಲ್ಲಾ ತೆಗೆದುಕೊಂಡು ಹೋಗಿ ಚಿಕ್ಕಮ್ಮನಿಗೆ ಕೊಡುತ್ತಿತ್ತು. ಚಿಕ್ಕಮ್ಮ ಅದನ್ನೆಲ್ಲಾ ಚೆನ್ನಾಗಿ ತೊಳೆದು ತರಕಾರಿಯಿಂದ ರುಚಿರುಚಿಯಾದ ಅಡುಗೆ ಮಾಡಿ ಕೋಗಿಲೆಗೆ ಬಡಿಸುತ್ತಿದ್ದಳು. ಹಣ್ಣುಗಳನ್ನೆಲ್ಲಾ ಹೆಚ್ಚಿ ತಿನ್ನಲು ಕೊಡು ತ್ತಿದ್ದಳು. ದಿನವೂ ಜೊತೆಯಾಗಿಯೇ ಕುಳಿತು ಊಟ ಮಾಡುತ್ತಿದ್ದರು. ಜೊತೆಯಲ್ಲೇ ಮಲಗುತ್ತಿದ್ದರು.
ಆಗ ಬೇಸಿಗೆ ಮುಗಿಯುವ ದಿನಗಳು. ಬರುವುದು ಮಳೆಗಾಲ, ಕೋಗಿಲೆ ಚಿಕ್ಕಮ್ಮನಿಗೆ ಹೇಳಿತು. ಮಳೆಗಾಲದಲ್ಲಿ ಹೊರಗೆ ಹೋಗಲು ಆಗುವುದಿಲ್ಲ. ಮನೆಯಲ್ಲೇ ಉಪ್ಪಿನಕಾಯಿ ಹಾಕಿಡು. ಅದಕ್ಕೆ ಬೇಕಾಗುವ 'ಕುಸುಬೆ' ಹೂವುಗಳನ್ನು ಕಾಡಿನಿಂದ ತರುತ್ತೇನೆ ಎಂದಿತು. ಕೋಗಿಲೆ ನಿತ್ಯ ಕಾಡಿಗೆ ಹೋಗಿ ಆಹಾರಗಳ ಜೊತೆ ಒಂದಷ್ಟು ಕುಸುಬೆ ಹೂವುಗಳನ್ನು ತಂದು ಚಿಕ್ಕಮ್ಮನ ಕೈಯಲ್ಲಿ ಕೊಡುತ್ತಿತ್ತು. ಚಿಕ್ಕಮ್ಮ ಅದನ್ನೆಲ್ಲಾ ಒಂದು ಜಾಡಿಯಲ್ಲಿ ಸಂಗ್ರಹಿಸುತ್ತಿದ್ದಳು. ಕೋಗಿಲೆಗೆ ಯೋಚನೆ ಬಂದಿತು. ಬಹಳ ದಿನಗಳಿಂದ ಕುಸುಬೆ ಹೂವು ತರುತ್ತಿದ್ದೇನೆ. ಈಗಾಗಲೇ ಜಾಡಿ ತುಂಬಿ ಹೋಗಿರಬೇಕು ಎಂದುಕೊಂಡು, ಅದೊಂದು ದಿನ ಚಿಕ್ಕಮ್ಮನ ಹತ್ತಿರ, ಚಿಗವ್ವಾ, ಮಳೆಗಾಲ ದಲ್ಲಿ ಊಟಕ್ಕೆ ಉಪ್ಪಿನಕಾಯಿ ಹಾಕಲು ನಾನು ಬಹಳ ದಿನಗಳಿಂದ ಕುಸುಬೆ ಹೂವು ತರುತ್ತಿದ್ದೇನೆ ನಾಳೆ ಹೂಗಳನ್ನೆಲ್ಲ ತೆಗೆದು ಉಪ್ಪಿನಕಾಯಿ ಹಾಕಿ ಬಿಡು ಎಂದು ಹೇಳಿ, ಹೂವು ಎಷ್ಟಾಗಿದೆ ನೋಡೋಣವೆಂದು ಜಾಡಿ ತೆಗೆಸಿ ತು. ಜಾಡಿಯ ತಿರುಗಣಿ ಮುಚ್ಚಳ ತೆಗೆದು ನೋಡಿದರೆ, ಕೆಳಗೆ ಒಂದು ಹಿಡಿಯಷ್ಟು ಮಾತ್ರ ಹೂವು ಇತ್ತು. ಇಷ್ಟೆನಾ? ಎಂದು ಕೋಗಿಲೆ ಕೇಳಿತು. ಹೌದು ಹೂವು ಒಣಗಿದರೆ ಇಷ್ಟೇ ಆಗುತ್ತದೆ ಎಂದಳು ಚಿಕ್ಕಮ್ಮ.
ಕೋಗಿಲೆಗೆ ತುಂಬಾ ಸಿಟ್ಟು ಬಂತು. ಚಿಗವ್ವ ನಿನ್ನನ್ನು ಎಷ್ಟು ಒಳ್ಳೆಯವಳು ಎಂದುಕೊಂಡಿದ್ದೆ. ಇವತ್ತು ನನಗೆ ಗೊತ್ತಾಯ್ತು. ನಿನ್ನ ಒಳ್ಳೆತನ ಬರೀ ಸುಳ್ಳು, ಎಷ್ಟೋ ಆಸೆಯಿಂದ ಉಪ್ಪಿನಕಾಯಿಗೆಂದು ಕಾಡಿನಲ್ಲೆಲ್ಲ ಅಲೆದು ಕುಸುಬೆ ಹೂವು ತರುತ್ತಿದ್ದೆ. ನೀನು ಎಲ್ಲವನ್ನೂ ತಿಂದು ಬಿಟ್ಟೆ. ನನ್ನ ಶ್ರಮವೆಲ್ಲ ವ್ಯರ್ಥ ವಾಯಿತು ಎಂದು ಕಿರುಚುತ್ತಾ ಚಿಕ್ಕಮ್ಮನ ಮೈಯೆಲ್ಲ 'ಕುಕ್ಕಿ ಕುಕ್ಕಿ' ತುಂಬಾ ಗಾಯ ಮಾಡಿತು. ನಾನು ತಿಂದಿಲ್ಲ ನೀನು ಕೊಟ್ಟಿದ್ದನ್ನೆಲ್ಲ ಅದರೊಳಗೆ ಇಡುತ್ತಾ ಬಂದಿದ್ದೇನೆ ಎಂದು ಎಷ್ಟು ಹೇಳಿದರೂ ಕೋಗಿಲೆ ನಂಬಲಿಲ್ಲ. ಕೋಗಿಲೆ ಕುಕ್ಕುವುದನ್ನು ತಡೆಯಲಾರದೆ, ಚಿಕ್ಕಮ್ಮ ಅಳುತ್ತಾ ತುಂಬಾ ದೂರ ಹೋಗಿ ಬಿಟ್ಟಿತು. ಅಷ್ಟಲ್ಲದೇ ಚಿಕ್ಕಮ್ಮ- ಮಲತಾಯಿ ಅಂತ ಹೇಳುವುದಿಲ್ಲ,ನಾನು ನಂಬಿದ ಚಿಕ್ಕಮ್ಮ ನನಗೆ ಮೋಸ ಮಾಡಿದಳು. ಎಂದು ಕೋಗಿಲೆ ಎರಡು ದಿನ ಅಳುತ್ತಾ ಮನೆಯಲ್ಲಿ ಕುಳಿತಿತು.ಈ ಕಥೆಯನ್ನು ಬರಹ ರೂಪಕ್ಕೆ ತಂದವರು — ಆಶಾ ನಾಗಭೂಷಣ.
ಮೂರನೇ ದಿನ ಕಣ್ಣೊರೆಸಿಕೊಂಡು ಆಹಾರ ಹುಡುಕಲು ಹೊರಟಿತು.
