ಕೃಷ್ಣೆ 🦚💙
496 views
1 days ago
#ದಿನಕ್ಕೊಂದು ಕಥೆ #🔱 ಭಕ್ತಿ ಲೋಕ ಶಿವ ಶಕ್ತಿಯರ ‘ಗೌರಿ’ ತವರೂರು ಗುಮ್ಮಳಾಪುರ:- ಬೆಂಗಳೂರಿನ ಹೊರಬಾಗದ ಆನೇಕಲ್ ತಾಲೂಕಿನ ಗಡಿ ಭಾಗದ ಕೃಷ್ಣಗಿರಿ ಜಿಲ್ಲೆಯ ಸಮೀಪ ಗುಮ್ಮಳಾಪುರ ಎಂಬ ಗ್ರಾಮವಿದೆ. ಈ ಗ್ರಾಮವನ್ನು ಗೌರಿ ದೇವಿಯ ತವರೂರು ಎನ್ನುತ್ತಾರೆ. ಒಮ್ಮೆ ಶಿವನು ಗೌರಿಯನ್ನು ಕರೆದು ಕೊಂಡು ಹೋಗಲು ಬಂದಿದ್ದ ಎಂಬುದಕ್ಕಾಗಿ ಇದನ್ನು ‘ಕೈಲಾಸ ಪುರಿ’ ‘ ಭೂ ಕೈಲಾಸ’ ಅಂತಲೂ ಕರೆಯುತ್ತಾರೆ. ಇಲ್ಲಿ ಹಚ್ಚ ಹಸುರಿನಿಂದ ಕಂಗೊಳಿಸುವ ಪ್ರಕೃತಿ ಸಂಪತ್ತು ಹೇರಳವಾಗಿದೆ. ಈ ಗುಮ್ಲಾ ಪುರದಲ್ಲಿ ಪುರಾತನ ಕಾಲದಿಂದ ಪ್ರಸಿದ್ಧವಾದ ‘ಗೌರಿ ದೇವಿಯ’ ದೇವಸ್ಥಾನವಿದೆ. ವಿಶೇಷ ಎಂದರೆ ಎಲ್ಲಾ ದೇವಾಲಯಗಳಂತೆ ನಿತ್ಯ ಪೂಜೆ ನಡೆಯುವುದಿಲ್ಲ. ವರ್ಷದಲ್ಲಿ ಒಂದು ತಿಂಗಳು ಮಾತ್ರ ದೇವಾಲಯದ ಬಾಗಿಲು ತೆಗೆದಿದ್ದು ಭರಪೂರ ಭಕ್ತರನ್ನು ಆಕರ್ಷಿಸುವ ದೇವಾಲಯ ಆಗಿದೆ.‌ ಪ್ರತಿ ವರ್ಷ ಭಾದ್ರಪದ ಮಾಸದಲ್ಲಿ ಬಾಗಿಲು ತೆಗೆದು ತದಿಗೆ ದಿನ ಬರುವ ಗೌರಿ ಗಣೇಶ ಹಬ್ಬದಲ್ಲಿ,‌ ಮಣ್ಣಿನಿಂದ ಗೌರಿ ಹಾಗೂ ಗಣೇಶ ಮೂರ್ತಿಯನ್ನು ಮಾಡಿ ಪ್ರತಿಷ್ಠಾಪಿಸಿ ಒಂದು ತಿಂಗಳು ತವರು ಮನೆಯ ಆತಿಥ್ಯ ಎಂದು ಗೌರಿಗೆ ವಿಶೇಷ ಪೂಜೆ ನೈವೇದ್ಯ ಮಾಡುತ್ತಾರೆ. ಒಂದು ತಿಂಗಳು ಅಂದರೆ, ಮಹಾಲಯ ಅಮಾವಾಸ್ಯೆ ನಂತರ ಬರುವ ಗುರುವಾರದ ತನಕ ಪೂಜೆ- ಭಜನೆ- ವಿಶೇಷ ಅಲಂಕಾರಗಳನ್ನು ಮಾಡಿ, ಜಾತ್ರೆ ನಡೆಸಿ ಗೌರಮ್ಮನಿಗೆ ಮಡಿಲು ತುಂಬಿ ತವರು ಮನೆಯಿಂದ‌ ಗಂಡನ ಮನೆ ಕೈಲಾಸಕ್ಕೆ ಕಳುಹಿಸುವ ಕೊಡುವ ಆಚರಣೆ ನಡೆಸುತ್ತಾರೆ. ಪ್ರತಿ ವರ್ಷ ತವರೂರಿಗೆ ಬಂದ ಗೌರಿ ಒಂದು ತಿಂಗಳು ತವರಿನ ಲ್ಲಿದ್ದು ಉಳಿದ 11 ತಿಂಗಳು ಗಂಡನ ಮನೆ ಕೈಲಾಸದಲ್ಲಿ ಇರುತ್ತಾಳೆ ಎಂಬ ಪ್ರತೀತಿ ಇದೆ. ಈ ಗ್ರಾಮದಲ್ಲಿ 770 ಶಿವಶರಣರು ವಾಸವಾಗಿದ್ದರು. ಇಲ್ಲಿನ ಗುರುಕುಲದಲ್ಲಿ ಊರ ಮಕ್ಕಳು, ನೆರೆಹೊರೆ ಗ್ರಾಮ ಹಳ್ಳಿಗಳ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದ ರು. ಪ್ರತಿ ವರ್ಷ ನಡೆವ ಜಾತ್ರೆಗೆ ಊರಿನ ಎಲ್ಲಾ ಮನೆಯ ಹೆಣ್ಣು ಮಕ್ಕಳು ಬರುವ ಪದ್ಧತಿ ಇತ್ತು. ಆ ವರ್ಷವು ಗೌರಿ ಹಬ್ಬ ಬಂದಿತು ಗುರುಕುಲದಲ್ಲಿ ಓದುತ್ತಿದ್ದ ಗಂಡು ಮಕ್ಕಳು ಗೌರಿ ಹಬ್ಬ ಬಂದ ಕೂಡಲೇ ರಜಾ ತೆಗೆದುಕೊಳ್ಳುತ್ತಿದ್ದರು. ಶಿವಶರಣರ ಒಂದು ಕುಟುಂಬದಲ್ಲಿ ಹೆಣ್ಣು ಮಕ್ಕಳು ಇರಲಿಲ್ಲ. ಆ ಮನೆಯ ಹುಡುಗ ಗುರುಕುಲಕ್ಕೆ ಬರುತ್ತಿದ್ದ. ಎಲ್ಲಾ ಹುಡುಗರು ರಜೆ ತೆಗೆದುಕೊಂಡಿದ್ದು ನೋಡಿ ಅವನು ಕೇಳಿದ ಹಬ್ಬಕ್ಕೆ ನನಗೂ ರಜಾ ಬೇಕು ಎಂದು. ಯಾಕೋ ನಿನಗೆ ರಜಾ, ಅಕ್ಕ ಇಲ್ಲ- ತಂಗಿ ಇಲ್ಲ ನಿಮ್ಮ ಮನೆಯಲ್ಲಿ ಹಬ್ಬವೇ ಇಲ್ಲ. ರಜ ಏಕೆ ಎಂದ ಗುರುಗಳ ಮಾತಿಗೆ, ಉಳಿದ ಹುಡುಗರೆಲ್ಲ ಜೋರಾಗಿ ನಕ್ಕರು. ಇದು ಆ ಹುಡುಗ ಅವಮಾನ ಎಂದು ಭಾವಿಸಿದ. ಮನೆಗೆ ಬಂದು ತಾಯಿ ಹತ್ತಿರ ಅಮ್ಮ ನನಗೆ ಈಗಲೇ ಅಕ್ಕ ಬೇಕು ತಂದು ಕೊಡು ಎಂದು ಹಠ ಮಾಡಿದ. ಎಷ್ಟೇ ಸಮಾಧಾನ ಮಾಡಿದರು ಕೇಳಲಿಲ್ಲ. ಇಲ್ಲದ ಅಕ್ಕನನ್ನು ನಿನಗೆ ಎಲ್ಲಿಂದ ತಂದುಕೊಡಲಿ ಎಂದ ತಾಯಿಗೆ,‌ ಹಾಗಾದರೆ ನಾನೇ ಅಕ್ಕನನ್ನು ಕರೆತರುವೆ ನನಗೆ ಬುತ್ತಿ ಕಟ್ಟಿ ಕೊಡು ಎಂದ. ಸದ್ಯ ಹಠ ನಿಂತರೆ ಸಾಕೆಂದು ತಾಯಿ ಬುತ್ತಿ ಕಟ್ಟಿ ಕೊಟ್ಟಳು. ಹುಡುಗ ಬುತ್ತಿ ಕಟ್ಟಿಕೊಂಡು ಊರು -ಕೇರಿ- ಕಾಡು - ಮೇಡು ಎಲ್ಲಾ ಕಡೆ ಎಲ್ಲಾ ಕಡೆ ಅಕ್ಕ ಬಾ, ಎಲ್ಲಿರುವೆ ಅಕ್ಕ ಮನೆಗೆ ಬಾ ಎಂದು ಕೂಗುತ್ತಿದ್ದ, ಎಲ್ಲಿ ಹುಡುಕಿದರೂ ಅಕ್ಕ ಸಿಗಲಿಲ್ಲ. ಬೇಸತ್ತ ಹುಡುಗ ಎಷ್ಟು ಕರೆದರೂ ಅಕ್ಕಾ ನೀನು ಬರುತ್ತಿಲ್ಲ ನಿನ್ನನ್ನು ಕರೆದುಕೊಂಡು ಬರುವುದಾಗಿ ಅಮ್ಮನಿಗೆ ಹೇಳಿ ಬಂದಿದ್ದೆ, ಈಗ ಮನೆಗೆ ಹೋಗಿ ಏನು ಹೇಳಲಿ? ನಾನು ಮನೆಗೆ ಹೋಗುವುದಿಲ್ಲ ಈ ಬೆಟ್ಟದಿಂದ ಹಾರಿ ಪ್ರಾಣ ಬಿಡುವೆ ಎಂದು ಹಾರಲು ಹೊರಟಿದ್ದ. ಅದು ಮುಸ್ಸಂಜೆ ಸಮಯ. ಶಿವ ಪಾರ್ವತಿಯರು ಆಕಾಶ ಮಾರ್ಗದಲ್ಲಿ ಸಂಚರಿ ಸುತ್ತಾ ಭೂಲೋಕದ ಸ್ಥಿತಿಗತಿಗಳನ್ನು ವೀಕ್ಷಿಸುತ್ತಿದ್ದರು.‌ ಹಾಗೆ ಹೋಗುತ್ತಿದ್ದಾಗ “ಅಕ್ಕಾ ಬಾ, ಅಕ್ಕ ಎಲ್ಲಿದ್ದರೂ ಬಾ, ನೀನು ಬರದಿದ್ದರೆ ನಾನು ಬೆಟ್ಟದಿಂದ ಹಾರು ತ್ತೇನೆ” ಎಂಬ ಕೂಗು ಕೇಳಿ ಪಾರ್ವತಿಯ ಮಾತೃ ಹೃದಯ ಕರಗಿತು, ಆಕೆ ಶಿವನಿಗೆ ಹೇಳಿದಳು. ಯಾರೋ ಬಾಲಕ ನನ್ನನ್ನು ಕೂಗುತ್ತಿದ್ದಾನೆ ನೋಡಿ ಬರುತ್ತೇನೆ ಎಂದಳು. ಜಗತ್ತಿನ ತಂದೆ ಯಾದ ಶಿವನು ಅನುಮತಿಸುತ್ತಾನೆ. ಪಾರ್ವತಿ ಕೂಗು ಬಂದತ್ತ ಬಂದಳು, ನೋಡುತ್ತಾಳೆ, “ಅಕ್ಕಾ ಇವತ್ತು ನೀನು ಬರದಿದ್ದರೆ ನಾನು ಬೆಟ್ಟದ ಕೆಳಗೆ ಬೀಳುವೆ ಎಂದು ಕೂಗುತ್ತಾ ಬಾಲಕ ಹಾರಿದ ಸಮಯಕ್ಕೆ ಬಂದ ಪಾರ್ವತಿ ತನ್ನ ಸೆರಗನ್ನು ಹಾಸಿ ಬಾಲಕನನ್ನು ಹಿಡಿದುಕೊಂಡಳು. ಹುಡುಗನಿಗೆ ಏಕೆ ಹಾರಲು ಹೊರಟಿದ್ದೆ ಎಂದು ಗೌರಿ ಕೇಳಿದಾಗ, ನನಗೆ ಅಕ್ಕ -ತಂಗಿ ಇಲ್ಲ .