ಕಾಯಕವೇ ಕೈಲಾಸ..
619 views
ಕಾಯಕ ಚಳವಳಿ ರೂಪಿಸಿದ ನಾಯಕ ವಿಶ್ವಗುರು ಬಸವಣ್ಣನವರು.. ಬಸವಣ್ಣನವರು ಅವರ ಧಾರ್ಮಿಕ ಮತ್ತು ಸಾಮಾಜಿಕ ಚಿಂತನೆ ತುಂಬಾ ಅರ್ಥಪೂರ್ಣವಾಗಿದೆ. ಅದನ್ನು ಪರಿಪೂರ್ಣವಾಗಿ ಅರ್ಥೈಸಿಕೊಂಡು ಅನುಷ್ಠಾನಕ್ಕೆ ತಂದರೆ ದೇಶ ಅಷ್ಟೇ ಅಲ್ಲ, ವಿಶ್ವವೇ ಸಮಾನತೆ ನೆಲೆಗಟ್ಟಿನಲ್ಲಿ ‌ಸಾಗಬಹುದಾಗಿದೆ. ಆದರೆ, ಅವರನ್ನು ಅರ್ಥಮಾಡಿಕೊಳ್ಳದ ಮೂಲಭೂತವಾದಿಗಳು ಅವರ ಹೆಸರನ್ನು ಮಾತ್ರ ಯತೇಚ್ಛವಾಗಿ ಬಳಸುವ ಮೂಲಕ ಬಸವಣ್ಣನವರ ನಾಮದ ಬಲವಷ್ಟೇ ಮುಖ್ಯವಾಗಿಸಿ ಅವರ ವಿಶೇಷ ವಿಶಿಷ್ಟ ತಾತ್ವಿಕ ಚಿಂತನೆಗಳಿಗೆ ಮನ್ನಣೆ ಇಲ್ಲದಂತೆ ಮಾಡಿರುವುದು ಈ ಕಾಲಘಟ್ಟದ ವಿಪರ್ಯಾಸ.. ನಾವು ಬಸವಣ್ಣನವರನ್ನು ಒಬ್ಬ ಆಧ್ಯಾತ್ಮ ಗುರು ಎಂದಷ್ಟೇ ಗುರುತಿಸಲು ಮಾತ್ರ ಸಾಧ್ಯವಾಗಿದೆ. ಆದರೆ, ಅವರೊಬ್ಬ ಸಮೂಹ ‌ಸಂಘಟಕರು, ಸಾಮಾಜಿಕ ಚಿಂತಕರು, ಆರ್ಥಿಕ ತಜ್ಞರು, ವೈಜ್ಞಾನಿಕ ಪ್ರಜ್ಞಾವಂತರು ಕೂಡ ಹೌದು ಎನ್ನುವುದು ಮತ್ತೆ ಮತ್ತೆ ನಾವು ಮನಗಾಣಬೇಕಾಗಿದೆ.. 12ನೇ ಶತಮಾನದಲ್ಲಿ ನಡೆದಿರುವ ವಚನಕಾರರ ಚಳವಳಿಯ ಸ್ವರೂಪವನ್ನು ಅನೇಕರು ಅನೇಕ ರೀತಿಯಲ್ಲಿ ವಿಶ್ಲೇಷಿಸುತ್ತಾರೆ. ಆದರೆ, ವಚನಕಾರರ ಕಾಲಘಟ್ಟದ ಚಳವಳಿಯ ಮೂಲ ಉದ್ದೇಶಗಳನ್ನು ನೋಡಿದಾಗ ವಿಭಿನ್ನ ಆಯಾಮಗಳು ಕಂಡು ಬರುತ್ತವೆ. ಧರ್ಮಗಳು ನಿಷ್ಕ್ರಿಯಗೊಂಡು ಎಲ್ಲೆಡೆ ಕ್ರೂರತ್ವ ಹಿಂಸೆ ತಾಂಡವಾಡುತ್ತಿತ್ತು. ರಾಜ್ಯ ಶಕ್ತಿಗಳ ಅಟ್ಟಹಾಸ, ಆರ್ಥಿಕ, ಸಾಮಾಜಿಕ ಅಸಮಾನತೆ ಹಾಗೂ ನಿರಂತರ ಶೋಷಣೆಗೆ ಒಳಗಾಗಿದ್ದ ಕಾಯಕ ಜೀವಿಗಳ ಬದುಕು ಅತ್ಯಂತ ದುರ್ಬರವಾಗಿತ್ತು. ಇಂಥ ಭಯಂಕರ ವಿಷಮ ಪರಿಸ್ಥಿತಿಯ ಕಾಲಮಾನದಲ್ಲಿ ಜನಿಸಿದ ಬಸವಣ್ಣನವರು ಧರ್ಮವನ್ನು ‌ಸ್ಥಾಪಿಸಿದರು ಎಂದು ಸ್ಪಷ್ಟವಾಗಿ ಹೇಳುತ್ತೇವೆ.. ಹೌದು, ಆದರೆ ಹನ್ನೆರಡನೇ ಶತಮಾನಕ್ಕಿಂತ ಮುಂಚೆಯೂ ಹಲವು ಧರ್ಮಗಳು ವೈದಿಕತೆಯ ಹಿಂಸೆಯಿಂದ ದುರ್ಬಲಗೊಂಡಿದ್ದವು. ವರ್ಣಾಶ್ರಮ ಪದ್ಧತಿ, ಅಸಮಾನತೆ ಹಾಗೇ ಢಾಳಾಗಿತ್ತು. ಮತ್ತೆ ಬಸವಣ್ಣ ಕೇವಲ ಧರ್ಮ ಸ್ಥಾಪನೆಗೆ ಮಾತ್ರ ಹುಟ್ಟಿದನೆಂದು, ಆತನ್ನು ಬರೀ ಧಾರ್ಮಿಕ ಚೌಕಟ್ಟಿನಲ್ಲಿಯೇ ಹಿಡಿದಿಟ್ಟು ಇಡೀ ಬಸವಾದಿ ಶರಣ ಶರಣೆಯರ ಚಳುವಳಿಯನ್ನು ಗುರುತಿಸಲು ಸಾಧ್ಯವಿಲ್ಲ. ಬಸವಣ್ಣನವರು ಧರ್ಮವನ್ನಷ್ಟೇ ಸ್ಥಾಪಿಸಲಿಲ್ಲ. ಅಂದಿನ ದುರಿತ ಕಾಲದಲ್ಲಿ ಹಲವು ಸ್ತರದ ಕಾಯಕ ಜೀವಿಗಳು ಹಲವು ಶೋಷಣೆಗೆ ಒಳಪಟ್ಟಿದ್ದರು. ಸಾಮಾಜಿಕ, ಆರ್ಥಿಕ ಹಾಗೂ ಧಾರ್ಮಿಕ ಸಮಾನತೆ ಹಕ್ಕು ಕೆಲವರಿಗೆ ಮಾತ್ರ ಇತ್ತು. ಕೆಳಸ್ತರದ ಕಾಯಕ ಜೀವಿಗಳ ಬದುಕು ಅತ್ಯಂತ ಹೀನಾಯವಾಗಿ ಅಸಹಾಯಕತೆಗೆ ಸಿಲುಕಿತ್ತು. ಇಂಥ ಜಾತಿಯತೆ, ಅಸಮಾನತೆ, ಸರ್ವಾಧಿಕಾರಿ ಧೋರಣೆ ಸಮಾಜದಿಂದ ಹೊರಬಂದು, ಸರ್ವ ಸ್ವಾತಂತ್ರ್ಯ ಸಮಾಜ ಕಟ್ಟುವ ಮಹಾದಾಸೆ ಬಸವಣ್ಣನವರಿಗೆ ಇತ್ತು. ಹೀಗಾಗಿ ಎಲ್ಲರನ್ನೂ ಒಗ್ಗೂಡಿಸಬೇಕಾದರೆ ‘ಕಾಯಕ’ ಸಿದ್ದಾಂತ ಅಸ್ತ್ರವಾಗಿತ್ತು. ಅದನ್ನು ಮೊದಲಿಗೆ ರೂಪಿಸಿದವರು ಶ್ರೇಷ್ಠ ಚಿಂತಕ ವಿಶ್ವಗುರು ಬಸವಣ್ಣನವರು.. ಬಸವಣ್ಣನವರು ಒಬ್ಬ ಸಾಮಾಜಿಕ ಹೋರಾಟಗಾರ ಎಂದು ನಾವು