#ದಿನಕ್ಕೊಂದು ಕಥೆ
ಭಯದೊಳಗಿನ ವಿಜಯ:-
ಒಂದೂರಲ್ಲಿ ಅಜ್ಜಿ ಹಾಗೂ ಮೊಮ್ಮಗ ಇದ್ದರು. ಅಜ್ಜಿಗೆ ಮೊಮ್ಮಗನ ಮೇಲೆ ಪ್ರೀತಿ ಇತ್ತು. ಆದರೆ ಅವನ ಸಮಸ್ಯೆ ಅಜ್ಜಿಗೊಂದು ತಲೆನೋವಾಗಿತ್ತು. ಚಿಕ್ಕಂದಿನಲ್ಲೇ ತಂದೆ ತಾಯಿ ಕಳೆದುಕೊಂಡ ಮಗು ಅಜ್ಜಿ ಮಡಿಲಿಗೆ ಬಂದು ಬಿತ್ತು. ಅಜ್ಜಿ ಅಕ್ಕರೆಯಿಂದ ಆರೈಕೆ ಅನುಪಾನ ಮಾಡಿ ಸಾಕಿದಳು. ಎರಡ್ಮೂರು ವರ್ಷಗಳು ತುಂಬುವವರೆಗೆ ಚೆನ್ನಾಗಿದ್ದ ಮೊಮ್ಮಗು, ಅದ್ಯಾವ ದೆವ್ವ ಬಂದು ಮೆಟ್ಟಿ ಕೊಂಡಿತು ಏನೋ? ಎಂಬಂತೆ ಚೆನ್ನಾಗಿ ಆಟ ಆಡಿಕೊಂಡಿ ದ್ದ ಹುಡುಗ ಮನೆಯ ಸಂಧಿ ಮೂಲೆಗಳಲ್ಲಿ ಮುದುರಿ ಕೂರ ತೊಡಗಿದ. ಇಷ್ಟೇ ಆಗಿದ್ದರೆ ಏನಾದರೂ ಮಾಡಬಹುದಿತ್ತು. ಆದರೆ ಆ ಹುಡುಗನನ್ನು ಯಾರೇ ಬಂದು ಮುಟ್ಟಿದರೆ ಹೇಡಿಗಳಂತೆ ಹೆದರಿಕೊಂಡು ನಡುಗುತ್ತಾ ಮೂಲೆಯಲ್ಲಿ ಕುಳಿತು ಬಿಡುತ್ತಿದ್ದರು. ಆಟ ಆಡುವ ಮಕ್ಕಳು ಮುಟ್ಟಿದರೆ ಆಟ ಬಿಟ್ಟು ಹೆದರಿ ಓಡಿ ಹೋಗುತ್ತಿದ್ದವು. ಇದಿಷ್ಟೇ ಅಲ್ಲ
ಪ್ರಾಣಿಗಳನ್ನು ಮುಟ್ಟಿದರೂ ಅವು ಹೆದರಿಕೊಂಡು ಹಿಂದೆ ಸರಿಯುತ್ತಿದ್ದವು.
ಈ ವಿಚಾರ ಊರವರಿಗಲ್ಲದೆ ಅಕ್ಕ ಪಕ್ಕ ಹಳ್ಳಿ ಹರಾಸುಗಳಿಗೂ ತಿಳಿಯಿತು.