ಚೈತ್ರ -ವೈಶಾಖ ಮಾಸವಾದುದರಿಂದ, ಮಾವು, ಹಲಸು, ಪೇರಲೆ, ನೇರಳೆ, ಹೂವು ಚಿಗುರಿದಂತೆ, ಕುಸುಬೇ ಹೂವು ಬೇಕಾದಷ್ಟು ಬಿಟ್ಟಿತ್ತು. ಕೋಗಿಲೆಗೆ ಆದ ಸಂತೋಷ ಅಷ್ಟಿಷ್ಟಲ್ಲ. ಒಂದಷ್ಟು ಹಣ್ಣು ತಿಂದು. ಕುಸುಬೆ ಹೂವು ಗಳನ್ನು ಬಿಡಿಸಿಕೊಂಡು ಮನೆಗೆ ಬಂದಿತು. ಜಾಡಿಯನ್ನು ಚೆನ್ನಾಗಿ ಒರೆಸಿ ಅದರಲ್ಲಿ ಹಾಕಿತು. ಮರುದಿನದಿಂದ ಬೇಗನೆ ಎದ್ದು ಹೋಗಿ ಮತ್ತಷ್ಟು ಕುಸುಬೆ ಹೂವು ತಂದು ತುಂಬಿತು. ಹೇಗೆ ದಿನಂಪ್ರತಿ ಬಿಡದೆ ಹದಿನೈದು ಇಪ್ಪತ್ತು ದಿನಗಳ ಕಾಲ ಎಡೆಬಿಡದೆ ಕುಸುಬೇ ಹೂವುಗಳನ್ನು ಬಿಡಿಸುವುದು ತರುವುದು ಜಾಡಿಯಲ್ಲಿ ತುಂಬುವುದು. ಇದೇ ಕಾಯಕ ಮಾಡಿತು.
ಆಗಲೇ ಹೂವು ತುಂಬಿ ಹೋಗಿರಬೇಕು, ಉಪ್ಪಿನಕಾಯಿ ಹಾಕಿಬಿಡೋಣ ಎಂದು ಅಟ್ಟಣಿಕೆ ಮೇಲಿಟ್ಟಿದ್ದ ಜಾಡಿಯನ್ನು ಕೆಳಗಿಳಿಸಿ, ತಿರುಗಣಿ ತೆಗೆದು, ನೋಡಿತು, ಅದರ ಉಸಿರೇ ನಿಂತು ಹೋದಂತಾಯಿತು. ಕಣ್ಣು ಅಗಲಿಸಿ ಮತ್ತೆ ಮತ್ತೆ ನೋಡಿತು. ನಿತ್ಯದಲ್ಲಿ ಎಷ್ಟು ತರುತ್ತಿತ್ತೋ ಅಷ್ಟೇ ಇತ್ತು ಅದರ ಕಣ್ಣು ಅದೇ ನಂಬಲಿಲ್ಲ . ಹಿಂದಿನ ಸಲ ಇದ್ದಹಾಗೆ, ಈ ಸಾರಿಯೂ ಜಾಡಿ ಯಲ್ಲಿ ಕೆಳಗೆ ಸ್ವಲ್ಪೇ ಸ್ವಲ್ಪ ಹೂವುಗಳಿತ್ತು. ಎಷ್ಟು ದಿನದಿಂದ ತಂದಿದ್ದೇ ಇಷ್ಟೇ ಆಯಿತಾ? ಎಂದು ಯೋಚಿಸಿತು.