ನಮ್ಮೂರಿ ನಾ ಜಾತ್ರೆಗೆ ಎಲ್ಲರ ಮನೆಯಲ್ಲೂ ಅಕ್ಕ-ತಂಗಿಯರು ಬರುತ್ತಾರೆ. ಆದರೆ ನಮ್ಮ ಮನೆಯಲ್ಲಿ ಹಬ್ಬ ಇಲ್ಲ ಎಂದವನೇ, ‌ಅಕ್ಕ ಹೇಗೋ ನೀನು ಬಂದೆಯಲ್ಲ ಈ ವರ್ಷ ಎಲ್ಲರ ಮನೆಯಂತೆ ನಾವು ಹಬ್ಬ ಮಾಡೋಣ ಬಾ ಅಕ್ಕ ನನಗೆ ಅಕ್ಕ ಸಿಕ್ಕೇಬಿಟ್ಟಳು ಎಂದು ಸಂತೋಷದಿಂದ ಕುಣಿಯುತ್ತಾ ,ಬಾ ಅಕ್ಕ ಮನೆಗೆ ಹೋಗೋಣ ಅಮ್ಮ ಕಾಯುತ್ತಿದ್ದಾಳೆ ಎಂದು ಅಕ್ಕನನ್ನು ಕರೆದುಕೊಂಡು ಮನೆಗೆ ಬಂದ. ಅಕ್ಕ ಪಾರ್ವತಿ ಮನೆಗೆ ಬಂದು ಹೊಸಿಲು ದಾಟುತ್ತಿದ್ದಂತೆ. ಮನೆಯಲ್ಲಿ ಸಂಭ್ರಮ ವೈಭವ ತುಂಬಿತು. ಅಕ್ಕನ ಜೊತೆ ಜಾತ್ರೆಯಲ್ಲಿ ಓಡಾಡಿದ ಹುಡುಗನ ಸಂತೋಷಕ್ಕೆ ಪಾರವೇ ಇಲ್ಲ. ಮನೆಗೆ ಬಂದ ಗೌರಿಯನ್ನು ದೇವರು ಕೊಟ್ಟ ಮಗಳು ಎಂದೇ ಉಪಚರಿಸುತ್ತಿದ್ದರು. (ಕೈಲಾಸದ ಶಿವನ ಪತ್ನಿ ಗೌರಿ ಬರುವುದು ಎಂದರೆ ಸಾಮಾನ್ಯ ವಲ್ಲ. ಆಕೆ ಬರುವಾಗ 101 ದೇವತೆಗಳು ಹಾಗೆ ಕೆರೆ,‌ ಕುಂಟೆ, ಬಾವಿ, ಶಿವಲಿಂಗ, ಬಿಲ್ವಪತ್ರೆ ಮರ,‌ (ಎಲ್ಲಾ 101 ) ಗಳು ಜೊತೆಯಲ್ಲಿ ಬಂದು ನೆಲೆಸಿದರು ಎಂಬ ಪ್ರತೀತಿ ಇದೆ. ಈಗಲೂ ಇದೆ ಎನ್ನುತ್ತಾರೆ) ಗೌರಿ ದೇವಿ ಊರಿನ ಕೆರೆ ದಡದ ಮೇಲೆ ಕುಳಿತಿದ್ದಳು ಶಿವಶರಣೆಯರು ಹೋಗಿ ಆರತಿ ಮಾಡಿ ಆಕೆಯನ್ನು ಕರೆ ತಂದು ದೇವಾಲಯದಲ್ಲಿ ಪ್ರತಿಷ್ಠಾಪನೆ ಮಾಡಿದರು ಎಂಬ ಮಾತಿದೆ. ತವರಿನ ಪ್ರೀತಿಯ ಉಪಚಾರದಲ್ಲಿ ಮೈಮರೆತ ಗೌರಿಗೆ ಒಂದು ತಿಂಗಳು ಕಳೆದದ್ದು ತಿಳಿಯಲಿಲ್ಲ. ಅದಕ್ಕಾಗಿ ಇಲ್ಲಿನ ಜನರು “ಉಂಡ ಗೌರಮ್ಮ ಹರಸುತ್ತಾಳೆ ನಮ್ಮನ್ನು” ಎನ್ನುತ್ತಾರೆ. ಈ ಕಥೆಯನ್ನು ಬರಹ ರೂಪಕ್ಕೆ ತಂದವರು — ಆಶಾ ನಾಗಭೂಷಣ. ತವರಿಗೆ ಹೋದ ಗೌರಿ ಒಂದು ತಿಂಗಳಾಯಿತು ಇನ್ನು ಬಂದಿಲ್ಲ ಎಂದು ಶಿವ ಯೋಚಿಸಿದ. ನಂತರ ದೇವಿಯನ್ನು ಕರೆ ತರಲು ‘ನಂದಿ’ಯನ್ನು ಕಳಿಸುತ್ತಾನೆ. ನಂದಿ ಬಂದಿದ್ದು ಸೋಮವಾರ.‌ ಆ ದಿನ ಬಸವಣ್ಣನ ಜಾತ್ರೆ ಮಾಡಿ, ಕೆಂಡೋತ್ಸವ ಮಾಡುತ್ತಾರೆ. ನಂದಿ ಸಂತೋಷದಿಂದ ಒಂದು ತಿಂಗಳು ಇದ್ದ ಎನ್ನುತ್ತಾರೆ. ಪಾರ್ವತಿ ಇನ್ನೂ ಬರದೇ ಇದ್ದ ಕಾರಣ, ವೀರಭದ್ರನನ್ನು ಕಳಿಸುತ್ತಾನೆ. ಮಂಗಳವಾರ ಬೆಳಗ್ಗೆ ಕೆರೆ ದಂಡೆಯಲ್ಲಿ ಕುಳಿತ ವೀರಭದ್ರನನ್ನು ನೋಡಿದ ಹುಡುಗರು ಹೋಗಿ ಕರೆತರು ವಾಗ ಹೆಜ್ಜೆ ಹೆಜ್ಜೆ ಗೂ ತೆಂಗಿನಕಾಯಿ ಒಡೆಯುತ್ತಾರೆ. ಆತನೀಗೂ ಕೆಂಡೋತ್ಸವ ಸೇವೆ ಮಾಡಿಸಿದಾಗ ವೀರಭದ್ರ ಕೋಪ ಬಿಟ್ಟು ಸದ್ದಿಲ್ಲದೆ ಅಲ್ಲೇ ಕುಳಿತು ಬಿಡು ತ್ತಾನೆ. ಒಂದು ಬುಧವಾರ ದೇವತೆಗಳೆಲ್ಲ ಸಭೆ ಸೇರಿ ಗೌರಿಯನ್ನು ಕರೆತರಲು ಪಂಚಾಯಿತಿ ನಡೆಸಿ ಭೂಲೋಕಕ್ಕೆ ಬಂದರು. ಆಗ ಒಂದು ತಿಂಗಳಾಗಿತ್ತು. ಗೌರಿಯನ್ನು ಗಂಡನ ಮನೆಗೆ ಕಳಿಸುವುದು ಗುರುವಾರ ಎಂದಾಗಿತ್ತು. ಗೌರಿಯನ್ನು ತವರಿಗೆ ಕರೆತರಲು ನಾಲ್ಕಾರು ಜನ ಹೋಗಿ ಸ್ವಾಗತಿಸಿ ಕರೆತರುತ್ತಾರೆ. ಇಲ್ಲಿಂದ ಕಳಿಸಿಕೊಡುವಾಗ 300- 400 ಜನರು ಗೌರಿ ಕೂರಿಸಿದ ಪಲ್ಲಕ್ಕಿ ಯನ್ನು ತಲೆಯ ಮೇಲೆ ಹೊತ್ತು ಗಂಡನ ಮನೆ ಕೈಲಾಸಕ್ಕೆ ಕಳಿಸಲು ಕೆರೆ ನೀರಿನಲ್ಲಿ ವಿಸರ್ಜಿಸಿ ಬರುತ್ತಾರೆ. (ಅವಳ ಜೊತೆ ನೂರ ಒಂದು