ಅಜ್ಜಿಯ ಮನೆ ಸುತ್ತಮುತ್ತ ಓಡಾಡಲು ಜನ ಹೆದರಿದರು. ಆಡುವ ಮಕ್ಕಳನ್ನಂತೂ ಅಲ್ಲಿ ಸುಳಿದಾಡಲು ಬಿಡುತ್ತಿರಲಿಲ್ಲ. ಇದರಿಂದ ಹುಡುಗ ಮತ್ತಷ್ಟು ಮನೆಯೊಳಗೆ ಇರುವುದಾಯಿತು. ಈಗಾಗಲೇ ಹುಡುಗನಿಗೆ ಆರೇಳು ವರ್ಷ ಆಗಿದೆ. ಎಲ್ಲಾ ಕೆಲಸದ ಭಾರ ಅಜ್ಜಿಯೇ ಮಾಡಬೇಕು.ಸಣ್ಣಪುಟ್ಟ ಸಾಮಾನು, ತರಕಾರಿ ತರಿಸಲು ಹುಡುಗನನ್ನು ಅಂಗಡಿಗೆ ಕಳುಹಿಸುವಂತಿಲ್ಲ. ಈಗೀಗಂತೂ ಅಜ್ಜಿಗೂ ವಯಸ್ಸಾಗುತ್ತಾ ಬಂದಿದೆ.ಈ ಮೊಮ್ಮಗನ ಸಮಸ್ಯೆ ಬೇರೆ ಕಾಡುತ್ತಿದೆ.
ಹೀಗಿರುವಾಗ ಒಂದು ದಿನ ಯಾತ್ರೆ ಹೊರಟಿದ್ದ ಸನ್ಯಾಸಿಯೊಬ್ಬ ಮುಸ್ಸಂಜೆ ಸಮಯ ಅಜ್ಜಿ ಮನೆಗೆ ಬಂದನು. ಅವನು ಅಜ್ಜಿಗೆ ಕೇಳಿದ, ನಾನು ಈ ದಿನ ರಾತ್ರಿ ತಂಗಿ ಬೆಳಗ್ಗೆ ಎದ್ದು ಹೋಗುತ್ತೇನೆ ಆಗಬಹುದೇ? ಎಂದು. ಅಜ್ಜಿಯು ಸಂತೋಷದಿಂದ ಒಪ್ಪಿ ರಾತ್ರಿ ಸ್ವಲ್ಪ ತಿಂಡಿ ,ಹಣ್ಣು ಕೊಟ್ಟು ಮಲಗಲು ಚಾಪೆ ಕೊಟ್ಟಿತು. ರಾತ್ರಿ ಮಲಗಿ ಬೆಳಗ್ಗೆ ಎದ್ದ ಸನ್ಯಾಸಿ ಅಜ್ಜಿಗೆ ತಿಳಿಸಿ ಹೋಗಲು ಒಳಗೆ ಬಂದ. ಆಗ ಮೂಲೆಯಲ್ಲಿ ಮುದುರಿ ಕುಳಿತಿದ್ದ ಹುಡುಗ ಕಣ್ಣಿಗೆ ಕಂಡ.
ಸನ್ಯಾಸಿ ಆ ಹುಡುಗನನ್ನು ದೃಷ್ಟಿಸಿ ನೋಡುತ್ತಿರುವಾಗಲೇ ಒಂದು ಬೆಕ್ಕು ಬಂದಿತು. ಹುಡುಗನು ಹತ್ತಿರ ಮಿಯಾವ್ ಮಿಯಾವ್ ಅನ್ನುತ್ತ ಆ ಹುಡುಗನ ಮೇಲೆ ಬಾಲ ಆಡಿಸಿತು. ತಕ್ಷಣವೇ ಹಾವು ಮೆಟ್ಟಿದವರಂತೆ ಹೆದರಿ ಗಾಬರಿ ಮುಖದಿಂದ ಈಚೆ ಬಂದು ಮೂಲೆಯಲ್ಲಿ ನಡುಗುತ್ತಾ ಮುದುರಿ ಕುಳಿತಿತು. ಸನ್ಯಾಸಿ ತದೇಕಚಿತ್ತದಿಂದ ನೋಡಿದ. ಅಷ್ಟು ಹೊತ್ತಿಗೆ ಆ ಅಜ್ಜಿ ಬಂದು ಇದುವರೆಗಿನ ಕಥೆಯನ್ನೆಲ್ಲ ಹೇಳಿ. ಜೋರಾಗಿ ಅತ್ತಳು. ಸನ್ಯಾಸಿ ಅಜ್ಜಿಯನ್ನು ಸಮಾಧಾನಪಡಿಸಿ ಆ ಹುಡುಗನ ಹತ್ತಿರ ಕುಳಿತು ಕೈ ತೋರಿಸುವಂತೆ ಹೇಳಿದ. ಆ ಹುಡುಗ ದೂರದಲ್ಲಿ ಕೈಬಿಚ್ಚಿ ತೋರಿಸಿತು ಒಂದಷ್ಟು ಹೊತ್ತು ನೋಡಿದ ಸನ್ಯಾಸಿ, ಏನೋ ಲೆಕ್ಕಾಚಾರ, ಗುಣಾಕಾರ ಹಾಕಿ ಸಂತಸದಿಂದ ಮುಗುಳ್ನಗೆ ನಗುತ್ತಾ , ಅಜ್ಜಿ ನಿನ್ನ ಮೊಮ್ಮಗನ ಬಗ್ಗೆ ಲವಲೇಶವೂ ಯೋಚನೆ ಮಾಡಬೇಡ. ಸದ್ಯದಲ್ಲೇ ಇವನಿಗೆ ರಾಜ ಯೋಗ ಒದಗಿ ಬರಲಿದೆ. ಮುಂದೆ ಇವನು ರಾಜನಾಗುತ್ತಾನೆ ಎಂದು ಹೇಳಿ ಅಜ್ಜಿಗೆ ಕೃತಜ್ಞತೆ ಸಲ್ಲಿಸಿ ಹೊರಟನು.
ಅಜ್ಜಿ ಮನೆಯ ಸುತ್ತಮುತ್ತ ಯಾರೂ ಬರದೆ ನಿರ್ಬಂಧ ಹೇರಿದಂತಾಗಿ ಊರಿನ ಜನರು ಸುತ್ತಿ ಬಳಸಿ ಓಡಾಡುವಂತಾಗಿ ತೊಂದರೆಯಾಯಿತು. ಮಕ್ಕಳು ಸಹ ಅಲ್ಲಿ ಆಡುವಂತಿಲ್ಲ. ಹೀಗಾಗಿ ಊರವರೆಲ್ಲ ಸೇರಿ ರಾಜನ ಹತ್ತಿರ ಹೋಗಿ ಅಜ್ಜಿ ಹಾಗೂ ಮೊಮ್ಮಗನ ಕುರಿತು ಎಲ್ಲವನ್ನೂ ಹೇಳಿ ನಮಗೆ ತೊಂದರೆಯಾಗುತ್ತಿದೆ ಇದನ್ನು ಸರಿಪಡಿಸಿಕೊಡಬೇಕು ಎಂದು ನ್ಯಾಯವನ್ನು ಕೇಳಿದರು. ರಾಜ ಮತ್ತು ಮಂತ್ರಿ ಸಮಾಲೋಚಿಸಿ, ಇದು ಹೌದೇ ಎಂದು ವಿಚಾರಿಸಲು ಅರಮನೆ ಸೇವಕರನ್ನು ಕಳಿಸಿದರು. ಅದು ನಿಜವೆಂದು ತಿಳಿದಮೇಲೆ ರಾಜ ಭಟರು ಬಂದು ಸಾಬೀತು ಪಡಿಸಲು ಜೋರಾಗಿದ್ದ ಒಂದು ನಾಯಿ ಮರಿಯನ್ನು ಹುಡುಗನ ಹತ್ತಿರ ಬಿಟ್ಟರು. ನಾಯಿಮರಿ ಹತ್ತಿರ ಹೋಗಿ ಆ ಹುಡುಗನನ್ನು ಮುಟ್ಟುತ್ತಿದ್ದಂತೆ ಗಕ್ಕಂತ ಹೆದರಿ ಮುದುರಿ ಮಲಗಿಬಿಟ್ಟಿತು. ರಾಜನ ಆದೇಶದಂತೆ, ಅಜ್ಜಿಯ ಅನುಮತಿ ಪಡೆದು ಆ ಹುಡುಗನನ್ನು ಯಾರೂ ಮುಟ್ಟದಂತೆ ವ್ಯವಸ್ಥೆ ಮಾಡಿ ಅರಮನೆಗೆ ಕರೆದುಕೊಂಡು ಬಂದರು.
ಮರುದಿನ ಸಭೆಯಲ್ಲಿ ಈ ಹುಡುಗನ ಕುರಿತು ಚರ್ಚೆ ನಡೆದು, ಇವನಿಗೆ ಮರಣದಂಡನೆ ವಿಧಿಸುವುದು ಸರಿಯೆಂದು, ಕೆಲ ವರುಷ ಕಾದು ನೋಡಲು ಕಾರಾಗೃಹದಲ್ಲಿ ಇಡುವುದೇ ಸರಿ ಎಂದು ಚರ್ಚೆ ನಡೆದು, ಕೊನೆಗೆ ರಾಜನು,
ಮಂತ್ರಿಯ ಸಲಹೆಯಂತೆ ಆ ಹುಡುಗನನ್ನು ಒಬ್ಬನೇ ಇರುವಂಥ ಕಾರಾಗೃಹದಲ್ಲಿ ಇಟ್ಟರು. ಮಂತ್ರಿ ಬಹಳ ಬುದ್ದಿವಂತ. ಆಗಾಗ್ಗೆ ಹುಡುಗ ಇರುವ ಬಂದೀಖಾನೆಗೆ ಹೋಗಿ ನೋಡಿಕೊಂಡು ಬರುತ್ತಿದ್ದ. ಮತ್ತು ಅಲ್ಲಿನ ಸೇವಕರಿಗೆ ಹುಡುಗನಿಗೆ ಯಾವುದೇ ರೀತಿಯ ತೊಂದರೆಯಾಗದಂತೆ, ಕೊರತೆಯಾಗದಂತೆ, ನೋಡಿಕೊಳ್ಳಬೇಕೆಂದು ಕರಾರುವಕ್ಕಾಗಿ ತಿಳಿಸಿದ್ದ.
ಹುಡುಗನ ಅಜ್ಜಿಗೆ ಈ ವಿಚಾರವನ್ನು ತಿಳಿಸಿ ಅಜ್ಜಿಗೆ ಬೇಕಾದ ವ್ಯವಸ್ಥೆಯನ್ನು
ಮಂತ್ರಿಯೇ ಮುತುವರ್ಜಿವಹಿಸಿ ಮಾಡಿದ್ದನು.
ಹೀಗೆ ಒಂದಷ್ಟು ತಿಂಗಳು ಕಳೆಯಿತು. ನೆರೆ ರಾಜ್ಯದ ರಾಜ, ನಿಮ್ಮ ರಾಜ್ಯದ ಮೇಲೆ ಯುದ್ಧ ಮಾಡುತ್ತೇನೆ ಇಲ್ಲದಿದ್ದರೆ ಕಪ್ಪ ಕಾಣಿಕೆ ಕೊಟ್ಟು ಸೋತೆವೆಂದು ಒಪ್ಪಿಕೊಳ್ಳಬೇಕೆಂದು ಸುತ್ತೋಲೆಯನ್ನು ಕಳಿಸಿದನು. ನೆರೆರಾಜ್ಯದ ಮೇಲೆ ಯುದ್ಧ ಮಾಡಿದರೆ ಈ ರಾಜ್ಯ ಹೇಳ ಹೆಸರಿಲ್ಲದಂತೆ ಅಳಿಸಿಹೋಗುತ್ತದೆ.