ಆಗ ತಕ್ಷಣ ಚಿಕ್ಕಮ್ಮ ಹೇಳಿದ್ದಳು, ದಿನ ಕಳೆದಂತೆ “ಹೂಗಳು ಬಾಡಿ ಕಮ್ಮಿಯಾಗುತ್ತದೆ”, ನಾನು ಒಂದು ಹೂವನ್ನು ತಿಂದಿಲ್ಲ". ಎಂದು ಚಿಕ್ಕಮ್ಮ ಕಣ್ಣೀರಿಡುತ್ತಾ ಹೇಳಿದ್ದ ಒಂದೊಂದು ಮಾತು ನೆನಪಾಯಿತು. ಕೋಗಿಲೆಗೆ ತುಂಬಾ ದುಃಖವಾಯಿತು. ಪಾಪ ಎಷ್ಟು ಒಳ್ಳೆ ಚಿಕ್ಕಮ್ಮ, ನನಗೆ ಬಿಸಿಬಿಸಿ ಯಾಗಿ ಅಡುಗೆ ಮಾಡಿ ಬಡಿಸುತ್ತಿದ್ದಳು, ಜ್ವರ ಬಂದರೆ ನೋಡಿಕೊಳ್ಳುತ್ತಿ ದ್ದಳು, ನಾನು ಅನ್ಯಾಯ ಮಾಡಿಕೊಂಡೆ, ಎಂದು ಕೊಂಡಿತು. ಹಾಗೆ ಯೋಚಿಸಿತು ಇಲ್ಲ ಚಿಕ್ಕಮ್ಮನನ್ನು ಕರೆ ತರಬೇಕು ಕಾಡಿನ ಯಾವ ಮೂಲೆ ಯಲ್ಲಿದ್ದರೂ ಹುಡುಕಿ ಅವಳನ್ನು ಕರೆತರುತ್ತೇನೆ ಎಂದು, ಚಿಗವ್ವಾ ಚಿಗವ್ವಾ, ಚಿಗವ್ವಾ, ಚಿಗವ್ವಾ ಎಂದು ಕೂಗುತ್ತಾ ದೂರ ದೂರದ ಕಾಡಿಗೆ ಚಿಕ್ಕಮ್ಮನನ್ನು ಹುಡುಕುತ್ತಾ ಹೊರಟಿತು. ಎಲ್ಲಿ ಹುಡುಕಿದರೂ ಚಿಕ್ಕಮ್ಮ ಸಿಗಲಿಲ್ಲ. ಆದರೆ ಚಿಕ್ಕವ್ವ ಚಿಕ್ಕವ್ವ ಎಂದು ಕೂಗುತ್ತಾ ಇಂದಿಗೂ ಕೋಗಿಲೆ ಕಾಡಿನ ಮೂಲೆ ಮೂಲೆಯಲ್ಲೂ ಹುಡುಕುತ್ತಲೇ ಇದೆ.
"ಲೋಭ ಪ್ರವೃತ್ತಿ ರಾರಂಭಹ ಕರ್ಮಣಮಶಮ ಸ್ಪೃಹಾ!
ರಜಸ್ಯೇತಾನಿ ಜಾಯಂತೇ ವಿವೃದ್ಧೇ ಭರತರ್ಷಭ."
ಅರ್ಥ: ಭರತ ವಂಶ ಶ್ರೇಷ್ಠ ನೇ! ದುರಾಸೆ, ಫಲಾಪೇಕ್ಷೆ ಗಳಿಂದ ಕೂಡಿದ ಕರ್ಮಗಳು, ನಿಯಂತ್ರಿಸಲಾಗದ ಬಯಕೆಗಳು-ಇದೆಲ್ಲವೂ ರಜೋಗುಣವು
ಪ್ರಬಲವಾದಾಗ ಹೆಚ್ಚುತ್ತದೆ.
ವಂದನೆಗಳೊಂದಿಗೆ,
ಬರಹ: ©ಆಶಾ ನಾಗಭೂಷಣ
▬▬ஜ۩۞۩ஜ▬▬▬*▬▬▬ஜ۩۞۩ஜ▬▬
!! ಸರ್ವಂ ಶ್ರೀ ಕೃಷ್ಣಾರ್ಪಣಮಸ್ತು !!
🙏 ಸರ್ವೇ ಜನಾಃ ಸುಖಿನೋ ಭವಂತುಸರ್ವೇ
ಸಂತು ನಿರಾಮಯಾಃ 🙏
!! ಧರ್ಮೋ ರಕ್ಷತಿ ರಕ್ಷಿತಃ !!
▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬
🙏 ಹರಿ ಸರ್ವೋತ್ತಮ ವಾಯು ಜೀವೋತ್ತಮ 🙏