ದಿನಕ್ಕೊಂದು ಕಥೆ

ರಾಧಾಕೃಷ್ಣ 🦚💙
1.1K views
3 months ago
#ದಿನಕ್ಕೊಂದು ಕಥೆ #🔱 ಭಕ್ತಿ ಲೋಕ #🙏ತಿರುಪತಿ ತಿಮ್ಮಪ್ಪ #ಶ್ರೀನಿವಾಸ ಕಲ್ಯಾಣ 🌷🙏 ಪದ್ಮಾವತಿಯೊಂದಿಗೆ ಶ್ರೀನಿವಾಸನ ಕಲ್ಯಾಣ ಮಾಡಿಸಿದ ಯಶೋಧ :- ದ್ವಾಪರ ಯುಗದ ಕೃಷ್ಣನ ತಾಯಿ ಯಶೋದೆಗೂ, ಕಲಿಯುಗದ ಶ್ರೀನಿವಾ ಸನಿಗೂ ಎತ್ತಣಿಂದ ಎತ್ತ ಸಂಬಂಧ ಎಂದು ಯೋಚಿಸ ಹೊರಟರೆ ಇದು ಭಗವಂತನ ಸಂಕಲ್ಪ. ಕೃಷ್ಣನ ವರದಿಂದ ಕಾರಣ ಜನ್ಮಳಾದಳು ಬಕುಳಾದೇವಿ. ಕಾರ್ಯಕಾರಣಕ್ಕಾಗಿ ಭೃಗು ಮಹರ್ಷಿಯ ನಿಮಿತ್ತ ಶಾಪದಿಂದ ಮಹಾ ವಿಷ್ಣು,ತನ್ನ ಪತ್ನಿ ಮಹಾಲಕ್ಷ್ಮಿಯನ್ನು ಹುಡುಕುವ ಸಲುವಾಗಿ ತನ್ನ ದಿವ್ಯ ರೂಪ ವನ್ನು ವೈಕುಂಠದಲ್ಲಿ ಬಿಟ್ಟು ಮಾನವ ಶರೀರದಿಂದ ಶ್ರೀನಿವಾಸನಾಗಿ ಧರೆಯಲ್ಲಿ ಅವತರಿಸಿದನು. ಧರೆಗಿಳಿದ ಕಾರಣ ಮಾನವ ಸಹಜ ವಾಗಿ ಹಸಿವು ನೀರಡಿ ಕೆ ಗಳಿಂದ ಬಳಲಿ ಒಂದು ಮರದ ಕೆಳಗಿನ ಹುತ್ತದಲ್ಲಿ ಸೇರಿದನು. ತ್ರಿಲೋಕ ಸಂಚಾರಿ ಆದ ನಾರದರು, ಶ್ರೀನಿವಾಸನ ಹಸಿವು- ಬಾಯಾರಿಕೆ- ಬಳಲಿಕೆ ಗಳನ್ನು ತಿಳಿಸುವ ಸಲುವಾಗಿ ಕೊಲ್ಲಾಪುರಕ್ಕೆ ನಡೆದರು. ಪತಿಯ ಮೇಲಿನ ಕೋಪದಿಂದ ವೈಕುಂಠವನ್ನು ತೊರೆದು ಭೂಲೋಕದ ಕೊಲ್ಲಾಪುರ ದಲ್ಲಿ ನೆಲೆಯಾಗಿದ್ದ ಮಹಾಲ ಕ್ಷ್ಮಿಗೆ ಶ್ರೀನಿವಾಸ ಪಡುತ್ತಿದ್ದ ಕಷ್ಟವನ್ನು ತಿಳಿಸಿದರು ತನ್ನ ಪತಿ ಹಸಿವು ಬಳಲಿಕೆಯಿಂದ ಇರುವುದನ್ನು ತಿಳಿದು ಲಕ್ಷ್ಮಿಗೆ ಸಹಿಸಲಾಗ ಲಿಲ್ಲ. ಆಕೆಯ ಸಿಟ್ಟು ಇನ್ನೂ ಹೋಗಿರದ ಕಾರಣ ಅವಳು ಶ್ರೀನಿವಾಸ ಇದ್ದಲ್ಲಿಗೆ ಬರಲಿಲ್ಲ. ಆದರೆ, ದೇವಲೋಕದ ಬ್ರಹ್ಮ ಮತ್ತು ಶಿವನಲ್ಲಿ ಮೊರೆ ಹೋದಳು. ಆಲಿಸಿದ ಬ್ರಹ್ಮನು ಧೇನುವಾಗಿ, ಶಿವನು ಕರುವಾಗಿ ಭೂಮಿಗೆ ಬಂದು ಚೋಳರಾಜನ ಗೋ ಶಾಲೆ ಸೇರಿದರು. ಆ ನಂತರ ಗೋಶಾಲೆಯ ಹಸುಗಳ ಗುಂಪಿನಲ್ಲಿ ಸೇರಿಕೊಂಡು ಶ್ರೀನಿವಾಸನ ಆಶ್ರಯ ತಾಣವಾದ ಹುತ್ತದ ಬಳಿಗೆ ಬಂದ ಕಾಮಧೇನು ಹಾಲು ತುಂಬಿದ ಕೆಚ್ಚಲಿನಿಂದ ಶ್ರೀನಿವಾಸನ ಬಾಯಿಗೆ ಬೀಳುವಂತೆ ಹಾಲು ಸುರಿಸಿ ಹಸಿವು ತಣಿಸಿತು. ಆದರೆ ಒಂದೆರಡು ದಿನದೊಳಗೆ ಈ ವಿಷಯ ಚೋಳ ರಾಜನಿಗೆ ತಿಳಿದು ಅವನು ಗೋ ಶಾಲೆಯ ಗೋಪಾಲಕನಿಗೆ ಪರೀಕ್ಷಿಸಲು ಹೇಳಿದನು. ಗೋಪಾಲಕನು ಹುತ್ತದೊಳಗೆ ಹಾಲು ಸುರಿಸುತ್ತಿದ್ದ ಕಾಮಧೇನುವನ್ನು ಕಂಡ ಸಿಟ್ಟಿನಿಂದ ಹಸುವಿಗೆ ಹೊಡೆಯಲು ಕೈಲಿದ್ದ ಕೋಲನ್ನು ಅದರ ಕಡೆಗೆ ಗುರಿ ಯಿಟ್ಟು ಬೀಸಿ ಒಗೆದನು ಬೀಸಿ ಬಂದ ಕೋಲಿನ ಪೆಟ್ಟು ಕಾಮಧೇನು ವಿಗೆ ಬೀಳದಂತೆ ಶ್ರೀನಿವಾಸ ತನ್ನ ತಲೆಯನ್ನು ಅಡ್ಡ ಹಿಡಿದನು. ಆ ದೊಣ್ಣೆ ಯ ಪ್ರಹಾರದ ಪೆಟ್ಟು ಅವನ ಹಣೆಗೆ ಬಡಿಯಿತು. ಶ್ರೀನಿವಾಸನ ಹಣೆಗೆ ಬಲ ವಾದ ಪೆಟ್ಟು ಬಿದ್ದು ರಕ್ತ ಸುರಿಯಿತು. ನೋವಿನಿಂದ ನರಳ ತೊಡಗಿದ. ಈ ವಿಚಾರ ದೇವಲೋಕದಲ್ಲಿ ತಿಳಿದು ಚರ್ಚೆಯಾಯಿತು. ಅಲ್ಲಿದ್ದ ಗುರು ಬೃಹಸ್ಪತಿ ಗಳು ತಾವೇ ಶ್ರೀನಿವಾಸನಿಗೆ ಆರೈಕೆ ಮಾಡುವುದಾಗಿ ಹೊರಟ ಸಮಯದಲ್ಲಿ ನಾರದರು ಆಗಮಿಸಿ ಅವರೊಂದು ಸಲಹೆ ಕೊಟ್ಟರು. ಬೃಹಸ್ಪತಿಗಳೇ ನೀವು ಹೋಗಿ ಔಷಧಿ ಕೊಡಿ ಆದರೆ ಶ್ರೀನಿವಾಸನಿಗೆ ಆರೈಕೆ ಮಾಡಲು ಅಲ್ಲೊಬ್ಬ ತಾಯಿ ಕಾದಿದ್ದಾಳೆ. ಅವಳು ಶ್ರೀನಿವಾಸನ ಆರೈಕೆ ಪ್ರೀತಿಯಿಂದ ಮಾಡುತ್ತಾಳೆ ಆ ಜವಾಬ್ದಾರಿಯನ್ನು ಅವಳಿಗೆ ಬಿಡಿ ಎಂದರು. ಅಲ್ಲಿದ್ದವರೆಲ್ಲ ಆಶ್ಚರ್ಯ ಚಕಿತರಾಗಿ ಇದೇನು ಶ್ರೀನಿವಾಸನಿಗೆ ತಾಯಿಯೇ ಯಾರು ಆಕೆ ?ಎಂದಾಗ, ನಾರದರು ದ್ವಾಪರ ಯುಗದ ನೆನಪು ಮಾಡಿ ದರು. ಮೂರು ಸಾವಿರ ವರ್ಷಗಳ ಹಿಂದೆ ಮಥುರಾ ನಗರದಲ್ಲಿ ವಸುದೇವ ದೇವಕಿಗೆ ಹುಟ್ಟಿದ ಮಗು ಕೃಷ್ಣನನ್ನು,‌ ಕಂಸನದೃಷ್ಟಿಯಿಂದ ತಪ್ಪಿಸಲು, ವಿಷ್ಣುವಿನ ಆದೇಶದಂತೆ, ವಸುದೇವನು ಆಗ ತಾನೇ ಹುಟ್ಟಿದ ಹಸು ಗೂಸನ್ನು ಬುಟ್ಟಿಯಲ್ಲಿ ಹೊತ್ತು ತಂದು ಗೋಕುಲದ ಯಶೋಧ -ನಂದರ ಮನೆಯಲ್ಲಿ ಬಿಡುತ್ತಾನೆ. ಮುಂದೆ ಕೃಷ್ಣನು, ತಾಯಿ ಯಶೋಧೆಯ ಮುದ್ದಿನ ಆರೈಕೆಯಲ್ಲಿ ಬೆಳೆಯುತ್ತಾನೆ. ಇತ್ತ ಮಧುರಾದಲ್ಲಿ ಕೃಷ್ಣನ ಸೋದರ ಮಾವ ಕಂಸನು ಕೃಷ್ಣನನ್ನು ಸಂಹರಿಸಲು ತಂತ್ರರೂಪಿಸಿ ಕೃಷ್ಣ - ಬಲರಾಮರನ್ನು ಮಥುರಾಕ್ಕೆ ಕರೆಸುವ ಸಲುವಾಗಿ ಕುಸ್ತಿ ಕಾಳಗ ಸ್ಪರ್ಧೆ ಏರ್ಪಡಿಸಿ ಅವರಿಗೆ ಬರಲು ಆಹ್ವಾನ ಕೊಟ್ಟು ಕರೆ ತರಲು ಅಕ್ರೂರನನ್ನು ಕಳಿಸಿದನು. ಕಂಸನ ಕುತಂತ್ರವನ್ನು ಬಲ್ಲ ಕೃಷ್ಣನು ಮಧುರಾಕ್ಕೆ ಬೇಕೆಂದೆ ಹೋಗಿ ಅಲ್ಲಿ ಕಂಸನ ಸಂಹಾರ ಮಾಡಿ ಹೆತ್ತವರಾದ ವಸುದೇವ - ದೇವಕಿಯರನ್ನು ಬಂಧಮುಕ್ತ ಗೊಳಿಸಿದನು. ಆನಂತರ ಮತ್ತೆ ಅವನೆಂದೂ ಗೋಕುಲಕ್ಕೆ ಬರಲೇ ಇಲ್ಲ. ದೇಶದ ಉದ್ದಗಲಕ್ಕೂ ಸಂಚರಿಸುವುದೇ ಆಯಿತು. ಎಷ್ಟೋ ವರ್ಷಗಳು ಕಳೆದ ಮೇಲೆ ಒಮ್ಮೆ ಯಶೋಧಾ ತಾಯಿ ಕೃಷ್ಣನ ಅರಮನೆಗೆ ಬಂದಾಗ ಅಷ್ಟಮಹಿಷಿಯರಲ್ಲದೆ ಅದರ ಮೇಲೆ ಮತ್ತೆ 16,000 ಕನ್ಯೆಯರನ್ನು ವಿವಾಹವಾದ ವಿಷಯ ತಿಳಿದು ಯಶೋಧ ತಾಯಿಗೆ ಬೇಸರವಾಯಿತು. ಕೃಷ್ಣನ ಮದುವೆಯನ್ನು ತಾನೇ ಮುಂದೆ ನಿಂತು ಮಾಡಿ ಆ ಸಂಭ್ರಮವನ್ನು ಕಣ್ತುಂಬಿ ಕೊಳ್ಳುವ ಕನಸನ್ನು ಕಂಡಿದ್ದಳು. ಬೇಸರದಿಂದ ನೀನು ನನಗೆ ತಿಳಿಸದೆ ಮದುವೆಯಾಗಿರುವೆ ನಿನ್ನ ವಿವಾಹ ನೋಡುವ ಭಾಗ್ಯವನ್ನು ನನಗೆ ಕರುಣಿಸಲಿಲ್ಲ ಎಂದು ಕೃಷ್ಣನಿಗೆ ಹೇಳಿದಾಗ ಕೃಷ್ಣನು ಬೇಸರ ಪಡಬೇಡ ಮುಂದಿನ ಕಲಿಯುಗದಲ್ಲಿ ನಿನ್ನ ಕೈಯಾರೆ ನನ್ನ ವಿವಾಹವನ್ನು ಸಂಭ್ರಮ ದಿಂದ ಮಾಡುವೆ ಎಂದು ತಾಯಿ ವರ ಕೊಟ್ಟಿದ್ದ. ಅದರಂತೆ ಕಲಿಯುಗ ಕಾಲಿಟ್ಟಾಗ ಯಶೋದೆ ಸಪ್ತಗಿರಿಯಲ್ಲಿ ಬಕುಳಾ ದೇವಿಯಾಗಿ ಅವತರಿಸಿ ವರಾಹನದಿ ತಟದ ಪುಷ್ಕರಣಿಯಲ್ಲಿ ಸ್ನಾನ ಮಾಡಿ ಬರುತ್ತಿರುವ ಆಕೆಯನ್ನು ನಾರದರು ದೇವಲೋಕದ ಸಭೆಯಲ್ಲಿದ್ದವರಿಗೆ ತೋರಿಸಿದರು. ಇತ್ತ ಪೆಟ್ಟು ತಿಂದು ರಕ್ತ ಸುರಿಯುತ್ತಿದ್ದ ಶ್ರೀನಿವಾಸ ಒಬ್ಬನೇ ಪುಷ್ಕರಣಿಯ ಮೆಟ್ಟಿಲ ಮೇಲೆ ಕುಳಿತಿದ್ದನು. ಆಗತಾನೆ ಸ್ನಾನ ಮುಗಿಸಿ ಬಂದ ಬಕುಳಾ ದೇವಿ ಆತನನ್ನು ನೋಡಿ ಯಾರಪ್ಪ ನೀನು? ಎಲ್ಲಿಂದ ಬಂದಿರುವೆ? ಏನಿ ದು ನಿನ್ನ ಗಾಯ? ಎಂದೆಲ್ಲಾ ಕೇಳಿದಾಗ ಶ್ರೀನಿವಾಸನು ಅಮ್ಮಾ ಎಂದು ಕರೆಯುತ್ತಿದ್ದಂತೆ, ಬಕುಳಾ ದೇವಿಗೆ ಅಮ್ಮಾ ಎಂಬ ಶಬ್ದ ಕಿವಿಗೆ ಬೀಳುತ್ತಿದ್ದ ಹಾಗೆ ತಾಯಿಯ ಕರುಳು ಚುರುಕ್ ಎಂದಿತು. ಅಮ್ಮಾ ನನ್ನ ಹೆಸರು ಶ್ರೀನಿ ವಾಸ ಸ್ವಲ್ಪ ಪೆಟ್ಟು ಬಿದ್ದಿದೆ ಎಂದನು ತಾಯಿ ಕರುಳು ಕೇಳಬೇಕಲ್ಲವೇ? ಇದೇನು ಸಣ್ಣ ಗಾಯವೇ? ಎಷ್ಟೊಂದು ರಕ್ತ ಸುರಿಯುತ್ತಿದೆ ಎಂದು ತನ್ನ ಸೀರೆಯ ಸೆರಗಿನ ಅಂಚನ್ನು ಹರಿದು ಹಣೆಗೆ ಕಟ್ಟಲು ಹೊರಟಾಗ ಅಮ್ಮ ತಡೆಯಿರಿ ಎಂದು ಧ್ವನಿ ಕೇಳಿದಾಗ ತಿರುಗಿ ನೋಡಿದಳು, ಕೈಯಲ್ಲಿ ಔಷಧಿ ಹಿಡಿದು ಧನ್ವಂತರಿಯಂತೆ ಒಬ್ಬ ವ್ಯಕ್ತಿ ನಿಂತಿದ್ದನು. ಆತ ಬೇರೆ ಯಾರೊ ಆಗಿರದೇ ದೇವಗುರು ಬೃಹಸ್ಪತಿ. ಆ ಔಷಧಿ ಯನ್ನು ಬಕುಳಾದೇವಿ ಕಟ್ಟಲು ಹಿಡಿದಿದ್ದ ಸೀರೆಯ ತುಂಡಿನೊಳಗೆ ಹಾಕಿ ಈಗ ಇದನ್ನು ಕಟ್ಟಿ ಎಂದನು. ಬಕುಳಾದೇವಿ ಔಷಧಿ ತುಂಬಿದ ಸೆರಗಿನ ಅಂಚನ್ನು ಶ್ರೀನಿವಾಸನ ಹಣೆಗೆ ಕಟ್ಟಿ, ಬಂದ ವ್ಯಕ್ತಿಯ ಕಡೆ ತಿರುಗಿ ಸಮಯಕ್ಕೆ ಸರಿಯಾಗಿ ಬಂದಿರುವೆಯಲ್ಲ ಇದು ಯಾವ ಜನ್ಮದ ಸಂಬಂಧವೂ ನಾಕಾಣೆ ಇವನು ಅಮ್ಮ ಎಂದು ಕರೆದಾಗಲೇ ನನಗೆ ನನ್ನ ಮಗ ಎಂದು ಅನಿಸುತ್ತಿದೆ. ಹೀಗೆ ಆರೈಕೆ ಮಾಡು ತ್ತಲೇ ಶ್ರೀನಿವಾಸನಿಗೆ ಯಾರಪ್ಪ ನೀನು ಎಲ್ಲಿಂದ ಬಂದಿರುವೆ ನಿನ್ನ ತಂದೆ ತಾಯಿ ಬಂಧು ಬಳಗ ಎಲ್ಲಿರುವರು ಎಂದು ಕೇಳಿದಾಗ ಅಮ್ಮ ನನಗೆ ಯಾರು ಇಲ್ಲ ನೀನೇ ನನ್ನ ತಾಯಿ ಎಂದನು. ಈ ಕಥೆಯನ್ನು ಬರಹ ರೂಪಕ್ಕೆ ತಂದವರು — ಆಶಾ ನಾಗಭೂಷಣ. ತಾಯಿಯ ಮಮತೆ ಉಕ್ಕಿಬಂದು ಈ ರೀತಿ ಪೆಟ್ಟು ಮಾಡಿದವರು ಯಾರು ಅಂತ ಹೇಳು ಅವರನ್ನು ಸುಮ್ಮನೆ ಬಿಡುವುದಿಲ್ಲ ಎಂದಳು. ಹೋಗಲಿ ಬಿಡಮ್ಮ ಕಳೆದು ಹೋದ ವಿಚಾರ ಬೇಡ ಈಗ ನನಗೆ ಹಸಿವಾಗುತ್ತಿದೆ ಅಮ್ಮ ಹೇಳು ಅಮ್ಮ ಹೇಳು ನಿನ್ನ ಮನೆ ಎಲ್ಲಿದೆ? ನೀನು ಯಾರ ಜೊತೆ ಇರುವೆ ಎಂದನು ಬಕುಳಾದೇವಿ ನನಗೂ ಯಾರು ಇಲ್ಲ ನಾನು ಒಬ್ಬಂಟಿಯಾಗಿರುವೆ ಎಂದಳು. ಶ್ರೀನಿವಾಸ ಹೇಳಿದ ಯಾರೂ ಇಲ್ಲ ಎಂದು ಏಕೆ ಹೇಳುವೆ, ಭಗವಂತ ನಿನ್ನ ಜೊತೆಗಿರುತ್ತಾನೆ. ಏಕಾಂಗಿ ಯಾಗಿ ಯಾರು ಇರುವು ದಿಲ್ಲ ಇನ್ನು ಮುಂದೆ ನಾನೇ ನಿನ್ನ ಮಗ ನೀನೇ ನನಗೆ ಅಮ್ಮ ಎಂದನು. ಈ ರೀತಿಯಾಗಿ ಅಮ್ಮ ಮಗನ ಬಾಂಧವ್ಯ ಮುಂದುವರೆಯಿತು. ತಾಯಿಯ ಆರೈಕೆಯಲ್ಲಿ ಶ್ರೀನಿವಾಸ ಚೇತರಿಸಿ ಕೊಂಡನು. ಮುಂದೆ ಆಕಾಶ ರಾಜನ ಮಗಳಾದ ಪದ್ಮಾವತಿ ಯೊಂದಿಗೆ ಮಗ ಶ್ರೀನಿವಾಸನ ಮದುವೆಯನ್ನು