ಯುದ್ಧ ಮಾಡದೇ ಕಪ್ಪಕಾಣಿಕೆ ಕೊಟ್ಟು ಸೋಲೊಪ್ಪಿಕೊಳ್ಳಲು ಮನಸ್ಸಿಲ್ಲ.
ಈ ಸಮಯಕ್ಕಾಗಿ ಕಾಯುತ್ತಿದ್ದ ಮಂತ್ರಿಯು ಯೋಚಿಸಿ ಒಂದು ಉಪಾಯ ಮಾಡಿದನು.ವಿಷಯವನ್ನು ರಾಜ ಹಾಗೂ ಮಂತ್ರಿ, ಕಾರ್ಯರೂಪಕ್ಕೆ ಹೇಗೆ ತರುವುದು ಎಂಬುದನ್ನು ನಿರ್ಧರಿಸಿದರು, ಒಂದು ಲಕೋಟೆ ಬರೆದು,ಬಂದೀ ಖಾನೆಯಲ್ಲಿಟ್ಟಿದ್ದ ಹುಡುಗನ ಕೈಲಿ ಲಕೋಟೆ ಕೊಟ್ಟು, ನೆರೆ ದೇಶದ ರಾಜನ ಕೈಮುಟ್ಟಿ, ಹೇಗೆ ಕೊಡಬೇಕು ಎಂಬುದನ್ನು ಮನದಟ್ಟು ಮಾಡಿಸಿದರು. ನಂತರ ರಾಜ್ಯದ ಸೇನಾಧಿಪತಿ, ಮುಖ್ಯ ರಾಜಭಟರ ಜೊತೆ ಆ ಹುಡುಗನನ್ನು ಕಳುಹಿಸಿಕೊಟ್ಟರು. ನೆರೆ ರಾಜ್ಯದ ರಾಜಸಭೆಯಲ್ಲಿ ಸಿಂಹಾಸನದ ಮೇಲೆ ರಾಜಗಾಂಭೀರ್ಯದಿಂದ,ದರ್ಪದಿಂದ, ಕುಳಿತಿದ್ದ ರಾಜನಿಗೆ, ಸಂದೇಶವನ್ನು ತಿಳಿಸಿದ ಸೇನಾಧಿಪತಿ, ಆ ಹುಡುಗನಿಗೆ ಲಕೋಟೆ ಕೊಡಲು ತಿಳಿಸಿದನು. ಹುಡುಗನು ಸೇನಾಧಿಪತಿಯ ಆದೇಶದಂತೆ ರಾಜ ಕುಳಿತಲ್ಲಿಗೆ ಬಂದು, ರಾಜನ ಕೈಗೆ ಮಂತ್ರಿಯು ಹೇಳಿಕೊಟ್ಟಂತೆ, ಲಕೋಟೆ ಕೊಟ್ಟನು. ಕೊಟ್ಟ ಕ್ಷಣದಲ್ಲೇ ರಾಜನ ದರ್ಪ, ಗಾಂಭೀರ್ಯ, ಎಲ್ಲಿ ಹಾರಿ ಹೋಯಿತೋ ಎಂಬಂತೆ," ಅಯ್ಯಯ್ಯೋ ನನಗೆ ಯುದ್ಧ ಬೇಡ, ನಾನ್ಯಾಕೆ ಯುದ್ಧ ಮಾಡಲಿ, ನಾನು ಯಾರ ಜೊತೆಯಲ್ಲೂ ಕಾದಾಡುವುದಿಲ್ಲ. ಬಂದವರಿಗೆ ಸತ್ಕರಿಸಿ, ಗೌರವದಿಂದ ಕಳಿಸಿ ಎಂದು ಹೇಳಿ ಸಿಂಹಾಸನದ ಮೇಲೆ ಕುಳಿತನು. ಸಭೆಯಲ್ಲಿ ಕುಳಿತು ಎಲ್ಲರಿಗೂ ರಾಜನು ಹೀಗೇಕೆ ಮಾಡುತ್ತಿದ್ದಾನೆಂದು ತಿಳಿಯಲಿಲ್ಲ.
ಆ ಲಕೋಟೆಯಲ್ಲಿ ಹೆದರುವಂತಹದ್ದು ಏನಿದೆ ಎಂದು, ಸಭೆ ಚರ್ಚಿಸುತಿತ್ತು.ಲಕೋಟೆ ತಂದವರಿಗೆ ರಾಜೋಚಿತ ಸತ್ಕಾರ ಮಾಡಿ ಕಳಿಸಿಕೊಟ್ಟರು. ನಂತರ ಲಕೋಟೆ ತೆಗೆದು ನೋಡಿದಾಗ, "ನಾವು ನೀವು ಸ್ನೇಹದಿಂದ ಇರೋಣ, ಯುದ್ಧ ಯಾಕೆ ? ಇದರಿಂದ ಸೈನ್ಯ ನಾಶವಾಗುತ್ತೆ, ಬೊಕ್ಕಸ ಬರಿದಾಗುತ್ತೆ, ರಾಜ್ಯದ ಸುರಕ್ಷತೆಯಲ್ಲಿ ಒಬ್ಬರಿಗೊಬ್ಬರು ಸಹಾಯ ಮಾಡಿಕೊಂಡು, ಸ್ನೇಹಿತರಾಗಿರೋಣ ಎಂದಷ್ಟೇ ಬರೆದಿದ್ದು. ಯಾರಿಗೂ ಏನು ಎಂದು ಯೋಚಿಸಿದರು ಅರ್ಥವಾಗಲಿಲ್ಲ .
ಈ ದೇಶದ ರಾಜನಿಗೆ ಸಮಾಧಾನವಾಯಿತು. ಹಾಗೂ ಹುಡುಗನ ಕೈ ಗುಣದಿಂದ ಎರಡು ದೇಶಗಳ ಯುದ್ಧ ನಿಂತಿತು. ಇನ್ನು ಮುಂದೆ ರಾಜ್ಯಕ್ಕೆ ಯಾವುದೇ ಗಂಭೀರವಾದ ಸಮಸ್ಯೆಗಳು ಎದುರಾದರೂ, ಹುಡುಗನಿಂದ
ನಾವು ಪರಿಹರಿಸಿಕೊಳ್ಳಬಹುದು. ಎಂಬ ವಿಶ್ವಾಸದಿಂದಾಗಿ ರಾಜ್ಯದಲ್ಲಿ ಹೆಚ್ಚು ಹೆಚ್ಚು ಅಭಿವೃದ್ಧಿಯಾಗತೊಡಗಿತು. ರಾಜ -ಮಂತ್ರಿ ಎಲ್ಲರೂ ನೆಮ್ಮದಿಯಿಂದ ಇದ್ದರು. ಯಾವುದೇ ರಾಜ್ಯಗಳ ಭಯವೂ ಇವರಿಗೆ ಇಲ್ಲವಾಯಿತು. ಹುಡುಗನ ಬಂಧೀಖಾನೆಯಲ್ಲಿದ್ದರೂ ಹೆಚ್ಚು ಹೆಚ್ಚು ಗೌರವ,ಪ್ರೀತಿ ಕೊಡುತ್ತಿದ್ದರು. ರಾಜ ಮತ್ತು ಮಂತ್ರಿ ಮುಂದಾಲೋಚನೆಯಿಂದ ಹುಡುಗನಿಗೆ ಕುದುರೆ ಸವಾರಿ, ಕತ್ತಿವರಸೆ,ಶಸ್ತ್ರಾಭ್ಯಾಸಗಳ ಜೊತೆ ಶೈಕ್ಷಣಿಕ ಶಿಕ್ಷಣ ಸೇರಿದಂತೆ,ಎಲ್ಲ ಶಿಕ್ಷಣವನ್ನು ಕೊಡಿಸುತ್ತಿದ್ದರು. ಹುಡುಗನ ಅಜ್ಜಿಯನ್ನು ಅರಮನೆಯವರೇ ನೋಡಿಕೊಂಡರು.ಈ ಕಥೆಯನ್ನು ಬರಹ ರೂಪಕ್ಕೆ ತಂದವರು — ಆಶಾ ನಾಗಭೂಷಣ.
