ಶ್ರೀನಿವಾಸ ಕಲ್ಯಾಣ 🌷🙏

ಕೃಷ್ಣೆ 🦚💙
525 views
6 hours ago
#ಶ್ರೀನಿವಾಸ ಕಲ್ಯಾಣ 🌷🙏 #ವೈಶಾಖ ಮಾಸ #🔱 ಭಕ್ತಿ ಲೋಕ ಹೇ ರಾಜನ್!! ಕೇಳು! ಪೂರ್ವದಲ್ಲಿ ಸಕಲ ಮುನಿಶ್ರೇಷ್ಟರು ಗಂಗಾನದಿಯ ತಟದಲ್ಲಿ ಒಂದು ಶ್ರೇಷ್ಠವಾದ ಯಜ್ಞ ವನ್ನು ಆಚರಿಸಿದರು. ಆ ಯಾಗ ನಡೆಯುವ ಸುಸಂಧರ್ಭದಲ್ಲಿ ದೇವರ್ಷಿಯಾದ ನಾರದರು ಅಲ್ಲಿಗೆ ಆಗಮಿಸಿ ಕಶ್ಯಾಪಾದಿ ಋಷಿಗಳನ್ನು ನೋಡಿ ಈ ಉತ್ತಮವಾದ ಯಜ್ಞವನ್ನು ಯಾವ ಉದ್ದೇಶದಿಂದ ಮಾಡುವಿರಿ?? ಈ ಯಜ್ಞಕ್ಕೆ ದೇವತೆ ಯಾರು?? ಮತ್ತು ಈ ಯಜ್ಞದ ಫಲವನ್ನು ಯಾವ ಸರ್ವೋತ್ತಮ ದೇವತೆಗೆ ಅರ್ಪಿಸುವಿರಿ?? ಶ್ರೀಹರಿಗೋ??ವಾರಿಜೋದ್ಬವನಿಗೋ?? ಅಥವಾ ಶಂಕರನಿಗೋ?? ಅಂತ ಕೇಳಿದಾಗ ಸಕಲ ಮುನಿಗಳಲ್ಲಿ ಇದರ ಬಗ್ಗೆ ಚರ್ಚೆ ಯಾಗಿ ನಿಜ ಇದನ್ನು ಯಾರಿಗೆ ಅರ್ಪಿಸಬೇಕು ಎಂದು ಚರ್ಚಿಸಿ ಕೊನೆಗೆ ಸಾಧ್ಯವಾಗದೇ ಋಷಿಗಳ ಸಮೂಹದಲ್ಲಿ ಶ್ರೇಷ್ಠರಾದ ಭೃಗು ಮುನಿಗಳ ಹತ್ತಿರ ಬಂದು ಸ್ವಾಮಿ ಭೃಗುಮುನಿಗಳೇ!! ದೇವತೆಗಳಲ್ಲಿ ಉತ್ತಮನಾದ ಪರಮ ಪುರುಷನು ಯಾರೆಂದು ತಿಳಿದು ಬರಲು ದಯಮಾಡಿ ಹೊರಡಿರಿ ಎಂದು ಕೋರಿದರು. ಆಗ ಭೃಗು ಮುನಿಗಳು ಅವರ ಕೋರಿಕೆಯನ್ನು ಮನ್ನಿಸಿ ಸರ್ವೋತ್ತಮ ದೇವತೆ ಯಾರೆಂದು ತಿಳಿಯಲು ಕಮಲ ಮಂದಿರನಾದ ಸತ್ಯಲೋಕದಲ್ಲಿ ಸರಸ್ವತಿ ಸಮೇತನಾಗಿ ಇರುವ ಬ್ರಹ್ಮದೇವರ ಬಳಿ ಬಂದರು. ಆ ಸಮಯದಲ್ಲಿ ನಾಲ್ಕು ಮುಖಗಳಿಂದ ಬ್ರಹ್ಮ ದೇವರು ವೇದಘೋಷವನ್ನು ಮಾಡುತ್ತಾ ಇದ್ದರು. ಅವರಿಗೆ ಭಕ್ತಿ ಇಂದ ನಮಸ್ಕರಿಸಿದರು ಸಹ. ಬ್ರಹ್ಮ ದೇವರು ಭೃಗು ಋಷಿಗಳ ಕಡೆ ಗಮನ ಹರಿಸಲಿಲ್ಲ. ನೋಡಿದರು, ಮಾತನಾಡಿಸದೆ ಸುಮ್ಮನೆ ಮೌನ ವಹಿಸಿದರು. ಶ್ರೀ ಹರಿ ಸರ್ವೋತ್ತಮ ಸಿದ್ದಾಂತ ಸ್ಥಾಪಿಸಲೋಸುಗ ಅವರು ಸುಮ್ಮನೆ ಸರಸ್ವತಿ ದೇವಿಯರೊಡನೆ ಧ್ಯಾನಾಸಕ್ತರಾಗಿ ಕುಳಿತಿದ್ದರು. ಇದನ್ನು ಕಂಡ ಭೃಗು ಮುನಿಗಳು ಬ್ರಹ್ಮ ದೇವನು ಸ್ವಲ್ಪ ಅಜ್ಞಾನ ಉಳ್ಳವನಾಗಿದ್ದಾನೆ, ಆದ್ದರಿಂದ ಇವನು ಸರ್ವೋತ್ತಮ ದೇವತೆ ಅಲ್ಲವೆಂದು ತಿಳಿದು ಕಲಿಯುಗದಲ್ಲಿ ಇವರ ಪೂಜೆ ಆಗದಿರಲಿ ಎಂದು ಶಾಪವನ್ನು ಕೊಟ್ಟು ಮುಂದೆ ಕೈಲಾಸ ಪರ್ವತಕ್ಕೆ ಬರುವರು. ಭೃಗುಋಷಿಗಳು ಸತ್ಯಲೋಕದಿಂದ ಕೈಲಾಸ ಪರ್ವತಕ್ಕೆ ಹೋದಾಗ ಅಲ್ಲಿ ರುದ್ರದೇವರು ತಮ್ಮ ಪತ್ನಿಯಾದ ಪಾರ್ವತಿದೇವಿಯರೊಂದಿಗೆ ಏಕಾಂತದಲ್ಲಿದ್ದರು. ಅಲ್ಲಿಯು ಸಹ ರುದ್ರದೇವರು "ಶ್ರೀಹರಿಯೇ ಸರ್ವೋತ್ತಮ"ನೆಂದು ತಮ್ಮಿಂದಲೂ ಸ್ಥಾಪಿಸಬೇಕೆಂದು ಭೃಗುಋಷಿಗಳು ಬಂದದ್ದನ್ನು ನೋಡದಂತೆ ನಟಿಸಿ, ಅವರ ಯೋಗ-ಕ್ಷೇಮವನ್ನು ವಿಚಾರಿಸದೆ, ತಮ್ಮ ಪತ್ನಿಯೊಡನೆಯಿರುವ ಏಕಾಂತಕ್ಕೆ ಭಂಗ ತಂದಿರುವಿರೆಂದು ಋಷಿಗಳಿಗೆ ತಮ್ಮ ತ್ರಿಶೂಲದಿಂದ ಸಂಹರಿಸಲು ಹೋದಂತೆ ನಟಿಸಿದಾಗ, ಅಗ ಭೃಗು ಋಷಿಗಳು ಕೋಪದಿಂದ "ಭೋಗಾಸಕ್ತರಾದ ನಿಮಗೆ ಇನ್ನು ಮುಂದೆ ಭೂ-ಲೋಕದಲ್ಲಿ ನಿಮ್ಮ ಮೂರ್ತಿಯನ್ನು ಪೂಜಿಸದೆ ಲಿಂಗ ಪೂಜೆಯಾಗಲಿ"ಎಂದು ಶಾಪವನ್ನು ಕೊಡುತ್ತಾರೆ. ಅವರು ಕೊಟ್ಟು ಶಾಪವನ್ನು ತೆಗೆದುಕೊಂಡು ಪರಮ ವೈಷ್ಣವಾಗ್ರೇಸರಾದ ಹಾಗು ಮನೋನಿಯಾಮಕರಾದ ರುದ್ರದೇವರೆ ವೈಕುಂಠ ಲೋಕಕ್ಕೆ ಹೋಗುವಂತೆ ಭೃಗುಋಷಿಗಳಿಗೆ ಮನಃ ಪ್ರೇರಿಸಿದರು. ಆ ನಂತರ ವೈಕುಂಠಕ್ಕೆ ಬಂದರು. ಅಲ್ಲಿ ಶ್ರೀ ಮನ್ನಾರಾಯಣನು ಶೇಷಮಂಚದಲ್ಲಿ ಸುಪ್ಪತ್ತಿಗೆ ಮೇಲೆ ನಿದ್ರಾ ವಶದವನಂತೆ ನಟನೆ ಮಾಡುತ್ತಾ ಪವಡಿಸಿದ್ದನು. ಇದನ್ನು ಕಂಡ ಭೃಗು ಋಷಿಗಳು ಪರಮ ಕೋಪದಿಂದ ಶ್ರೀ ಹರಿಯ ವಕ್ಷಸ್ಥಳಕ್ಕೆ ತಮ್ಮ ಪಾದದಿಂದ ತಾಡನೆ ಮಾಡಿದರು. ತಕ್ಷಣ ರಮಾಪತಿಯು ಮೇಲೆದ್ದು ತಾನು ಅಪರಾಧ ಮಾಡಿದವನಂತೆ ಕ್ಷಮೆ ಯಾಚಿಸುತ್ತಾ “ಯಾಕೆನ್ನ ಮೇಲೆ ಇಷ್ಟು ಸಿಟ್ಟು?? ನೀ ಬೇಕಾದ್ದು ಕೇಳು ಕೊಡುವೆನು ಕಾಲಕಾಲಕ್ಕೆ... ಸುಮ್ಮನೆ ಯಾರಿಗು ತಿಳಿಸದೇ ನನ್ನ ಮನೆಗೆ ಬಂದು ಒದ್ದ ಕಾರಣವೇನು?? ನನ್ನ ವಜ್ರ ಕಠಿಣವಾದಂತಹ ಎದೆಗೆ ಒದ್ದು ನಿಮ್ಮ ಮೃದುವಾದ ಕೋಮಲವಾದ ಪಾದ ಎಷ್ಟು ನೊಂದಿತೋ ನಾನರಿಯೇ!! ಅಂತ ಹೇಳಿ ಭೃಗು ಋಷಿಗಳನ್ನು ಅರ್ಘ್ಯಪಾದಾದಿಗಳಿಂದ ಸತ್ಕರಿಸಿ ಆ ಪಾದೋದಕವನ್ನು ತಾನು ಶಿರಸ್ಸಿನಲ್ಲಿ ಧರಿಸಿ, ತನ್ನ ಪತ್ನಿಯಾದ ರಮಾದೇವಿಯರಿಗು ಪ್ರೋಕ್ಷಣೆ ಮಾಡಿ, ಎಲ್ಲಾ ಕಡೆಗೆ, ತನ್ನ ಸಕಲ ಪರಿವಾರದವರಿಗು ಪ್ರೋಕ್ಷಣೆಯನ್ನು ಶ್ರೀ ಹರಿಯು ಮಾಡುತ್ತಾನೆ. ಭೃಗು ಋಷಿಗಳು ಭೂಲೋಕಕ್ಕೆ ಬಂದು ಶ್ರೀ ಹರಿಯೇ ಸರ್ವೋತ್ತಮನೆಂದು ಎಲ್ಲರಿಗೂ ಉಪದೇಶ ಮಾಡಿದರು.ಸಕಲ ಋಷಿಗಳು ಪರಮ ಪುರುಷನಾದ ಆ ಶ್ರೀ ಹರಿಗೆ ಯಜ್ಞ ಫಲವನ್ನು ಸಮರ್ಪಣೆ ಮಾಡಿದರು. ******** ಇತ್ತ ಭೃಗು ಋಷಿಗಳು ವೈಕುಂಠದಿಂದ ಹೊರಟು ಹೋದ ಮೇಲೆ, ಏಕಾಂತದಲ್ಲಿ ರಮಾದೇವಿಯ ಜೊತೆಯಲ್ಲಿ ಭಗವಂತನು ಇರುವಾಗ ಮಹಾಲಕ್ಷ್ಮಿ ದೇವಿಯ "ಜಗನ್ನಿಯಾಮಕನಾದ, ದೇವೋತ್ತಮನಾದ ಪ್ರಭುವೇ, ನಾನು ನಿನ್ನನ್ನು ತೊರೆದು ಹೋಗುವೆನು. ನಿನ್ನ ಶ್ರೀವತ್ಸ ಸದಾ ಎನ್ನ ಆಲಿಂಗನವನ್ನು ಮಾಡಿಕೊಂಡಿರುವದು. ಅಂತಹ ಸ್ಥಳ ಭೂಸುರನಿಂದ ಪಾದದಿಂದ ಸ್ಪರ್ಶವಾಗಿದೆ. ಹಾಗಾಗಿ ನಾನು ಇಲ್ಲಿ ಇರುವುದಿಲ್ಲ. ಎಲ್ಲರಿಗಿಂತ ಉತ್ತಮನು ನೀನು ಎಂದು ಇಲ್ಲಿ ಇದ್ದೆ. ನಿನಗೆ ಭಕ್ತವತ್ಸಲ ಎಂಬ ಬಿರುದು ಬೇಕಾಗಿತ್ತು ಅಂದರೆ ಈ ತರ ಮಾನವ ಚರಣವನ್ನು ಎದೆಯಲ್ಲಿ ಧರಿಸುವದು ಸರಿಯೇ!! ಕರವೀರಪುರಕ್ಕೆ ಹೋಗುತ್ತೇನೆ ಅಂತ ಹೇಳಿ ಜಗನ್ಮಾತೆಯು ಪ್ರೇಮ ಕಲಹವನ್ನು ನಟಿಸಿ ವೈಕುಂಠ ಪುರವನ್ನು ಬಿಟ್ಟು ಕರವೀರಪುರಕ್ಕೆ ಬರುತ್ತಾಳೆ. ದ್ವಾಪರಯುಗದ ಕೊನೆಯ ಭಾಗದಲ್ಲಿ ಕಲಿಯುಗದಲ್ಲಿ ಮಹಾಲಕ್ಷ್ಮಿಯು ಕರವೀರಪುರಕ್ಕೆ ತೆರಳಿದ ಮೇಲೆ ಭಗವಂತನು ಸಿರಿ ಇಲ್ಲದ ವೈಕುಂಠ ಸರಿ ಬಾರದು ಎನಗೆ, ಏನು ಮಾಡಲಿ !! ನನ್ನ ಕಣ್ಣಿಗೆ ವೈಕುಂಠ ಅರಣ್ಯದಂತೆ ತೋರುತ್ತಿದೆ!!... ಎಲ್ಲಿ ಹೋಗಲಿ?? ಅಂತ ಚಿಂತೆ ಮಾಡುವರಂತೆ, ನಟಿಸುತ್ತಾ ಯಾವುದೇ ಚಿಂತೆ, ಸಂತಾಪ, ಮುಂತಾದ ದೋಷ ವಿದೂರನಾಗಿದ್ದರು, ಸ್ವರಮಣನಾದ ಶ್ರೀ ಹರಿಯು ರಮಾದೇವಿಯ ವಿರಹ ದುಃಖವನ್ನು ತಾಳದವನಂತೆ ನಟಿಸುತ್ತಾ ಆಜ್ಞ ಜನರನ್ನು ಮೋಹಗೊಳಿಸುತ್ತಾ , ವೈಕುಂಠ ವನ್ನು ಬಿಟ್ಟು ಸುವರ್ಣಮುಖಿ ನದಿಯ ತಟದಲ್ಲಿ ಹಿಂದೆ ವಾಯುದೇವರು ಶೇಷದೇವನ ಗರ್ವಭಂಗವನ್ನು ಮಾಡಿದ ಶೇಷಾಚಲಕ್ಕೆ ಬಂದು ಸ್ವಾಮಿ ಪುಷ್ಕರಣಿ ತೀರದಲ್ಲಿ ಹುಣಿಸೇ ಮರದ ಬುಡದಲ್ಲಿ ಇರುವ ವಲ್ಮೀಕದಲ್ಲಿ ಅವಿತುಕೊಂಡು ರಹಸ್ಯವಾಗಿ ವಾಸಮಾಡತೊಡಗಿದನು. ಶೇಷಾಚಲವೂ ಅನೇಕ ಜಾತಿಯ ಗಿಡ ಮರಗಳಿಂದ, ಫಲ ಪುಷ್ಪಗಳಿಂದ, ವೃಕ್ಷಭರಿತವಾದ ಪರ್ವತ.ಅನೇಕ ಜಾತಿಯ ಪಕ್ಷಿಗಳು, ಮೃಗಗಳು ಮತ್ತು ಅನೇಕ ಬಗೆಯ ಹೂ ಬಳ್ಳಿ ಗಳು ಹೀಗೆ ಅದರಲ್ಲಿ ಅಲಂಕೃತವಾಗಿದೆ. ಇಂತಹ ಮನೋಹರವಾದ ನಯನಾನಂದವಾದ ಸಕಲ ವೃಕ್ಷ, ಸಂಪತ್ತನ್ನು ಹೊಂದಿದ ವೆಂಕಟಾಚಲಕ್ಕೆ ಸ್ವಾಮಿ ಆಗಮಿಸಿ ಹುತ್ತದಲ್ಲಿ ವಾಸ ಮಾಡಿದನು.. ಇಂತು ಭವಿಷ್ಯೊತ್ತರ ಪುರಾಣ ಅಂತರ್ಗತವಾದ ಶ್ರೀ ವೆಂಕಟೇಶ ಮಹಾತ್ಮೆಯ ಶೇಷಗಿರಿ ಪರ್ವತದ ವರ್ಣನೆ ಎಂಬ ಎರಡನೆಯ ಅಧ್ಯಾಯ ಮುಗಿಯಿತು ಶುಭವಾಗಲಿ ಶ್ರೀಮತಿ ನಿರ್ಮಲರಾಜೇಶ್
ಕೃಷ್ಣೆ 🦚💙
674 views
6 hours ago
#🔱 ಭಕ್ತಿ ಲೋಕ #ವೈಶಾಖ ಮಾಸ #ಶ್ರೀನಿವಾಸ ಕಲ್ಯಾಣ 🌷🙏 ಹೇ! ಜನಕ ಮಹಾರಾಜ ಶೇಷದೇವನ ಗರ್ವ ಅಳಿದ ಕಾರಣದಿಂದ ಈ ಪರ್ವತಕ್ಕೆ ಶೇಷಾಚಲವೆಂದು ಪ್ರಸಿದ್ಧ ಆಯಿತು" ಎಂದು ಶತಾನಂದರು ಜನಕನಿಗೆ ಹೇಳಿದರು. ಜನಕ ಮಹಾರಾಜ!! ಕಲಿಯುಗದಲ್ಲಿ ಇದಕ್ಕೆ ವೆಂಕಟಾಚಲವೆಂದು ಹೆಸರು ಬರಲು ಕಾರಣವಾದ ಸಂಗತಿಯನ್ನು ಹೇಳುತ್ತೇನೆ ಕೇಳು. ಹಿಂದೆ ಕಾಳಹಸ್ತಿ ಎಂಬ ಪಟ್ಟಣದಲ್ಲಿ ಪುರಂದರನೆಂಬ ಬ್ರಾಹ್ಮಣನಿದ್ದನು. ಅವನಿಗೆ ಮಾಧವ ಎಂಬ ಮಗನಿದ್ದನು. ಅವನ ಪತ್ನಿ ಚಂದ್ರ ರೇಖೆ. ವೇದವೇದಾಂಗ ಪಾರಂಗತನು, ಸದಾಚಾರಯುತನು ಆದ ಮಾಧವನು ಒಂದು ದಿನ ಪತ್ನಿಯೊಂದಿಗೆ ದಿವಾ ಸಂಗಮವನ್ನು ಅಪೇಕ್ಷೆ ಪಡಲು ಅದಕ್ಕೆ ಅವನ ಪತ್ನಿಯು "ಅದು ಈ ಸಮಯದಲ್ಲಿ ಯೋಗ್ಯವಲ್ಲ" ಎಂದು ಬಹು ಹಿತನುಡಿಗಳನ್ನು ಹೇಳಿದರೂ, ಮಾಧವನು ಒಪ್ಪದೆ ವಿಹಾರಕ್ಕೆ ಕರೆದನು. ಆಗ ಅವನ ಪತ್ನಿಯು ಧರ್ಭೆ ತರುವ ನೆಪದಲ್ಲಿ ನೀವು ನದಿಯ ಕಡೆ ಹೋಗಿ ನಾನು ನೀರಿನ ನೆಪದಿಂದ ಬರುತ್ತೇನೆ ಎಂದು ಹೇಳಿ ಅದರಂತೆ ಬಂದಳು. ಅದೇ ಸಮಯದಲ್ಲಿ ವನದಲ್ಲಿ ಶ್ವೇತವಸ್ತ್ರ ಧಾರಿಣಿಯಾಗಿಯು, ಸುಂದರಿಯು ಆದ ಕುಂತಳಾ ಎಂಬ ಚಂಡಾಲ ಕನ್ಯೆಯನ್ನು ಮಾಧವನು ನೋಡಿ ಅವಳಲ್ಲಿ ಮೋಹಗೊಳ್ಳುವನು. ಅವಳಲ್ಲಿ ಅನುರಕ್ತನಾದ ಮಾಧವನು ಹೆಂಡತಿಯು ಬಂದದ್ದು ನೋಡಿ “ಪ್ರಿಯೆ!! ನಿನ್ನ ಪತಿಭಕ್ತಿಯನ್ನು ಪರೀಕ್ಷೆ ಮಾಡಲು ಇಲ್ಲಿಗೆ ಬರಹೇಳಿದ್ದು. ನಿನ್ನ ಭಕ್ತಿ ಯನ್ನು ಕಂಡು ಸಂತೋಷವಾಗಿದೆ. ನೀನಿನ್ನು ಮನೆಗೆ ತೆರಳು” ಎಂದು ಹೇಳಲು ಹರ್ಷಿತಳಾದ ಅವಳು ಮನೆಗೆ ತೆರಳಿದಳು. ನಂತರ ಪತ್ನಿ ಹೋಗಿದ್ದು ನೋಡಿ ಆ ಕುಂತಳೆಯ ಬಳಿ ಸಾರಿ ತನ್ನ ಆಸೆಯನ್ನು ಅವಳಿಗೆ ತಿಳಿಸುವನು. ಅವಳಾದರು ಅನೇಕ ಧರ್ಮ ಶಾಸ್ತ್ರ ,ನೀತಿ, ತತ್ವಗಳನ್ನು, ಹೇಳಿ ಚಂಡಾಲ ಸ್ತ್ರೀಯ ಸಂಗಮ ನಿನಗೆ ವಿಹಿತವಲ್ಲವೆಂದು ಹೇಳಿದರೂ ಮಾಧವನು ಕಾಮಾಂಧನಾಗಿ ಅವಳನ್ನು ಬಲಾತ್ಕರಿಸುತ್ತಾನೆ. ಆಗ ಕುಂತಳೆಯು ಅವನಿಗೆ "ಇಂದಿನಿಂದ ನೀನೆ ನನ್ನ ಪತಿ ನಿನ್ನ ಬ್ರಾಹ್ಮಣ್ಯವನ್ನು ತ್ಯಜಿಸಿ ಚಂಡಾಲ ಕರ್ಮವನ್ನು ಸ್ವೀಕರಿಸು" ಎಂದು ಹೇಳಿದಳು. ವಿಧಿಯಿಂದ ಪ್ರೇರಿತನಾದ ವೇದಪಂಡಿತನಾದ ಮಾಧವನು ಅವಳ ಮೇಲಿನ ಮೋಹದಿಂದ ತನ್ನ ಯಜ್ನೋಪವಿತವನ್ನು ಕಿತ್ತು ಎಸೆದು, ತಲೆಯನ್ನು ಬೋಳಿಸಿಕೊಂಡು, ಮಾಂಸ ಮಧ್ಯವನ್ನು ಸೇವಿಸುತ್ತಾ ಅವಳ ಜೊತೆಯಲ್ಲಿ ವಾಸ ಮಾಡಿದ. ಹೀಗೆ ಅವಳ ಅಂಗ ಸಂಗ ಮಾಡಿ ಹನ್ನೆರಡು ವರ್ಷಗಳ ಕಾಲ ಸಂಸಾರವನ್ನು ಅವಳ ಜೊತೆಯಲ್ಲಿ ಮಾಡುತ್ತಾನೆ. ಆವ ಕಾಲ ತಪ್ಪಿಸಿದರು ಸಾವ ಕಾಲ ತಪ್ಪಿಸನು ಅನ್ನುವಂತೆ ಈ ದೇಹವು ಅಶಾಶ್ವತವಾದ್ದರಿಂದ ಕುಂತಳೆಯು ಕೃಷ್ಣ ವೇಣಿ ತೀರದಲ್ಲಿ ಇರುವಾಗ ಮರಣ ಹೊಂದಿದಳು. ಪ್ರಿಯಕರಳ ಮರಣದಿಂದ ದುಃಖದಿಂದ ಮಾಧವನು ಹುಚ್ಚು ಹಿಡಿದವನಂತೆ ಅಲೆಯುತ್ತಾ ಉತ್ತರ ದೇಶದ ರಾಜರು ಶೇಷಾಚಲ ಯಾತ್ರೆ ಹೊರಟಿರುವದನ್ನು ನೋಡಿ ಅವರ ಜೊತೆಯಲ್ಲಿ ತಾನು ಹೊರಡುತ್ತಾನೆ. ಅವರು ಉಂಡು ಉಳಿಸಿದ ಎಂಜಲನ್ನವನ್ನು ತಿನ್ನುತ್ತಾ ದೈವಯೋಗದಿಂದ ಶೇಷಾಚಲ ಪರ್ವತಕ್ಕೆ ಬರುತ್ತಾನೆ. ಆ ರಾಜರು ಕಪಿಲ ತೀರ್ಥದಲ್ಲಿ ಸ್ನಾನ ಮಾಡಿ ಭಕ್ತಿಯಿಂದ ತೀರ್ಥ ಕ್ಷೇತ್ರದ ಪದ್ದತಿಯ ಪ್ರಕಾರ ಕೇಶ ಮುಂಡನ ಮಾಡಿಸಿಕೊಂಡು ತಮ್ಮ ಹಿರಿಯರ ಶ್ರಾದ್ಧ ಕರ್ಮಗಳನ್ನು ಮಾಡಿ ಪಿಂಡ ಪ್ರಧಾನ ಮಾಡುತ್ತಾರೆ. ಮಾಧವನು ಸಹ ಅವರಂತೆ ಕಪಿಲ ತೀರ್ಥದಲ್ಲಿ ಸ್ನಾನ ಮಾಡಿ ಶಿರೋ ಮುಂಡನ ಮಾಡಿಸಿಕೊಂಡು ತನ್ನ ಪಿತೃಗಳಿಗೆ ಮಣ್ಣಿನಿಂದ ಪಿಂಡ ಪ್ರಧಾನ ಮಾಡಿದನು. ಪೂರ್ವಜನ್ಮದಲ್ಲಿ ಮಾಡಿದ ಸುಕೃತದ ಫಲದಿಂದ ಅವನ ಪಾಪಗಳೆಲ್ಲ ಪರಿಹಾರವಾಯಿತು. ಆದುದರಿಂದ ಯಾರೇ ಆಗಲಿ ಭಕ್ತಿ ಇಂದ ಕಪಿಲ ತೀರ್ಥದಲ್ಲಿ ಅವಗಾಹನ ಮಾಡಿ ಸ್ನಾನ ಮಾಡಿದರೆ ಅವರ ಪಾಪರಾಶಿ ನಾಶವಾಗುವದು. ಅನಾದಿಯು ಪುಣ್ಯ ಪ್ರದವು ಆದ ಶೇಷಾದ್ರಿಯಲ್ಲಿ ಮಾಧವನು ಮಣ್ಣಿನಿಂದ ಮಾಡಿದ ಪಿಂಡ ಪ್ರಧಾನ ಮಾಡಿದ್ದಕ್ಕಾಗಿ ಅವನ ಪಿತೃಗಳು ಶ್ರೀ ಹರಿಯ ಕೃಪೆ ಇಂದ ಶಾಶ್ವತವಾದ ಸುಖವನ್ನು ಪಡೆದರು. ಮರುದಿನ‌ರಾಜನ ಪರಿವಾರ ಆ ಬೆಟ್ಟವನ್ನು ಏರುವಾಗ ಇವನು ಸಹ ಅವರನ್ನು ಅನುಸರಿಸಿ ಬೆಟ್ಟದ ತುದಿಯ ಭಾಗಕ್ಕೆ ಬಂದಾಗ, ಆ ಪರ್ವತದ ಸ್ಪರ್ಶ ಮಾತ್ರದಿಂದ ಅವನ ಪಾಪರಾಶಿಯೆಲ್ಲವು ಸುಟ್ಟು ಬೂದಿಯಾಯಿತು. "ಹೇಗೆ ನೊಣವನ್ನು ನುಂಗಿದವನು ವಾಂತಿ ಮಾಡುವನೊ", ಅದರಂತೆ ಅವನ ಹೊಟ್ಟೆಯಲ್ಲಿ ಇದ್ದ ಪಾಪ ಕಲ್ಮಶವೆಲ್ಲ ಹೊರ ಹೊಮ್ಮಿದವು. ವೆಂಕಟಗಿರಿಯ ಮಹಿಮೆ ಇಂದ ಅವನ ದೇಹದಿಂದ ಉದ್ಬವಿಸಿದ ಒಂದಾನೊಂದು ಬೆಂಕಿಯು ಪ್ರಜ್ವಲಿಸಿ ಅಂತ್ಯಜಳಾದ ಸ್ತ್ರೀ ಸಂಗಮ, ಮದ್ಯ , ಮಾಂಸ ಭಕ್ಷಣದಿಂದ ಬಂದ ಪಾಪ ಇವುಗಳನ್ನು ಸುಟ್ಟು ಹಾಕಿತು. ಆಗ ಬಂದ ದುರ್ವಾಸನೆಯ ದಟ್ಟ ಹೊಗೆ ಸಕಲ ಲೋಕಗಳಿಗು ತಲುಪಿತು. ತನ್ನ ಪಾಪವನ್ನು ವೆಂಕಟಗಿರಿಯ ಮಹಿಮೆ ಇಂದ ಕಳೆದುಕೊಂಡ ಮಾಧವನಿಗೆ ಅನುಗ್ರಹ ಮಾಡಲು ಸಕಲ ದೇವತೆಗಳು, ಬ್ರಹ್ಮ ರುದ್ರಾದಿ ದೇವತೆಗಳು ತಮ್ಮ ಕಾಂತಿಯಿಂದ ಅಲ್ಲಿಗೆ ಆಗಮಿಸಿದರು. ದೇವತೆಗಳು ಅವನ ಮೇಲೆ ಪುಷ್ಪ ವೃಷ್ಟಿಯನ್ನು ಕರೆದರು. ವೇದ ಪ್ರತಿಪಾದ್ಯನು ಕಾಂತಿ ಸಂಪನ್ನನು, ಸರಸ್ವತಿ ದೇವಿಯ ಪತಿಯಾದ ಭಗವಂತನ ನಾಭಿ ಕಮಲದಿಂದ ಜನಿಸಿದ ಬ್ರಹ್ಮ ದೇವನು ಮಾಧವನ ಸಮೀಪಕ್ಕೆ ಬಂದು ಅವನ ತಲೆಯನ್ನು ಸ್ಪರ್ಶಿಸಿ ಇಂತೆಂದು ಹೇಳುತ್ತಾರೆ.. ವತ್ಸ!! ಮಾಧವ!! ನಿನ್ನ ಪಾಪಗಳು ಪರಿಹಾರವಾದವು. ನೀನು ಸ್ವಾಮಿ ಪುಷ್ಕರಣಿಯಲ್ಲಿ ಸ್ನಾನ ಮಾಡಿ ಶ್ರೀ ವರಾಹ ರೂಪಿಯಾದ ಶ್ರೀ ಹರಿಯನ್ನು ಧ್ಯಾನಿಸುತ್ತಾ ನಿನ್ನ ದೇಹವನ್ನು ತ್ಯಜಿಸು... ಮುಂದೆ ಪಾಂಡವರ ದೌಹಿತ್ರರ ವಂಶದಲ್ಲಿ ನೀನು ಜನಿಸಿ ಅತ್ಯಂತ ಕೀರ್ತಿ ಸಂಪನ್ನನಾಗಿ ಮಹಾರಾಜನಾಗಿ ರಾಜ್ಯ ಭಾರವನ್ನು ಮಾಡುವೆ. ಸುಧರ್ಮರಾಜನ ಮಗನಾಗಿ ಆಕಾಶರಾಜನೆಂಬ ಹೆಸರಿನಿಂದ ದಕ್ಷಿಣ ದೇಶದಲ್ಲಿ ಇರುವ ತೋಂಡದೇಶಕ್ಕೆ ಅಧಿಪತಿಯಾಗುವೆ. ಎಲೈ !!ಮಾಧವನೇ ನಿನ್ನ ಭಾಗ್ಯವೇನೆಂದು ಹೇಳಲಿ!! ಲೋಕಕ್ಕೆ ಹಾಗು ನನಗು ಜನನಿಯಾದ ಸಾಕ್ಷಾತ್ ಮಹಾಲಕ್ಷ್ಮಿ ದೇವಿಯು ನಿನಗೆ ಮಗಳಾಗಿ ಬರುವಳು. ಸಕಲ ಜಗತ್ತಿನ ಹಾಗು ನನಗೆ ಸಹ ಪ್ರಭುವಾದ, ನನ್ನ ಪಿತನಾದ ಆ ದೇವ ದೇವನಾದ ಶ್ರೀಮನ್ ನಾರಾಯಣನು ನಿನಗೆ ಅಳಿಯನಾಗುವನು. ಬಹುಕಾಲ ರಾಜ್ಯದ ಭಾರವನ್ನು ಮಾಡಿ ಅನಂತರ ಮೋಕ್ಷವನ್ನು ಪಡೆಯುತ್ತೀಯೇ ಎಂದು ಹೇಳಿ ವರವನ್ನು ಕರುಣಿಸಿ ಆಶೀರ್ವಾದ ಮಾಡಿ ಬ್ರಹ್ಮ ದೇವರು ಅದೃಶ್ಯರಾದರು. ಮಾಧವನ ಸಕಲ ಪಾಪವನ್ನು ಹರಣ ಮಾಡಿದ್ದರಿಂದ ಆ ಪರ್ವತಕ್ಕೆ ವೆಂಕಟಾಚಲವೆಂದು ಸಕಲ ದೇವತೆಗಳು ಹೆಸರನ್ನು ಇಟ್ಟರು. ಪಾಪವನ್ನು ಸುಡುವದರಿಂದ, ಪಾಪ ದಹನ ಶಕ್ತಿ ಯುಕ್ತವಾದ್ದರಿಂದ ಆ ಪರ್ವತಕ್ಕೆ ವೆಂಕಟಾಚಲವೆಂದು ಹೆಸರು ಬಂದಿತು. ಎಲೈ ಜನಕ ರಾಜನೇ! ಪ್ರಾತಃ ಕಾಲದಲ್ಲಿ ಯಾರು ಈ ವೆಂಕಟಗಿರಿಯನ್ನು ಸ್ತುತಿಸುವರೋ, ಕೀರ್ತಿಸುವರೋ ಅಂಥವರಿಗೆ ದೊರಕುವ ಸುಕೃತ ಫಲವನ್ನು ಹೇಳುವೆನು ಕೇಳು. ಸಮಗ್ರಭೂಮಿ, ಗಂಗಾನದಿ, ರಾಮಸೇತುಗಳ ಯಾತ್ರೆ ಮಾಡಿದರೆ ಎಷ್ಟು ಫಲವೋ ಅದಕ್ಕೆ ಸಾವಿರ ಪಟ್ಟು ಫಲವು ಅಧಿಕ ಪುಣ್ಯವು ಬರುವದು. ಬಹು ಪುಣ್ಯಕರವಾದ ಮಂಗಳಕರವಾದ ಈ ವೆಂಕಟಗಿರಿಯ ಮಹಾತ್ಮೆಯನ್ನು ನಿನಗೆ ಹೇಳಿದ್ದೇನೆ. ಇದನ್ನು ಶ್ರವಣ, ಪಾರಾಯಣ ವನ್ನು ಭಕ್ತಿ ಇಂದ ಮಾಡಿದರೆ ಶುಭ ಪ್ರದವಾಗುವದು ಎಂದು ಹೇಳಿದರು. ಇಂತು ಭವಿಷ್ಯೊತ್ತರ ಪುರಾಣದ ಶ್ರೀ ವೆಂಕಟೇಶ ಮಹಾತ್ಮೆ ಯ ಚತುರ್ಯುಗಗಳ ಮಹಿಮೆಯನ್ನು ವರ್ಣನೆ ಮಾಡುವ ಮೊದಲನೆಯ ಅಧ್ಯಾಯ ಮುಗಿಯಿತು. ಇದನ್ನು ಕೇಳಿ ಸಂತುಷ್ಟನಾದ ಜನಕನು ಆನಂದಾದ್ರಿ ಪರ್ವತಕ್ಕೆ ಶ್ರೀ ಹರಿಯು ಬಂದು ವಾಸ ಮಾಡಿದ ಬಗೆಯನ್ನು ಕೇಳುತ್ತಾನೆ. ಮುಂದುವರೆಯುತ್ತದೆ... ಶುಭವಾಗಲಿ ಶ್ರೀಮತಿ ನಿರ್ಮಲರಾಜೇಶ್
ಕೃಷ್ಣೆ 🦚💙
484 views
6 hours ago
#🔱 ಭಕ್ತಿ ಲೋಕ #ವೈಶಾಖ ಮಾಸ #ಶ್ರೀನಿವಾಸ ಕಲ್ಯಾಣ 🌷🙏 ವೈಶಾಖ ಮಾಸದ ಪ್ರಯುಕ್ತ ಶ್ರೀನಿವಾಸ ಕಲ್ಯಾಣ ಒಮ್ಮೆ ಶೌನಕರು ಸೂತ ಮುನಿಗಳ ಬಳಿ ಬಂದು ಹಿಂದೆ ನಿಮ್ಮಿಂದ ಅನೇಕ ಭಗವಂತನ ಮಹಿಮೆಯನ್ನು ಸಾರುವ ವಿಷಯಗಳನ್ನು ತಿಳಿದು ಸುಕೃತಿಗಳಾಗಿದ್ದೇವೆ. ಈಗ ವೆಂಕಟಾಚಲಪತಿಯಾದ ಶ್ರೀ ಹರಿಯ ಮಹಿಮೆಯನ್ನು ಕೇಳಲು ಆಶಿಸಿದ್ದೇವೆ. ಅದನ್ನು ತಿಳಿಸಬೇಕು ಎಂದು ಕೇಳಲು, ಅವಾಗ ಸೂತರು ಹೇಳುತ್ತಾರೆ. "ಮುನಿವರ್ಯರೆ!! ಬಹಳ ಆನಂದದಾಯಕವಾದ ಕೋರಿಕೆಯನ್ನು ಸಲ್ಲಿಸಿದ್ದೀರಿ. ಶ್ರೀ ವೇದವ್ಯಾಸ ದೇವರು ನನಗೆ ಉಪದೇಶ ಮಾಡಿದ ಕ್ರಮದಲ್ಲಿ ನಿಮಗೆ ಹೇಳುತ್ತೇನೆ ಕೇಳಿ." ಪೂರ್ವದಲ್ಲಿ ಧರ್ಮಿಷ್ಟನಾದ ಜನಕ ರಾಜನು ಧರ್ಮದಿಂದ ರಾಜ್ಯಭಾರ ಮಾಡುತ್ತಾ ಇದ್ದನು. ಅವನಿಗೆ ಕುಶಕೇತುವೆಂಬ ತಮ್ಮ ಇದ್ದನು. ಅವನ‌ ಪತ್ನಿ ಬಹು ಪತಿವ್ರತೆಯು. ಆ ದಂಪತಿಗಳಿಗೆ ಮೂರು ಜನ ಪುತ್ರಿಯರು. ಜನಕರಾಜನಿಗೆ ಜಾನಕಿ ಎಂಬ ನಾಮದಿಂದ ಕರೆಯಲ್ಪಡುವ ಜಗನ್ಮಾತೆ ಪುತ್ರಿಯಾಗಿದ್ದಾಳೆ. ಹೀಗೆ ಜನಕರಾಜನು ಪತ್ನಿ ಪುತ್ರಿ ಮತ್ತು ಸಹೋದರನ ಜೊತೆಯಲ್ಲಿ ಆನಂದವಾಗಿ ರಾಜ್ಯ ಭಾರ ಮಾಡುತ್ತಾ ಇದ್ದನು. ಒಂದು ದಿನ ರಾಜನ ಮನಸ್ಸಿನಲ್ಲಿ ನಾನು ಸರ್ವದಾ ಸುಖವಾಗಿಯೇ ಇರಬೇಕು.ದುಃಖಗಳನ್ನು ಕಣ್ಣಿನಿಂದ ನೋಡಬಾರದು ಎಂದು ಅಪೇಕ್ಷೆ ಪಟ್ಟನು. ಅವನ ಅಪೇಕ್ಷೆ ಪಟ್ಟಿದ್ದು ಶಾಸ್ತ್ರ ಸಮ್ಮತವಲ್ಲವಾದುದರಿಂದ ಭಗವಂತನು ಅವನಿಗೆ ದುಃಖ ಪ್ರದರ್ಶನ ಮಾಡಿದನು. ಜನಕರಾಜನ ತಮ್ಮ ಕುಶಕೇತು ಮರಣ ಹೊಂದಿದ. ಅವನ ಪತ್ನಿ ಸಹ ಅವನ ಜೊತೆಗೆ ಸಹಗಮನ ಮಾಡಿದಳು. ಅನಾಥರಾದ ಮಕ್ಕಳನ್ನು ಕಂಡು ಕಡು ದುಃಖಿತನಾದ ಜನಕರಾಜನು ಅನ್ನಾಹಾರಗಳನ್ನು ತ್ಯಜಿಸಿದನು. ಆಗ ದೈವಯೋಗದಿಂದ ಕುಲಪುರೋಹಿತರು, ವಾಮದೇವ ಮುನಿಗಳ ಸಹೋದರರು ಆದ ಶತಾನಂದರು ಮಿಥಿಲೆಗೆ ಬಂದರು. ಅರ್ಘ್ಯ ಪಾದಾದಿಗಳಿಂದ ಅವರನ್ನು ಪೂಜಿಸಿ ಸತ್ಕರಿಸಿ ತನಗೆ ಪ್ರಾಪ್ತವಾದ ದುಃಖವನ್ನು ಅವರ ಬಳಿ ಹೇಳಿಕೊಂಡನು. ಆಗ ಶತಾನಂದರು ಹೇಳುತ್ತಾರೆ. ರಾಜನ್ ಕಲಿಯುಗದಲ್ಲಿ ವೆಂಕಟಗಿರಿ ಮಹಾತ್ಮೆಯನ್ನು ಶ್ರವಣ ಮಾಡುವದರಿಂದ ಸರ್ವಪಾಪವು ಪರಿಹಾರವಾಗುವದು. ನಿನ್ನ ಶತೃನಾಶ, ಪುತ್ರಿಯರ ವಿವಾಹ, ಸಕಲ ಶ್ರೇಯಸ್ಸುಗಳು ಅದರ ಶ್ರವಣದಿಂದ ದೊರಕುತ್ತವೆ. ಈ ಪರ್ವತಕ್ಕೆ ಕೃತಯುಗದಲ್ಲಿ ವೃಷಭಾಚಲವೆಂದು, ತ್ರೇತಾಯುಗದಲ್ಲಿ ಅಂಜನಾಚಲವೆಂದು, ದ್ವಾಪರದಲ್ಲಿ ಶೇಷಾಚಲವೆಂದು, ಕಲಿಯುಗದಲ್ಲಿ ವೆಂಕಟಾಚಲವೆಂದು ಯುಗಭೇದದಿಂದ ಹೆಸರುಂಟಾಗಿದೆ. ನಾಲ್ಕು ಯುಗದಲ್ಲಿ ಆಯಾ ಹೆಸರು ಬರಲು ಕಾರಣವನ್ನು ಕೇಳಿದಾಗ ಅದಕ್ಕೆ ಶತಾನಂದರು ರಾಜನ್! ಕೃತಯುಗದಲ್ಲಿ ವೃಷಭ ಎಂಬ ರಾಕ್ಷಸನು ಈ ಪರ್ವತದಲ್ಲಿ ವಾಸವಾಗಿದ್ದು ಅಲ್ಲಿದ್ದ ಋಷಿಗಳ ಸಮೂಹಕ್ಕೆ ತೊಂದರೆ ಕೊಡುತ್ತಾ ಇದ್ದನು. ಅವನು ಕೊಡುವ ಕಷ್ಟ ತಾಳದೆ ಮುನಿಗಳು ಭಗವಂತನ ಬಳಿ ಮೊರೆಹೋಗುತ್ತಾರೆ. ಆಗ ಶ್ರೀ ಹರಿಯು ಪ್ರತ್ಯಕ್ಷವಾಗಿ ಅವರಿಗೆ ಅಭಯವಿತ್ತು ಆ ರಾಕ್ಷಸನ ಸಂಹಾರ ಮಾಡುವೆನೆಂದು ಹೇಳುತ್ತಾನೆ. ಆ ವೃಷಭ ಎಂಬ ರಾಕ್ಷಸನು ಪ್ರತಿದಿನವು ತುಂಬುರು ತೀರ್ಥದಲ್ಲಿ ಸ್ನಾನ ಮಾಡಿ, ಅವನ ಬಳಿಯಿರುವ ನರಸಿಂಹ ದೇವರ ಶಾಲಗ್ರಾಮವನ್ನು ಪೂಜಿಸುತ್ತಾ, ಪೂಜೆ ಮುಗಿದ ಮೇಲೆ, ಫಲ ಸಮರ್ಪಣ ರೂಪದಲ್ಲಿ ತನ್ನ ಶಿರಸ್ಸನ್ನು ಖಡ್ಗದಿಂದ ಕತ್ತರಿಸಿ ನರಸಿಂಹ ರೂಪಿಯಾದ ಆ ಶ್ರೀಹರಿಗೆ ಸಮರ್ಪಣೆ ಮಾಡುತ್ತಾ ಇದ್ದ. ಅಚ್ಚರಿಯೆಂದರೆ ಮತ್ತೆ ಅವನ ಶಿರವು ಮತ್ತೆ ಅವನ ದೇಹಕ್ಕೆ ಬಂದು ಕೂಡುತ್ತಾ ಇತ್ತು. ಶ್ರೀ ಹರಿ ಪ್ರತ್ಯಕ್ಷವಾಗಿ ದರುಶನ ನೀಡುತ್ತಾನೆ. ಭಗವಂತನ ದರ್ಶನದಿಂದ ಆನಂದ ತಡೆಯಲಾರದೆ ಆತ ಮೂರ್ಛೆ ಹೋಗುತ್ತಾನೆ. ನಂತರ ಎಚ್ಚರವಾದ ಮೇಲೆ ಭಗವಂತನ ಬಳಿ ಹೀಗೆಂದು ಕೇಳುತ್ತಾನೆ. ಹೇ ನಾರಾಯಣ!! ನೀನು ದೋಷ ರಹಿತನು. ರಮಾ, ಬ್ರಹ್ಮಾದಿ ಸಕಲ ದೇವತೆಗಳಿಂದ ನೀನು ನಿತ್ಯ ಪೂಜೆಗೊಂಬುವನು ಮತ್ತು ಎಲ್ಲರಿಗಿಂತ ಅತ್ಯುತ್ತಮನಾದವನು ಆಗಿದ್ದೀಯಾ. ನಿನ್ನ ಬಳಿ ನಾನು ಯುದ್ಧ ಮಾಡಬೇಕು ಅನ್ನುವ ಅಪೇಕ್ಷೆ ಉಂಟಾಗಿದೆ. ಅದನ್ನು ನಡೆಸಿಕೊಡಲು ಕೇಳುತ್ತಾನೆ. ಭಗವಂತನು ತಥಾಸ್ತು! ಎಂದು ಹೇಳಿ ಅವನ ಜೊತೆಯಲ್ಲಿ ಯುದ್ಧವನ್ನು ಮಾಡುತ್ತಾನೆ. ಸಕಲ ದೇವತಾ ಋಷಿ ಪರಿವಾರ ಆಗಸದಲ್ಲಿ ನಿಂತು ಈ ಯುದ್ದವನ್ನು ನೋಡುತ್ತಾರೆ. ಅವನ ಯುದ್ದ ಕೌಶಲ್ಯ ಕಂಡು ಭಗವಂತನು ಹರ್ಷಿತನಾಗಿ ಅವನ ಶಿರವನ್ನು ತರಿಯಲು ತನ್ನ ಚಕ್ರವನ್ನು ಪ್ರಯೋಗ ಮಾಡಲು ಸಿದ್ದನಾಗುತ್ತಾನೆ. ಅದಕ್ಕೆ ಅವನು ಭಗವಂತನ ಪಾದಕ್ಕೆ ಎರಗಿ ಸ್ವಾಮಿ! ನಿನ್ನ ಚಕ್ರದ ಪ್ರಭಾವ ಕೇಳಿದ್ದೇನೆ. ಅದರಿಂದ ಮೃತನಾಗಿ ನಾನು ನಿನ್ನ ಮಂದಿರವನ್ನು ಸೇರುತ್ತೇನೆ. ಈ ಪರ್ವತಕ್ಕೆ ನನ್ನ ಹೆಸರು ಬರುವಂತೆ ಅನುಗ್ರಹ ಮಾಡು ಎಂದು ಪ್ರಾರ್ಥನೆ ಮಾಡಿದ. ಆಗ ಶ್ರೀ ಹರಿಯು ಅವನಿಗೆ ವರವನ್ನು ಇತ್ತು ಚಕ್ರದಿಂದ ಅವನನ್ನು ಸಂಹರಿಸಿ, ಮುನಿಗಳ ಕಷ್ಟವನ್ನು ಪರಿಹರಿಸಿದನು. ಈ ಕಾರಣದಿಂದ ಈ ಪರ್ವತಕ್ಕೆ ವೃಷಭಾಚಲ ಹೆಸರು ಬಂದಿತು ಎನ್ನುತ್ತಾರೆ. ಮುಂದುವರೆಯುತ್ತದೆ... ಮೂಲ ಲೇಖಕರು ವಿಜಯ ವಿಠ್ಠಲ ಶುಭವಾಗಲಿ ಶ್ರೀಮತಿ ನಿರ್ಮಲರಾಜೇಶ್