ShareChat
click to see wallet page
search
#ದಿನಕ್ಕೊಂದು ಕಥೆ #🔱 ಭಕ್ತಿ ಲೋಕ ಶ್ರೀ ಶಂಕರರ ಪರ್ಯಟನೆಯಲ್ಲಿ ಮಾಹೀಷ್ಮತಿ ನಗರ ಪ್ರವೇಶ ಸಂದರ್ಭ:- ಭಾರತೀಯ ಪರಂಪರೆಯಲ್ಲಿ ಸನಾತನ ಧರ್ಮದ ತಳಹದಿ ಎಂದರೆ “ಗುರು ಪರಂಪರೆ” ಇದು ಪ್ರಮುಖವಾದದ್ದು. ಭಗವಂತನ ಇರುವಿಕೆ- ಆರಾಧನೆ ಹಾಗೂ ಪ್ರಾರ್ಥನೆಯನ್ನು ಮೊದಲು ತಿಳಿಸಿ ಕೊಡುವುದು ಗುರುಗಳು. “ಗುರುರ್ಬ್ರಹ್ಮಾ ಗುರುರ್ವಿಷ್ಣು: ಗುರುರ್ದೇವೋ ಮಹೇಶ್ವರ: ಗುರು: ಸಾಕ್ಷಾತ್ ಪರಂ ಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ” ಎಂದು ಪ್ರಾರ್ಥಿಸುತ್ತೇವೆ. ಭಾರತೀಯರಾದ ನಾವೆಲ್ಲ ಗುರು ತೋರಿದ ಮಾರ್ಗದಲ್ಲಿ ನಡೆದು ಬಂದವರು. ಭಾರತದ ಏಕತೆ ಮತ್ತು ಅಖಂಡತೆಯ ಬಗ್ಗೆ ಹೆಮ್ಮೆ ಪಡುವುದು,‌ ಯುದ್ಧ- ಕಠಾರಿಗಳ ಸೆಣಸಾಟ ಆಗಿರದೆ “ತರ್ಕ ಮತ್ತು ಜ್ಞಾನ” ಬಲದಿಂದ ಎಂದು ಜಗತ್ತಿಗೆ ಸಾರಿದವರು, ಅಖಂಡ ಭಾರತ ವನ್ನು ಒಂದೇ ಸೂತ್ರದಡಿಯಲ್ಲಿ ಕಟ್ಟಿ ಒಗ್ಗೂಡಿಸಿದ ಮಹಾ ಮಹಿಮರು, ಗುರು ಪರಂಪರೆಯಲ್ಲಿ ಅತ್ಯಂತ ಮಹತ್ವ ಸ್ಥಾನ ಪಡೆದವರು “ಶ್ರೀಮತ್ ಭಗವತ್ಪಾದ ಶಂಕರಾಚಾರ್ಯರು”ಇವರು “ಅಹಂ ಬ್ರಹ್ಮಾಸ್ಮಿ” ಎಂಬ ಮಹಾ ವಾಕ್ಯದ ತತ್ವವನ್ನು ಸ್ಪಷ್ಟವಾಗಿ ಪ್ರತಿಪಾದಿಸಿದರು. ಒಮ್ಮೆ ಶಂಕರರು ತಮ್ಮ ದಿಗ್ವಿಜಯ ಯಾತ್ರೆಯಲ್ಲಿ ಮಾಹೀಷ್ಮತೀ ನಗರಕ್ಕೆ ಬಂದರು. ನರ್ಮದಾ ನದಿಯ ತೀರದಲ್ಲಿ ವಿರಾಜಿಸುತ್ತಿದ್ದ ಪವಿತ್ರ ಕ್ಷೇತ್ರವೇ ಮಾಹೀಷ್ಮತೀ ನಗರ. ಆ ನಗರದಲ್ಲಿ ಕುಮಾರೀಲಭಟ್ಟರ ಶಿಷ್ಯರು, ಮಹಾಪಂಡಿತರಾದ ಮಂಡನ ಮಿಶ್ರರ ಗೃಹವು ಪ್ರಸಿದ್ಧಿಯಾಗಿತ್ತು. ಕುಮಾರಿಲರಿಂದ ಅನುಗ್ರಹ ಪಡೆದು ಹೊರಟ ಆಚಾರ್ಯರು ಮಾಹೀಷ್ಮತಿ ನಗರಕ್ಕೆ ಬಂದು, ಮೊದಲಿಗೆ ಊರಿನ ಶಿವಾಲಯದಲ್ಲಿ ಶಿಷ್ಯರೊಂದಿಗೆ ವಿಶ್ರಾಂತಿ ಪಡೆದರು. ಮರುದಿನ ಮಂಡನಮಿಶ್ರರನ್ನು ಭೇಟಿಯಾಗಬೇಕೆಂದು ನಿರ್ಧರಿಸಿದರು. ಬೆಳಿಗ್ಗೆ ಮಂಡನಮಿಶ್ರರ ಮನೆ ಹುಡುಕುತ್ತಾ ಊರೊಳಗೆ ಹೊರಟರು. ಆಗ ನೀರು ತರಲು ನದಿಯ ಕಡೆ ಹೋಗುತ್ತಿದ್ದ ಒಬ್ಬ ಮಹಿಳೆ ಎದುರಾದಳು. ಆಚಾರ್ಯರು ಆಕೆಯನ್ನು ಕೇಳಿದರು: “ತಾಯಿ, ಮಂಡನಮಿಶ್ರರ ಮನೆಗೆ ಹೋಗುವ ದಾರಿ ಯಾವುದು?” ಅವಳು ಆಶ್ಚರ್ಯಪಟ್ಟು, “ಈ ಊರಲ್ಲಿ ಮಂಡನಮಿಶ್ರರ ಮನೆ ಅರಿಯದವರು ಯಾರಿದ್ದಾರೆ? ನೀವು ಹೊಸಬರೇನೋ?”ಎಂದು ಕೇಳಿದಳು. ಆಚಾರ್ಯರು ಶಾಂತವಾಗಿ, “ಹೌದು ತಾಯಿ, ನಾನು ಈ ಊರಿಗೆ ಹೊಸಬ ಮಂಡನಮಿಶ್ರರನ್ನು ಭೇಟಿಯಾಗಬೇಕಿದೆ” ಎಂದರು. ಆಕೆ ಹೇಳಿದರು: “ಅವರ ಮನೆಯನ್ನು ಹುಡುಕುವುದು ಬಹಳ ಸುಲಭ. ಅವರ ಮನೆಯ ಬಾಗಿಲಲ್ಲಿ ಪಂಜರದಲ್ಲಿರುವ ಗಿಳಿಗಳು ‘ಜಗತ್ತು ಸತ್ಯವೇ? ಮಿಥ್ಯವೇ? ವೇದಗಳು ಸ್ವತಃ ಪ್ರಮಾಣವೇ ಅಥವಾ ಪರತಃ ಪ್ರಮಾಣವೇ? ಮೋಕ್ಷಕ್ಕೆ ಮಾರ್ಗ ಜ್ಞಾನವೇ? ಕರ್ಮವೇ?’ ಎಂದು ಚರ್ಚೆ ಮಾಡುತ್ತಿರುತ್ತವೆ. ಅದೇ ಮಂಡನಮಿಶ್ರರ ಮನೆ.” ಈ ಮಾತು ಕೇಳಿ ಆಚಾರ್ಯರು ಮನಸ್ಸಿನಲ್ಲಿ ಆಶ್ಚರ್ಯಪಟ್ಟರು: “ಗಿಳಿಗಳೇ ಇಷ್ಟು ವೇದಾಂತ ಚರ್ಚೆ ಮಾಡುತ್ತಿದ್ದರೆ, ಆ ಮನೆಯ ಯಜಮಾನನ ಪಾಂಡಿತ್ಯ ಇನ್ನೆಷ್ಟು ಮಹತ್ತರವಾಗಿರಬೇಕು!” ಎಂದು ಆಲೋಚಿಸಿದರು. ಆಕೆಯ ಸೂಚನೆಯಂತೆ ಅವರು ಮಂಡನಮಿಶ್ರರ ಮನೆಗೆ ಬಂದರು. ಆದರೆ ಬಾಗಿಲು ಮುಚ್ಚಿತ್ತು. ದ್ವಾರದಲ್ಲಿ ಕುಳಿತಿದ್ದವನನ್ನು ಕೇಳಿದರು: “ಮಂಡನಮಿಶ್ರರು ಮನೆಯಲ್ಲಿದ್ದಾರೆಯೇ?” ಆತ ಉತ್ತರಿಸಿದ: “ಹೌದು, ಇಂದು ಅವರ ತಂದೆಯ ಶ್ರಾದ್ಧ ನಡೆಯುತ್ತಿದೆ. ಯಾರನ್ನೂ ಒಳಗೆ ಬಿಡಬಾರದೆಂದು ಹೇಳಿದ್ದಾರೆ.” ಶಂಕರಾಚಾರ್ಯರು ಮತ್ತು ಮಂಡಲ ಮಿಶ್ರರ ಮೊದಲ ಭೇಟಿಯ ಕಥೆ:- ಮಂಡನ ಮಿಶ್ರರ ಮನೆಯಲ್ಲಿ ಅಂದು ವಿಶೇಷವಿತ್ತು. ಪಂಡಿತೋತ್ತಮರಾದ ಮಂಡನಮಿಶ್ರರು ತಮ್ಮ ತಂದೆಯ ಶ್ರಾದ್ಧ ಕಾರ್ಯದಲ್ಲಿ ತೊಡಗಿದ್ದರು. ಅವರು ಮನೆಯವರಿಗೆಲ್ಲ ಕಟ್ಟುನಿಟ್ಟಾಗಿ ಹೇಳಿದ್ದರು “ಇಂದು ಯಾರನ್ನೂ ಒಳಗೆ ಬಿಡಬಾರದು.” ಎಲ್ಲರೂ ಆ ಮಾತನ್ನು ಪಾಲಿಸುತ್ತಿದ್ದರು. ಅದೇ ಸಮಯದಲ್ಲಿ, ಶಂಕರಾಚಾರ್ಯರು ಭಿಕ್ಷೆಗಾಗಿ ಅಲ್ಲಿಗೆ ಬಂದರು. ಆದರೆ, ಶ್ರಾದ್ಧ ನಡೆಯುತ್ತಿದೆ. ಯಾರೂ ಅವರನ್ನು ಒಳಗೆ ಬಿಡಲಿಲ್ಲ. ಆಗ ಶಂಕರರು ತಮ್ಮ ಯೋಗಬಲದಿಂದ ಆಕಾಶಮಾರ್ಗದಲ್ಲಿ ಬಂದು ನೇರವಾಗಿ ಮನೆಯ ಒಳ ಅಂಗಳದಲ್ಲಿ ನಿಂತರು. ಆ ಸಮಯದಲ್ಲಿ ಮಹರ್ಷಿಗಳಾದ ಜೈಮಿನಿ ಮತ್ತು ವ್ಯಾಸರ ಪಾದಪ್ರಕ್ಷಾಳನದಲ್ಲಿ ಮಂಡನಮಿಶ್ರರು ತೊಡಗಿದ್ದರು. ಹಠಾತ್ತನೆ ಸನ್ಯಾಸಿಯನ್ನು ಕಂಡ ಮಂಡನಮಿಶ್ರ ರಿಗೆ ಕೋಪ ಬಂತು ಏಕೆಂದರೆ, ವೈದಿಕ ಕರ್ಮಾದಿಗಳು ನಡೆಯುವಲ್ಲಿ ಸನ್ಯಾಸಿಗಳು ಬರುವಂತಿಲ್ಲ. ಮಂಡನ ಮಿಶ್ರರು ಒರಟಾಗಿ ಕೇಳಿದರು: ( ಕುತೋ ಮುಂಡೀ) “ಏ ಬೋಳ, ಎಲ್ಲಿಂದ ಬಂದೆ?” ಶಂಕರಾಚಾರ್ಯರು ಶಾಂತರಾಗಿ ಹೇಳಿದರು: (ಅಗಳ್ಮಾನುಂಡಿ) “ಕುತ್ತಿಗೆಯವರೆಗೆ ಬೋಳ.” ದ್ವಂದ್ವಾರ್ಥವಿಟ್ಟು ಆಚಾರ್ಯರು ಉತ್ತರ ಕೊಟ್ಟಿದ್ದು. ಉತ್ತರ ಕೇಳಿ ಮಂಡನಮಿಶ್ರರಿಗೆ ಇನ್ನಷ್ಟು ಕೋಪ ಬಂತು. ಅವರು ಹೇಳಿದರು: “ನಾನು ಕೇಳಿದ್ದು ನೀನು ಬಂದ ದಾರಿಯನ್ನು” ಆಚಾರ್ಯರು ಅಷ್ಟೇ ಶಾಂತವಾಗಿ ಪ್ರಶ್ನಿಸಿದರು: “ದಾರಿ ಏನನ್ನು ಹೇಳಿತು?” ಈ ಮಾತು ಕೇಳಿ ಮಂಡನಮಿಶ್ರರು ಘರ್ಜಿಸಿ. “ನಿನ್ನ ತಾಯಿ ವಿಧವೆ ಎಂದು ಹೇಳಿತು!” ಆದರೂ ಶಂಕರರು ಶಾಂತರಾಗಿ ಹೇಳಿದರು: “ಕೇಳಿದವನು ನೀನು “ದಾರಿ ಉತ್ತರ ಕೊಟ್ಟದ್ದು ನಿನಗೆ, ನಿನ್ನ ತಾಯಿ ವಿಧವೆ ಎಂದು, ಹಾಗಾದರೆ ಅದು ನಿನಗೆ ಅನ್ವಯಿಸಬೇಕು ಅಲ್ಲವೇ?” ಈ ಮಾತು ಮಂಡನಮಿಶ್ರರಿಗೆ ತೀವ್ರವಾಗಿ ತಟ್ಟಿತು. ಅವರ ಕೋಪ ಇನ್ನಷ್ಟು ಹೆಚ್ಚಾಯಿತು. ಅವರು ಮತ್ತೆ ಪ್ರಶ್ನಿಸಿದರು: “ಏ ದುಷ್ಟಬುದ್ಧಿಯೇ! ಈ ಶಿಖೆ, ಯಜ್ಞೋಪವೀತಗಳನ್ನು ಹೊತ್ತುಕೊಂಡಿರುವುದು ನಿನಗೆ ಭಾರವಲ್ಲವೇ?” ಆಗ ಶಂಕರರು ಉತ್ತರಿಸಿದರು: “ವೇದದಲ್ಲಿ ಅವುಗಳ ಅರ್ಥವನ್ನು ತಿಳಿಯದೇ ಇರುವುದು ನಿಜವಾದ ಭಾರ.”ಇದರಿಂದ ಮಾತಿನ ತೀವ್ರತೆ ಇನ್ನಷ್ಟು ಹೆಚ್ಚಿತು. ಮಂಡನಮಿಶ್ರರು ಹೇಳಿದರು: “ನಿನ್ನ ಬ್ರಹ್ಮನಿಷ್ಠೆ ಏನು?” ಶಂಕರರು ತಕ್ಷಣ ಪ್ರತಿಕ್ರಿಯಿಸಿದರು: “ಹಾಗಾದರೆ ನಿನ್ನ ಕರ್ಮನಿಷ್ಠೆ ಏನು?” ಹೀಗೆ ಇಬ್ಬರ ಮಧ್ಯೆ ತೀಕ್ಷ್ಣವಾದ ವಾಗ್ವಾದ ನಡೆಯಿತು. ಮಂಡನಮಿಶ್ರರು ಕೋಪದಿಂದ ಮಾತನಾಡುತ್ತಿದ್ದರೆ, ಶಂಕರಾಚಾರ್ಯರು ಶಾಂತವಾಗಿ, ತರ್ಕದಿಂದ ಉತ್ತರಿಸುತ್ತಿದ್ದರು. ಈ ಸಂಭಾಷಣೆಯನ್ನು ಕುತೂಹಲದಿಂದ ಆಲಿಸುತ್ತಿದ್ದ “ಜೈಮಿನಿ ಮಹರ್ಷಿಗಳು”, ಮಂಡನಮಿಶ್ರರಿಗೆ ಹೇಳಿದರು: “ಇವರು ಸಾಮಾನ್ಯ ಸನ್ಯಾಸಿ ಅಲ್ಲ, ಆದಿ ಶಂಕರಾಚಾರ್ಯರು.” ಇದನ್ನು ಕೇಳಿ ಮಂಡನಮಿಶ್ರರ ಕೋಪ ಜರ್ರಂತ ಇಳಿಯಿತು. ಆಗ ಶಂಕರರು ವಿನಯದಿಂದ ಹೇಳಿದರು: “ಪಂಡಿತೋತ್ತಮರೆ, ನಾನು ಭಿಕ್ಷೆಗಾಗಿ ಬಂದಿದ್ದೇನೆ. ನೀಡುವಿರಾ?” ಮಂಡನಮಿಶ್ರರು ಹೇಳಿದರು: ಅಸೀನರಾಗಿ “ಖಂಡಿತವಾಗಿ ನೀಡುತ್ತೇನೆ. ಇಂದಿನ ಶ್ರಾದ್ಧ ಕಾರ್ಯ ಮುಗಿಯಲಿ. ನಾಳೆ ನಾವು ವಾದವನ್ನು ಆರಂಭಿಸೋಣ.” ವಾದಕ್ಕೆ ತೀರ್ಪುದಾರರು ಯಾರು ಎಂಬ ವಿಷಯ ಬಂದಾಗ, ಜೈಮಿನಿ ಮಹರ್ಷಿಗಳು ಹೇಳಿದರು:“ಮಂಡನಮಿಶ್ರರ ಪತ್ನಿಯಾದ “ಉಭಯ ಭಾರತಿದೇವಿ” ವೇದಾಂತದಲ್ಲಿ ಪಾಂಡಿತ್ಯ ಹೊಂದಿದ್ದಾರೆ. ಅವರೇ ಮಧ್ಯಸ್ಥರಾಗಲಿ.” ಎಲ್ಲರೂ ಅದನ್ನು ಒಪ್ಪಿದರು. ಹೀಗೆ, ಮುಂದಿನ ದಿನ ಮಹತ್ತರವಾದ ಚರ್ಚೆ ನಡೆಯಲು ನಿರ್ಧಾರವಾಯಿತು. ಆಚಾರ್ಯರು ತಮ್ಮ ಸ್ಥಳಕ್ಕೆ ಹಿಂತಿರುಗಿದರು. ಇದರ ಸಾರಾಂಶ:- ಕೋಪ ಮತ್ತು ಶಾಂತತೆ ಮುಖಾಮುಖಿಯಾದಾಗ, ಜ್ಞಾನವು ಯಾವಾಗಲೂ ಶಾಂತತೆಯ ಮೂಲಕವೇ ವ್ಯಕ್ತವಾಗುತ್ತದೆ. ಇಲ್ಲಿ ನಡೆದಿದ್ದು: ವೇದವಾಂಗ್ಮಯದಲ್ಲಿ ಪಾಂಡಿತ್ಯ ಹೊಂದಿದ ಪಂಡಿತಶ್ರೇಷ್ಠ ಮಂಡನಮಿಶ್ರರು ಹಾಗೂ ಅದ್ವೈತ ತತ್ವಜ್ಞಾನಿ ತಮ್ಮ ತತ್ವವನ್ನು ಸ್ಥಾಪಿಸಿದ ಆದಿ ಶಂಕರಾಚಾರ್ಯರು ಇವರಿಬ್ಬರ ನಡುವೆ ನಡೆದ ಈ ತೀಕ್ಷ್ಣವಾದ ತತ್ವ ಚರ್ಚೆ ಭಾರತೀಯ ಸಂಪ್ರದಾಯದಲ್ಲಿ ಅತಿ ಪ್ರಮುಖವಾಗಿದೆ. ಸದಾಶಿವ ಸಮಾರಂಭಾಮ್ ಶಂಕರಾಚಾರ್ಯ ಮಧ್ಯಮಾಮ್ । ಅಸ್ಮದಾಚಾರ್ಯ ಪರ್ಯಂತಾಮ್ ವಂದೇ ಗುರು ಪರಂಪರಾಮ್॥ ಶ್ರೀ ಗುರು ಚರಣಾರವಿಂದಾರ್ಪಣ ಮಸ್ತು. 🙏🙏🙏 (ಶ್ರೀ ಶಂಕರ ಕಥಾಮೃತ) ವಂದನೆಗಳೊಂದಿಗೆ, ಬರಹ:- ಆಶಾ ನಾಗಭೂಷಣ
ದಿನಕ್ಕೊಂದು ಕಥೆ - ShareChat