ಹೀಗಿರುವಾಗ ಇನ್ನೊಂದು ಬಲಿಷ್ಠ ದೇಶದ ರಾಜ ಯುದ್ಧಕ್ಕೆ ಬರುವೆನೆಂದು,
ಸಂಧಿ ಮಾತುಕತೆಗಳಿಗೆ ಅವಕಾಶವಿಲ್ಲವೆಂದು, ಕಟ್ಟುನಿಟ್ಟಾಗಿ ತಿಳಿಸಿದರು.
ರಾಜನು ಮಂತ್ರಿಯ ಜೊತೆ ಸಭಿಕರ ಜೊತೆ ಸಮಾಲೋಚನೆ ನಡೆಸಿ ಯುದ್ಧಕ್ಕೆ ಬರಬಹುದೆಂದು ನಾವು ತಯಾರಿದ್ದೇವೆ ಎಂದು ತಿಳಿಸಿದರು. ಯುದ್ಧ ನಿಗದಿಯಾದ ದಿನ, ಎಲ್ಲಾ ಸೈನಿಕರಿಗಿಂತ ಮೊದಲು ಈ ಹುಡುಗನನ್ನು ನಿಲ್ಲಿಸಿದರು. ಮೊದಮೊದಲು ನಿಲ್ಲುವುದಿಲ್ಲವೆಂದು ಹೆದರಿದನು. ಆದರೆ ರಾಜ ಮತ್ತು ಮಂತ್ರಿ ಪರಿವಾರದವರು ಸೂಕ್ತ ಸಲಹೆ ಸೂಚನೆಗಳನ್ನು ಕೊಟ್ಟು ಆತನನ್ನು ನಿಲ್ಲಿಸಿದರು.ಯುದ್ಧ ಆರಂಭವಾಗುವ ಮುನ್ನ, ಹುಡುಗನನ್ನು ಶತ್ರು ಸೈನಿಕರು ಇರುವ
ಕಡೆಗೆ ಕಳಿಸಿ, ಶುಭಕೋರಿ, ಹಸ್ತಲಾಗವ ಮಾಡುವ ನೆಪದಲ್ಲಿ ಹೆಚ್ಚುಕಡಿಮೆ ಅಲ್ಲಿರುವ ಬಹಳಷ್ಟು ಸೈನಿಕರು, ಸೇನಾಧಿಪತಿಗಳನ್ನು ಮುಟ್ಟಿ ಬರುವಂತೆ
ವ್ಯವಸ್ಥಿತವಾಗಿ ಮಾಡಿದರು. ಏನು ನಡೆಯುತ್ತಿದೆ ಎಂದು ಗೊತ್ತಾಗುವುದ ರೊಳಗಾಗಿ ನಾವು ಯುದ್ದ ಮಾಡಲಾರೆವು, ನಮ್ಮಿಂದ ಆಗುವುದಿಲ್ಲ ಎಂದು ಹೆದರುತ್ತಾ ಒಬ್ಬರಾದ ಮೇಲೆ ಒಬ್ಬರು ಓಡಿಬಿಟ್ಟರು. ಅಷ್ಟು ಹೊತ್ತಿಗೆ ಉಭಯಸೇನೆಗಳ ಮಧ್ಯೆ ಗದ್ದಲಗಳಾಗಿ ಯಾರು, ಯಾಕೆ ಹೀಗಾಯ್ತು ಎಂಬುದು ಯಾರಿಗೂ ಗೊತ್ತಾಗಲಿಲ್ಲ. ಯುದ್ಧ ಮಾಡಲು ಬಂದವರು ಹಿಂತಿರುಗಿದರು. ಈ ರಾಜ್ಯದವರು ಸಂತೋಷವಾಗಿ ಬಂದರು.
