#ಶ್ರೀನಿವಾಸ ಕಲ್ಯಾಣ 🌷🙏 #ವೈಶಾಖ ಮಾಸ #🔱 ಭಕ್ತಿ ಲೋಕ
ಹೇ ರಾಜನ್!! ಕೇಳು! ಪೂರ್ವದಲ್ಲಿ ಸಕಲ ಮುನಿಶ್ರೇಷ್ಟರು ಗಂಗಾನದಿಯ ತಟದಲ್ಲಿ ಒಂದು ಶ್ರೇಷ್ಠವಾದ ಯಜ್ಞ ವನ್ನು ಆಚರಿಸಿದರು. ಆ ಯಾಗ ನಡೆಯುವ ಸುಸಂಧರ್ಭದಲ್ಲಿ ದೇವರ್ಷಿಯಾದ ನಾರದರು ಅಲ್ಲಿಗೆ ಆಗಮಿಸಿ ಕಶ್ಯಾಪಾದಿ ಋಷಿಗಳನ್ನು ನೋಡಿ ಈ ಉತ್ತಮವಾದ ಯಜ್ಞವನ್ನು ಯಾವ ಉದ್ದೇಶದಿಂದ ಮಾಡುವಿರಿ?? ಈ ಯಜ್ಞಕ್ಕೆ ದೇವತೆ ಯಾರು?? ಮತ್ತು ಈ ಯಜ್ಞದ ಫಲವನ್ನು ಯಾವ ಸರ್ವೋತ್ತಮ ದೇವತೆಗೆ ಅರ್ಪಿಸುವಿರಿ?? ಶ್ರೀಹರಿಗೋ??ವಾರಿಜೋದ್ಬವನಿಗೋ?? ಅಥವಾ ಶಂಕರನಿಗೋ?? ಅಂತ ಕೇಳಿದಾಗ ಸಕಲ ಮುನಿಗಳಲ್ಲಿ ಇದರ ಬಗ್ಗೆ ಚರ್ಚೆ ಯಾಗಿ ನಿಜ ಇದನ್ನು ಯಾರಿಗೆ ಅರ್ಪಿಸಬೇಕು ಎಂದು ಚರ್ಚಿಸಿ ಕೊನೆಗೆ ಸಾಧ್ಯವಾಗದೇ ಋಷಿಗಳ ಸಮೂಹದಲ್ಲಿ ಶ್ರೇಷ್ಠರಾದ ಭೃಗು ಮುನಿಗಳ ಹತ್ತಿರ ಬಂದು ಸ್ವಾಮಿ ಭೃಗುಮುನಿಗಳೇ!! ದೇವತೆಗಳಲ್ಲಿ ಉತ್ತಮನಾದ ಪರಮ ಪುರುಷನು ಯಾರೆಂದು ತಿಳಿದು ಬರಲು ದಯಮಾಡಿ ಹೊರಡಿರಿ ಎಂದು ಕೋರಿದರು. ಆಗ ಭೃಗು ಮುನಿಗಳು ಅವರ ಕೋರಿಕೆಯನ್ನು ಮನ್ನಿಸಿ ಸರ್ವೋತ್ತಮ ದೇವತೆ ಯಾರೆಂದು ತಿಳಿಯಲು ಕಮಲ ಮಂದಿರನಾದ ಸತ್ಯಲೋಕದಲ್ಲಿ ಸರಸ್ವತಿ ಸಮೇತನಾಗಿ ಇರುವ ಬ್ರಹ್ಮದೇವರ ಬಳಿ ಬಂದರು. ಆ ಸಮಯದಲ್ಲಿ ನಾಲ್ಕು ಮುಖಗಳಿಂದ ಬ್ರಹ್ಮ ದೇವರು ವೇದಘೋಷವನ್ನು ಮಾಡುತ್ತಾ ಇದ್ದರು. ಅವರಿಗೆ ಭಕ್ತಿ ಇಂದ ನಮಸ್ಕರಿಸಿದರು ಸಹ. ಬ್ರಹ್ಮ ದೇವರು ಭೃಗು ಋಷಿಗಳ ಕಡೆ ಗಮನ ಹರಿಸಲಿಲ್ಲ. ನೋಡಿದರು, ಮಾತನಾಡಿಸದೆ ಸುಮ್ಮನೆ ಮೌನ ವಹಿಸಿದರು. ಶ್ರೀ ಹರಿ ಸರ್ವೋತ್ತಮ ಸಿದ್ದಾಂತ ಸ್ಥಾಪಿಸಲೋಸುಗ ಅವರು ಸುಮ್ಮನೆ ಸರಸ್ವತಿ ದೇವಿಯರೊಡನೆ ಧ್ಯಾನಾಸಕ್ತರಾಗಿ ಕುಳಿತಿದ್ದರು. ಇದನ್ನು ಕಂಡ ಭೃಗು ಮುನಿಗಳು ಬ್ರಹ್ಮ ದೇವನು ಸ್ವಲ್ಪ ಅಜ್ಞಾನ ಉಳ್ಳವನಾಗಿದ್ದಾನೆ, ಆದ್ದರಿಂದ ಇವನು ಸರ್ವೋತ್ತಮ ದೇವತೆ ಅಲ್ಲವೆಂದು ತಿಳಿದು ಕಲಿಯುಗದಲ್ಲಿ ಇವರ ಪೂಜೆ ಆಗದಿರಲಿ ಎಂದು ಶಾಪವನ್ನು ಕೊಟ್ಟು ಮುಂದೆ ಕೈಲಾಸ ಪರ್ವತಕ್ಕೆ ಬರುವರು. ಭೃಗುಋಷಿಗಳು ಸತ್ಯಲೋಕದಿಂದ ಕೈಲಾಸ ಪರ್ವತಕ್ಕೆ ಹೋದಾಗ ಅಲ್ಲಿ ರುದ್ರದೇವರು ತಮ್ಮ ಪತ್ನಿಯಾದ ಪಾರ್ವತಿದೇವಿಯರೊಂದಿಗೆ ಏಕಾಂತದಲ್ಲಿದ್ದರು. ಅಲ್ಲಿಯು ಸಹ ರುದ್ರದೇವರು "ಶ್ರೀಹರಿಯೇ ಸರ್ವೋತ್ತಮ"ನೆಂದು ತಮ್ಮಿಂದಲೂ ಸ್ಥಾಪಿಸಬೇಕೆಂದು ಭೃಗುಋಷಿಗಳು ಬಂದದ್ದನ್ನು ನೋಡದಂತೆ ನಟಿಸಿ, ಅವರ ಯೋಗ-ಕ್ಷೇಮವನ್ನು ವಿಚಾರಿಸದೆ, ತಮ್ಮ ಪತ್ನಿಯೊಡನೆಯಿರುವ ಏಕಾಂತಕ್ಕೆ ಭಂಗ ತಂದಿರುವಿರೆಂದು ಋಷಿಗಳಿಗೆ ತಮ್ಮ ತ್ರಿಶೂಲದಿಂದ ಸಂಹರಿಸಲು ಹೋದಂತೆ ನಟಿಸಿದಾಗ, ಅಗ ಭೃಗು ಋಷಿಗಳು ಕೋಪದಿಂದ "ಭೋಗಾಸಕ್ತರಾದ ನಿಮಗೆ ಇನ್ನು ಮುಂದೆ ಭೂ-ಲೋಕದಲ್ಲಿ ನಿಮ್ಮ ಮೂರ್ತಿಯನ್ನು ಪೂಜಿಸದೆ ಲಿಂಗ ಪೂಜೆಯಾಗಲಿ"ಎಂದು ಶಾಪವನ್ನು ಕೊಡುತ್ತಾರೆ. ಅವರು ಕೊಟ್ಟು ಶಾಪವನ್ನು ತೆಗೆದುಕೊಂಡು ಪರಮ ವೈಷ್ಣವಾಗ್ರೇಸರಾದ ಹಾಗು ಮನೋನಿಯಾಮಕರಾದ ರುದ್ರದೇವರೆ ವೈಕುಂಠ ಲೋಕಕ್ಕೆ ಹೋಗುವಂತೆ ಭೃಗುಋಷಿಗಳಿಗೆ ಮನಃ ಪ್ರೇರಿಸಿದರು. ಆ ನಂತರ ವೈಕುಂಠಕ್ಕೆ ಬಂದರು.
ಅಲ್ಲಿ ಶ್ರೀ ಮನ್ನಾರಾಯಣನು ಶೇಷಮಂಚದಲ್ಲಿ ಸುಪ್ಪತ್ತಿಗೆ ಮೇಲೆ ನಿದ್ರಾ ವಶದವನಂತೆ ನಟನೆ ಮಾಡುತ್ತಾ ಪವಡಿಸಿದ್ದನು. ಇದನ್ನು ಕಂಡ ಭೃಗು ಋಷಿಗಳು ಪರಮ ಕೋಪದಿಂದ ಶ್ರೀ ಹರಿಯ ವಕ್ಷಸ್ಥಳಕ್ಕೆ ತಮ್ಮ ಪಾದದಿಂದ ತಾಡನೆ ಮಾಡಿದರು. ತಕ್ಷಣ ರಮಾಪತಿಯು ಮೇಲೆದ್ದು ತಾನು ಅಪರಾಧ ಮಾಡಿದವನಂತೆ ಕ್ಷಮೆ ಯಾಚಿಸುತ್ತಾ “ಯಾಕೆನ್ನ ಮೇಲೆ ಇಷ್ಟು ಸಿಟ್ಟು?? ನೀ ಬೇಕಾದ್ದು ಕೇಳು ಕೊಡುವೆನು ಕಾಲಕಾಲಕ್ಕೆ... ಸುಮ್ಮನೆ ಯಾರಿಗು ತಿಳಿಸದೇ ನನ್ನ ಮನೆಗೆ ಬಂದು ಒದ್ದ ಕಾರಣವೇನು?? ನನ್ನ ವಜ್ರ ಕಠಿಣವಾದಂತಹ ಎದೆಗೆ ಒದ್ದು ನಿಮ್ಮ ಮೃದುವಾದ ಕೋಮಲವಾದ ಪಾದ ಎಷ್ಟು ನೊಂದಿತೋ ನಾನರಿಯೇ!! ಅಂತ ಹೇಳಿ ಭೃಗು ಋಷಿಗಳನ್ನು ಅರ್ಘ್ಯಪಾದಾದಿಗಳಿಂದ ಸತ್ಕರಿಸಿ ಆ ಪಾದೋದಕವನ್ನು ತಾನು ಶಿರಸ್ಸಿನಲ್ಲಿ ಧರಿಸಿ, ತನ್ನ ಪತ್ನಿಯಾದ ರಮಾದೇವಿಯರಿಗು ಪ್ರೋಕ್ಷಣೆ ಮಾಡಿ, ಎಲ್ಲಾ ಕಡೆಗೆ, ತನ್ನ ಸಕಲ ಪರಿವಾರದವರಿಗು ಪ್ರೋಕ್ಷಣೆಯನ್ನು ಶ್ರೀ ಹರಿಯು ಮಾಡುತ್ತಾನೆ. ಭೃಗು ಋಷಿಗಳು ಭೂಲೋಕಕ್ಕೆ ಬಂದು ಶ್ರೀ ಹರಿಯೇ ಸರ್ವೋತ್ತಮನೆಂದು ಎಲ್ಲರಿಗೂ ಉಪದೇಶ ಮಾಡಿದರು.ಸಕಲ ಋಷಿಗಳು ಪರಮ ಪುರುಷನಾದ ಆ ಶ್ರೀ ಹರಿಗೆ ಯಜ್ಞ ಫಲವನ್ನು ಸಮರ್ಪಣೆ ಮಾಡಿದರು.
********
ಇತ್ತ ಭೃಗು ಋಷಿಗಳು ವೈಕುಂಠದಿಂದ ಹೊರಟು ಹೋದ ಮೇಲೆ, ಏಕಾಂತದಲ್ಲಿ ರಮಾದೇವಿಯ ಜೊತೆಯಲ್ಲಿ ಭಗವಂತನು ಇರುವಾಗ ಮಹಾಲಕ್ಷ್ಮಿ ದೇವಿಯ "ಜಗನ್ನಿಯಾಮಕನಾದ, ದೇವೋತ್ತಮನಾದ ಪ್ರಭುವೇ, ನಾನು ನಿನ್ನನ್ನು ತೊರೆದು ಹೋಗುವೆನು. ನಿನ್ನ ಶ್ರೀವತ್ಸ ಸದಾ ಎನ್ನ ಆಲಿಂಗನವನ್ನು ಮಾಡಿಕೊಂಡಿರುವದು.
ಅಂತಹ ಸ್ಥಳ ಭೂಸುರನಿಂದ ಪಾದದಿಂದ ಸ್ಪರ್ಶವಾಗಿದೆ. ಹಾಗಾಗಿ ನಾನು ಇಲ್ಲಿ ಇರುವುದಿಲ್ಲ. ಎಲ್ಲರಿಗಿಂತ ಉತ್ತಮನು ನೀನು ಎಂದು ಇಲ್ಲಿ ಇದ್ದೆ. ನಿನಗೆ ಭಕ್ತವತ್ಸಲ ಎಂಬ ಬಿರುದು ಬೇಕಾಗಿತ್ತು ಅಂದರೆ ಈ ತರ ಮಾನವ ಚರಣವನ್ನು ಎದೆಯಲ್ಲಿ ಧರಿಸುವದು ಸರಿಯೇ!! ಕರವೀರಪುರಕ್ಕೆ ಹೋಗುತ್ತೇನೆ ಅಂತ ಹೇಳಿ ಜಗನ್ಮಾತೆಯು ಪ್ರೇಮ ಕಲಹವನ್ನು ನಟಿಸಿ ವೈಕುಂಠ ಪುರವನ್ನು ಬಿಟ್ಟು ಕರವೀರಪುರಕ್ಕೆ ಬರುತ್ತಾಳೆ.
ದ್ವಾಪರಯುಗದ ಕೊನೆಯ ಭಾಗದಲ್ಲಿ ಕಲಿಯುಗದಲ್ಲಿ ಮಹಾಲಕ್ಷ್ಮಿಯು ಕರವೀರಪುರಕ್ಕೆ ತೆರಳಿದ ಮೇಲೆ ಭಗವಂತನು ಸಿರಿ ಇಲ್ಲದ ವೈಕುಂಠ ಸರಿ ಬಾರದು ಎನಗೆ, ಏನು ಮಾಡಲಿ !! ನನ್ನ ಕಣ್ಣಿಗೆ ವೈಕುಂಠ ಅರಣ್ಯದಂತೆ ತೋರುತ್ತಿದೆ!!... ಎಲ್ಲಿ ಹೋಗಲಿ?? ಅಂತ ಚಿಂತೆ ಮಾಡುವರಂತೆ, ನಟಿಸುತ್ತಾ ಯಾವುದೇ ಚಿಂತೆ, ಸಂತಾಪ, ಮುಂತಾದ ದೋಷ ವಿದೂರನಾಗಿದ್ದರು, ಸ್ವರಮಣನಾದ ಶ್ರೀ ಹರಿಯು ರಮಾದೇವಿಯ ವಿರಹ ದುಃಖವನ್ನು ತಾಳದವನಂತೆ ನಟಿಸುತ್ತಾ ಆಜ್ಞ ಜನರನ್ನು ಮೋಹಗೊಳಿಸುತ್ತಾ , ವೈಕುಂಠ ವನ್ನು ಬಿಟ್ಟು ಸುವರ್ಣಮುಖಿ ನದಿಯ ತಟದಲ್ಲಿ ಹಿಂದೆ ವಾಯುದೇವರು ಶೇಷದೇವನ ಗರ್ವಭಂಗವನ್ನು ಮಾಡಿದ ಶೇಷಾಚಲಕ್ಕೆ ಬಂದು ಸ್ವಾಮಿ ಪುಷ್ಕರಣಿ ತೀರದಲ್ಲಿ ಹುಣಿಸೇ ಮರದ ಬುಡದಲ್ಲಿ ಇರುವ ವಲ್ಮೀಕದಲ್ಲಿ ಅವಿತುಕೊಂಡು ರಹಸ್ಯವಾಗಿ ವಾಸಮಾಡತೊಡಗಿದನು.
ಶೇಷಾಚಲವೂ ಅನೇಕ ಜಾತಿಯ ಗಿಡ ಮರಗಳಿಂದ, ಫಲ ಪುಷ್ಪಗಳಿಂದ, ವೃಕ್ಷಭರಿತವಾದ ಪರ್ವತ.ಅನೇಕ ಜಾತಿಯ ಪಕ್ಷಿಗಳು, ಮೃಗಗಳು ಮತ್ತು ಅನೇಕ ಬಗೆಯ ಹೂ ಬಳ್ಳಿ ಗಳು ಹೀಗೆ ಅದರಲ್ಲಿ ಅಲಂಕೃತವಾಗಿದೆ. ಇಂತಹ ಮನೋಹರವಾದ ನಯನಾನಂದವಾದ ಸಕಲ ವೃಕ್ಷ, ಸಂಪತ್ತನ್ನು ಹೊಂದಿದ ವೆಂಕಟಾಚಲಕ್ಕೆ ಸ್ವಾಮಿ ಆಗಮಿಸಿ ಹುತ್ತದಲ್ಲಿ ವಾಸ ಮಾಡಿದನು..
ಇಂತು ಭವಿಷ್ಯೊತ್ತರ ಪುರಾಣ ಅಂತರ್ಗತವಾದ ಶ್ರೀ ವೆಂಕಟೇಶ ಮಹಾತ್ಮೆಯ ಶೇಷಗಿರಿ ಪರ್ವತದ ವರ್ಣನೆ ಎಂಬ ಎರಡನೆಯ ಅಧ್ಯಾಯ ಮುಗಿಯಿತು
ಶುಭವಾಗಲಿ ಶ್ರೀಮತಿ ನಿರ್ಮಲರಾಜೇಶ್