ಹೇಳಬೇಕಾಗಿದೆ. ಬಸವಣ್ಣನವರು ಹುಟ್ಟು ಹೋರಾಟಗಾರರು, ವರ್ಣ, ವರ್ಗ, ಲಿಂಗ ಬೇಧ ತಾರತಮ್ಯ ಹಾಗೂ ಸಾಮಾಜಿಕ ಅನ್ಯಾಯವನ್ನು ತುಂಬಾ ಹತ್ತಿರದಿಂದ ಅರಿತುಕೊಂಡು “ಏನಯ್ಯಾ ವಿಪ್ರರು ನುಡಿದಂತೆ ನಡೆಯರು ಇದೆಂತಯ್ಯಾ? ತಮಗೊಂದು ಬಟ್ಟೆ ಶಾಸ್ತ್ರಕ್ಕೊಂದು ಬಟ್ಟೆ” ಎಂದು ಚಿಕ್ಕವರಿದ್ದಾಗಲೇ ಬ್ರಾಹ್ಮಣ್ಯವನ್ನು ತ್ಯಾಜಿಸಿ ಪಕ್ಕದ ಕೂಡಲ ಸಂಗಮಕ್ಕೆ ತೆರಳಿದವರು. ವೈದಿಕ ವ್ಯವಸ್ಥೆಯಿಂದ ಶೋಷಿತರಿಗೆ ದುರ್ಬಲರಿಗೆ ಅಸಹಾಯಕರಿಗೆ ನೊಂದವರಿಗೆ ಬೆಂದವರಿಗೆ ದಲಿತರಿಗೆ ಸಾಮಾಜಿಕವಾಗಿ, ಆರ್ಥಿಕವಾಗಿ ಶೋಷಣೆಗೆ ಒಳಪಡಿಸಿ ಶಾಶ್ವತವಾಗಿ ದುರ್ಬಲರಾಗಿ ಉಳಿಯುವಂಥ ಪಾಳೆಗಾರಿಕೆ ದುಸ್ಥಿತಿ ಒಂದಾದರೆ, ವೃತ್ತಿ ಅವಲಂಬಿತ ಕಾಯಕ ಜೀವಿಗಳ ಮೇಲೆ ತೆರಿಗೆ ಸುಲಿಯುವ ರಾಜಾಶ್ರಯ ಮನೆತದವರ ದಬ್ಬಾಳಿಕೆ ಇನ್ನೊಂದು ಕಡೆ. ಸಮಾಜದ ವರ್ಣ, ವರ್ಗ ಅಸ್ಪೃಶ್ಯತೆ, ಮೇಲು ಕೀಳು ಲಿಂಗ ಬೇಧ ತಾರತಮ್ಯ ಹೋಗಲಾಡಿಸಲು ಬಸವಣ್ಣನವರು ಸಿಡಿದೇಳುತ್ತಾರೆ. ಎಲ್ಲ ಕಾಯಕ ಶರಣರು ಬೆನ್ನಿಗೆ ನಿಂತು ಜನ ಸಮೂಹ‌ವನ್ನು ಒಗ್ಗೂಡಿಸುತ್ತಾರೆ.. ಇಲ್ಲಿ ಹಲವು ಮಹತ್ವದ ಸತ್ಯ ಸಂಗತಿಗಳನ್ನು ಹೇಳಲೇಬೇಕು. ಇಡೀ ದಕ್ಷಿಣ ಭಾರತದಲ್ಲಿಯೇ ಯಾವುದೇ ಧರ್ಮ ಹುಟ್ಟು ಪಡೆದುಕೊಳ್ಳಲಿಲ್ಲ. ವೈದಿಕ, ಶೈವ, ಬೌದ್ಧ, ಜೈನ ಧರ್ಮಗಳು ದಕ್ಷಿಣ ಭಾರತದಲ್ಲಿ ವ್ಯಾಪಕವಾಗಿ ಹಬ್ಬಿದರೂ ಕೂಡ ಅವುಗಳ ಉಗಮ ಸ್ಥಾನ ಮಾತ್ರ ಉತ್ತರ ಭಾರತವಾಗಿತ್ತು. ದಕ್ಷಿಣ ಭಾರತದವರು ವಲಸೆ ಧರ್ಮಗಳನ್ನೇ ಅನುಸರಿಸಿಕೊಂಡು