ಇದೇ ತರಹದ ಘಟನೆಗಳು ಒಂದಷ್ಟು ಸಲ ನಡೆದುದರಿಂದ ಈ ರಾಜ್ಯದ ತಂಟೆಗೆ ಯಾರು ಬರಲಿಲ್ಲ. ಕೆಲವೇ ವರ್ಷಗಳಲ್ಲಿ ರಾಜ್ಯ ಅಭಿವೃದ್ಧಿಯಾಗುತ್ತಾ
ಬಲಿಷ್ಠ ರಾಜ್ಯದ ಸಮಕ್ಕೆ ನಿಂತು ಬಿಟ್ಟಿತು.ಈ ಹುಡುಗ ಬೆಳೆದು ಯುವಕನಾಗಿದ್ದ ಅರಮನೆಯ ಸದಸ್ಯ ಆಗಿದ್ದುದರಿಂದ, ಹಾಗೂ ಅವನಿಗಿರುವ ವಿಶೇಷ ಶಕ್ತಿಯಿಂದ, ಹೆಚ್ಚು ಮರ್ಯಾದೆ, ಗೌರವ ಪ್ರೀತಿ, ಎಲ್ಲಾ ದೊರೆತ ಕಾರಣ, ಅವನಿಗೆ ಈಗ ಧೈರ್ಯ ಬಂದಿತ್ತು. ಅವನೇ ಎಷ್ಟೊ ಯುದ್ಧಗಳ ಮುಂದಾಳತ್ವ ವಹಿಸಿ ಗೆದ್ದುಕೊಂಡು ಬಂದನು.ಅವನು ಮುಟ್ಟಿದರೆ, ಹೇಡಿಗಳು ಆಗವುದು, ಮುದುರಿ ಕೂರುವುದು ಈ ತರಹದ್ದೆಲ್ಲ ಹೊರಟುಹೋಗಿತ್ತು. ದಕ್ಷರಾಜನಿಗೆ ಇರಬೇಕಾದ ಯೋಗ್ಯತೆಗಳೆಲ್ಲವೂ ಅವನಲ್ಲಿ ಬಂದಿತ್ತು. ರಾಜನಿಗೆ ಒಬ್ಬಳೇ ಮಗಳಿದ್ದಳು. ಅವಳನ್ನು ಈ ಹುಡುಗನಿಗೆ ಕೊಟ್ಟು ಮದುವೆ ಮಾಡಿ, ಇವನೇ ತನ್ನ ಮುಂದಿನ ವಾರಸುದಾರ ಎಂದು ಘೋಷಿಸಿದನು. ಸನ್ಯಾಸಿ ಹೇಳಿದ ಭವಿಷ್ಯ ನಿಜವಾಯಿತು. ಮುಂದೆ ಶ್ರೇಷ್ಠ ರಾಜನಾಗಿ ಪ್ರಜೆಗಳ ವಿಶ್ವಾಸಗಳಿಸಿ, ರಾಜ್ಯದ ಕೀರ್ತಿ ಹರಡಿದನು.
" ಗತಿರ್ಭರ್ತಾ ಪ್ರಭು ಸಾಕ್ಷೀ, ನಿವಾಸ ಶರಣ ಸುಹೃತ್!
ಪ್ರಭವ ಪ್ರಲಯ ಸ್ಥಾನಂ, ನಿಧಾನಂ ಬೀಜವ್ಯಯಂ"
ವಂದನೆಗಳೊಂದಿಗೆ,
ಬರಹ: ©ಆಶಾ ನಾಗಭೂಷಣ