ಬಕುಳಾದೇವಿಯೇ ಮುಂದೆ ನಿಂತು, ಹಿಂದೆ ಅಂತ ಮದುವೆ ಯಾಗಿಲ್ಲ ಮುಂದೆ ಆಗುವುದಿಲ್ಲ ಅನ್ನುವ ಹಾಗೆ, ಶ್ರೀನಿವಾಸನು ತನ್ನ ಮದುವೆಗಾಗಿ ಕುಬೇರನ ಹತ್ತಿರ ಸಾಲ ಮಾಡಿ ಬಾರಿ ಮದುವೆಯನ್ನು ಸಂಭ್ರಮ ಸಡಗರದಿಂದ ಮಾಡಿ ಕೊಂಡನು. ಅಂತಹ ಶ್ರೀನಿವಾಸ ಪದ್ಮಾವತಿ ರ ಕಲ್ಯಾಣಕ್ಕೆ ಸಾಕ್ಷಿಯಾಗಿ ದ್ವಾಪರದ ಯಶೋದೆ ಕಲಿಯುಗದಲ್ಲಿ ಬಕುಳಾದೇವಿಯಾಗಿ ಆ ಸಂಭ್ರಮವನ್ನು ಕಣ್ತುಂಬಿ ಕೊಂಡಳು. ( ತ್ರೇತಾಯುಗದಲ್ಲಿ ರಾವಣ ಸೀತೆಯನ್ನು ಅಪಹರಿಸಿದಾಗ ಸೀತೆಯ ಬದಲಿಗೆ ಅಲ್ಲಿ ‘ವೇದವತಿ’ ಇದ್ದು, ರಾಮ ರಾವಣರ ಯುದ್ಧವೆಲ್ಲ ಮುಗಿದ ನಂತರ ರಾಮನು ವೇದವತಿಗೆ ಏನು ವರ ಬೇಕು ಎಂದು ಕೇಳಿದಾಗ ನೀನು ನನ್ನನ್ನು ವಿವಾಹ ಆಗಬೇಕು ಎಂದಳಂತೆ ರಾಮ ಆಗ ಏಕ ಪತ್ನಿ ವ್ರತಸ್ಥ ನಾದುದರಿಂದ ಮುಂದಿನ ಯುಗದಲ್ಲಿ ಶ್ರೀನಿವಾಸನಾಗಿ ಬಂದು ನಿನ್ನನ್ನು ವಿವಾಹ ಆಗಬೇಕು ಎಂದು ಮಾತು ಕೊಟ್ಟಿದ್ದನಂತೆ ಅದರಂತೆ ವೇದವತಿಯೇ ಪದ್ಮಾವತಿಯಾಗಿ ಜನಿಸಿ ರಾಮನೆ ಶ್ರೀನಿವಾಸನಾಗಿ ಅವಳ ಇಚ್ಛೆಯಂತೆ ವಿವಾಹವಾದನು. ಮುಂದೆ ಲಕ್ಷ್ಮಿಗೂ ಮತ್ತು ಪದ್ಮಾವತಿ ಸರಿ ಬರದೆ ಶ್ರೀನಿವಾಸ ತಿರುಪತಿಯಲ್ಲಿ ಕಲ್ಲಾದ ಎನ್ನುವ ಕಥೆಯು ಇದೆ.) ಕಲ್ಯಾಣಾದ್ಭುತಗಾತ್ರಾಯ ಕಾಮಿತಾರ್ಥ ಪ್ರದಾಯಿನೇ ! ಶ್ರೀಮದ್ವೇಂಕಟನಾಥಾಯ ಶ್ರೀನಿವಾಸಾಯ ಮಂಗಳಮ್ !! ವಂದನೆಗಳೊಂದಿಗೆ, ಬರಹ: ©ಆಶಾ ನಾಗಭೂಷಣ — ಹಕ್ಕುಗಳು ಸಂರಕ್ಷಿತ #ashanagabhushan #ಆಶಾನಾಗಭೂಷಣ
ರಾಧಾಕೃಷ್ಣ 🦚💙
1K views
3 months ago
#ದಿನಕ್ಕೊಂದು ಕಥೆ ಭಯದೊಳಗಿನ ವಿಜಯ:- ಒಂದೂರಲ್ಲಿ ಅಜ್ಜಿ ಹಾಗೂ ಮೊಮ್ಮಗ ಇದ್ದರು. ಅಜ್ಜಿಗೆ ಮೊಮ್ಮಗನ ಮೇಲೆ ಪ್ರೀತಿ ಇತ್ತು. ಆದರೆ ಅವನ ಸಮಸ್ಯೆ ಅಜ್ಜಿಗೊಂದು ತಲೆನೋವಾಗಿತ್ತು. ಚಿಕ್ಕಂದಿನಲ್ಲೇ ತಂದೆ ತಾಯಿ ಕಳೆದುಕೊಂಡ ಮಗು ಅಜ್ಜಿ ಮಡಿಲಿಗೆ ಬಂದು ಬಿತ್ತು. ಅಜ್ಜಿ ಅಕ್ಕರೆಯಿಂದ ಆರೈಕೆ ಅನುಪಾನ ಮಾಡಿ ಸಾಕಿದಳು. ಎರಡ್ಮೂರು ವರ್ಷಗಳು ತುಂಬುವವರೆಗೆ ಚೆನ್ನಾಗಿದ್ದ ಮೊಮ್ಮಗು, ಅದ್ಯಾವ ದೆವ್ವ ಬಂದು ಮೆಟ್ಟಿ ಕೊಂಡಿತು ಏನೋ? ಎಂಬಂತೆ ಚೆನ್ನಾಗಿ ಆಟ ಆಡಿಕೊಂಡಿ ದ್ದ ಹುಡುಗ ಮನೆಯ ಸಂಧಿ ಮೂಲೆಗಳಲ್ಲಿ ಮುದುರಿ ಕೂರ ತೊಡಗಿದ. ಇಷ್ಟೇ ಆಗಿದ್ದರೆ ಏನಾದರೂ ಮಾಡಬಹುದಿತ್ತು. ಆದರೆ ಆ ಹುಡುಗನನ್ನು ಯಾರೇ ಬಂದು ಮುಟ್ಟಿದರೆ ಹೇಡಿಗಳಂತೆ ಹೆದರಿಕೊಂಡು ನಡುಗುತ್ತಾ ಮೂಲೆಯಲ್ಲಿ ಕುಳಿತು ಬಿಡುತ್ತಿದ್ದರು. ಆಟ ಆಡುವ ಮಕ್ಕಳು ಮುಟ್ಟಿದರೆ ಆಟ ಬಿಟ್ಟು ಹೆದರಿ ಓಡಿ ಹೋಗುತ್ತಿದ್ದವು. ಇದಿಷ್ಟೇ ಅಲ್ಲ ಪ್ರಾಣಿಗಳನ್ನು ಮುಟ್ಟಿದರೂ ಅವು ಹೆದರಿಕೊಂಡು ಹಿಂದೆ ಸರಿಯುತ್ತಿದ್ದವು. ಈ ವಿಚಾರ ಊರವರಿಗಲ್ಲದೆ ಅಕ್ಕ ಪಕ್ಕ ಹಳ್ಳಿ ಹರಾಸುಗಳಿಗೂ ತಿಳಿಯಿತು. ಅಜ್ಜಿಯ ಮನೆ ಸುತ್ತಮುತ್ತ ಓಡಾಡಲು ಜನ ಹೆದರಿದರು. ಆಡುವ ಮಕ್ಕಳನ್ನಂತೂ ಅಲ್ಲಿ ಸುಳಿದಾಡಲು ಬಿಡುತ್ತಿರಲಿಲ್ಲ. ಇದರಿಂದ ಹುಡುಗ ಮತ್ತಷ್ಟು ಮನೆಯೊಳಗೆ ಇರುವುದಾಯಿತು. ಈಗಾಗಲೇ ಹುಡುಗನಿಗೆ ಆರೇಳು ವರ್ಷ ಆಗಿದೆ. ಎಲ್ಲಾ ಕೆಲಸದ ಭಾರ ಅಜ್ಜಿಯೇ ಮಾಡಬೇಕು.ಸಣ್ಣಪುಟ್ಟ ಸಾಮಾನು, ತರಕಾರಿ ತರಿಸಲು ಹುಡುಗನನ್ನು ಅಂಗಡಿಗೆ ಕಳುಹಿಸುವಂತಿಲ್ಲ. ಈಗೀಗಂತೂ ಅಜ್ಜಿಗೂ ವಯಸ್ಸಾಗುತ್ತಾ ಬಂದಿದೆ.ಈ ಮೊಮ್ಮಗನ ಸಮಸ್ಯೆ ಬೇರೆ ಕಾಡುತ್ತಿದೆ. ಹೀಗಿರುವಾಗ ಒಂದು ದಿನ ಯಾತ್ರೆ ಹೊರಟಿದ್ದ ಸನ್ಯಾಸಿಯೊಬ್ಬ ಮುಸ್ಸಂಜೆ ಸಮಯ ಅಜ್ಜಿ ಮನೆಗೆ ಬಂದನು. ಅವನು ಅಜ್ಜಿಗೆ ಕೇಳಿದ, ನಾನು ಈ ದಿನ ರಾತ್ರಿ ತಂಗಿ ಬೆಳಗ್ಗೆ ಎದ್ದು ಹೋಗುತ್ತೇನೆ ಆಗಬಹುದೇ? ಎಂದು. ಅಜ್ಜಿಯು ಸಂತೋಷದಿಂದ ಒಪ್ಪಿ ರಾತ್ರಿ ಸ್ವಲ್ಪ ತಿಂಡಿ ,ಹಣ್ಣು ಕೊಟ್ಟು ಮಲಗಲು ಚಾಪೆ ಕೊಟ್ಟಿತು. ರಾತ್ರಿ ಮಲಗಿ ಬೆಳಗ್ಗೆ ಎದ್ದ ಸನ್ಯಾಸಿ ಅಜ್ಜಿಗೆ ತಿಳಿಸಿ ಹೋಗಲು ಒಳಗೆ ಬಂದ. ಆಗ ಮೂಲೆಯಲ್ಲಿ ಮುದುರಿ ಕುಳಿತಿದ್ದ ಹುಡುಗ ಕಣ್ಣಿಗೆ ಕಂಡ. ಸನ್ಯಾಸಿ ಆ ಹುಡುಗನನ್ನು ದೃಷ್ಟಿಸಿ ನೋಡುತ್ತಿರುವಾಗಲೇ ಒಂದು ಬೆಕ್ಕು ಬಂದಿತು. ಹುಡುಗನು ಹತ್ತಿರ ಮಿಯಾವ್ ಮಿಯಾವ್ ಅನ್ನುತ್ತ ಆ ಹುಡುಗನ ಮೇಲೆ ಬಾಲ ಆಡಿಸಿತು. ತಕ್ಷಣವೇ ಹಾವು ಮೆಟ್ಟಿದವರಂತೆ ಹೆದರಿ ಗಾಬರಿ ಮುಖದಿಂದ ಈಚೆ ಬಂದು ಮೂಲೆಯಲ್ಲಿ ನಡುಗುತ್ತಾ ಮುದುರಿ ಕುಳಿತಿತು. ಸನ್ಯಾಸಿ ತದೇಕಚಿತ್ತದಿಂದ ನೋಡಿದ. ಅಷ್ಟು ಹೊತ್ತಿಗೆ ಆ ಅಜ್ಜಿ ಬಂದು ಇದುವರೆಗಿನ ಕಥೆಯನ್ನೆಲ್ಲ ಹೇಳಿ. ಜೋರಾಗಿ ಅತ್ತಳು. ಸನ್ಯಾಸಿ ಅಜ್ಜಿಯನ್ನು ಸಮಾಧಾನಪಡಿಸಿ ಆ ಹುಡುಗನ ಹತ್ತಿರ ಕುಳಿತು ಕೈ ತೋರಿಸುವಂತೆ ಹೇಳಿದ. ಆ ಹುಡುಗ ದೂರದಲ್ಲಿ ಕೈಬಿಚ್ಚಿ ತೋರಿಸಿತು ಒಂದಷ್ಟು ಹೊತ್ತು ನೋಡಿದ ಸನ್ಯಾಸಿ, ಏನೋ ಲೆಕ್ಕಾಚಾರ, ಗುಣಾಕಾರ ಹಾಕಿ ಸಂತಸದಿಂದ ಮುಗುಳ್ನಗೆ ನಗುತ್ತಾ , ಅಜ್ಜಿ ನಿನ್ನ ಮೊಮ್ಮಗನ ಬಗ್ಗೆ ಲವಲೇಶವೂ ಯೋಚನೆ ಮಾಡಬೇಡ. ಸದ್ಯದಲ್ಲೇ ಇವನಿಗೆ ರಾಜ ಯೋಗ ಒದಗಿ ಬರಲಿದೆ. ಮುಂದೆ ಇವನು ರಾಜನಾಗುತ್ತಾನೆ ಎಂದು ಹೇಳಿ ಅಜ್ಜಿಗೆ ಕೃತಜ್ಞತೆ ಸಲ್ಲಿಸಿ ಹೊರಟನು. ಅಜ್ಜಿ ಮನೆಯ ಸುತ್ತಮುತ್ತ ಯಾರೂ ಬರದೆ ನಿರ್ಬಂಧ ಹೇರಿದಂತಾಗಿ ಊರಿನ ಜನರು ಸುತ್ತಿ ಬಳಸಿ ಓಡಾಡುವಂತಾಗಿ ತೊಂದರೆಯಾಯಿತು. ಮಕ್ಕಳು ಸಹ ಅಲ್ಲಿ ಆಡುವಂತಿಲ್ಲ. ಹೀಗಾಗಿ ಊರವರೆಲ್ಲ ಸೇರಿ ರಾಜನ ಹತ್ತಿರ ಹೋಗಿ ಅಜ್ಜಿ ಹಾಗೂ ಮೊಮ್ಮಗನ ಕುರಿತು ಎಲ್ಲವನ್ನೂ ಹೇಳಿ ನಮಗೆ ತೊಂದರೆಯಾಗುತ್ತಿದೆ ಇದನ್ನು ಸರಿಪಡಿಸಿಕೊಡಬೇಕು ಎಂದು ನ್ಯಾಯವನ್ನು ಕೇಳಿದರು. ರಾಜ ಮತ್ತು ಮಂತ್ರಿ ಸಮಾಲೋಚಿಸಿ, ಇದು ಹೌದೇ ಎಂದು ವಿಚಾರಿಸಲು ಅರಮನೆ ಸೇವಕರನ್ನು ಕಳಿಸಿದರು. ಅದು ನಿಜವೆಂದು ತಿಳಿದಮೇಲೆ ರಾಜ ಭಟರು ಬಂದು ಸಾಬೀತು ಪಡಿಸಲು ಜೋರಾಗಿದ್ದ ಒಂದು ನಾಯಿ ಮರಿಯನ್ನು ಹುಡುಗನ ಹತ್ತಿರ ಬಿಟ್ಟರು. ನಾಯಿಮರಿ ಹತ್ತಿರ ಹೋಗಿ ಆ ಹುಡುಗನನ್ನು ಮುಟ್ಟುತ್ತಿದ್ದಂತೆ ಗಕ್ಕಂತ ಹೆದರಿ ಮುದುರಿ ಮಲಗಿಬಿಟ್ಟಿತು. ರಾಜನ ಆದೇಶದಂತೆ, ಅಜ್ಜಿಯ ಅನುಮತಿ ಪಡೆದು ಆ ಹುಡುಗನನ್ನು ಯಾರೂ ಮುಟ್ಟದಂತೆ ವ್ಯವಸ್ಥೆ ಮಾಡಿ ಅರಮನೆಗೆ ಕರೆದುಕೊಂಡು ಬಂದರು. ಮರುದಿನ ಸಭೆಯಲ್ಲಿ ಈ ಹುಡುಗನ ಕುರಿತು ಚರ್ಚೆ ನಡೆದು, ಇವನಿಗೆ ಮರಣದಂಡನೆ ವಿಧಿಸುವುದು ಸರಿಯೆಂದು, ಕೆಲ ವರುಷ ಕಾದು ನೋಡಲು ಕಾರಾಗೃಹದಲ್ಲಿ ಇಡುವುದೇ ಸರಿ ಎಂದು ಚರ್ಚೆ ನಡೆದು, ಕೊನೆಗೆ ರಾಜನು, ಮಂತ್ರಿಯ ಸಲಹೆಯಂತೆ ಆ ಹುಡುಗನನ್ನು ಒಬ್ಬನೇ ಇರುವಂಥ ಕಾರಾಗೃಹದಲ್ಲಿ ಇಟ್ಟರು. ಮಂತ್ರಿ ಬಹಳ ಬುದ್ದಿವಂತ. ಆಗಾಗ್ಗೆ ಹುಡುಗ ಇರುವ ಬಂದೀಖಾನೆಗೆ ಹೋಗಿ ನೋಡಿಕೊಂಡು ಬರುತ್ತಿದ್ದ. ಮತ್ತು ಅಲ್ಲಿನ ಸೇವಕರಿಗೆ ಹುಡುಗನಿಗೆ ಯಾವುದೇ ರೀತಿಯ ತೊಂದರೆಯಾಗದಂತೆ, ಕೊರತೆಯಾಗದಂತೆ, ನೋಡಿಕೊಳ್ಳಬೇಕೆಂದು ಕರಾರುವಕ್ಕಾಗಿ ತಿಳಿಸಿದ್ದ. ಹುಡುಗನ ಅಜ್ಜಿಗೆ ಈ ವಿಚಾರವನ್ನು ತಿಳಿಸಿ ಅಜ್ಜಿಗೆ ಬೇಕಾದ ವ್ಯವಸ್ಥೆಯನ್ನು ಮಂತ್ರಿಯೇ ಮುತುವರ್ಜಿವಹಿಸಿ ಮಾಡಿದ್ದನು. ಹೀಗೆ ಒಂದಷ್ಟು ತಿಂಗಳು ಕಳೆಯಿತು. ನೆರೆ ರಾಜ್ಯದ ರಾಜ, ನಿಮ್ಮ ರಾಜ್ಯದ ಮೇಲೆ ಯುದ್ಧ ಮಾಡುತ್ತೇನೆ ಇಲ್ಲದಿದ್ದರೆ ಕಪ್ಪ ಕಾಣಿಕೆ ಕೊಟ್ಟು ಸೋತೆವೆಂದು ಒಪ್ಪಿಕೊಳ್ಳಬೇಕೆಂದು ಸುತ್ತೋಲೆಯನ್ನು ಕಳಿಸಿದನು. ನೆರೆರಾಜ್ಯದ ಮೇಲೆ ಯುದ್ಧ ಮಾಡಿದರೆ ಈ ರಾಜ್ಯ ಹೇಳ ಹೆಸರಿಲ್ಲದಂತೆ ಅಳಿಸಿಹೋಗುತ್ತದೆ. ಯುದ್ಧ ಮಾಡದೇ ಕಪ್ಪಕಾಣಿಕೆ ಕೊಟ್ಟು ಸೋಲೊಪ್ಪಿಕೊಳ್ಳಲು ಮನಸ್ಸಿಲ್ಲ. ಈ ಸಮಯಕ್ಕಾಗಿ ಕಾಯುತ್ತಿದ್ದ ಮಂತ್ರಿಯು ಯೋಚಿಸಿ ಒಂದು ಉಪಾಯ ಮಾಡಿದನು.ವಿಷಯವನ್ನು ರಾಜ ಹಾಗೂ ಮಂತ್ರಿ, ಕಾರ್ಯರೂಪಕ್ಕೆ ಹೇಗೆ ತರುವುದು ಎಂಬುದನ್ನು ನಿರ್ಧರಿಸಿದರು, ಒಂದು ಲಕೋಟೆ ಬರೆದು,ಬಂದೀ ಖಾನೆಯಲ್ಲಿಟ್ಟಿದ್ದ ಹುಡುಗನ ಕೈಲಿ ಲಕೋಟೆ ಕೊಟ್ಟು, ನೆರೆ ದೇಶದ ರಾಜನ ಕೈಮುಟ್ಟಿ, ಹೇಗೆ ಕೊಡಬೇಕು ಎಂಬುದನ್ನು ಮನದಟ್ಟು ಮಾಡಿಸಿದರು. ನಂತರ ರಾಜ್ಯದ ಸೇನಾಧಿಪತಿ, ಮುಖ್ಯ ರಾಜಭಟರ ಜೊತೆ ಆ ಹುಡುಗನನ್ನು ಕಳುಹಿಸಿಕೊಟ್ಟರು. ನೆರೆ ರಾಜ್ಯದ ರಾಜಸಭೆಯಲ್ಲಿ ಸಿಂಹಾಸನದ ಮೇಲೆ ರಾಜಗಾಂಭೀರ್ಯದಿಂದ,ದರ್ಪದಿಂದ, ಕುಳಿತಿದ್ದ ರಾಜನಿಗೆ, ಸಂದೇಶವನ್ನು ತಿಳಿಸಿದ ಸೇನಾಧಿಪತಿ, ಆ ಹುಡುಗನಿಗೆ ಲಕೋಟೆ ಕೊಡಲು ತಿಳಿಸಿದನು. ಹುಡುಗನು ಸೇನಾಧಿಪತಿಯ ಆದೇಶದಂತೆ ರಾಜ ಕುಳಿತಲ್ಲಿಗೆ ಬಂದು, ರಾಜನ ಕೈಗೆ ಮಂತ್ರಿಯು ಹೇಳಿಕೊಟ್ಟಂತೆ, ಲಕೋಟೆ ಕೊಟ್ಟನು. ಕೊಟ್ಟ ಕ್ಷಣದಲ್ಲೇ ರಾಜನ ದರ್ಪ, ಗಾಂಭೀರ್ಯ, ಎಲ್ಲಿ ಹಾರಿ ಹೋಯಿತೋ ಎಂಬಂತೆ," ಅಯ್ಯಯ್ಯೋ ನನಗೆ ಯುದ್ಧ ಬೇಡ, ನಾನ್ಯಾಕೆ ಯುದ್ಧ ಮಾಡಲಿ, ನಾನು ಯಾರ ಜೊತೆಯಲ್ಲೂ ಕಾದಾಡುವುದಿಲ್ಲ. ಬಂದವರಿಗೆ ಸತ್ಕರಿಸಿ, ಗೌರವದಿಂದ ಕಳಿಸಿ ಎಂದು ಹೇಳಿ ಸಿಂಹಾಸನದ ಮೇಲೆ ಕುಳಿತನು. ಸಭೆಯಲ್ಲಿ ಕುಳಿತು ಎಲ್ಲರಿಗೂ ರಾಜನು ಹೀಗೇಕೆ ಮಾಡುತ್ತಿದ್ದಾನೆಂದು ತಿಳಿಯಲಿಲ್ಲ. ಆ ಲಕೋಟೆಯಲ್ಲಿ ಹೆದರುವಂತಹದ್ದು ಏನಿದೆ ಎಂದು, ಸಭೆ ಚರ್ಚಿಸುತಿತ್ತು.ಲಕೋಟೆ ತಂದವರಿಗೆ ರಾಜೋಚಿತ ಸತ್ಕಾರ ಮಾಡಿ ಕಳಿಸಿಕೊಟ್ಟರು. ನಂತರ ಲಕೋಟೆ ತೆಗೆದು ನೋಡಿದಾಗ, "ನಾವು ನೀವು ಸ್ನೇಹದಿಂದ ಇರೋಣ, ಯುದ್ಧ ಯಾಕೆ ? ಇದರಿಂದ ಸೈನ್ಯ ನಾಶವಾಗುತ್ತೆ, ಬೊಕ್ಕಸ ಬರಿದಾಗುತ್ತೆ, ರಾಜ್ಯದ ಸುರಕ್ಷತೆಯಲ್ಲಿ ಒಬ್ಬರಿಗೊಬ್ಬರು ಸಹಾಯ ಮಾಡಿಕೊಂಡು, ಸ್ನೇಹಿತರಾಗಿರೋಣ ಎಂದಷ್ಟೇ ಬರೆದಿದ್ದು. ಯಾರಿಗೂ ಏನು ಎಂದು ಯೋಚಿಸಿದರು ಅರ್ಥವಾಗಲಿಲ್ಲ . ಈ ದೇಶದ ರಾಜನಿಗೆ ಸಮಾಧಾನವಾಯಿತು. ಹಾಗೂ ಹುಡುಗನ ಕೈ ಗುಣದಿಂದ ಎರಡು ದೇಶಗಳ ಯುದ್ಧ ನಿಂತಿತು. ಇನ್ನು ಮುಂದೆ ರಾಜ್ಯಕ್ಕೆ ಯಾವುದೇ ಗಂಭೀರವಾದ ಸಮಸ್ಯೆಗಳು ಎದುರಾದರೂ, ಹುಡುಗನಿಂದ ನಾವು ಪರಿಹರಿಸಿಕೊಳ್ಳಬಹುದು. ಎಂಬ ವಿಶ್ವಾಸದಿಂದಾಗಿ ರಾಜ್ಯದಲ್ಲಿ ಹೆಚ್ಚು ಹೆಚ್ಚು ಅಭಿವೃದ್ಧಿಯಾಗತೊಡಗಿತು. ರಾಜ -ಮಂತ್ರಿ ಎಲ್ಲರೂ ನೆಮ್ಮದಿಯಿಂದ ಇದ್ದರು. ಯಾವುದೇ ರಾಜ್ಯಗಳ ಭಯವೂ ಇವರಿಗೆ ಇಲ್ಲವಾಯಿತು. ಹುಡುಗನ ಬಂಧೀಖಾನೆಯಲ್ಲಿದ್ದರೂ ಹೆಚ್ಚು ಹೆಚ್ಚು ಗೌರವ,ಪ್ರೀತಿ ಕೊಡುತ್ತಿದ್ದರು. ರಾಜ ಮತ್ತು ಮಂತ್ರಿ ಮುಂದಾಲೋಚನೆಯಿಂದ ಹುಡುಗನಿಗೆ ಕುದುರೆ ಸವಾರಿ, ಕತ್ತಿವರಸೆ,ಶಸ್ತ್ರಾಭ್ಯಾಸಗಳ ಜೊತೆ ಶೈಕ್ಷಣಿಕ ಶಿಕ್ಷಣ ಸೇರಿದಂತೆ,ಎಲ್ಲ ಶಿಕ್ಷಣವನ್ನು ಕೊಡಿಸುತ್ತಿದ್ದರು. ಹುಡುಗನ ಅಜ್ಜಿಯನ್ನು ಅರಮನೆಯವರೇ ನೋಡಿಕೊಂಡರು.ಈ ಕಥೆಯನ್ನು ಬರಹ ರೂಪಕ್ಕೆ ತಂದವರು — ಆಶಾ ನಾಗಭೂಷಣ. ಹೀಗಿರುವಾಗ ಇನ್ನೊಂದು ಬಲಿಷ್ಠ ದೇಶದ ರಾಜ ಯುದ್ಧಕ್ಕೆ ಬರುವೆನೆಂದು, ಸಂಧಿ ಮಾತುಕತೆಗಳಿಗೆ ಅವಕಾಶವಿಲ್ಲವೆಂದು, ಕಟ್ಟುನಿಟ್ಟಾಗಿ ತಿಳಿಸಿದರು. ರಾಜನು ಮಂತ್ರಿಯ ಜೊತೆ ಸಭಿಕರ ಜೊತೆ ಸಮಾಲೋಚನೆ ನಡೆಸಿ ಯುದ್ಧಕ್ಕೆ ಬರಬಹುದೆಂದು ನಾವು ತಯಾರಿದ್ದೇವೆ ಎಂದು ತಿಳಿಸಿದರು. ಯುದ್ಧ ನಿಗದಿಯಾದ ದಿನ, ಎಲ್ಲಾ ಸೈನಿಕರಿಗಿಂತ ಮೊದಲು ಈ ಹುಡುಗನನ್ನು ನಿಲ್ಲಿಸಿದರು. ಮೊದಮೊದಲು ನಿಲ್ಲುವುದಿಲ್ಲವೆಂದು ಹೆದರಿದನು. ಆದರೆ ರಾಜ ಮತ್ತು ಮಂತ್ರಿ ಪರಿವಾರದವರು ಸೂಕ್ತ ಸಲಹೆ ಸೂಚನೆಗಳನ್ನು ಕೊಟ್ಟು ಆತನನ್ನು ನಿಲ್ಲಿಸಿದರು.ಯುದ್ಧ ಆರಂಭವಾಗುವ ಮುನ್ನ, ಹುಡುಗನನ್ನು ಶತ್ರು ಸೈನಿಕರು ಇರುವ ಕಡೆಗೆ ಕಳಿಸಿ, ಶುಭಕೋರಿ, ಹಸ್ತಲಾಗವ ಮಾಡುವ ನೆಪದಲ್ಲಿ ಹೆಚ್ಚುಕಡಿಮೆ ಅಲ್ಲಿರುವ ಬಹಳಷ್ಟು ಸೈನಿಕರು, ಸೇನಾಧಿಪತಿಗಳನ್ನು ಮುಟ್ಟಿ ಬರುವಂತೆ ವ್ಯವಸ್ಥಿತವಾಗಿ ಮಾಡಿದರು. ಏನು ನಡೆಯುತ್ತಿದೆ ಎಂದು ಗೊತ್ತಾಗುವುದ ರೊಳಗಾಗಿ ನಾವು ಯುದ್ದ ಮಾಡಲಾರೆವು, ನಮ್ಮಿಂದ ಆಗುವುದಿಲ್ಲ ಎಂದು ಹೆದರುತ್ತಾ ಒಬ್ಬರಾದ ಮೇಲೆ ಒಬ್ಬರು ಓಡಿಬಿಟ್ಟರು. ಅಷ್ಟು ಹೊತ್ತಿಗೆ ಉಭಯಸೇನೆಗಳ ಮಧ್ಯೆ ಗದ್ದಲಗಳಾಗಿ ಯಾರು, ಯಾಕೆ ಹೀಗಾಯ್ತು ಎಂಬುದು ಯಾರಿಗೂ ಗೊತ್ತಾಗಲಿಲ್ಲ. ಯುದ್ಧ ಮಾಡಲು ಬಂದವರು ಹಿಂತಿರುಗಿದರು. ಈ ರಾಜ್ಯದವರು ಸಂತೋಷವಾಗಿ ಬಂದರು. ಇದೇ ತರಹದ ಘಟನೆಗಳು ಒಂದಷ್ಟು ಸಲ ನಡೆದುದರಿಂದ ಈ ರಾಜ್ಯದ ತಂಟೆಗೆ ಯಾರು ಬರಲಿಲ್ಲ. ಕೆಲವೇ ವರ್ಷಗಳಲ್ಲಿ ರಾಜ್ಯ ಅಭಿವೃದ್ಧಿಯಾಗುತ್ತಾ ಬಲಿಷ್ಠ ರಾಜ್ಯದ ಸಮಕ್ಕೆ ನಿಂತು ಬಿಟ್ಟಿತು.ಈ ಹುಡುಗ ಬೆಳೆದು ಯುವಕನಾಗಿದ್ದ ಅರಮನೆಯ ಸದಸ್ಯ ಆಗಿದ್ದುದರಿಂದ, ಹಾಗೂ ಅವನಿಗಿರುವ ವಿಶೇಷ ಶಕ್ತಿಯಿಂದ, ಹೆಚ್ಚು ಮರ್ಯಾದೆ, ಗೌರವ ಪ್ರೀತಿ, ಎಲ್ಲಾ ದೊರೆತ ಕಾರಣ, ಅವನಿಗೆ ಈಗ ಧೈರ್ಯ ಬಂದಿತ್ತು. ಅವನೇ ಎಷ್ಟೊ ಯುದ್ಧಗಳ ಮುಂದಾಳತ್ವ ವಹಿಸಿ ಗೆದ್ದುಕೊಂಡು ಬಂದನು.ಅವನು ಮುಟ್ಟಿದರೆ, ಹೇಡಿಗಳು ಆಗವುದು, ಮುದುರಿ ಕೂರುವುದು ಈ ತರಹದ್ದೆಲ್ಲ ಹೊರಟುಹೋಗಿತ್ತು. ದಕ್ಷರಾಜನಿಗೆ ಇರಬೇಕಾದ ಯೋಗ್ಯತೆಗಳೆಲ್ಲವೂ ಅವನಲ್ಲಿ ಬಂದಿತ್ತು. ರಾಜನಿಗೆ ಒಬ್ಬಳೇ ಮಗಳಿದ್ದಳು. ಅವಳನ್ನು ಈ ಹುಡುಗನಿಗೆ ಕೊಟ್ಟು ಮದುವೆ ಮಾಡಿ, ಇವನೇ ತನ್ನ ಮುಂದಿನ ವಾರಸುದಾರ ಎಂದು ಘೋಷಿಸಿದನು. ಸನ್ಯಾಸಿ ಹೇಳಿದ ಭವಿಷ್ಯ ನಿಜವಾಯಿತು. ಮುಂದೆ ಶ್ರೇಷ್ಠ ರಾಜನಾಗಿ ಪ್ರಜೆಗಳ ವಿಶ್ವಾಸಗಳಿಸಿ, ರಾಜ್ಯದ ಕೀರ್ತಿ ಹರಡಿದನು. " ಗತಿರ್ಭರ್ತಾ ಪ್ರಭು ಸಾಕ್ಷೀ, ನಿವಾಸ ಶರಣ ಸುಹೃತ್! ಪ್ರಭವ ಪ್ರಲಯ ಸ್ಥಾನಂ, ನಿಧಾನಂ ಬೀಜವ್ಯಯಂ" ವಂದನೆಗಳೊಂದಿಗೆ, ಬರಹ: ©ಆಶಾ ನಾಗಭೂಷಣ
ರಾಧಾಕೃಷ್ಣ 🦚💙
977 views
3 months ago
#ದಿನಕ್ಕೊಂದು ಕಥೆ #🔱 ಭಕ್ತಿ ಲೋಕ ಶ್ರೀ ಶಂಕರರ ಪರ್ಯಟನೆಯಲ್ಲಿ ಮಾಹೀಷ್ಮತಿ ನಗರ ಪ್ರವೇಶ ಸಂದರ್ಭ:- ಭಾರತೀಯ ಪರಂಪರೆಯಲ್ಲಿ ಸನಾತನ ಧರ್ಮದ ತಳಹದಿ ಎಂದರೆ “ಗುರು ಪರಂಪರೆ” ಇದು ಪ್ರಮುಖವಾದದ್ದು. ಭಗವಂತನ ಇರುವಿಕೆ- ಆರಾಧನೆ ಹಾಗೂ ಪ್ರಾರ್ಥನೆಯನ್ನು ಮೊದಲು ತಿಳಿಸಿ ಕೊಡುವುದು ಗುರುಗಳು. “ಗುರುರ್ಬ್ರಹ್ಮಾ ಗುರುರ್ವಿಷ್ಣು: ಗುರುರ್ದೇವೋ ಮಹೇಶ್ವರ: ಗುರು: ಸಾಕ್ಷಾತ್ ಪರಂ ಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ” ಎಂದು ಪ್ರಾರ್ಥಿಸುತ್ತೇವೆ. ಭಾರತೀಯರಾದ ನಾವೆಲ್ಲ ಗುರು ತೋರಿದ ಮಾರ್ಗದಲ್ಲಿ ನಡೆದು ಬಂದವರು. ಭಾರತದ ಏಕತೆ ಮತ್ತು ಅಖಂಡತೆಯ ಬಗ್ಗೆ ಹೆಮ್ಮೆ ಪಡುವುದು,‌ ಯುದ್ಧ- ಕಠಾರಿಗಳ ಸೆಣಸಾಟ ಆಗಿರದೆ “ತರ್ಕ ಮತ್ತು ಜ್ಞಾನ” ಬಲದಿಂದ ಎಂದು ಜಗತ್ತಿಗೆ ಸಾರಿದವರು, ಅಖಂಡ ಭಾರತ ವನ್ನು ಒಂದೇ ಸೂತ್ರದಡಿಯಲ್ಲಿ ಕಟ್ಟಿ ಒಗ್ಗೂಡಿಸಿದ ಮಹಾ ಮಹಿಮರು, ಗುರು ಪರಂಪರೆಯಲ್ಲಿ ಅತ್ಯಂತ ಮಹತ್ವ ಸ್ಥಾನ ಪಡೆದವರು “ಶ್ರೀಮತ್ ಭಗವತ್ಪಾದ ಶಂಕರಾಚಾರ್ಯರು”ಇವರು “ಅಹಂ ಬ್ರಹ್ಮಾಸ್ಮಿ” ಎಂಬ ಮಹಾ ವಾಕ್ಯದ ತತ್ವವನ್ನು ಸ್ಪಷ್ಟವಾಗಿ ಪ್ರತಿಪಾದಿಸಿದರು. ಒಮ್ಮೆ ಶಂಕರರು ತಮ್ಮ ದಿಗ್ವಿಜಯ ಯಾತ್ರೆಯಲ್ಲಿ ಮಾಹೀಷ್ಮತೀ ನಗರಕ್ಕೆ ಬಂದರು. ನರ್ಮದಾ ನದಿಯ ತೀರದಲ್ಲಿ ವಿರಾಜಿಸುತ್ತಿದ್ದ ಪವಿತ್ರ ಕ್ಷೇತ್ರವೇ ಮಾಹೀಷ್ಮತೀ ನಗರ. ಆ ನಗರದಲ್ಲಿ ಕುಮಾರೀಲಭಟ್ಟರ ಶಿಷ್ಯರು, ಮಹಾಪಂಡಿತರಾದ ಮಂಡನ ಮಿಶ್ರರ ಗೃಹವು ಪ್ರಸಿದ್ಧಿಯಾಗಿತ್ತು. ಕುಮಾರಿಲರಿಂದ ಅನುಗ್ರಹ ಪಡೆದು ಹೊರಟ ಆಚಾರ್ಯರು ಮಾಹೀಷ್ಮತಿ ನಗರಕ್ಕೆ ಬಂದು, ಮೊದಲಿಗೆ ಊರಿನ ಶಿವಾಲಯದಲ್ಲಿ ಶಿಷ್ಯರೊಂದಿಗೆ ವಿಶ್ರಾಂತಿ ಪಡೆದರು. ಮರುದಿನ ಮಂಡನಮಿಶ್ರರನ್ನು ಭೇಟಿಯಾಗಬೇಕೆಂದು ನಿರ್ಧರಿಸಿದರು. ಬೆಳಿಗ್ಗೆ ಮಂಡನಮಿಶ್ರರ ಮನೆ ಹುಡುಕುತ್ತಾ ಊರೊಳಗೆ ಹೊರಟರು. ಆಗ ನೀರು ತರಲು ನದಿಯ ಕಡೆ ಹೋಗುತ್ತಿದ್ದ ಒಬ್ಬ ಮಹಿಳೆ ಎದುರಾದಳು. ಆಚಾರ್ಯರು ಆಕೆಯನ್ನು ಕೇಳಿದರು: “ತಾಯಿ, ಮಂಡನಮಿಶ್ರರ ಮನೆಗೆ ಹೋಗುವ ದಾರಿ ಯಾವುದು?” ಅವಳು ಆಶ್ಚರ್ಯಪಟ್ಟು, “ಈ ಊರಲ್ಲಿ ಮಂಡನಮಿಶ್ರರ ಮನೆ ಅರಿಯದವರು ಯಾರಿದ್ದಾರೆ? ನೀವು ಹೊಸಬರೇನೋ?”ಎಂದು ಕೇಳಿದಳು. ಆಚಾರ್ಯರು ಶಾಂತವಾಗಿ, “ಹೌದು ತಾಯಿ, ನಾನು ಈ ಊರಿಗೆ ಹೊಸಬ ಮಂಡನಮಿಶ್ರರನ್ನು ಭೇಟಿಯಾಗಬೇಕಿದೆ” ಎಂದರು. ಆಕೆ ಹೇಳಿದರು: “ಅವರ ಮನೆಯನ್ನು ಹುಡುಕುವುದು ಬಹಳ ಸುಲಭ. ಅವರ ಮನೆಯ ಬಾಗಿಲಲ್ಲಿ ಪಂಜರದಲ್ಲಿರುವ ಗಿಳಿಗಳು ‘ಜಗತ್ತು ಸತ್ಯವೇ? ಮಿಥ್ಯವೇ? ವೇದಗಳು ಸ್ವತಃ ಪ್ರಮಾಣವೇ ಅಥವಾ ಪರತಃ ಪ್ರಮಾಣವೇ? ಮೋಕ್ಷಕ್ಕೆ ಮಾರ್ಗ ಜ್ಞಾನವೇ? ಕರ್ಮವೇ?’ ಎಂದು ಚರ್ಚೆ ಮಾಡುತ್ತಿರುತ್ತವೆ. ಅದೇ ಮಂಡನಮಿಶ್ರರ ಮನೆ.” ಈ ಮಾತು ಕೇಳಿ ಆಚಾರ್ಯರು ಮನಸ್ಸಿನಲ್ಲಿ ಆಶ್ಚರ್ಯಪಟ್ಟರು: “ಗಿಳಿಗಳೇ ಇಷ್ಟು ವೇದಾಂತ ಚರ್ಚೆ ಮಾಡುತ್ತಿದ್ದರೆ, ಆ ಮನೆಯ ಯಜಮಾನನ ಪಾಂಡಿತ್ಯ ಇನ್ನೆಷ್ಟು ಮಹತ್ತರವಾಗಿರಬೇಕು!” ಎಂದು ಆಲೋಚಿಸಿದರು. ಆಕೆಯ ಸೂಚನೆಯಂತೆ ಅವರು ಮಂಡನಮಿಶ್ರರ ಮನೆಗೆ ಬಂದರು. ಆದರೆ ಬಾಗಿಲು ಮುಚ್ಚಿತ್ತು. ದ್ವಾರದಲ್ಲಿ ಕುಳಿತಿದ್ದವನನ್ನು ಕೇಳಿದರು: “ಮಂಡನಮಿಶ್ರರು ಮನೆಯಲ್ಲಿದ್ದಾರೆಯೇ?” ಆತ ಉತ್ತರಿಸಿದ: “ಹೌದು, ಇಂದು ಅವರ ತಂದೆಯ ಶ್ರಾದ್ಧ ನಡೆಯುತ್ತಿದೆ. ಯಾರನ್ನೂ ಒಳಗೆ ಬಿಡಬಾರದೆಂದು ಹೇಳಿದ್ದಾರೆ.” ಶಂಕರಾಚಾರ್ಯರು ಮತ್ತು ಮಂಡಲ ಮಿಶ್ರರ ಮೊದಲ ಭೇಟಿಯ ಕಥೆ:- ಮಂಡನ ಮಿಶ್ರರ ಮನೆಯಲ್ಲಿ ಅಂದು ವಿಶೇಷವಿತ್ತು. ಪಂಡಿತೋತ್ತಮರಾದ ಮಂಡನಮಿಶ್ರರು ತಮ್ಮ ತಂದೆಯ ಶ್ರಾದ್ಧ ಕಾರ್ಯದಲ್ಲಿ ತೊಡಗಿದ್ದರು. ಅವರು ಮನೆಯವರಿಗೆಲ್ಲ ಕಟ್ಟುನಿಟ್ಟಾಗಿ ಹೇಳಿದ್ದರು “ಇಂದು ಯಾರನ್ನೂ ಒಳಗೆ ಬಿಡಬಾರದು.” ಎಲ್ಲರೂ ಆ ಮಾತನ್ನು ಪಾಲಿಸುತ್ತಿದ್ದರು. ಅದೇ ಸಮಯದಲ್ಲಿ, ಶಂಕರಾಚಾರ್ಯರು ಭಿಕ್ಷೆಗಾಗಿ ಅಲ್ಲಿಗೆ ಬಂದರು. ಆದರೆ, ಶ್ರಾದ್ಧ ನಡೆಯುತ್ತಿದೆ. ಯಾರೂ ಅವರನ್ನು ಒಳಗೆ ಬಿಡಲಿಲ್ಲ. ಆಗ ಶಂಕರರು ತಮ್ಮ ಯೋಗಬಲದಿಂದ ಆಕಾಶಮಾರ್ಗದಲ್ಲಿ ಬಂದು ನೇರವಾಗಿ ಮನೆಯ ಒಳ ಅಂಗಳದಲ್ಲಿ ನಿಂತರು. ಆ ಸಮಯದಲ್ಲಿ ಮಹರ್ಷಿಗಳಾದ ಜೈಮಿನಿ ಮತ್ತು ವ್ಯಾಸರ ಪಾದಪ್ರಕ್ಷಾಳನದಲ್ಲಿ ಮಂಡನಮಿಶ್ರರು ತೊಡಗಿದ್ದರು. ಹಠಾತ್ತನೆ ಸನ್ಯಾಸಿಯನ್ನು ಕಂಡ ಮಂಡನಮಿಶ್ರ ರಿಗೆ ಕೋಪ ಬಂತು ಏಕೆಂದರೆ, ವೈದಿಕ ಕರ್ಮಾದಿಗಳು ನಡೆಯುವಲ್ಲಿ ಸನ್ಯಾಸಿಗಳು ಬರುವಂತಿಲ್ಲ. ಮಂಡನ ಮಿಶ್ರರು ಒರಟಾಗಿ ಕೇಳಿದರು: ( ಕುತೋ ಮುಂಡೀ) “ಏ ಬೋಳ, ಎಲ್ಲಿಂದ ಬಂದೆ?” ಶಂಕರಾಚಾರ್ಯರು ಶಾಂತರಾಗಿ ಹೇಳಿದರು: (ಅಗಳ್ಮಾನುಂಡಿ) “ಕುತ್ತಿಗೆಯವರೆಗೆ ಬೋಳ.” ದ್ವಂದ್ವಾರ್ಥವಿಟ್ಟು ಆಚಾರ್ಯರು ಉತ್ತರ ಕೊಟ್ಟಿದ್ದು. ಉತ್ತರ ಕೇಳಿ ಮಂಡನಮಿಶ್ರರಿಗೆ ಇನ್ನಷ್ಟು ಕೋಪ ಬಂತು. ಅವರು ಹೇಳಿದರು: “ನಾನು ಕೇಳಿದ್ದು ನೀನು ಬಂದ ದಾರಿಯನ್ನು” ಆಚಾರ್ಯರು ಅಷ್ಟೇ ಶಾಂತವಾಗಿ ಪ್ರಶ್ನಿಸಿದರು: “ದಾರಿ ಏನನ್ನು ಹೇಳಿತು?” ಈ ಮಾತು ಕೇಳಿ ಮಂಡನಮಿಶ್ರರು ಘರ್ಜಿಸಿ. “ನಿನ್ನ ತಾಯಿ ವಿಧವೆ ಎಂದು ಹೇಳಿತು!” ಆದರೂ ಶಂಕರರು ಶಾಂತರಾಗಿ ಹೇಳಿದರು: “ಕೇಳಿದವನು ನೀನು “ದಾರಿ ಉತ್ತರ ಕೊಟ್ಟದ್ದು ನಿನಗೆ, ನಿನ್ನ ತಾಯಿ ವಿಧವೆ ಎಂದು, ಹಾಗಾದರೆ ಅದು ನಿನಗೆ ಅನ್ವಯಿಸಬೇಕು ಅಲ್ಲವೇ?” ಈ ಮಾತು ಮಂಡನಮಿಶ್ರರಿಗೆ ತೀವ್ರವಾಗಿ ತಟ್ಟಿತು. ಅವರ ಕೋಪ ಇನ್ನಷ್ಟು ಹೆಚ್ಚಾಯಿತು. ಅವರು ಮತ್ತೆ ಪ್ರಶ್ನಿಸಿದರು: “ಏ ದುಷ್ಟಬುದ್ಧಿಯೇ! ಈ ಶಿಖೆ, ಯಜ್ಞೋಪವೀತಗಳನ್ನು ಹೊತ್ತುಕೊಂಡಿರುವುದು ನಿನಗೆ ಭಾರವಲ್ಲವೇ?” ಆಗ ಶಂಕರರು ಉತ್ತರಿಸಿದರು: “ವೇದದಲ್ಲಿ ಅವುಗಳ ಅರ್ಥವನ್ನು ತಿಳಿಯದೇ ಇರುವುದು ನಿಜವಾದ ಭಾರ.”ಇದರಿಂದ ಮಾತಿನ ತೀವ್ರತೆ ಇನ್ನಷ್ಟು ಹೆಚ್ಚಿತು. ಮಂಡನಮಿಶ್ರರು ಹೇಳಿದರು: “ನಿನ್ನ ಬ್ರಹ್ಮನಿಷ್ಠೆ ಏನು?” ಶಂಕರರು ತಕ್ಷಣ ಪ್ರತಿಕ್ರಿಯಿಸಿದರು: “ಹಾಗಾದರೆ ನಿನ್ನ ಕರ್ಮನಿಷ್ಠೆ ಏನು?” ಹೀಗೆ ಇಬ್ಬರ ಮಧ್ಯೆ ತೀಕ್ಷ್ಣವಾದ ವಾಗ್ವಾದ ನಡೆಯಿತು. ಮಂಡನಮಿಶ್ರರು ಕೋಪದಿಂದ ಮಾತನಾಡುತ್ತಿದ್ದರೆ, ಶಂಕರಾಚಾರ್ಯರು ಶಾಂತವಾಗಿ, ತರ್ಕದಿಂದ ಉತ್ತರಿಸುತ್ತಿದ್ದರು. ಈ ಸಂಭಾಷಣೆಯನ್ನು ಕುತೂಹಲದಿಂದ ಆಲಿಸುತ್ತಿದ್ದ “ಜೈಮಿನಿ ಮಹರ್ಷಿಗಳು”, ಮಂಡನಮಿಶ್ರರಿಗೆ ಹೇಳಿದರು: “ಇವರು ಸಾಮಾನ್ಯ ಸನ್ಯಾಸಿ ಅಲ್ಲ, ಆದಿ ಶಂಕರಾಚಾರ್ಯರು.” ಇದನ್ನು ಕೇಳಿ ಮಂಡನಮಿಶ್ರರ ಕೋಪ ಜರ್ರಂತ ಇಳಿಯಿತು. ಆಗ ಶಂಕರರು ವಿನಯದಿಂದ ಹೇಳಿದರು: “ಪಂಡಿತೋತ್ತಮರೆ, ನಾನು ಭಿಕ್ಷೆಗಾಗಿ ಬಂದಿದ್ದೇನೆ. ನೀಡುವಿರಾ?” ಮಂಡನಮಿಶ್ರರು ಹೇಳಿದರು: ಅಸೀನರಾಗಿ “ಖಂಡಿತವಾಗಿ ನೀಡುತ್ತೇನೆ. ಇಂದಿನ ಶ್ರಾದ್ಧ ಕಾರ್ಯ ಮುಗಿಯಲಿ. ನಾಳೆ ನಾವು ವಾದವನ್ನು ಆರಂಭಿಸೋಣ.” ವಾದಕ್ಕೆ ತೀರ್ಪುದಾರರು ಯಾರು ಎಂಬ ವಿಷಯ ಬಂದಾಗ, ಜೈಮಿನಿ ಮಹರ್ಷಿಗಳು ಹೇಳಿದರು:“ಮಂಡನಮಿಶ್ರರ ಪತ್ನಿಯಾದ “ಉಭಯ ಭಾರತಿದೇವಿ” ವೇದಾಂತದಲ್ಲಿ ಪಾಂಡಿತ್ಯ ಹೊಂದಿದ್ದಾರೆ. ಅವರೇ ಮಧ್ಯಸ್ಥರಾಗಲಿ.” ಎಲ್ಲರೂ ಅದನ್ನು ಒಪ್ಪಿದರು. ಹೀಗೆ, ಮುಂದಿನ ದಿನ ಮಹತ್ತರವಾದ ಚರ್ಚೆ ನಡೆಯಲು ನಿರ್ಧಾರವಾಯಿತು. ಆಚಾರ್ಯರು ತಮ್ಮ ಸ್ಥಳಕ್ಕೆ ಹಿಂತಿರುಗಿದರು. ಇದರ ಸಾರಾಂಶ:- ಕೋಪ ಮತ್ತು ಶಾಂತತೆ ಮುಖಾಮುಖಿಯಾದಾಗ, ಜ್ಞಾನವು ಯಾವಾಗಲೂ ಶಾಂತತೆಯ ಮೂಲಕವೇ ವ್ಯಕ್ತವಾಗುತ್ತದೆ. ಇಲ್ಲಿ ನಡೆದಿದ್ದು: ವೇದವಾಂಗ್ಮಯದಲ್ಲಿ ಪಾಂಡಿತ್ಯ ಹೊಂದಿದ ಪಂಡಿತಶ್ರೇಷ್ಠ ಮಂಡನಮಿಶ್ರರು ಹಾಗೂ ಅದ್ವೈತ ತತ್ವಜ್ಞಾನಿ ತಮ್ಮ ತತ್ವವನ್ನು ಸ್ಥಾಪಿಸಿದ ಆದಿ ಶಂಕರಾಚಾರ್ಯರು ಇವರಿಬ್ಬರ ನಡುವೆ ನಡೆದ ಈ ತೀಕ್ಷ್ಣವಾದ ತತ್ವ ಚರ್ಚೆ ಭಾರತೀಯ ಸಂಪ್ರದಾಯದಲ್ಲಿ ಅತಿ ಪ್ರಮುಖವಾಗಿದೆ. ಸದಾಶಿವ ಸಮಾರಂಭಾಮ್ ಶಂಕರಾಚಾರ್ಯ ಮಧ್ಯಮಾಮ್ । ಅಸ್ಮದಾಚಾರ್ಯ ಪರ್ಯಂತಾಮ್ ವಂದೇ ಗುರು ಪರಂಪರಾಮ್॥ ಶ್ರೀ ಗುರು ಚರಣಾರವಿಂದಾರ್ಪಣ ಮಸ್ತು. 🙏🙏🙏 (ಶ್ರೀ ಶಂಕರ ಕಥಾಮೃತ) ವಂದನೆಗಳೊಂದಿಗೆ, ಬರಹ:- ಆಶಾ ನಾಗಭೂಷಣ
ರಾಧಾಕೃಷ್ಣ 🦚💙
1.1K views
3 months ago
#ದಿನಕ್ಕೊಂದು ಕಥೆ #🔱 ಭಕ್ತಿ ಲೋಕ ಶಿವ ಶಕ್ತಿಯರ ‘ಗೌರಿ’ ತವರೂರು ಗುಮ್ಮಳಾಪುರ:- ಬೆಂಗಳೂರಿನ ಹೊರಬಾಗದ ಆನೇಕಲ್ ತಾಲೂಕಿನ ಗಡಿ ಭಾಗದ ಕೃಷ್ಣಗಿರಿ ಜಿಲ್ಲೆಯ ಸಮೀಪ ಗುಮ್ಮಳಾಪುರ ಎಂಬ ಗ್ರಾಮವಿದೆ. ಈ ಗ್ರಾಮವನ್ನು ಗೌರಿ ದೇವಿಯ ತವರೂರು ಎನ್ನುತ್ತಾರೆ. ಒಮ್ಮೆ ಶಿವನು ಗೌರಿಯನ್ನು ಕರೆದು ಕೊಂಡು ಹೋಗಲು ಬಂದಿದ್ದ ಎಂಬುದಕ್ಕಾಗಿ ಇದನ್ನು ‘ಕೈಲಾಸ ಪುರಿ’ ‘ ಭೂ ಕೈಲಾಸ’ ಅಂತಲೂ ಕರೆಯುತ್ತಾರೆ. ಇಲ್ಲಿ ಹಚ್ಚ ಹಸುರಿನಿಂದ ಕಂಗೊಳಿಸುವ ಪ್ರಕೃತಿ ಸಂಪತ್ತು ಹೇರಳವಾಗಿದೆ. ಈ ಗುಮ್ಲಾ ಪುರದಲ್ಲಿ ಪುರಾತನ ಕಾಲದಿಂದ ಪ್ರಸಿದ್ಧವಾದ ‘ಗೌರಿ ದೇವಿಯ’ ದೇವಸ್ಥಾನವಿದೆ. ವಿಶೇಷ ಎಂದರೆ ಎಲ್ಲಾ ದೇವಾಲಯಗಳಂತೆ ನಿತ್ಯ ಪೂಜೆ ನಡೆಯುವುದಿಲ್ಲ. ವರ್ಷದಲ್ಲಿ ಒಂದು ತಿಂಗಳು ಮಾತ್ರ ದೇವಾಲಯದ ಬಾಗಿಲು ತೆಗೆದಿದ್ದು ಭರಪೂರ ಭಕ್ತರನ್ನು ಆಕರ್ಷಿಸುವ ದೇವಾಲಯ ಆಗಿದೆ.‌ ಪ್ರತಿ ವರ್ಷ ಭಾದ್ರಪದ ಮಾಸದಲ್ಲಿ ಬಾಗಿಲು ತೆಗೆದು ತದಿಗೆ ದಿನ ಬರುವ ಗೌರಿ ಗಣೇಶ ಹಬ್ಬದಲ್ಲಿ,‌ ಮಣ್ಣಿನಿಂದ ಗೌರಿ ಹಾಗೂ ಗಣೇಶ ಮೂರ್ತಿಯನ್ನು ಮಾಡಿ ಪ್ರತಿಷ್ಠಾಪಿಸಿ ಒಂದು ತಿಂಗಳು ತವರು ಮನೆಯ ಆತಿಥ್ಯ ಎಂದು ಗೌರಿಗೆ ವಿಶೇಷ ಪೂಜೆ ನೈವೇದ್ಯ ಮಾಡುತ್ತಾರೆ. ಒಂದು ತಿಂಗಳು ಅಂದರೆ, ಮಹಾಲಯ ಅಮಾವಾಸ್ಯೆ ನಂತರ ಬರುವ ಗುರುವಾರದ ತನಕ ಪೂಜೆ- ಭಜನೆ- ವಿಶೇಷ ಅಲಂಕಾರಗಳನ್ನು ಮಾಡಿ, ಜಾತ್ರೆ ನಡೆಸಿ ಗೌರಮ್ಮನಿಗೆ ಮಡಿಲು ತುಂಬಿ ತವರು ಮನೆಯಿಂದ‌ ಗಂಡನ ಮನೆ ಕೈಲಾಸಕ್ಕೆ ಕಳುಹಿಸುವ ಕೊಡುವ ಆಚರಣೆ ನಡೆಸುತ್ತಾರೆ. ಪ್ರತಿ ವರ್ಷ ತವರೂರಿಗೆ ಬಂದ ಗೌರಿ ಒಂದು ತಿಂಗಳು ತವರಿನ ಲ್ಲಿದ್ದು ಉಳಿದ 11 ತಿಂಗಳು ಗಂಡನ ಮನೆ ಕೈಲಾಸದಲ್ಲಿ ಇರುತ್ತಾಳೆ ಎಂಬ ಪ್ರತೀತಿ ಇದೆ. ಈ ಗ್ರಾಮದಲ್ಲಿ 770 ಶಿವಶರಣರು ವಾಸವಾಗಿದ್ದರು. ಇಲ್ಲಿನ ಗುರುಕುಲದಲ್ಲಿ ಊರ ಮಕ್ಕಳು, ನೆರೆಹೊರೆ ಗ್ರಾಮ ಹಳ್ಳಿಗಳ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದ ರು. ಪ್ರತಿ ವರ್ಷ ನಡೆವ ಜಾತ್ರೆಗೆ ಊರಿನ ಎಲ್ಲಾ ಮನೆಯ ಹೆಣ್ಣು ಮಕ್ಕಳು ಬರುವ ಪದ್ಧತಿ ಇತ್ತು. ಆ ವರ್ಷವು ಗೌರಿ ಹಬ್ಬ ಬಂದಿತು ಗುರುಕುಲದಲ್ಲಿ ಓದುತ್ತಿದ್ದ ಗಂಡು ಮಕ್ಕಳು ಗೌರಿ ಹಬ್ಬ ಬಂದ ಕೂಡಲೇ ರಜಾ ತೆಗೆದುಕೊಳ್ಳುತ್ತಿದ್ದರು. ಶಿವಶರಣರ ಒಂದು ಕುಟುಂಬದಲ್ಲಿ ಹೆಣ್ಣು ಮಕ್ಕಳು ಇರಲಿಲ್ಲ. ಆ ಮನೆಯ ಹುಡುಗ ಗುರುಕುಲಕ್ಕೆ ಬರುತ್ತಿದ್ದ. ಎಲ್ಲಾ ಹುಡುಗರು ರಜೆ ತೆಗೆದುಕೊಂಡಿದ್ದು ನೋಡಿ ಅವನು ಕೇಳಿದ ಹಬ್ಬಕ್ಕೆ ನನಗೂ ರಜಾ ಬೇಕು ಎಂದು. ಯಾಕೋ ನಿನಗೆ ರಜಾ, ಅಕ್ಕ ಇಲ್ಲ- ತಂಗಿ ಇಲ್ಲ ನಿಮ್ಮ ಮನೆಯಲ್ಲಿ ಹಬ್ಬವೇ ಇಲ್ಲ. ರಜ ಏಕೆ ಎಂದ ಗುರುಗಳ ಮಾತಿಗೆ, ಉಳಿದ ಹುಡುಗರೆಲ್ಲ ಜೋರಾಗಿ ನಕ್ಕರು. ಇದು ಆ ಹುಡುಗ ಅವಮಾನ ಎಂದು ಭಾವಿಸಿದ. ಮನೆಗೆ ಬಂದು ತಾಯಿ ಹತ್ತಿರ ಅಮ್ಮ ನನಗೆ ಈಗಲೇ ಅಕ್ಕ ಬೇಕು ತಂದು ಕೊಡು ಎಂದು ಹಠ ಮಾಡಿದ. ಎಷ್ಟೇ ಸಮಾಧಾನ ಮಾಡಿದರು ಕೇಳಲಿಲ್ಲ. ಇಲ್ಲದ ಅಕ್ಕನನ್ನು ನಿನಗೆ ಎಲ್ಲಿಂದ ತಂದುಕೊಡಲಿ ಎಂದ ತಾಯಿಗೆ,‌ ಹಾಗಾದರೆ ನಾನೇ ಅಕ್ಕನನ್ನು ಕರೆತರುವೆ ನನಗೆ ಬುತ್ತಿ ಕಟ್ಟಿ ಕೊಡು ಎಂದ. ಸದ್ಯ ಹಠ ನಿಂತರೆ ಸಾಕೆಂದು ತಾಯಿ ಬುತ್ತಿ ಕಟ್ಟಿ ಕೊಟ್ಟಳು. ಹುಡುಗ ಬುತ್ತಿ ಕಟ್ಟಿಕೊಂಡು ಊರು -ಕೇರಿ- ಕಾಡು - ಮೇಡು ಎಲ್ಲಾ ಕಡೆ ಎಲ್ಲಾ ಕಡೆ ಅಕ್ಕ ಬಾ, ಎಲ್ಲಿರುವೆ ಅಕ್ಕ ಮನೆಗೆ ಬಾ ಎಂದು ಕೂಗುತ್ತಿದ್ದ, ಎಲ್ಲಿ ಹುಡುಕಿದರೂ ಅಕ್ಕ ಸಿಗಲಿಲ್ಲ. ಬೇಸತ್ತ ಹುಡುಗ ಎಷ್ಟು ಕರೆದರೂ ಅಕ್ಕಾ ನೀನು ಬರುತ್ತಿಲ್ಲ ನಿನ್ನನ್ನು ಕರೆದುಕೊಂಡು ಬರುವುದಾಗಿ ಅಮ್ಮನಿಗೆ ಹೇಳಿ ಬಂದಿದ್ದೆ, ಈಗ ಮನೆಗೆ ಹೋಗಿ ಏನು ಹೇಳಲಿ? ನಾನು ಮನೆಗೆ ಹೋಗುವುದಿಲ್ಲ ಈ ಬೆಟ್ಟದಿಂದ ಹಾರಿ ಪ್ರಾಣ ಬಿಡುವೆ ಎಂದು ಹಾರಲು ಹೊರಟಿದ್ದ. ಅದು ಮುಸ್ಸಂಜೆ ಸಮಯ. ಶಿವ ಪಾರ್ವತಿಯರು ಆಕಾಶ ಮಾರ್ಗದಲ್ಲಿ ಸಂಚರಿ ಸುತ್ತಾ ಭೂಲೋಕದ ಸ್ಥಿತಿಗತಿಗಳನ್ನು ವೀಕ್ಷಿಸುತ್ತಿದ್ದರು.