ಹೋಗುವ ಅಂದಿನ ಕಾಲಘಟ್ಟದಲ್ಲಿ ಮೊದಲು ಹುಟ್ಟಿದ್ದು ‘ಲಿಂಗಾಯತ ಧರ್ಮ’ ಅದನ್ನು ನಾವು ಬಸವ ಧರ್ಮ, ವಚನ ಧರ್ಮ ಅಥವಾ ಶರಣ ಧರ್ಮ ಎಂತಲೂ ಕರೆಯುತ್ತೇವೆ . ದೇಶದ ಮೊದಲ ಏಕದೇವೋಪಾಸನೆ ಧರ್ಮ ಲಿಂಗಾಯತ, ದಕ್ಷಿಣ ಭಾರತದಲ್ಲಿ ಪ್ರಥಮ ಸ್ಥಾಪಿತ ಧರ್ಮ ಹುಟ್ಟು ಪಡೆದಿದ್ದು ಕನ್ನಡ ನೆಲದಲ್ಲಿ ಎನ್ನುವುದು ಮತ್ತೊಂದು ಹೆಮ್ಮೆ. ಕನ್ನಡ ನೆಲದಲ್ಲಿ ಒಂದು ಧರ್ಮ ‌ಸ್ಥಾಪಿಸಿ ಕನ್ನಡ ಧರ್ಮ ಹಾಗೂ ಸಾಹಿತ್ಯ ಚಳುವಳಿಯನ್ನು ವಿಶ್ವ ಮನ್ನಣೆಗೆ ಗುರುತಿಸಿ ಕನ್ನಡದ ಅಸ್ಮಿತೆಯನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸಿದ ಶ್ರೇಯಸ್ಸು 12ನೇ ಶತಮಾನದ ವಚನಕಾರರಿಗೆ ಸಲ್ಲುತ್ತದೆ. ರಾಜ್ಯ ಶಕ್ತಿಗಳ ಕೌರ್ಯತೆ ವಿರುದ್ಧ ಸಿಡಿದೆದ್ದು ಚಳವಳಿ ರೂಪಿಸುವುದು ಅಷ್ಟು ಸಾಮಾನ್ಯ ಸಂಗತಿ ಆಗಿರಲಿಲ್ಲ. ಆದರೆ ಜಾತಿ – ವರ್ಗ – ವರ್ಣ – ಲಿಂಗಬೇಧವಿಲ್ಲದೇ ಶೋಷಣೆ ರಹಿತವಾದ ಸಮತೆಯ ಸಮಾಜ ಕಟ್ಟುವುದು ಬಸವಣ್ಣನವರಿಗೆ ಅಗತ್ಯವಾಗಿತ್ತು. ಹೀಗಾಗಿ ಶ್ರಮ ಜೀವಿಗಳನ್ನು ಸಂಘಟಿಸಿ ಶರಣ ಚಳವಳಿ ಕಟ್ಪುವ ಮೂಲಕ ಮೊದಲ ಸಮೂಹ ನಾಯಕತ್ವದ ಪ್ರಜ್ಞೆ ಮೂಡಿಸಿದರು. ಹಲವು ಸಮುದಾಯಗಳ ಹಿನ್ನೆಲೆಯಿಂದ ಬಂದ ಕಾಯಕ ಜೀವಿಗಳನ್ನು ಶರಣ ಚಳವಳಿಯಲ್ಲಿ ಒಳಗೊಂಡಿದ್ದರು. ಚಳವಳಿಯ ಮೂಲ ‌ಸಂವಿಧಾನ ರಚನೆಯ ಸಿದ್ಧತೆಗಳಿಗೆ ‘ಅನುಭವ ಮಂಟಪ’ ರೂಪುಗೊಂಡಿತ್ತು. ಜನಪರ ಚಿಂತನೆಯ ಬ‌ಸವಣ್ಣನವರ ಸಾಮಾಜಿಕ ಕಲ್ಯಾಣ ಕ್ರಾಂತಿಯು ದೇಶ ವಿದೇಶಗಳಿಗೂ ವ್ಯಾಪಿಸಿ ಅನೇಕ ರಾಜರನ್ನು