ದೇವತೆಗಳು ಇರುತ್ತಾರೆ ) ಗೌರಿ ಗಣಪತಿಯರನ್ನು ವಿಸರ್ಜನೆ ಮಾಡಲು ಕರೆದೊಯ್ಯುವ ರಥದಲ್ಲಿ 101 ದೇವತಾ ಸಮೂಹ ಇದ್ದು, ರಥ ಎಳೆಯಲು 300 ರಿಂದ 400 ಜನರು ಇರುತ್ತಾರೆ. ರಥ ಬರುವಾಗ ಎಷ್ಟು ಭಾರ ಇರುತ್ತೋ ಅಷ್ಟೇ ಭಾರ ಇರುತ್ತದೆ. ರಥ ತುಂಬಾ ಭಾರ ಆಗುತ್ತದೆ ಎಂದು ಬರುವಾಗ ಬಂದ ನೂರಾ ಒಂದು ದೇವತೆಗಳು ಗುಮ್ಲಾಪು ರದಲ್ಲೇ ನೆಲೆಸಿದರು ಎಂಬ ಐತಿಹ್ಯವಿದೆ. ಒಂದು ತಿಂಗಳು ಸಂಭ್ರಮದ ಜಾತ್ರೆ ನಡೆಸಿ, ಗೌರಿ- ಗಣೇಶನನ್ನು ಊರಿನ ಕೆರೆಯಲ್ಲಿ ವಿಸರ್ಜಿಸಿದರು. ಆಶ್ಚರ್ಯ ಎಂದರೆ, ಗೌರಮ್ಮನ ಪೂಜೆ ಮಾಡುವಾಗ ಮಂಗಳದ್ರವ್ಯಗಳಾದ ಮಾಂಗಲ್ಯ ,‌ಕೈಗೆ ಹಾಕಿದ ಬಳೆ ಅರಿಶಿನ ಕುಂಕುಮ ಬಟ್ಟಲು ಎಲ್ಲ ನೀರಲ್ಲಿ ವಿಸರ್ಜನೆ ಮಾಡಿ ಬಂದಿರುತ್ತಾರೆ.ಮರುದಿನ ಬೆಳಿಗ್ಗೆ ಕರಿಮಣಿ ಮಾಂಗಲ್ಯ, ಬಳೆ, ಗೌರಿ ಪೀಠ ಹೂವಿನ ಪ್ರಸಾದ ತೇಲುವುದನ್ನು ದನ ಕಾಯುವ ಹುಡುಗರು ನೋಡಿ ಗೌರಿದೇವಿ ಪ್ರಸಾದ ಎಂದು ತಂದರು. ಮರು ವರ್ಷದಿಂದ ಅದೇ ಕೆರೆಯ ಮಣ್ಣನಿಂದ ಗೌರಿದೇವಿ- ಗಣಪತಿ ವಿಗ್ರಹ ಮಾಡಿ ಪೂಜೆ, ಜಾತ್ರೆ ಎಲ್ಲ ಮಾಡುತ್ತಾ ಪದ್ಧತಿಯಾಗಿ ಬಂದಿದೆ. ಈ ಕಥೆಯನ್ನು ಬರಹ ರೂಪಕ್ಕೆ ತಂದವರು — ಆಶಾ ನಾಗಭೂಷಣ. ಗೌರಮ್ಮನ ಜಾತ್ರೆ ಸಮಯದಲ್ಲಿ ಮಹಿಳೆಯರು, ಹೆಣ್ಣು ಮಕ್ಕಳು ದೂರ ದೂರದಿಂದ ಬಂದು, ತವರಿಗೆ ಬಂದ ಗೌರಮ್ಮನಿಗೆ ಮಡಿಲು ( ಮಡ್ಲಕ್ಕಿ) ತುಂಬುತ್ತಾರೆ. ಇದು ಅಲ್ಲಿನ ಪದ್ಧತಿಯಾಗಿದೆ.