‌ ಹಾಗೆ ಹೋಗುತ್ತಿದ್ದಾಗ “ಅಕ್ಕಾ ಬಾ, ಅಕ್ಕ ಎಲ್ಲಿದ್ದರೂ ಬಾ, ನೀನು ಬರದಿದ್ದರೆ ನಾನು ಬೆಟ್ಟದಿಂದ ಹಾರು ತ್ತೇನೆ” ಎಂಬ ಕೂಗು ಕೇಳಿ ಪಾರ್ವತಿಯ ಮಾತೃ ಹೃದಯ ಕರಗಿತು, ಆಕೆ ಶಿವನಿಗೆ ಹೇಳಿದಳು. ಯಾರೋ ಬಾಲಕ ನನ್ನನ್ನು ಕೂಗುತ್ತಿದ್ದಾನೆ ನೋಡಿ ಬರುತ್ತೇನೆ ಎಂದಳು. ಜಗತ್ತಿನ ತಂದೆ ಯಾದ ಶಿವನು ಅನುಮತಿಸುತ್ತಾನೆ. ಪಾರ್ವತಿ ಕೂಗು ಬಂದತ್ತ ಬಂದಳು, ನೋಡುತ್ತಾಳೆ, “ಅಕ್ಕಾ ಇವತ್ತು ನೀನು ಬರದಿದ್ದರೆ ನಾನು ಬೆಟ್ಟದ ಕೆಳಗೆ ಬೀಳುವೆ ಎಂದು ಕೂಗುತ್ತಾ ಬಾಲಕ ಹಾರಿದ ಸಮಯಕ್ಕೆ ಬಂದ ಪಾರ್ವತಿ ತನ್ನ ಸೆರಗನ್ನು ಹಾಸಿ ಬಾಲಕನನ್ನು ಹಿಡಿದುಕೊಂಡಳು. ಹುಡುಗನಿಗೆ ಏಕೆ ಹಾರಲು ಹೊರಟಿದ್ದೆ ಎಂದು ಗೌರಿ ಕೇಳಿದಾಗ, ನನಗೆ ಅಕ್ಕ -ತಂಗಿ ಇಲ್ಲ .ನಮ್ಮೂರಿ ನಾ ಜಾತ್ರೆಗೆ ಎಲ್ಲರ ಮನೆಯಲ್ಲೂ ಅಕ್ಕ-ತಂಗಿಯರು ಬರುತ್ತಾರೆ. ಆದರೆ ನಮ್ಮ ಮನೆಯಲ್ಲಿ ಹಬ್ಬ ಇಲ್ಲ ಎಂದವನೇ, ‌ಅಕ್ಕ ಹೇಗೋ ನೀನು ಬಂದೆಯಲ್ಲ ಈ ವರ್ಷ ಎಲ್ಲರ ಮನೆಯಂತೆ ನಾವು ಹಬ್ಬ ಮಾಡೋಣ ಬಾ ಅಕ್ಕ ನನಗೆ ಅಕ್ಕ ಸಿಕ್ಕೇಬಿಟ್ಟಳು ಎಂದು ಸಂತೋಷದಿಂದ ಕುಣಿಯುತ್ತಾ ,ಬಾ ಅಕ್ಕ ಮನೆಗೆ ಹೋಗೋಣ ಅಮ್ಮ ಕಾಯುತ್ತಿದ್ದಾಳೆ ಎಂದು ಅಕ್ಕನನ್ನು ಕರೆದುಕೊಂಡು ಮನೆಗೆ ಬಂದ. ಅಕ್ಕ ಪಾರ್ವತಿ ಮನೆಗೆ ಬಂದು ಹೊಸಿಲು ದಾಟುತ್ತಿದ್ದಂತೆ. ಮನೆಯಲ್ಲಿ ಸಂಭ್ರಮ ವೈಭವ ತುಂಬಿತು. ಅಕ್ಕನ ಜೊತೆ ಜಾತ್ರೆಯಲ್ಲಿ ಓಡಾಡಿದ ಹುಡುಗನ ಸಂತೋಷಕ್ಕೆ ಪಾರವೇ ಇಲ್ಲ. ಮನೆಗೆ ಬಂದ ಗೌರಿಯನ್ನು ದೇವರು ಕೊಟ್ಟ ಮಗಳು ಎಂದೇ ಉಪಚರಿಸುತ್ತಿದ್ದರು. (ಕೈಲಾಸದ ಶಿವನ ಪತ್ನಿ ಗೌರಿ ಬರುವುದು ಎಂದರೆ ಸಾಮಾನ್ಯ ವಲ್ಲ. ಆಕೆ ಬರುವಾಗ 101 ದೇವತೆಗಳು ಹಾಗೆ ಕೆರೆ,‌ ಕುಂಟೆ, ಬಾವಿ, ಶಿವಲಿಂಗ, ಬಿಲ್ವಪತ್ರೆ ಮರ,‌ (ಎಲ್ಲಾ 101 ) ಗಳು ಜೊತೆಯಲ್ಲಿ ಬಂದು ನೆಲೆಸಿದರು ಎಂಬ ಪ್ರತೀತಿ ಇದೆ. ಈಗಲೂ ಇದೆ ಎನ್ನುತ್ತಾರೆ) ಗೌರಿ ದೇವಿ ಊರಿನ ಕೆರೆ ದಡದ ಮೇಲೆ ಕುಳಿತಿದ್ದಳು ಶಿವಶರಣೆಯರು ಹೋಗಿ ಆರತಿ ಮಾಡಿ ಆಕೆಯನ್ನು ಕರೆ ತಂದು ದೇವಾಲಯದಲ್ಲಿ ಪ್ರತಿಷ್ಠಾಪನೆ ಮಾಡಿದರು ಎಂಬ ಮಾತಿದೆ. ತವರಿನ ಪ್ರೀತಿಯ ಉಪಚಾರದಲ್ಲಿ ಮೈಮರೆತ ಗೌರಿಗೆ ಒಂದು ತಿಂಗಳು ಕಳೆದದ್ದು ತಿಳಿಯಲಿಲ್ಲ. ಅದಕ್ಕಾಗಿ ಇಲ್ಲಿನ ಜನರು “ಉಂಡ ಗೌರಮ್ಮ ಹರಸುತ್ತಾಳೆ ನಮ್ಮನ್ನು” ಎನ್ನುತ್ತಾರೆ. ಈ ಕಥೆಯನ್ನು ಬರಹ ರೂಪಕ್ಕೆ ತಂದವರು — ಆಶಾ ನಾಗಭೂಷಣ. ತವರಿಗೆ ಹೋದ ಗೌರಿ ಒಂದು ತಿಂಗಳಾಯಿತು ಇನ್ನು ಬಂದಿಲ್ಲ ಎಂದು ಶಿವ ಯೋಚಿಸಿದ. ನಂತರ ದೇವಿಯನ್ನು ಕರೆ ತರಲು ‘ನಂದಿ’ಯನ್ನು ಕಳಿಸುತ್ತಾನೆ. ನಂದಿ ಬಂದಿದ್ದು ಸೋಮವಾರ.‌ ಆ ದಿನ ಬಸವಣ್ಣನ ಜಾತ್ರೆ ಮಾಡಿ, ಕೆಂಡೋತ್ಸವ ಮಾಡುತ್ತಾರೆ. ನಂದಿ ಸಂತೋಷದಿಂದ ಒಂದು ತಿಂಗಳು ಇದ್ದ ಎನ್ನುತ್ತಾರೆ. ಪಾರ್ವತಿ ಇನ್ನೂ ಬರದೇ ಇದ್ದ ಕಾರಣ, ವೀರಭದ್ರನನ್ನು ಕಳಿಸುತ್ತಾನೆ. ಮಂಗಳವಾರ ಬೆಳಗ್ಗೆ ಕೆರೆ ದಂಡೆಯಲ್ಲಿ ಕುಳಿತ ವೀರಭದ್ರನನ್ನು ನೋಡಿದ ಹುಡುಗರು ಹೋಗಿ ಕರೆತರು ವಾಗ ಹೆಜ್ಜೆ ಹೆಜ್ಜೆ ಗೂ ತೆಂಗಿನಕಾಯಿ ಒಡೆಯುತ್ತಾರೆ. ಆತನೀಗೂ ಕೆಂಡೋತ್ಸವ ಸೇವೆ ಮಾಡಿಸಿದಾಗ ವೀರಭದ್ರ ಕೋಪ ಬಿಟ್ಟು ಸದ್ದಿಲ್ಲದೆ ಅಲ್ಲೇ ಕುಳಿತು ಬಿಡು ತ್ತಾನೆ. ಒಂದು ಬುಧವಾರ ದೇವತೆಗಳೆಲ್ಲ ಸಭೆ ಸೇರಿ ಗೌರಿಯನ್ನು ಕರೆತರಲು ಪಂಚಾಯಿತಿ ನಡೆಸಿ ಭೂಲೋಕಕ್ಕೆ ಬಂದರು. ಆಗ ಒಂದು ತಿಂಗಳಾಗಿತ್ತು. ಗೌರಿಯನ್ನು ಗಂಡನ ಮನೆಗೆ ಕಳಿಸುವುದು ಗುರುವಾರ ಎಂದಾಗಿತ್ತು. ಗೌರಿಯನ್ನು ತವರಿಗೆ ಕರೆತರಲು ನಾಲ್ಕಾರು ಜನ ಹೋಗಿ ಸ್ವಾಗತಿಸಿ ಕರೆತರುತ್ತಾರೆ. ಇಲ್ಲಿಂದ ಕಳಿಸಿಕೊಡುವಾಗ 300- 400 ಜನರು ಗೌರಿ ಕೂರಿಸಿದ ಪಲ್ಲಕ್ಕಿ ಯನ್ನು ತಲೆಯ ಮೇಲೆ ಹೊತ್ತು ಗಂಡನ ಮನೆ ಕೈಲಾಸಕ್ಕೆ ಕಳಿಸಲು ಕೆರೆ ನೀರಿನಲ್ಲಿ ವಿಸರ್ಜಿಸಿ ಬರುತ್ತಾರೆ. (ಅವಳ ಜೊತೆ ನೂರ ಒಂದು ದೇವತೆಗಳು ಇರುತ್ತಾರೆ ) ಗೌರಿ ಗಣಪತಿಯರನ್ನು ವಿಸರ್ಜನೆ ಮಾಡಲು ಕರೆದೊಯ್ಯುವ ರಥದಲ್ಲಿ 101 ದೇವತಾ ಸಮೂಹ ಇದ್ದು, ರಥ ಎಳೆಯಲು 300 ರಿಂದ 400 ಜನರು ಇರುತ್ತಾರೆ. ರಥ ಬರುವಾಗ ಎಷ್ಟು ಭಾರ ಇರುತ್ತೋ ಅಷ್ಟೇ ಭಾರ ಇರುತ್ತದೆ. ರಥ ತುಂಬಾ ಭಾರ ಆಗುತ್ತದೆ ಎಂದು ಬರುವಾಗ ಬಂದ ನೂರಾ ಒಂದು ದೇವತೆಗಳು ಗುಮ್ಲಾಪು ರದಲ್ಲೇ ನೆಲೆಸಿದರು ಎಂಬ ಐತಿಹ್ಯವಿದೆ. ಒಂದು ತಿಂಗಳು ಸಂಭ್ರಮದ ಜಾತ್ರೆ ನಡೆಸಿ, ಗೌರಿ- ಗಣೇಶನನ್ನು ಊರಿನ ಕೆರೆಯಲ್ಲಿ ವಿಸರ್ಜಿಸಿದರು. ಆಶ್ಚರ್ಯ ಎಂದರೆ, ಗೌರಮ್ಮನ ಪೂಜೆ ಮಾಡುವಾಗ ಮಂಗಳದ್ರವ್ಯಗಳಾದ ಮಾಂಗಲ್ಯ ,‌ಕೈಗೆ ಹಾಕಿದ ಬಳೆ ಅರಿಶಿನ ಕುಂಕುಮ ಬಟ್ಟಲು ಎಲ್ಲ ನೀರಲ್ಲಿ ವಿಸರ್ಜನೆ ಮಾಡಿ ಬಂದಿರುತ್ತಾರೆ.ಮರುದಿನ ಬೆಳಿಗ್ಗೆ ಕರಿಮಣಿ ಮಾಂಗಲ್ಯ, ಬಳೆ, ಗೌರಿ ಪೀಠ ಹೂವಿನ ಪ್ರಸಾದ ತೇಲುವುದನ್ನು ದನ ಕಾಯುವ ಹುಡುಗರು ನೋಡಿ ಗೌರಿದೇವಿ ಪ್ರಸಾದ ಎಂದು ತಂದರು. ಮರು ವರ್ಷದಿಂದ ಅದೇ ಕೆರೆಯ ಮಣ್ಣನಿಂದ ಗೌರಿದೇವಿ- ಗಣಪತಿ ವಿಗ್ರಹ ಮಾಡಿ ಪೂಜೆ, ಜಾತ್ರೆ ಎಲ್ಲ ಮಾಡುತ್ತಾ ಪದ್ಧತಿಯಾಗಿ ಬಂದಿದೆ. ಈ ಕಥೆಯನ್ನು ಬರಹ ರೂಪಕ್ಕೆ ತಂದವರು — ಆಶಾ ನಾಗಭೂಷಣ. ಗೌರಮ್ಮನ ಜಾತ್ರೆ ಸಮಯದಲ್ಲಿ ಮಹಿಳೆಯರು, ಹೆಣ್ಣು ಮಕ್ಕಳು ದೂರ ದೂರದಿಂದ ಬಂದು, ತವರಿಗೆ ಬಂದ ಗೌರಮ್ಮನಿಗೆ ಮಡಿಲು ( ಮಡ್ಲಕ್ಕಿ) ತುಂಬುತ್ತಾರೆ. ಇದು ಅಲ್ಲಿನ ಪದ್ಧತಿಯಾಗಿದೆ.‌ ಕರ್ನಾಟಕ ಮಾತ್ರವಲ್ಲದೆ, ತಮಿಳುನಾಡು- ಆಂಧ್ರಪ್ರ ದೇಶ- ಮಹಾರಾಷ್ಟ್ರಗಳಿಂದ ಹೆಂಗಸರು ಕುಟುಂಬ ಸಮೇತ ಸಂಭ್ರಮದಿಂದ ಬಂದು ಜಾತ್ರೆಯನ್ನು ಕಣ್ತುಂಬಿಕೊಂಡು ಪತಿ ಮಕ್ಕಳು ಕುಟುಂಬ ಚೆನ್ನಾಗಿರಲಿ ಎಂದು ಜಗಜ್ಜನನಿಯನ್ನು ಪ್ರಾರ್ಥಿಸಿ ಮಡ್ಲು ತುಂಬುತ್ತಾರೆ. ಇಲ್ಲಿನ ಗೌರಮ್ಮನಿಗೆ ಹಸಿರು- ಕೆಂಪು ಬಳೆಗಳನ್ನು ಅರ್ಪಿಸುತ್ತಾರೆ. ಜಾತ್ರೆ ಮುಗಿದ ಮೇಲೆ ಗೌರಿ ಗಣೇಶನನ್ನು ಕೆರೆಯಲ್ಲಿ ಬಿಟ್ಟು ಕೈಲಾಸಕ್ಕೆ ಕಳುಹಿಸುತ್ತಾರೆ ಆಗ ಶಿವ ಪಾರ್ವತಿಯನ್ನು ಕರೆದೊಯ್ಯಲು ಅತ್ತೆ ಮನೆ ಗುಮ್ಲಾಪುರಕ್ಕೆ ಬರುತ್ತಾನೆ, ಎಂಬ ಭಾವದಿಂದ ಗೌರಿಯನ್ನು, ಮಾಂಗಲ್ಯ ಸರ, ಮೂಗುತಿ ಮತ್ತು ಅಲಂಕರಿಸಿದ ಪೀಠದ ಸಮೇತ ಕೆರೆಯಲ್ಲಿ ವಿಸರ್ಜಿಸುತ್ತಾರೆ. ಹಬ್ಬದ ಸಮಯದಲ್ಲಿ ಮೂಗುತಿ ಮಾಂಗಲ್ಯ ಪೀಠದ ಸಮೇತ ಕೆರೆಯಲ್ಲಿ ಮೇಲೆ ಕಾಣಿಸುತ್ತವೆ. ಅಲ್ಲಿಗೆ ಬರುವ ದನ ಕಾಯುವ ಹುಡುಗರಿಗೆ ಸಿಗುತ್ತದೆ. ಆ ಹುಡುಗರು ತಂದು ಗೌರಮ್ಮನ ಜಾತ್ರೆ ಮಾಡುತ್ತಾ ಬಂದರು.‌ ಈ ಒಂದು ತಿಂಗಳು ಮಾತ್ರ ಗೌರಿ ದೇವಸ್ಥಾನ ತೆರೆದಿದ್ದು ಜಾತ್ರೆ ಉತ್ಸವ ನಡೆಯುತ್ತದೆ. ಗುಂಮ್ಲಾಪುರದ ವಿಶೇಷತೆಯಾದ ಸುತ್ತಮುತ್ತ 101 ದೇವತೆಗಳು, ಹಾಗೆ ಕೆರೆ- ಕುಂಟೆ, ಕಲ್ಪವೃಕ್ಷ - ಬಿಲ್ವಪತ್ರೆ ಮರ, ಗುಹೆ, ಎಲ್ಲವೂ 101 ಇರುವುದು ಗೌರಿಯ ವರಪ್ರಸಾದವೆಂದೆ ಭಾವಿಸಿದ್ದಾರೆ. ಈ ಕ್ಷೇತ್ರವು ಕಲಿಯುಗದ ಆರಂಭದಿಂದಲೂ ಶಿವಶರಣರ ನೆಲೆಯಾಗಿದೆ ಎಂಬ ಉಲ್ಲೇಖವಿದೆ || ಸರ್ವ ಮಂಗಳಮಾಂಗಲ್ಯೇ ಶಿವೇ ಸರ್ವಾರ್ಥಸಾಧಿಕೇ ಶರಣ್ಯೇ ತ್ರ್ಯಂಬಿಕೇ ದೇವಿ ನಾರಾಯಣಿ ನಮೋಸ್ತು ತೇ| ವಂದನೆಗಳೊಂದಿಗೆ, ಬರಹ: ©ಆಶಾ ನಾಗಭೂಷಣ
ರಾಧಾಕೃಷ್ಣ 🦚💙
1.1K views
3 months ago
#ದಿನಕ್ಕೊಂದು ಕಥೆ 🙏 ಹರಿಃ ಓಂ 🕉️ ಆಚಾರ್ಯ ಸದ್ಬೋಧನೆ.. ➖➖➖ ಮನಸ್ಸು ಆರೋಗ್ಯವಾಗಿದ್ದರೆ, ಮನುಷ್ಯನು ಆರೋಗ್ಯವಾಗಿರುತ್ತಾನೆ. ಮನಸ್ಸು ಆರೋಗ್ಯವಾಗಿರಬೇಕಾದರೆ, ಕಳೆದ ಕಾಲದ ಬಗ್ಗೆ ಕಡಿಮೆ ಯೋಚಿಸು. ಭವಿಷ್ಯವನ್ನು ಹೆಚ್ಚು ಪ್ರೀತಿಸು. ➖➖➖ ಸಾಧಿಸಬೇಕು ಎಂಬ ತಪನ ಇದ್ದರೆ, ಯಾರೂ ಪ್ರೋತ್ಸಾಹಿಸಬೇಕಾಗಿಲ್ಲ. ➖➖➖ ಯಾರೂ ಬೆಂಬಲವಾಗಿ ನಿಲ್ಲಬೇಕಾದ ಅಗತ್ಯವಿಲ್ಲ. ಯಾರೂ ನಮ್ಮ ಹಿಂದೆ ನಡೆದು ಪ್ರತಿಯೊಂದು ಹೆಜ್ಜೆಯಲ್ಲೂ ಹೊಗಳಬೇಕಾಗಿಲ್ಲ. ➖➖➖ ಯಾರು ನಿನ್ನ ಜೊತೆ ನಿಂತರೂ, ನಿಂತಿರದರೂ, ನಿನ್ನ ಗುರಿಯ ಕಡೆಗೆ ಮಾತ್ರ ನಿನ್ನ ಹೆಜ್ಜೆಗಳು ಸಾಗಿದರೆ, ನಿನ್ನ ಜೀವನ ವಿಭಿನ್ನವಾಗಿರುತ್ತದೆ. ➖➖➖ ವ್ಯಕ್ತಿತ್ವವನ್ನು ಖರೀದಿಸಲು ಸಾಧ್ಯವಿಲ್ಲ. ಅದು ತಾಯಿ-ತಂದೆಗಳು ಕಲಿಸಿದರೆ ಬರುತ್ತದೆ. ಗುರುಗಳಿಂದ ಕಲಿತರೆ ಬರುತ್ತದೆ. ಕೆಲವರಿಗೆ ಜನ್ಮಸಿದ್ಧವಾಗಿಯೂ ಬರುತ್ತದೆ. ➖➖➖ ಒಮ್ಮೆ ಬಂದರೆ ಅದು ಸಾಯುವ ತನಕ ನಿನ್ನ ನೆರಳಾಗಿ, ನಿನ್ನ ಜೊತೆ, ನಿನ್ನೊಳಗೆ ಇರುತ್ತದೆ. ➖➖➖ ಅದು ಬಿಸಿಲಿಗೆ ಒಣಗುವುದಿಲ್ಲ. ಮಳೆಯಿಗೆ ತೋಯುವುದಿಲ್ಲ. ಹಣದ ಪ್ರಲೋಭನಕ್ಕೆ ಬಲಿಯಾಗುವುದಿಲ್ಲ. ➖➖➖ ಸರಿಯಾದ ವ್ಯಕ್ತಿಗೆ ವ್ಯಕ್ತಿತ್ವವೇ ಆಸ್ತಿ, ಆಭರಣ..! ➖➖➖ ಬರಹ 👉 ವೇದಾಂತ ಜ್ಞಾನ ಯವರಿಂದ ಸರ್ವಂ ಶ್ರೀಕೃಷ್ಣಾರ್ಪಣಮಸ್ತು 🌷🙏🌷