ಆಕರ್ಷಿಸುವಂತೆ ಮಾಡಿತ್ತು. ಹೀಗಾಗಿ ಅನೇಕ ಶರಣರು ತಮ್ಮ ರಾಜ ವೈಭೋಗ, ಸಂಪತ್ತನ್ನು ತೊರೆದು ಕಲ್ಯಾಣ ರಾಜ್ಯದ ಕಡೆ ಪ್ರವೇಶಿಸಿದರು. ಕಾಯಕ ಮಾಡುವ ಮೂಲಕ ಬಸವಣ್ಣನವರ ಸಮಾನತೆ ಸಮಾಜ ಪರಿಕಲ್ಪನೆಗೆ ಬೆನ್ನೆಲುಬಾಗಿ ನಿಂತು ಚಳವಳಿ ಮುನ್ನಡೆಸಿದರು. ಬಸವಣ್ಣನವರು ಕಟ್ಟಿರುವ ಧರ್ಮದಲ್ಲಿ ವರ್ಗ, ವರ್ಣ, ಜಾತಿ, ಕುಲ, ಲಿಂಗಬೇಧಕ್ಕೆ ಅವಕಾಶ ಇರಲಿಲ್ಲ. ಬಸವಣ್ಣನವರು “ಇವನಾರವ ಎನ್ನದೆ ಇವನಮ್ಮವ ಇವನಮ್ಮವ” ಎನ್ನುವ ತಾರತಮ್ಯ ರಹಿತವಾದ ಸಮಾಜ ಕಟ್ಟಲು ಬಯಸಿದರು. ಅದಕ್ಕಾಗಿ ಎಲ್ಲರನ್ನೂ ‘ತನ್ನ ಮನೆಯ ಮಗನೆಂದು’ ಸ್ವೀಕರಿಸಿದರು. ಬಸವಣ್ಣನವರು ಕೇವಲ ಮನುಷ್ಯರಿಗೆ ಅಷ್ಟೇ ಲೇಸು ಬಯಸಲಿಲ್ಲ. ಜಗತ್ತಿನ ‘ಸಕಲ ಜೀವಾತ್ಮರಿಗೂ ಲೇಸು ಬಯಸು’ ಎನ್ನುವ ಜೀವ ಪರವಾದ ನಿಲುವು ಮಂಡಿಸಿದರು. ಬದುಕಿಗೆ ಧರ್ಮ ಬೇಕು, ಆದರೆ, ಧರ್ಮವೇ ಬದುಕಾಗಬಾರದು. ದಯ ಇಲ್ಲದಿರುವ ಧರ್ಮವನ್ನು ನಿರಾಕರಿಸಿ ‘ದಯವೇ ಧರ್ಮದ ಮೂಲ’ ಎಂದು ಮಾನವೀಯತೆ ಧರ್ಮ ಅನುಷ್ಠಾನಗೊಳಿಸಿದರು. ಮಾನವೀಯ ಮೌಲ್ಯಗಳ ಕುರಿತು ಧ್ವನಿಯೆತ್ತಿದ ಬಸವಣ್ಣನವರು ನಿಜಕ್ಕೂ ‘ಮಾನವತಾವಾದಿ’ಯಾಗಿ ಕಾಣುತ್ತಾರೆ. ಹಾಗೆಂದು, ಬಸವಣ್ಣನವರು ಧರ್ಮ – ದೇವರ ವಿರೋಧಿಗಳು ಅಲ್ಲ, ದೇವರನ್ನು ಅವರು ದ್ವೇಷ ಮಾಡಲಿಲ್ಲ, ದೇವರ ಅಸ್ತಿತ್ವವನ್ನು ಅಲ್ಲಗಳೆಯದ ಬಸವಣ್ಣನವರು “ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ” ಎನ್ನುವ ಮೂಲಕ ಸ್ಥಾವರ ಪೂಜೆಯನ್ನು ನಿರಾಕರಿಸಿದರು. ‘ಎನ್ನ ದೇಹವೇ ದೇವಾಲಯ’ ಎಂದು ನುಡಿದು ದೇವರನ್ನು ‘ದೇವ ಮಂದಿರದಿಂದ ದೇಹ ಮಂದಿರದೊಳಗೆ’ ನೆಲೆಸುವಂತೆ ಮಾಡಿದರು. ಧರ್ಮದ ಉನ್ಮಾದದಿಂದ ಮನುಷ್ಯತ್ವವನ್ನು ಕ್ರೂರವಾಗಿ ತುಳಿಯುವುದು, ಸಾಮಾಜಿಕ ಶೋಷಣೆಗೆ ಸಮ್ಮತಿ ಇಲ್ಲದ ಧರ್ಮ ಸಿದ್ಧಾಂತವನ್ನು ಬಲವಾಗಿ ವಿರೋಧಿಸಿದರು. ಶೋಷಣೆ ಮುಕ್ತ ಸಮಾಜ ರೂಪಿಸಲು ಶರಣ ಸಮೂಹ ಒಕ್ಕೂಟ ಅವಶ್ಯ, ಈ ನಿಟ್ಟಿನಲ್ಲಿ ಸಮಾನತೆ ಮಾರ್ಗವೇ ಸೂಕ್ತ ಎಂದು ಎಲ್ಲರನ್ನೂ ಜಾಗೃತಗೊಳಿಸಿದರು. ಇಡೀ ಶರಣ ಸಂಕುಲ ಒಗ್ಗೂಡಿತು. ಶೋಷಿತರು ನಿರ್ಗತಿಕರು ತಿರಸ್ಕ್ರಕರು ಬಡವರು ದೀನ, ದಲಿತರು, ಮಹಿಳೆಯರು ಸೇರಿದಂತೆ ಸಮಾಜದ ಎಲ್ಲ ವರ್ಗದ ‌ಶರಣ ಸಂಕುಲವನ್ನು ಕಲ್ಯಾಣ ಕಡೆ ಧಾವಿಸುವಂತೆ ಮಾಡಿದ್ದು ಬಸವಣ್ಣನವರ ಮೇರು ವ್ಯಕ್ತಿತ್ವವನ್ನು ಎತ್ತಿ ತೋರಿಸುತ್ತದೆ. ಸಾಮಾಜಿಕ ಅನುಭಾವ ಚಿಂತನೆಗಳನ್ನು ಚರ್ಚಿಸುವ ‘ಅನುಭವ ಮಂಟಪ’ ಎಲ್ಲಾ ವಿಷಯಗಳನ್ನು ಮುಕ್ತವಾಗಿ ಚರ್ಚಿಸುವ ‘ಅರಿವಿನ ಮಹಾಮನೆ’ಯಾಗಿತ್ತು. ಹಲವು ಕಾಯಕ ಸ್ತರಗಳಿಂದ ಬಂದ ಶರಣರು ತಮ್ಮ ವೃತ್ತಿ ಅನುಭವದ ಚಿಂತನೆಗಳನ್ನು ಅನುಭಾವ ರೂಪದಲ್ಲಿ ಅಭಿವ್ಯಕ್ತಿಗೊಳಿಸುವ ವಾಕ್ ಸ್ವಾತಂತ್ರ್ಯ ಅಂದೇ ಪಡೆದುಕೊಂಡಿದ್ದರು. ಬದುಕಿನ ಅನುಭವದ ಚಿಂತನೆಗಳು (ಅನುಭಾವ) ವಚನಗಳಾಗಿ ಮಾರ್ಪಟ್ಟಿವೆ. ಶರಣ ಸಾಹಿತ್ಯದ ವಚನಗಳು ಜೀವನ ಮೌಲ್ಯಗಳಾಗಿ ರೂಪಾಂತರ ಪಡೆದು ಪ್ರಜ್ಞಾವಂತ ಸಮಾಜಕ್ಕೆ ಆದರ್ಶವಾಗಿವೆ. ರಾಜ ವಿರೋಧಿ ಹಿನ್ನೆಲೆಯ ವಚನಕಾರರ ಚಳುವಳಿ ನಂತರದ ದಿನಗಳಲ್ಲಿ ಕ್ರಿಯಾತ್ಮಕವಾಗಿ ತೀವ್ರ‌ ಸ್ವರೂಪ ಪಡೆಯಿತು. ಇದೆಲ್ಲವೂ ಅರಿತುಕೊಂಡ ಬಿಜ್ಜಳನು ಮತ್ತು ವೈದಿಕರು ವಚನಕಾರರ ಚಳವಳಿಯನ್ನು ಹತ್ತಿಕ್ಕಲು ನಿರ್ಧರಿಸಿದರು. ಅಂತರ್ಜಾತಿ ವಿವಾಹ, ವೈದಿಕ ಆಚರಣೆ ನಿರಾಕರಣೆ ಸೇರಿದಂತೆ ಅನೇಕ ವೈಚಾರಿಕ ಹಾಗೂ ವೈಜ್ಞಾನಿಕ ನೆಲೆಗಟ್ಟಿನಲ್ಲಿ ರೂಪುಗೊಂಡ ಕ್ರಾಂತಿಕಾರಿ ಕಾರ್ಯಗಳು ಶರಣರಿಗೆ ಮುಳುವಾಗಿ ಪರಿಣಾಮ ಬೀರಿದವು. ಆದರೆ ಧೃತಿಗೆಡದ ಬಸವಾದಿ ಶರಣ ಶರಣೆಯರು “ನ್ಯಾಯ ನಿಷ್ಠುರಿ, ದಾಕ್ಷಿಣ್ಯಪರನು ನಾನಲ್ಲ; ಲೋಕ ವಿರೋಧಿ ಶರಣನಾರಿಗಂಜುವನಲ್ಲ” ಎಂದು ಕಾಯಕ ಚಳವಳಿ ಮುನ್ನಡೆಸಿ “ನಾಳೆ ಬಪ್ಪುದು ನಮಗಿಂದೆ ಬರಲಿ ಇಂದು ಬಪ್ಪುವುದು ನಮಗೀಗಲೇ ಬರಲಿ ಇದಕಾರಂಜುವರು ಇದಕಾರಳುಕುವರು” ಎನ್ನುವ ಎದೆಗಾರಿಕೆಯಿಂದ ತಾತ್ವಿಕ ನೆಲೆಗಟ್ಟಿನಲ್ಲಿ ಖಚಿತ ನಿಲುವು ವ್ಯಕ್ತಪಡಿಸಿದರು. ನಿಜಕ್ಕೂ ಹನ್ನೆರಡನೇ ಶತಮಾನವು ಕರ್ನಾಟಕ ಇತಿಹಾಸದ ‘ಸುವರ್ಣ ಕಾಲ’ ಎಂದು ಹೇಳಿದರೂ ಅತಿಶಯೋಕ್ತಿಯಲ್ಲ. ಪಾಳೆಗಾರಿಕೆ ವ್ಯವಸ್ಥೆಯಲ್ಲಿ ದುಡಿಯುವ ಕಾಯಕ ವರ್ಗ ಶೋಷಣೆಗೆ ಒಳಪಟ್ಟ ಸಂದರ್ಭದಲ್ಲಿ ಶರಣ ಸಮೂಹವೊಂದು ಬಂಡಾಯ ಧೋರಣೆ ರೂಪತಾಳಿ ‌ಸಾಹಿತ್ಯಿಕ ಅಭಿವ್ಯಕ್ತಿ ಜೊತೆಯಲ್ಲಿ ವಚನ ಸಾಹಿತ್ಯದ ಬೆಳಕು ಮೂಡಿಸಿದ್ದು ಎಂದಿಗೂ ಸ್ಮರಣೆಯಾದದ್ದು. ಅಂದು ಪಾಳೆಗಾರಿಕೆಯಿಂದ ನಲುಗುತ್ತಿದ್ದ ಸಮಾಜ ಇಂದು ಬಂಡವಾಳಶಾಹಿಗಳಿಂದ ನಲುಗುತ್ತಿದೆ. ಎಲ್ಲವೂ ಜಾತಿ – ಧರ್ಮದ ಚೌಕಟ್ಟಿನಲ್ಲಿ ಮುನ್ನಡೆಯುವ ಪ್ರಸ್ತುತ ಸಮಾಜಕ್ಕೆ ಬಸವಣ್ಣನವರ ವೈಚಾರಿಕ, ನೈತಿಕ, ಸಾಮಾಜಿಕ ಮೌಲ್ಯಗಳು ಎಂದಿಗಿಂತಲೂ ಇಂದು ಮತ್ತು ಮುಂದೆಯೂ ತುಂಬಾ ಅವಶ್ಯವಾಗಿವೆ. ಬಸವಣ್ಣನವರ ಮೂಲ ಚಿಂತನೆಗಳನ್ನು ಮರೆಮಾಚಲು ಹೊರಟ ಸಂಪ್ರದಾಯವಾದಿಗಳು ಬದಲಾದ ಕಾಲಘಟ್ಟದಲ್ಲಿ ಬಸವಣ್ಣನವರನ್ನು ವೈಭವೀಕರಣಗೊಳಿಸಿದರು. ಬಸವಣ್ಣನವರನ್ನು ನಾವು ದೈವತ್ವದ ರೂಪಕ್ಕೆ ಸೀಮಿತಗೊಳಿಸಿದರೆ ಬಸವಣ್ಣ ನಮಗೆ ವೈಚಾರಿಕ, ವೈಜ್ಞಾನಿಕವಾಗಿ ಬಹು ದೂರವಾಗುತ್ತಾರೆ. ಮನುಕುಲದ ಒಳತಿಗಾಗಿ ವಿಶ್ವಮಾನವ ಸಂದೇಶದ ರಹದಾರಿ ತೋರಿದ ಬಸವಣ್ಣ ಕೇವಲ ಒಂದು ಸಮುದಾಯಕ್ಕೆ ಸೀಮಿತರಲ್ಲ. ಪ್ರಸ್ತುತವಾಗಿ ಬಸವಣ್ಣನವರಿಗೆ ತಾತ್ವಿಕ ನೆಲೆಯಲ್ಲಿ ಒಪ್ಪಿಕೊಳ್ಳುವ ಅನಿವಾರ್ಯತೆ ಎಲ್ಲರಿಗೂ ಇದೆ.. ಬಸವಣ್ಣನವರ ಅರಿವು ಮತ್ತು ಸಿದ್ಧಾಂತ ಎಲ್ಲರಿಗೂ ಎಚ್ಚರಗೊಳಿಸಬಲ್ಲದು. ಧರ್ಮದ ಭಾವೋದ್ರೇಕಕ್ಕೆ ಒಳಗಾಗಿರುವರು ಸಮಾನತೆ, ‌ಸೌಹಾರ್ದತೆಯ ಭಾವನೆಗಳನ್ನು ಮೈಗೂಡಿಸಿಕೊಂಡು ಬದುಕು ರೂಪಿಸಿಕೊಳ್ಳಬೇಕಾಗಿದೆ. ಬಸವಣ್ಣನವರು ಭಕ್ತಿಗಿಂತ ಶರಣತತ್ವಕ್ಕೆ ಹೆಚ್ಚಿನ ಮಹತ್ವ ನೀಡಿದರು. ಹಾಗಾಗಿ ಬಸವಣ್ಣನವರ ಪ್ರಖರವಾದ ಚಿಂತನೆಗಳು ಸಾರ್ವಕಾಲಿಕ ಸತ್ಯವಾಗಿ ಉಳಿಯಬೇಕಾದರೆ ಎಲ್ಲರೂ ‘ಕಾಯಕವೇ ಕೈಲಾಸ’ ತತ್ವವನ್ನು ಮನ್ನೆಲೆಗೆ ತರಬೇಕಾಗಿದೆ. ಅಂದಾಗ ಮಾತ್ರ ನಮ್ಮ ವಿಶ್ವಗುರು ಬಸವಣ್ಣನವರ ಬಯಸಿದ ‘ಕಲ್ಯಾಣ ರಾಜ್ಯ’ ರೂಪುಗೊಳ್ಳಲು ಸಾಧ್ಯವಿದೆ. ಕೃಪೆ: ಸಾಮಾಜಿಕ ಜಾಲತಾಣ.. #ವಚನಗಳು #ಬಸವಾದಿ ಶರಣ ಶರಣೆಯರು #//🌳ವಚನ ಸಾಹಿತ್ಯ 🌳// #ಬಸವಣ್ಣನವರ ವಚನಗಳು #ಶರಣ ಸಾಹಿತ್ಯ