‌ ಕರ್ನಾಟಕ ಮಾತ್ರವಲ್ಲದೆ, ತಮಿಳುನಾಡು- ಆಂಧ್ರಪ್ರ ದೇಶ- ಮಹಾರಾಷ್ಟ್ರಗಳಿಂದ ಹೆಂಗಸರು ಕುಟುಂಬ ಸಮೇತ ಸಂಭ್ರಮದಿಂದ ಬಂದು ಜಾತ್ರೆಯನ್ನು ಕಣ್ತುಂಬಿಕೊಂಡು ಪತಿ ಮಕ್ಕಳು ಕುಟುಂಬ ಚೆನ್ನಾಗಿರಲಿ ಎಂದು ಜಗಜ್ಜನನಿಯನ್ನು ಪ್ರಾರ್ಥಿಸಿ ಮಡ್ಲು ತುಂಬುತ್ತಾರೆ. ಇಲ್ಲಿನ ಗೌರಮ್ಮನಿಗೆ ಹಸಿರು- ಕೆಂಪು ಬಳೆಗಳನ್ನು ಅರ್ಪಿಸುತ್ತಾರೆ. ಜಾತ್ರೆ ಮುಗಿದ ಮೇಲೆ ಗೌರಿ ಗಣೇಶನನ್ನು ಕೆರೆಯಲ್ಲಿ ಬಿಟ್ಟು ಕೈಲಾಸಕ್ಕೆ ಕಳುಹಿಸುತ್ತಾರೆ ಆಗ ಶಿವ ಪಾರ್ವತಿಯನ್ನು ಕರೆದೊಯ್ಯಲು ಅತ್ತೆ ಮನೆ ಗುಮ್ಲಾಪುರಕ್ಕೆ ಬರುತ್ತಾನೆ, ಎಂಬ ಭಾವದಿಂದ ಗೌರಿಯನ್ನು, ಮಾಂಗಲ್ಯ ಸರ, ಮೂಗುತಿ ಮತ್ತು ಅಲಂಕರಿಸಿದ ಪೀಠದ ಸಮೇತ ಕೆರೆಯಲ್ಲಿ ವಿಸರ್ಜಿಸುತ್ತಾರೆ. ಹಬ್ಬದ ಸಮಯದಲ್ಲಿ ಮೂಗುತಿ ಮಾಂಗಲ್ಯ ಪೀಠದ ಸಮೇತ ಕೆರೆಯಲ್ಲಿ ಮೇಲೆ ಕಾಣಿಸುತ್ತವೆ. ಅಲ್ಲಿಗೆ ಬರುವ ದನ ಕಾಯುವ ಹುಡುಗರಿಗೆ ಸಿಗುತ್ತದೆ. ಆ ಹುಡುಗರು ತಂದು ಗೌರಮ್ಮನ ಜಾತ್ರೆ ಮಾಡುತ್ತಾ ಬಂದರು.‌ ಈ ಒಂದು ತಿಂಗಳು ಮಾತ್ರ ಗೌರಿ ದೇವಸ್ಥಾನ ತೆರೆದಿದ್ದು ಜಾತ್ರೆ ಉತ್ಸವ ನಡೆಯುತ್ತದೆ. ಗುಂಮ್ಲಾಪುರದ ವಿಶೇಷತೆಯಾದ ಸುತ್ತಮುತ್ತ 101 ದೇವತೆಗಳು, ಹಾಗೆ ಕೆರೆ- ಕುಂಟೆ, ಕಲ್ಪವೃಕ್ಷ - ಬಿಲ್ವಪತ್ರೆ ಮರ, ಗುಹೆ, ಎಲ್ಲವೂ 101 ಇರುವುದು ಗೌರಿಯ ವರಪ್ರಸಾದವೆಂದೆ ಭಾವಿಸಿದ್ದಾರೆ. ಈ ಕ್ಷೇತ್ರವು ಕಲಿಯುಗದ ಆರಂಭದಿಂದಲೂ ಶಿವಶರಣರ ನೆಲೆಯಾಗಿದೆ ಎಂಬ ಉಲ್ಲೇಖವಿದೆ || ಸರ್ವ ಮಂಗಳಮಾಂಗಲ್ಯೇ ಶಿವೇ ಸರ್ವಾರ್ಥಸಾಧಿಕೇ ಶರಣ್ಯೇ ತ್ರ್ಯಂಬಿಕೇ ದೇವಿ ನಾರಾಯಣಿ ನಮೋಸ್ತು ತೇ| ವಂದನೆಗಳೊಂದಿಗೆ, ಬರಹ: ©ಆಶಾ ನಾಗಭೂಷಣ