ರಾಧಾಕೃಷ್ಣ 🦚💙
1.1K views
4 months ago
#ದಿನಕ್ಕೊಂದು ಕಥೆ #🔱 ಭಕ್ತಿ ಲೋಕ 🙏 ಹರಿಃ ಓಂ 🕉️ ಶ್ರೀ ದತ್ತಾತ್ರೇಯ ಅಷ್ಟ ಚಕ್ರಬೀಜ ಸ್ತೋತ್ರಮ್ ▶️ Sri Dattatreya Ashta Chakra Beeja Stotram ಶ್ರೀ ದತ್ತಾತ್ರೇಯ ಅಷ್ಟ ಚಕ್ರ ಬೀಜ ಸ್ತೋತ್ರವು ಭಗವಾನ್ ದತ್ತಾತ್ರೇಯನಿಗೆ ಸಮರ್ಪಿತವಾದ ಶಕ್ತಿಯುತವಾದ ಸ್ತೋತ್ರವಾಗಿದೆ. ಇದು ದೇಹದ ಎಂಟು ಚಕ್ರಗಳನ್ನು (ಅಷ್ಟ ಚಕ್ರ) ಬೀಜಾಕ್ಷರಗಳ ಮೂಲಕ ಜಾಗೃತಗೊಳಿಸಲು ಮತ್ತು ದತ್ತಾತ್ರೇಯನ ಅನುಗ್ರಹ ಪಡೆಯಲು ಸಹಾಯ ಮಾಡುತ್ತದೆ. 🌠ಶ್ರೀ ದತ್ತಾತ್ರೇಯ ಅಷ್ಟ ಚಕ್ರ ಬೀಜ ಸ್ತೋತ್ರಮ್ (ಸಾರಾಂಶ): ಸ್ವರೂಪ: ಈ ಸ್ತೋತ್ರವು ದತ್ತಾತ್ರೇಯನನ್ನು ದಿಗಂಬರ, ಭಸ್ಮಲೇಪಿತ, ಚಂದ್ರಶೇಖರ, ಮತ್ತು ನೀಲಕಂಠನಾಗಿ ವರ್ಣಿಸುತ್ತದೆ. 🌠ಬೀಜ ಮಂತ್ರಗಳು: ಸ್ತೋತ್ರದ ಪ್ರತಿ ಪಾದದಲ್ಲಿ ವಿಶಿಷ್ಟ ಬೀಜಾಕ್ಷರಗಳ ಮೂಲಕ ಚಕ್ರಗಳನ್ನು ಪ್ರಾರ್ಥಿಸಲಾಗುತ್ತದೆ. 🌠ಫಲಶ್ರುತಿ: ಈ ಸ್ತೋತ್ರವನ್ನು ಪಠಿಸುವುದರಿಂದ ದತ್ತಾತ್ರೇಯನ ಕೃಪೆ ಲಭಿಸಿ, ಮಾನಸಿಕ ಶಾಂತಿ ಮತ್ತು ಆಧ್ಯಾತ್ಮಿಕ ಉನ್ನತಿ ಉಂಟಾಗುತ್ತದೆ. ಈ ಸ್ತೋತ್ರದ ಶ್ರವಣ ಮತ್ತು ಪಠಣವು ವಿಶೇಷವಾಗಿ ದತ್ತ ಜಯಂತಿ ಅಥವಾ ಗುರುವಾರದಂದು ಹೆಚ್ಚು ಫಲಪ್ರದವೆಂದು ಪರಿಗಣಿಸಲಾಗಿದೆ. ದಿಗಂಬರಂ ಭಸ್ಮ ಸುಗಂಧಲಾಪನಂ ಚಕ್ರ ತ್ರಿಶೂಲ ಡಮರು ಗದಂ ಚ! ಪದ್ಮಾಸನಸ್ಥ ಋಷಿ ದೇವವಂದಿತಂ ಧ್ಯಾನಂ ದತ್ತಾತ್ರೇಯ ಅಭಿಷ್ಠ ಸಿದ್ಧಿದಂ !! . 1. ಮೂಲಾಧಾರೇ ವಾರಿಜಪದ್ಮೇ ಸಚತುಷ್ಕೇ ವಂಶಸಂಸಾ ವರ್ಣವಿಶಾಲೈಃ ಸುವಿಶಾಲೈಃ । ರಕ್ತಂ ವರ್ಣಂ ಶ್ರೀಭಾಗವತಂ ಗಾನನಾಥಂ ದತ್ತಾತ್ರೇಯಂ ಶ್ರೀಗುರುಮೂರ್ತಿಂ ಪ್ರಣತೋಸ್ಮಿ. 2. ಸ್ವಾಧಿಷ್ಠಾನೇ ಷಷ್ಠಲಪದ್ಮೇ ತನುಲಿಂಗೇ ಬಾಲಂತೈಸ್ತದ್ವರ್ಣವಿಶಾಲೈಃ ಸುವಿಶಾಲೈಃ । ಪೀತಂ ವರ್ಣಂ ವಾಕ್ಪತಿರೂಪಂ ದ್ರುಹಿಂ ತಂ ದತ್ತಾತ್ರೇಯಂ ಶ್ರೀಗುರುಮುರ್ತಿಂ ಪ್ರಣತೊಸ್ಮಿ. 3. ನಭೌ ಪದ್ಮೇ ಪತ್ರದಶಾಂಕೆ ದಫವರ್ಣೇ ಲಕ್ಷ್ಮಿಕಾಂತಂ ಗರುಢಾರೂಢಂ ಮಣಿಪುರೇ. ನೀಲವರ್ಣ ನಿರ್ಗುಣರೂಪಂ ನಿಗಮಾಕ್ಷಂ ದತ್ತಾತ್ರೇಯಂ ಶ್ರೀಗುರುಮೂರ್ತಿಂ ಪ್ರಣತೋಸ್ಮಿ. 4. ಹೃತ್ಪದ್ಮಾಂತೇ ದ್ವಾದಪತ್ರೇ ಕಠವರ್ಣೇ ಅನಾಹತಂತೇ ವೃಷಭೃಷಂ ಶಿವರೂಪಂ. ಸರ್ಗಸ್ಥಿತಂ ಕುರ್ವಾಣ ಧವಳಂಗಂ ದತ್ತಾತ್ರೇಯಂ ಶ್ರೀಗುರುಮೂರ್ತಿಂ ಪ್ರಣತೋಸ್ಮಿ.5. ಕಂಠಸ್ಥನೇ ಚಕ್ರವಿಷುದ್ಧೇ ಕಮಲಾಂತೇ ಚಂದ್ರಕಾರೇ ಷೋಡಶಾಪತ್ರೇ ಸ್ವರವರ್ಣೇ ಮಾಯಾಧೀಶಂ ಜೀವಶಿವಂ ತಾತಂ ದಗತ್ತ್ ಶ್ರೀಗುರುಮೂರ್ತಿಂ ಪ್ರಣತೊಸ್ಮಿ. 6. ಅಜ್ಞಾಚಕ್ರೇ ಭೃಕುತಿಷ್ಠಾನೇ ದ್ವಿದಳಂತೇ ಹಾಂ ಕ್ಷಾಂ ಬೀಜಂ ಜ್ಞಾನಸಮುದ್ರಂ ಗುರುಮೂರ್ತಿಂ ವಿದ್ಯುತ್ವರ್ಣಂ ಜ್ಞಾನಮಯಂತಿ ತಂಖಂ ದತ್ತಾತ್ರೇಯಂ ಶ್ರೀಗುರುಮೂರ್ತಿಂ ಪ್ರಣತೊಸ್ಮಿ. 7. ಮೂರ್ಧ್ನಿಸ್ಥಾನೇ ವಾರಿಜಪದ್ಮೇ ಶಶಿಬೀಜಂ ಶುಭ್ರಂ ವರ್ಣಂ ಪತ್ರಸಹಸ್ರೇ ಲಲನಾಖ್ಯೇ ಹಂ ಬೀಜಾಖ್ಯಂ ವರಣಸಹಸ್ರಂ ದತ್ತೂರ್ಯಃ । ಶ್ರೀಗುರುಮೂರ್ತಿಂ ಪ್ರಣತೊಸ್ಮಿ. 8. ಬ್ರಹ್ಮಾನಂದಂ ಬ್ರಹ್ಮಮುಕುಂದಂ ಭಗವಂತಂ ಬ್ರಹ್ಮಜ್ಞಾನಂ ಜ್ಞಾನಮಯಂ ತಂ ಸ್ವಯಮೇವ ಪರಮಾತ್ಮನಂ ಬ್ರಹ್ಮಮುನೀದ್ರಂ ಭಾಸಿತಂಗಂ ದತ್ತಾತ್ರೇಷ್ಯಂ ಪ್ರಣತೊಸ್ಮಿ. 9. ದತ್ತಾತ್ರೇಯ ಸ್ತೋತ್ರವು ಹಿಂದೂ ಧರ್ಮದಲ್ಲಿ ಬ್ರಹ್ಮ (ಸೃಷ್ಟಿಕರ್ತ), ವಿಷ್ಣು (ಸಂರಕ್ಷಕ) ಮತ್ತು ಶಿವ (ವಿನಾಶಕ) ಅವರ ಅಂಶಗಳನ್ನು ಸಂಯೋಜಿಸುವ ಸಂಯೋಜಿತ ದೇವತೆಯಾದ ಭಗವಾನ್ ದತ್ತಾತ್ರೇಯನಿಗೆ ಅರ್ಪಿತವಾದ ಸ್ತೋತ್ರ ಅಥವಾ ಪ್ರಾರ್ಥನೆಯಾಗಿದೆ. ಭಗವಾನ್ ದತ್ತಾತ್ರೇಯನನ್ನು ಸಾಮಾನ್ಯವಾಗಿ ಮೂರು ತಲೆಗಳು ಮತ್ತು ಆರು ತೋಳುಗಳನ್ನು ಹೊಂದಿರುವ ಋಷಿಯಾಗಿ ಚಿತ್ರಿಸಲಾಗುತ್ತದೆ ಮತ್ತು ಅವರನ್ನು ಗುರುಗಳ ಗುರು ಎಂದು ಪರಿಗಣಿಸಲಾಗುತ್ತದೆ, ಆಧ್ಯಾತ್ಮಿಕ ಬುದ್ಧಿವಂತಿಕೆಯನ್ನು ನೀಡುವ ಅಂತಿಮ ಶಿಕ್ಷಕ. ಈ ಸ್ತೋತ್ರವು ಭಕ್ತರು ತಮ್ಮ ಭಕ್ತಿ ಮತ್ತು ಗೌರವವನ್ನು ವ್ಯಕ್ತಪಡಿಸಲು ಹಾಗೂ ಶ್ರೀ ದತ್ತಾತ್ರೇಯರ ಆಶೀರ್ವಾದ ಮತ್ತು ಮಾರ್ಗದರ್ಶನವನ್ನು ಪಡೆಯಲು ಒಂದು ಮಾರ್ಗವಾಗಿದೆ. ಇದು ಶ್ರೀ ದತ್ತಾತ್ರೇಯರ ದೈವಿಕ ಗುಣಗಳನ್ನು ಮತ್ತು ಆತ್ಮಸಾಕ್ಷಾತ್ಕಾರ ಹಾಗೂ ಮೋಕ್ಷದ ಮಾರ್ಗದ ಕಡೆಗೆ ಸಾಧಕರನ್ನು ನಡೆಸುವ ಆಧ್ಯಾತ್ಮಿಕ ಗುರುವಾಗಿ ಅವರ ಪಾತ್ರವನ್ನು ಗುರುತಿಸುತ್ತದೆ. ಭಕ್ತರು ತಮ್ಮ ಜೀವನದಲ್ಲಿ ಶ್ರೀ ದತ್ತಾತ್ರೇಯರ ಕೃಪೆಯನ್ನು ಪಡೆಯಲು ಭಕ್ತಿ ಮತ್ತು ನಂಬಿಕೆಯಿಂದ ಈ ಸ್ತೋತ್ರವನ್ನು ಪಠಿಸುತ್ತಾರೆ. ಬರಹ 👉 ವೇದಾಂತ ಜ್ಞಾನ ಯವರಿಂದ ▬▬ஜ۩۞۩ஜ▬▬▬*▬▬▬ஜ۩۞۩ஜ▬▬ !! ಸರ್ವಂ ಶ್ರೀ ಕೃಷ್ಣಾರ್ಪಣಮಸ್ತು !! 🙏 ಸರ್ವೇ ಜನಾಃ ಸುಖಿನೋ ಭವಂತುಸರ್ವೇ ಸಂತು ನಿರಾಮಯಾಃ 🙏 !! ಧರ್ಮೋ ರಕ್ಷತಿ ರಕ್ಷಿತಃ !! ▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬ 🙏 ಹರಿ ಸರ್ವೋತ್ತಮ ವಾಯು ಜೀವೋತ್ತಮ 🙏
ರಾಧಾಕೃಷ್ಣ 🦚💙
792 views
4 months ago
#ದಿನಕ್ಕೊಂದು ಕಥೆ #ಜಾಜಲಿ ಹಿಂದೆ ಜಾಜಲಿ ಎಂಬ ಮಹಾತಪಸ್ವಿಯೊಬ್ಬ ಅರಣ್ಯದಲ್ಲಿ ವಾಸವಾಗಿದ್ದ. ಜಾಜಲಿಯು ತಪೋಧನನಾಗಿದ್ದ ಹಾಗೂ ಕಠೋರವ್ರತನಿಷ್ಠನಾಗಿದ್ದು ಮನೋವೇಗದಿಂದಲೇ ಎಲ್ಲ ಲೋಕಗಳನ್ನು ಸಂಚರಿಸುತ್ತಿದ್ದ. ಭೂಮಿಯೇ ಹಾಸಿಗೆ, ಆಕಾಶವನ್ನೇ ಹೊದಿಕೆಯನ್ನಾಗಿಸಿಕೊಂಡು ಮಳೆ, ಚಳಿ, ಬಿಸಿಲು, ಗಾಳಿಗೆ ಅಂಜದೇ ಕಾಡಿನಲ್ಲಿ ತಪಸ್ಸನ್ನಾಚರಿಸುತ್ತಿದ್ದ. ಅಂತಹ ಘೋರ ತಪಸ್ಸನ್ನು ಮಾಡಿದರೂ ಜಾಜಲಿಗೆ ಧರ್ಮದ ಜ್ಞಾನವುಂಟಾಗಲೇ ಇಲ್ಲ. ಧರ್ಮದ ಪೂರ್ಣಸ್ವರೂಪದ ಅನುಭವ ತನಗಾಗದ್ದರಿಂದ ಅವನು ಖಿನ್ನನಾಗಿದ್ದ, ಇನ್ನೂ ಕಠಿಣವಾದ ತಪಸ್ಸನ್ನು ಮುಂದುವರೆಸಿದ. ಹೀಗಿರುವಾಗ ಒಮ್ಮೆ ಬಯಲಿನಲ್ಲಿ ಏಕಪಾದದಲ್ಲಿ ನಿಂತು ತಪಸ್ಸು ಮಾಡುತ್ತಿರುವಾಗ ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ಜಾಜಲಿ ಅದನ್ನು ಲೆಕ್ಕಿಸದೇ ತನ್ನ ತಪದಲ್ಲೇ ನಿರತನಾಗಿದ್ದ. ಅವನ ತಲೆಕೂದಲು ಜಡೆಗಟ್ಟಿದವು, ಕಾಡಿನ ವಾಸದಿಂದ ಅವನ ಶರೀರ ಮಲಿನವಾಗಿತ್ತು, ವಾಯುವನ್ನೇ ಆಹಾರವನ್ನಾಗಿ ಸ್ವೀಕರಿಸುತ್ತಿದ್ದರಿಂದ ದೇಹ ಕೃಶವಾಗಿತ್ತು. ಎಲ್ಲವನ್ನೂ ನಿರ್ಲಕ್ಷಿಸಿ ಒಣಗಿದ ಮರದಂತೆ ನಿಶ್ಚೇಷ್ಟನಾಗಿ ನಿಂತುಬಿಟ್ಟ! ಅಲ್ಲಾಡದೇ ನಿಂತ ಜಾಜಲಿಯ ಜಡೆಗಟ್ಟಿದ ತಲೆಯ ಮೇಲೆ ಗುಬ್ಬಚ್ಚಿ ದಂಪತಿಗಳು ಗೂಡು ಮಾಡಿಕೊಂಡವು. ಹುಲ್ಲು – ತರಗೆಲೆಗಳನ್ನು ತಂದು ಗೂಡು ಕಟ್ಟುತ್ತಿದ್ದರೂ ಜಾಜಲಿ ಅಲ್ಲಾಡಲಿಲ್ಲ ಬದಲಾಗಿ ಅದನ್ನು ಉಪೇಕ್ಷಿಸಿದ. ಕಂಬದAತೆ ನಿಂತಿದ್ದ ಋಷಿಯು ತಮಗೆ ಏನೂ ತೊಂದರೆ ಮಾಡುವುದಿಲ್ಲ ಎಂಬುದನ್ನು ತಿಳಿದ ಗುಬ್ಬಚ್ಚಿಗಳು ಅವನ ಮೇಲಿನ ವಿಶ್ವಾಸದಿಂದ ಅಲ್ಲಿಯೇ ಸುಖವಾಗಿ ವಾಸಮಾಡತೊಡಗಿದವು. ಮಳೆಗಾಲ ಮುಗಿದು ಚಳಿಗಾಲ ಆರಂಭವಾಯಿತು. ಪ್ರಕೃತಿನಿಯಮದಂತೆ ಗುಬ್ಬಚ್ಚಿಗಳು ಋಷಿಯ ತಲೆಯಮೇಲಿದ್ದ ಗೂಡಿನಲ್ಲಿ ಮೊಟ್ಟೆಗಳನ್ನಿಟ್ಟವು. ಜಾಜಲಿಗೂ ಈ ವಿಷಯ ತಿಳಿಯಿತು. ದಯಾಳುವಾದ ಅವನಿಗೆ ಪಕ್ಷಿಗಳಿಗೆ ತೊಂದರೆ ಮಾಡುವುದು ಇಷ್ಟವಿರಲಿಲ್ಲ. ಇನ್ನೂ ಸ್ಥಿರವಾಗಿ ನಿಂತ. ಗುಬ್ಬಚ್ಚಿಗಳು ಬೆಳಿಗ್ಗೆ ಆಹಾರವನ್ನರಸಿ ಹೋಗಿ ಸಂಜೆಯಾಗುವಷ್ಟರಲ್ಲಿ ಗೂಡಿಗೆ ಹಿಂದಿರುಗುತ್ತಿದ್ದವು. ಮೊಟ್ಟೆಗಳು ಸುರಕ್ಷಿತವಾಗಿರುವುದರಿಂದ ಅವುಗಳಿಗೆ ಯಾವುದೇ ಭಯವಿರಲಿಲ್ಲ. ಸ್ವಲ್ಪಕಾಲದ ನಂತರ ಮೊಟ್ಟೆಗಳು ಒಡೆದು ಪುಟ್ಟ ಹಕ್ಕಿಮರಿಗಳು ಹೊರಬಂದವು. ಮರಿಗಳು ಬೆಳೆಯುತ್ತಾ ಜಾಜಲಿಯ ಮೈಮೇಲೆ ಕುಳಿತವು. ರೆಕ್ಕೆ ಬಲಿತ ಮರಿಗಳು ಅಪ್ಪ-ಅಮ್ಮ ಗುಬ್ಬಚ್ಚಿಗಳೊಂದಿಗೆ ತನ್ನ ಸುತ್ತೆಲ್ಲ ಹಾರಾಡುವುದನ್ನು ಕಂಡು ಋಷಿಯು ಹರ್ಷಿತನಾದ. ಕಾಲಕಳೆದಂತೆ ಎಲ್ಲ ಪಕ್ಷಿಗಳು ಗೂಡನ್ನು ತೊರೆದು ಬೇರೆಡೆಗೆ ಹಾರಿಹೋದವು. ಹಕ್ಕಿಗಳು ಹೊರಟುಹೋದ ನಂತರ ಜಾಜಲಿಗೆ ಒಂದು ರೀತಿಯ ವಿಭ್ರಮ ಉಂಟಾಯಿತು. ತಾನು ಸಿದ್ಧಪುರುಷನಾದೆ ಎಂಬ ಅಹಂಕಾರವೊಂದು ಹುಟ್ಟಿಕೊಂಡಿತು. ತಾನು ಧರ್ಮಾತ್ಮನಾದೆ ಎಂದು ಜೋರಾಗಿ ಘೋಷಿಸಿದ. ಅಷ್ಟರಲ್ಲಿ ಅಂತರಿಕ್ಷವಾಣಿಯೊಂದು ಧ್ವನಿಸಿತು “ಜಾಜಲಿಯೇ, ಧರ್ಮದಲ್ಲಿ ನೀನು ವಾರಾಣಸಿಯಲ್ಲಿರುವ ಪ್ರಾಜ್ಞನಾದ ತುಲಾಧಾರನಿಗೆ ಸಮಾನನಲ್ಲ” ಎಂದಿತು. ಇದರಿಂದ ಕುಪಿತನಾದ ಜಾಜಲಿ ತುಲಾಧಾರನನ್ನು ಸಂದರ್ಶಿಸಲು ಹೊರಟ. ತುಲಾಧಾರನು ಒಬ್ಬ ವೈಶ್ಯನಾಗಿದ್ದನು. ಜೀವನ ನಿರ್ವಹಣೆಗಾಗಿ ವೈಶ್ಯವೃತ್ತಿಯಲ್ಲಿದ್ದರೂ ವ್ಯವಹಾರಗಳಲ್ಲಿ ಮೋಸ-ವಂಚನೆರಹಿತನಾಗಿದ್ದ. ಪ್ರಾಣಿಜಂತುಗಳಲ್ಲಿ ಕರುಣೆಯನ್ನಿಟ್ಟು ಸಾಧ್ಯವಾದಷ್ಟು ಸತ್ಕಾರ್ಯಗಳಲ್ಲಿ ನಿರತನಾಗಿದ್ದ. ಜಿತೇಂದ್ರಿಯನಾಗಿದ್ದ ಅವನಿಗೆ ವಿಷಯಾಸಕ್ತಿಯು ಇರಲಿಲ್ಲ. ವೇದ ಉಪನಿಷತ್ತುಗಳಲ್ಲಿ ಹೇಳಲ್ಪಟ್ಟ ಪರಬ್ರಹ್ಮತತ್ತ್ವವನ್ನು, ಧರ್ಮಸೂಕ್ಷ್ಮಗಳನ್ನು ತುಲಾಧಾರನು ಜಾಜಲಿಗೆ ವಿವರಿಸಿದನು. ಆತ್ಮಯಜ್ಞ, ದ್ರವ್ಯಯಜ್ಞ, ಕಾಮ್ಯಯಜ್ಞ, ಮನೋತಪೋಯಜ್ಞಗಳು, ಮುಂತಾದ ಯಜ್ಞಕರ್ಮಗಳನ್ನು, ಅವುಗಳ ಅನುಷ್ಠಾನ, ಆಚರಣೆಗಳ ಉದ್ದಿಶ್ಯವನ್ನು ತಿಳಿಸುತ್ತಾನೆ. ಸನಾತನವಾಗಿ ಹರಿದು ಬಂದ ಧರ್ಮತತ್ತ್ವಗಳನ್ನು ಬೋಧಿಸಿದ ತುಲಾಧಾರನ ಮಾತುಗಳಿಂದ ಜಾಜಲಿಯು ಪ್ರಭಾವಿತನಾದ, ಧರ್ಮದ ನಿಜಾರ್ಥವನ್ನು ಅರಿತ. ನಂತರ ತಪೋಮಾರ್ಗದಲ್ಲಿ ಈ ಧರ್ಮತತ್ತ್ವಗಳನ್ನು ಅಳವಡಿಸಿಕೊಂಡು, ಆಜೀವಪರ್ಯಂತ ಪಾಲಿಸುತ್ತ ನಿಜಾನಂದವನ್ನು ಹೊಂದಿದ. 🙏🏻 ▬▬ஜ۩۞۩ஜ▬▬▬*▬▬▬ஜ۩۞۩ஜ▬▬ !! ಸರ್ವಂ ಶ್ರೀ ಕೃಷ್ಣಾರ್ಪಣಮಸ್ತು !! 🙏 ಸರ್ವೇ ಜನಾಃ ಸುಖಿನೋ ಭವಂತುಸರ್ವೇ ಸಂತು ನಿರಾಮಯಾಃ 🙏 !! ಧರ್ಮೋ ರಕ್ಷತಿ ರಕ್ಷಿತಃ !! ▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬ 🙏 ಹರಿ ಸರ್ವೋತ್ತಮ ವಾಯು ಜೀವೋತ್ತಮ 🙏
ರಾಧಾಕೃಷ್ಣ 🦚💙
1.6K views
4 months ago
#ದಿನಕ್ಕೊಂದು ಕಥೆ #🔱 ಭಕ್ತಿ ಲೋಕ 🙏 ಹರಿಃ ಓಂ 🕉️ ಶರಣರು (Śaraṇaru) – ಮಹತ್ವ, ಅರ್ಥ, ತತ್ವಗಳು ಮತ್ತು ಜೀವನದರ್ಶನ “ಶರಣರು” ಎಂಬ ಪದವು “ಶರಣಾಗತಿ ಹೊಂದಿದವರು” ಎಂಬ ಅರ್ಥವನ್ನು ನೀಡುತ್ತದೆ. ಇವರು ಪರಮೇಶ್ವರನಾದ Lord Shiva / ಶಿವನಿಗೆ ಸಂಪೂರ್ಣ ಸಮರ್ಪಣೆಯಾಗಿ ಬದುಕಿದ ಮಹಾನುಭಾವರು. ವಿಶೇಷವಾಗಿ 12ನೇ ಶತಮಾನದ ವೀರಶೈವ ಭಕ್ತಿ ಚಳವಳಿಯಲ್ಲಿ ಶರಣರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. --- 🌼 ಶರಣರ ಮೂಲ ತತ್ವಗಳು ಶರಣರು ಜೀವನದಲ್ಲಿ ಕೆಲವು ಪ್ರಮುಖ ಸಿದ್ಧಾಂತಗಳನ್ನು ಅನುಸರಿಸಿದರು: 🔅ಶರಣಾಗತಿ (ಸಂಪೂರ್ಣ ಸಮರ್ಪಣೆ) – ದೇವರ ಇಚ್ಛೆಗೆ ತಮ್ಮನ್ನು ಅರ್ಪಿಸುವುದು 🔅ಕಾಯಕವೇ ಕೈಲಾಸ – ಕೆಲಸವೇ ಪೂಜೆ ಎಂಬ ತತ್ವ 🔅ದಾಸೋಹ – ಇತರರಿಗೆ ಸೇವೆ ಸಲ್ಲಿಸುವುದು 🔅ಸಮಾನತೆ – ಜಾತಿ, ವರ್ಣ, ಲಿಂಗ ಬೇಧವಿಲ್ಲದ ಸಮಾಜ ಭಕ್ತಿ ಮತ್ತು ಜ್ಞಾನ ಸಂಯೋಜನೆ --- 🌿 ಪ್ರಸಿದ್ಧ ಶರಣರು ಕೆಲವು ಮಹಾನ್ ಶರಣರು: 🌠ಬಸವಣ್ಣ – ವೀರಶೈವ ಧರ್ಮದ ಪ್ರಮುಖ ಸ್ಥಾಪಕ, ಸಮಾಜ ಸುಧಾರಕ 🌠ಅಲ್ಲಮ ಪ್ರಭು – ಜ್ಞಾನ ಯೋಗಿ, ವಚನಕಾರ 🌠ಅಕ್ಕ ಮಹಾದೇವಿ – ಮಹಾನ್ ಶರಣೆ, ಭಕ್ತಿಯ ಪ್ರತೀಕ 🌠ಚನ್ನಬಸವಣ್ಣ – ಬಸವಣ್ಣನ ಸೋದರಮಗ, ವಚನಕಾರ --- 📜 ವಚನ ಸಾಹಿತ್ಯ ಶರಣರು ತಮ್ಮ ಅನುಭವಗಳನ್ನು “ವಚನಗಳು” ಎಂಬ ಸರಳ ಆದರೆ ಆಳವಾದ ಸಾಹಿತ್ಯ ರೂಪದಲ್ಲಿ ವ್ಯಕ್ತಪಡಿಸಿದರು. ಈ ವಚನಗಳಲ್ಲಿ: 🔅ದೈವ ಭಕ್ತಿ 🔅ಸಮಾಜ ಸುಧಾರಣೆ 🔅ಆಧ್ಯಾತ್ಮಿಕ ಜ್ಞಾನ ಇವೆಲ್ಲವೂ ಸ್ಪಷ್ಟವಾಗಿ ಕಾಣುತ್ತದೆ. --- 🔱 ಶರಣರ ಆಧ್ಯಾತ್ಮಿಕ ದರ್ಶನ ಶರಣರ ಪ್ರಕಾರ: 🌠ದೇವರು ಹೃದಯದಲ್ಲಿದ್ದಾನೆ 🌠ಮೂರ್ತಿಪೂಜೆಗೆ ಬದಲು ಇಷ್ಟಲಿಂಗ ಧಾರಣೆ ಮುಖ್ಯ 🌠ಸತ್ಯ, ಅಹಿಂಸೆ, ಶುದ್ಧ ಜೀವನವೇ ಮುಕ್ತಿ ಮಾರ್ಗ --- 🌺 ಸಮಾಜದ ಮೇಲೆ ಪರಿಣಾಮ ಶರಣರ ಚಳವಳಿ: 🔅ಜಾತಿ ವ್ಯವಸ್ಥೆಗೆ ವಿರುದ್ಧವಾಗಿ ನಿಂತಿತು 🔅ಮಹಿಳೆಯರಿಗೆ ಗೌರವ ಮತ್ತು ಸಮಾನ ಹಕ್ಕುಗಳನ್ನು ನೀಡಿತು 🔅ಸರಳ ಜೀವನ ಮತ್ತು ಉನ್ನತ ಚಿಂತನೆಗೆ ಪ್ರೇರಣೆ ನೀಡಿತು --- 🕉️ ಸಮಗ್ರವಾಗಿ ಶರಣರು ಕೇವಲ ಭಕ್ತರು ಅಲ್ಲ; ಅವರು ಸಮಾಜ ಸುಧಾರಕರು, ತತ್ವಜ್ಞಾನಿಗಳು ಮತ್ತು ಧರ್ಮಪ್ರಚಾರಕರು. ಅವರ ಜೀವನವು ನಮಗೆ ಭಕ್ತಿ, ಸತ್ಯ ಮತ್ತು ಸೇವೆಯ ಮಾರ್ಗವನ್ನು ತೋರಿಸುತ್ತದೆ. --- ಯಾವುದಾದರೂ ಶರಣರ ವಚನಗಳ ವಿವರಣೆ ಬೇಕಾದರೆ ಅಥವಾ ವಿಶೇಷ ಶರಣರ ಜೀವನ ಚರಿತ್ರೆ ತಿಳಿಯಬೇಕಾದರೆ ತಿಳಿಸಿ. ಬರಹ 👉 ವೇದಾಂತ ಜ್ಞಾನ ಯವರಿಂದ ▬▬ஜ۩۞۩ஜ▬▬▬*▬▬▬ஜ۩۞۩ஜ▬▬ !! ಸರ್ವಂ ಶ್ರೀ ಕೃಷ್ಣಾರ್ಪಣಮಸ್ತು !! 🙏 ಸರ್ವೇ ಜನಾಃ ಸುಖಿನೋ ಭವಂತುಸರ್ವೇ ಸಂತು ನಿರಾಮಯಾಃ 🙏 !! ಧರ್ಮೋ ರಕ್ಷತಿ ರಕ್ಷಿತಃ !! ▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬ 🙏 ಹರಿ ಸರ್ವೋತ್ತಮ ವಾಯು ಜೀವೋತ್ತಮ 🙏
ರಾಧಾಕೃಷ್ಣ 🦚💙
887 views
4 months ago
#ದಿನಕ್ಕೊಂದು ಕಥೆ #🔱 ಭಕ್ತಿ ಲೋಕ ಒಮ್ಮೆ ಸರ್ವ ಲೋಕ ಹಿತವನ್ನು ಬಯಸುವ ಋಷಿಗಳು ಆಚಾರ್ಯಾದಿ ತಪಸ್ವಿಗಳು ಷಣ್ಮುಖಸ್ವಾಮಿಯ ಬಳಿಗೆ ಹೋಗಿ ಹೇ...! ಭಗವಾನ್ ಕುಮಾರಸ್ವಾಮಿಯೇ ಈ ಭೂಲೋಕ ವಾಸಿಗಳಾದ ಸಮಸ್ತ ಜನರಿಗೆ ಬಂದೊದಗುವ ದಾರಿದ್ರ್ಯ ರೋಗ ಮತ್ತು ಸಂಕಷ್ಟಗಳಿಂದ ಅವರನ್ನು ಕಾಪಾಡಿ ಅವರ ಸಂಕಷ್ಟಗಳನ್ನು ಪರಿಹರಿಸುವ ಒಂದು ಮಹೋನ್ನತವಾದ ವ್ರತಶ್ರೇಷ್ಠವನ್ನು ಅನುಗ್ರಹಿಸಬೇಕು ಎಂದು ಪ್ರಾರ್ಥಿಸಿಕೊಳ್ಳಲು, ಶ್ರೀ ಶರವಣಭವರು ಋಷಿಗಳಿಗೆ ಪರಿಹಾರ ಸೂಚಕವೆಂಬಂತೆ ಹೀಗೆನ್ನುತ್ತಾರೆ... " ಎಲೈ ಋಷಿಗಳಿರಾ ! ಸಾವಧಾನ ಚಿತ್ತರಾಗಿ ಶುದ್ದಮನಸ್ಸಿನಿಂದ ಕೇಳಿರಿ . ಆರ್ತರಾದ ಮನುಷ್ಯರಿಗೆ ಸೌಭಾಗ್ಯ ಮತ್ತು ಸಿದ್ದಿದಾಯಕವಾದ ಒಂದು ಮಹಾಪುಣ್ಯಕರವಾದ ಶ್ರೇಷ್ಠ ವ್ರತವನ್ನು ನಿಮಗೆ ತಿಳಿಸುವೆನು. ಇದನ್ನು ಆದಿಯಲ್ಲಿ ಶ್ರೀ ಕೃಷ್ಣನು ಧರ್ಮರಾಯನಿಗೆ ಹೇಳಿದ್ದನು. ಅದರಂತೆ ಆಚರಿಸಲು ಧರ್ಮರಾಯನು ಸಕಲ ಸಂಕಷ್ಟಗಳಿಂದ ವಿಮುಕ್ತನಾದನು. ಈಗ ಅದನ್ನೇ ನಿಮಗೂ ವಿವರಿಸುವೆನು ಕೇಳುವಂತರಾಗಿ... ಒಂದು ದಿನ ಧರ್ಮರಾಯನು ಶ್ರೀ ಕೃಷ್ಣನನ್ನು ಕುರಿತು ಎಲೈ...! ರುಕ್ಮಿಣೀಶನೇ ನಮ್ಮ ಸಂಕಷ್ಟವು ಪರಿಹಾರವಾಗುವ ಬಗೆಯನ್ನು ತಿಳಿಸಬೇಕೆಂದು ಪ್ರಾಂಜಲೀಯವಾಗಿ ಪ್ರಾರ್ಥಿಸಿಕೊಳ್ಳಲು ; ಶ್ರೀ ಕೃಷ್ಣನು ಎಲೈ ಧರ್ಮರಾಯ ಯುಧಿಷ್ಠಿರನೇ..! ಮನುಷ್ಯನ ಸಕಲ ಸಂಕಷ್ಟಗಳನ್ನು ಪರಿಹರಿಸುವ ಶ್ರೀ ಸಂಕಷ್ಟಹರ ಮಹಾಗಣಪತಿ ವ್ರತವೆಂಬ ಒಂದು ಮಹೋನ್ನತವಾದ ವ್ರತರತ್ನವಿದೆ. ಅದನ್ನು ನಿನಗೆ ವಿವರಿಸುವೆನು ಸಾವಧಾನ ಚಿತ್ತನಾಗಿ ಕೇಳು... ಹಿಂದೆ ಕೃತಯುಗದಲ್ಲಿ ಹಿಮಾಚಲ ಸುತೆಯಾದ ಗೌರಿದೇವಿಯು ಈಶ್ವರನ ಮನವೊಲಿಸಲು ಘೋರ ತಪಸ್ಸನ್ನು ಆಚರಿಸಿದಳು .ಆಗ ವಿಘ್ನೇಶ್ವರನನ್ನು ಸ್ಮರಿಸಲಾಗಿ , ಪ್ರತ್ಯಕ್ಷನಾದ ಗಣನಾಥನು ಹೀಗೆಂದನು... " ಎಲೈ ಸರ್ವಮಂಗಳೆಯೇ..! ನೀನು ಸಂಕಷ್ಟಹರ ಗಣೇಶ್ವರ ವ್ರತವನ್ನು ಮಾಡುವುದರಿಂದ ನಿನ್ನ ಕಾರ್ಯಸಿದ್ದಿಯಾಗುವುದರಲ್ಲಿ ಯಾವ ಸಂಶಯವೂ ಇಲ್ಲ , ಈ ವ್ರತವನ್ನು ಶ್ರಾವಣಮಾಸ ಕೃಷ್ಣಪಕ್ಷ ಚತುರ್ಥಿಯಂದು ಆಚರಿಸಿ ಚಂದ್ರೋದಯದ ನಂತರ ಆರ್ಘ್ಯಪ್ರಧಾನ ಮಾಡಬೇಕು... ವ್ರತವನ್ನು ಮಾಡಬಯಸುವವರು ಆದಿನ ಅರುಣೋದಯ ಕಾಲದಲ್ಲಿಯೇ ( ಸೂರ್ಯೋದಯಕ್ಕು ಮುಂಚೆ ) ಎದ್ದು ಶೌಚ ಕರ್ಮವನ್ನು ಮುಗಿಸಿಕೊಂಡು ನದೀತೀರಕ್ಕೆ ಹೋಗಿ ಅಲ್ಲಿ ಶುದ್ದವಾಗಿ , ಹೊಟ್ಟು ತೆಗೆದ ಬಿಳಿ ಎಳ್ಳಿನಿಂದ ಮೈಗೆ ಉಜ್ಜಿಕೊಂಡು ಸ್ನಾನವನ್ನು ನಿತ್ಯ ಅನುಷ್ಠಾನಗಳನ್ನು ಮುಗಿಸಿಕೊಳ್ಳಬೇಕು. ಸಾಯಂಕಾಲದವರೆಗೂ ಉಪವಾಸವಿದ್ದು ವಿನಾಯಕ ವ್ರತವನ್ನು ಮಾಡುತ್ತೇನೆ ಎಂಬ ಸಂಕಲ್ಪವನ್ನು ಮಾಡಬೇಕು .ಪ್ರದೋಷ ಕಾಲದಲ್ಲಿ ಪುನಃ ಸ್ನಾನಗೈದು ಶುಚಿಯಾದ ಸ್ಥಳದಲ್ಲಿ ಅಷ್ಟದಳ ಪದ್ಮವನ್ನು ಬರೆದು ಅದನ್ನು ಗಂಧಾದಿಗಳಿಂದ ಅಲಂಕರಿಸಿ ಅಲ್ಲಿ ತ್ರಿನೇತ್ರನೂ ಚತುರ್ಭುಜನೂ ರಕ್ತವರ್ಣನೂ , ಲಂಬೋದರನೂ ನಾನಾ ವರ್ಣ ಸಮಾಯುಕ್ತನೂ ಪ್ರಸನ್ನಾಸ್ಯನೂ ಆದ ಸಂಕಷ್ಟಹರ ಗಣೇಶ್ವರನನ್ನು ಸ್ಥಾಪಿಸಿ ಪ್ರಾನಪ್ರತಿಷ್ಠೆಗೈದು ಕಲ್ಪೋಕ್ತ ವಿಧಾನದಿಂದ ಪೂಜಿಸಬೇಕು . ಎಳ್ಳಿನ ಕಡುಬು ( ಮೋದಕ) ಮಾಡಿ ಐದನ್ನು ದೇವರಿಗೆ ನಿವೇದಿಸಿ ,ಐದನ್ನು ಬ್ರಾಹ್ಮಣರಿಗೆ ದಾನ ಮಾಡಬೇಕು ,ದೇವರಿಗೆ ನೈವೇದ್ಯ ಅರ್ಪಿಸಿದನ್ನು ತಾನು ಸೇವಿಸಿ ಆ ರಾತ್ರಿ ಜಾಗರಣೆ ಮಾಡಬೇಕು. ಚಂದ್ರೋದಯವಾಗಲು ಚಂದ್ರನಿಗೆ ಕಲ್ಪೋಕ್ತ ಮಂತ್ರದಿಂದ ಅರ್ಘ್ಯಪ್ರದಾನ ಮಾಡಬೇಕು. ಸಮಸ್ತ ಪ್ರತಿಮ ಕಲಶವನ್ನು ದಕ್ಷಿಣಾಸಹಿತವಾಗಿ ಆಚಾರ್ಯರಿಗಿತ್ತು ಶ್ರೀ ಸಂಕಷ್ಟಹರ ಗಣೇಶನನ್ನು ವಿಸರ್ಜಿಸಬೇಕು. ಈ ರೀತಿಯಾಗಿ ಶ್ರಾವಣ ಚತುರ್ಥಿಯಲ್ಲಿ ಈ ವ್ರತವನ್ನು ಮಾಡಿದರೆ ನಾನು ಪ್ರಸನ್ನನಾಗಿ ಅವರ ಇಷ್ಟಾರ್ಥಗಳನ್ನು ಕರುಣಿಸುವೆನು ಎಂದು ಆರಾಧಿಸಲ್ಪಟ್ಟ ಪಾರ್ವತಿದೇವಿಗೆ ಅವಳ ಸಂಕಷ್ಟ ಪರಿಹಾರಕ್ಕಾಗಿ ಗಣೇಶನು ಈ ವ್ರತವನ್ನು ಮೊದಲು ಉಪದೇಶಿಸಿದನು. ಪಾರ್ವತಿ ದೇವಿಯು ಯಥೋಕ್ತ ವ್ರತಾಚರಣೆ ಮಾಡಿ ಮಹಾದೇವನನ್ನು ವರಿಸಿದಳು. ಆದರಿಂದ ಎಲೈ ಧರ್ಮರಾಜನೇ ನೀನು ಸಂಕಷ್ಟಹರ ಗಣಪತಿ ವ್ರತವನ್ನು ಭಕ್ತಿಯಿಂದ ಆಚರಿಸಿ ಕೃತಾರ್ಥನಾಗು ಇದಕ್ಕೆ ಸಂಕಷ್ಟಹರ ಚತುರ್ಥಿ ವ್ರತವೆಂಬ ನಾಮವೂ ಇದೆ. ಇದನ್ನು ಭಕ್ತಿಯಿಂದ ಆಚರಿಸಿದಲ್ಲಿ ಜನರ ಈ ಲೋಕದಲ್ಲಿಯೇ ಧರ್ಮಾರ್ಥಕಾಮ ಮೋಕ್ಷಗಳೆಂಬ ಚತುರ್ವಿಧ ಪುರುಷಾರ್ಥಗಳನ್ನು ನಿಸ್ಸಂಶವಾಗಿ ಪಡೆಯುವರು. ಶ್ರಾವಣ ಕೃಷ್ಣ ಚತುರ್ಥಿಯಲ್ಲಿ ಒಂದು ವೇಳೆ ಮಾಡಲಾಗದಿದ್ದರೆ ಬೇರೆ ಯಾವುದಾದರೂ ಕೃಷ್ಣ ಚತುರ್ಥಿಯಯಲ್ಲಾದರೂ ಭಕ್ತಿಯಿಂದ ವ್ರತಾಚರಣೆ ಮಾಡಿದ್ದಲ್ಲಿ ಅವರ ವ್ರತ ಮಹಿಮೆಯಿಂದ ಸರ್ವಾರ್ಥ ಸಾಧನವನ್ನು ಪಡೆಯುವರು. ವಿಧ್ಯಾರ್ಥಿಗಳಿಗೆ ವಿದ್ಯೆಯೂ ,ಧನಾರ್ಥಿಗಳಿಗೆ ಧನವೂ, ಪುತ್ರಾರ್ಥಿಗಳಿಗೆ ಸಂತಾನವೂ ಹೆಚ್ಚೇಕೆ ಮೊಕ್ಷಾರ್ಥಿಗಳಿಗೆ ಮೋಕ್ಷವು ಈ ವ್ರತಾಚರಣೆಯಿಂದ ದೊರಕುವುದು ಈ ವ್ರತವನ್ನು ಕೇಳಿ ತಿಳಿದವರು ಮತ್ತು ಇದನ್ನು ಜನರಿಗೆ ಓದಿ ತಿಳಿಸುವರು ಸಹ ಈ ಲೋಕದ ಸುಖವನ್ನೆಲ್ಲಾ ಸಂಪೂರ್ಣವಾಗಿ ಅನುಭವಿಸಿ ಪರಲೋಕದಲ್ಲಿ ಗಣಸತ್ಯ ಸ್ಥಾನವನ್ನು ಪಡೆಯುವರು ಎಂಬಲ್ಲಿಗೆ ಸಂಕಷ್ಟಹರ ಗಣೇಶ್ವರನ ವ್ರತದ ಕಥೆಯ ಮೊದಲ ಭಾಗವು ಸಮಾಪ್ತಿಯಾಯಿತು... ಮುಂದುವರೆಯುತ್ತದೆ ಶುಭವಾಗಲಿ ▬▬ஜ۩۞۩ஜ▬▬▬*▬▬▬ஜ۩۞۩ஜ▬▬ !! ಸರ್ವಂ ಶ್ರೀ ಕೃಷ್ಣಾರ್ಪಣಮಸ್ತು !! 🙏 ಸರ್ವೇ ಜನಾಃ ಸುಖಿನೋ ಭವಂತುಸರ್ವೇ ಸಂತು ನಿರಾಮಯಾಃ 🙏 !! ಧರ್ಮೋ ರಕ್ಷತಿ ರಕ್ಷಿತಃ !! ▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬ 🙏 ಹರಿ ಸರ್ವೋತ್ತಮ ವಾಯು ಜೀವೋತ್ತಮ 🙏
ರಾಧಾಕೃಷ್ಣ 🦚💙
967 views
4 months ago
#ದಿನಕ್ಕೊಂದು ಕಥೆ #🔱 ಭಕ್ತಿ ಲೋಕ ಅಹಂಕಾರ ಅಳಿಯಬೇಕು :- ಅಹಂಕಾರ ಬಹಳ ಕೆಟ್ಟದ್ದು, ಇದು ನೆತ್ತಿಗೇರಿದರೆ ಮನುಷ್ಯ ಬಾಗುವುದಿಲ್ಲ ಅಹಂಕಾರ ಅವನ ಅವನತಿಗೂ ಕಾರಣ ವಾಗುತ್ತದೆ. ಏನು ಬೇಕಾದರೂ ಸಾಧಿಸಬಲ್ಲೆ ಅಂದರೆ ಅದು ಅವನ ನಂಬಿಕೆ, ನನ್ನಿಂದಲೇ ಎಲ್ಲಾ ಆಗಿದ್ದು ಎಂದು ತಿಳಿದರೆ ಅದು ಅಹಂಕಾರ. ಮಹಾಭಾರತದ ಕುರುಕ್ಷೇತ್ರದ ಯುದ್ಧ ನಡೆಯುತ್ತಿರುವ ಸಮಯ. ಮಹಾರತಿ ಕರ್ಣನಿಗೂ, ಅರ್ಜುನನಿಗೂ ನೇರ ಹಣಾಹಣಿ ಆರಂಭವಾಗಿದೆ. ಅರ್ಜು ನನ ಸಾರಥಿ ಶ್ರೀಕೃಷ್ಣ. ಅರ್ಜುನ ಬಾಣ ಬಿಟ್ಟಾಗ ಕರ್ಣನ ರಥ ಬಹಳ ದೂರ ಹೋಗುತ್ತಿತ್ತು. ಆದರೆ ಕರ್ಣ ಬಾಣ ಬಿಟ್ಟಾಗ ಅರ್ಜುನನ ರಥ ಏಳು ಅಡಿ ಮಾತ್ರ ಹೋಗುತ್ತಿತ್ತು. ಆದರೂ ಕೃಷ್ಣ ವಾಹ್ ಕರ್ಣ ನೀನೆಂಥಾ ಪರಾಕ್ರಮಿ ಎಂದು ಹೇಳುತ್ತಿದ್ದ ಇದು ಪ್ರತಿ ಸಲವು ಪುನರಾವರ್ತನೆಯಾ ಗುತ್ತಿ ತ್ತು. ಇದರಿಂದ ಅರ್ಜುನನ ಮನಸ್ಸಿಗೆ ಕಿರಿಕಿರಿ ಆಯ್ತು ಅವನು ನೇರವಾಗಿ ಕೇಳಿಬಿಟ್ಟ. ಕೃಷ್ಣ ನಾನು ಕರ್ಣನ ಮೇಲೆ ಬಾಣ ಬಿಟ್ಟಾಗ 20 ಅಡಿಗಿಂತ ದೂರ ಹೋಗುತ್ತದೆ . ಅದೇ ಕರ್ಣ ಬಾಣ ಬಿಟ್ಟಾಗ ನಮ್ಮ ರಥ ಏಳು ಅಡಿಯಷ್ಟು ಮಾತ್ರ ಹಿಂದೆ ಹೋಗುತ್ತದೆ. ಆದರೂ ನೀನು ಕರ್ಣನನ್ನೇ ವೀರ ಎಂದೆಲ್ಲಾ ಹೊಗಳುತ್ತಿಯಲ್ಲಾ? ಎಂದನು. ಇದನ್ನು ಕೇಳಿದ ಕೃಷ್ಣ ಹೇಳಿದ, ಅರ್ಜುನ ನಿನ್ನ ರಥದ ಮೇಲೆ ಹನುಮನಿದ್ದಾನೆ, ಜೊತೆಗೆ ನಾನಿದ್ದೇನೆ, ಆದರೆ ಕರ್ಣ ಒಬ್ಬಂಟಿ ಯಾಗಿ ಯುದ್ಧ ಮಾಡುತ್ತಿದ್ದಾನೆ . ಆದರೆ ಕರ್ಣ ಬಿಟ್ಟ ಬಾಣದಿಂದ ನಮ್ಮ ರಥ 7 ಅಡಿ ಮಾತ್ರ ಹಿಂದಕ್ಕೆ ಹೋಗುತ್ತಿದೆ ಎಂದರೆ ಅವನೆಷ್ಷು ಪರಾಕ್ರಮಿ ನೀನೇ ಹೇಳು ಎಂದನು. ಕೃಷ್ಣನ ಮಾತು ಅರ್ಥವಾಗಿ ಅರ್ಜುನ ತಲೆತಗ್ಗಿ ಸಿದ. ಅರ್ಜುನನಿಗೆ ಇನ್ನೊಂದು ಸಲ ಹೀಗೆ ಅಹಂಕಾರ ಬಂದಿತು. ತಾನು ಮಾತ್ರ ಶ್ರೀ ಕೃಷ್ಣನ ಅತ್ಯಂತ ನಿಷ್ಠಾವಂತ ಭಕ್ತ. ನನಗಿರುವಷ್ಟು ಭಕ್ತಿಯನ್ನು ಕೃಷ್ಣನ ಮೇಲೆ ಯಾರೂ ತೋರಿಸಲು ಸಾಧ್ಯವಿಲ್ಲ ಎಂಬ ಭಾವನೆ ಅವನಲ್ಲಿ ಮೊಳಕೆ ಯೊಡದಿತ್ತು. ಈ ವಿಚಾರ ಸರ್ವಾಂತರ್ಯಾಮಿ ಕೃಷ್ಣನಿಗೆ ತಿಳಿಯಿತು. ಅದನ್ನು ಹೋಗಲಾಡಿಸಲು ಅರ್ಜುನನನ್ನು ತಿರುಗಾಡಲು ಕರೆದುಕೊಂಡು ಹೊರಟನು. ಹೀಗೆ ಹೋಗು ತ್ತಿರುವಾಗ ಅಲ್ಲೊಬ್ಬ ಸಾತ್ವಿಕ ಬಡ ಬ್ರಾಹ್ಮಣ ಇದ್ದನು. ಅವ ನು ವಿಷ್ಣುವಿನ ಭಕ್ತನಾಗಿದ್ದನು. ಯಾವುದೇ ಜೀವಿಯನ್ನು ಹಿಂಸಿಸುವುದಿಲ್ಲ ಎಂಬುದು ಅವನ ನಿಯಮವಾಗಿತ್ತು. ಆಶ್ಚರ್ಯ ಎಂದರೆ ಹಸಿ ಹುಲ್ಲಿನಲ್ಲಿ ಜೀವ ಇರುತ್ತೆ ಎಂದುಕೊಂಡು ಹಸಿ ಹುಲ್ಲನ್ನು ತಿನ್ನುತ್ತಿರಲಿಲ್ಲ ಒಣಗಿದ ಹುಲ್ಲುಗಳನ್ನೇ ಆಹಾರವಾಗಿ ಸೇವಿಸುತ್ತಿದ್ದ. ಇನ್ನೂ ಒಂದು ವಿಚಿತ್ರ ಎಂದರೆ ಅವರ ಸೊಂಟದಲ್ಲಿ ಹರಿತವಾದ ಕತ್ತಿ ಇಟ್ಟುಕೊಂಡಿದ್ದ. ಅರ್ಜುನನಿಗೆ ಅನಿಸಿತು. ಈ ಮನುಷ್ಯ ತಿನ್ನುವುದು ಒಣ ಹುಲ್ಲು, ಯಾವುದೇ ಜೀವಿಗೂ ಹಿಂಸೆ ಮಾಡುವುದಿಲ್ಲ ಹೀಗಿರುವಾಗ ಇವನ ಸೊಂಟದಲ್ಲಿ ತಲೆಯನ್ನೆ ಕತ್ತರಿಸುವಂತ ಕತ್ತಿ ಇಟ್ಟುಕೊಂಡಿದ್ದಾನೆ ಯಾಕೆ? ಈ ಪ್ರಶ್ನೆ ಬಂದಿತು. ಕೃಷ್ಣನಲ್ಲಿ ಕೇಳಿದ. ಮುಗುಳ್ನಗುತ್ತಾ ನೀನೇ ಹೋಗಿ ಬ್ರಾಹ್ಮಣನನ್ನೆ ಕೇಳು ಎಂದ. ಬ್ರಾಹ್ಮಣನ ಬಳಿ ಹೋದ ಅರ್ಜುನ, ಸ್ವಾಮಿ ಅಹಿಂಸೆ ನಿಮ್ಮ ವ್ರತ ಇದಕ್ಕಾಗಿ ಹಸಿ ಹುಲ್ಲನ್ನು ತಿನ್ನದೆ ಒಣಹಲ್ಲನ್ನು ತಿನ್ನುತ್ತೀರಿ ಹೀಗಿರುವಾಗ ಇಷ್ಟು ಚೂಪಾದ ಕತ್ತಿಯನ್ನು ನಿಮ್ಮ ಸೊಂಟದಲ್ಲಿ ಏಕೆ ಇಟ್ಟುಕೊಂಡಿದ್ದೀರಿ? ಆ ಬ್ರಾಹ್ಮಣ ಹೇಳಿದ, ನನಗೆ ನಾಲ್ಕು ಜನ ಶತ್ರುಗಳಿದ್ದಾರೆ ಅವರೆಲ್ಲಾದರೂ ನನ್ನ ಕಣ್ಣೀಗೆ ಬಿದ್ದರೆ, ಅವರಿಗೆ ಶಿಕ್ಷೆ ಕೊಡುವುದಕ್ಕೆ ಈ ಹರಿತವಾದ ಕತ್ತಿಯನ್ನು ನನ್ನ ಬಳಿ ಇಟ್ಟುಕೊಂಡಿದ್ದೇನೆ ಎಂದನು. ಮತ್ತೂ ಆಶ್ಚರ್ಯ ದಿಂದ ಅರ್ಜುನ ಕೇಳಿದ ಆ ನಾಲ್ಕು ಜನ ಯಾರು ಎಂದು, ಅವರಲ್ಲಿ ಮೊದಲನೆಯವನು ನಾರದ, ನಾರದರಾ?, ಅವರೇನು ಮಾಡಿದರು? ನಾರದಗೆ ಮಾಡುವುದಕ್ಕೆ ಬೇರೆ ಕೆಲಸವಿಲ್ಲ. ನನ್ನ ಸ್ವಾಮಿಯನ್ನು, ಹಗಲು ರಾತ್ರಿ, ನಾರಾಯಣ, ನಾರಾಯಣ, ನಾರಾಯಣ, ನಾರಾಯಣ ಎಂದು ಸ್ಮರಣೆ ಮಾಡುತ್ತಾ ನನ್ನ ಭಗವಂತನ ವಿಶ್ರಾಂತಿಯನ್ನು, ನಿದ್ದೆಯನ್ನು ಕಿತ್ತುಕೊಂಡಿದ್ದಾನೆ. ಅವನಿಗೆ ಭಗವಂತನ ಮೇಲೆ ಸ್ವಲ್ಪವೂ ಕರುಣೆ ಇಲ್ಲ ಆದ್ದರಿಂದ ನಾರದ ಕಂಡರೆ ಅವನನ್ನು ಕತ್ತಿಯಿಂದ ವಿಚಾರಿಸುತ್ತೇನೆ ಎಂದ. ಈ ಕಥೆಯನ್ನು ಬರಹ ರೂಪಕ್ಕೆ ತಂದವರು — ಆಶಾ ನಾಗಭೂಷಣ. ಅರ್ಜುನ ಕೇಳಿದ ಎರಡನೆಯವರು ಯಾರು? ಮಹಾ ಅಹಂಕಾರಿ ದ್ರೌಪದಿ ಎಂದಾಗ ಆಶ್ಚರ್ಯದಿಂದ ಅರ್ಜುನ ಕೇಳಿದ ಅವಳೇನು ಮಾಡಿದಳು?. ಅವಳಾ ನನ್ನ ಸ್ವಾಮಿ ಮಲಗಿರುವಾಗ ಹೊತ್ತು ಗೊತ್ತಿಲ್ಲದೆ ಕೂಗಿ ಕರೆಯುತ್ತಾಳೆ. ಪಾಂಡವರು ಕಾಮ್ಯಕ ವನದಲ್ಲಿದ್ದಾಗ ದೂರ್ವಾಸಮುನಿಗಳ ಕೋಪಕ್ಕೆ ತುತ್ತಾಗಬೇಕಿತ್ತು. ಆ ದ್ರೌಪತಿ ನನ್ನ ಸ್ವಾಮಿ ಯನ್ನು ಕರೆದು ನಿದ್ರಾಭಂಗ ಮಾಡಿದಳು, ಇಷ್ಟೇ ಅಲ್ಲದೆ ತಾನು ತಿಂದು ಉಳಿದ ಎಂಜಲು ಅನ್ನ ತಿನ್ನಿಸಿದಳು. ಅವಳು ಸಿಕ್ಕಲಿ ದಂಡಿಸುತ್ತೇನೆ ಎಂದ. ಈಗ ಅರ್ಜುನ ಕೇಳಿದ ಹಾಗಾದರೆ ನಿಮ್ಮ ಕೋಪಕ್ಕೆ ಗುರಿಯಾಗಿರುವ ಮೂರನೇ ವ್ಯಕ್ತಿ ಯಾರು, ಅದೇ ಆ ಮಹಾ ಹಠವಾದಿ ಪ್ರಹಲ್ಲಾದ, ಇವನಂತು ಮಹಾ ಕ್ರೂರಿ, ನನ್ನ ಸ್ವಾಮಿಯು ಪ್ರಹಲ್ಲಾದನನ್ನು ರಕ್ಷಿಸಲು, ಭಾರಿ ಗಾತ್ರದ ಕಂಬವನ್ನು ಸೀಳಿಕೊಂಡು ಬರಬೇಕಾಯಿತು. ಕುದಿಯುವ ಎಣ್ಣೆಕೊಪ್ಪರಿಗೆಯಲ್ಲಿ ಕೈ ಹಾಕಬೇಕಾಯಿತು. ವಿಷದ ಹಾವುಗಳ ನಡುವೆ ಹೋಗಬೇಕಾಯಿತು. ಆನೆ ಕಾಲಿನಿಂದ ತುಳಿಸಿ ಕೊಳ್ಳಬೇಕಾಯಿತು. ಇವನಂತೂ ಎಷ್ಟೊಂದು ಕಷ್ಟ ಕೊಟ್ಟಿದ್ದಾನೆ ಆದ್ದರಿಂದ ಪ್ರಹ್ಲಾದವನ್ನು ಬಿಡುವುದಿಲ್ಲ ಎಂದ. ಅರ್ಜುನನು ಕೇಳಿದ ನಿನ್ನ ಕೋಪಕ್ಕೆ ಗುರಿಯಾದ ನಾಲ್ಕನೇ ವ್ಯಕ್ತಿ ಯಾರು ಎಂದನು. ಎದುರಿಗೆ ನಿಂತು ಪ್ರಶ್ನೆ ಕೇಳುತ್ತಿರು ವನು ಅರ್ಜುನ ಎಂದು ಗೊತ್ತಿಲ್ಲದೆ, ಆ ಬ್ರಾಹ್ಮಣ ಹೇಳಿದ,. ಅವನೇ ಆ ನೀಚ ಅರ್ಜುನ ಎಂದನು. ಆಶ್ಚರ್ಯವಾದರೂ ತೋರಗೊಡದೆ, ಅರ್ಜುನನಾ, ಅವನು ಏನು ಮಾಡ್ದ?ಅವನಾ, ಕುರುಕ್ಷೇತ್ರ ಯುದ್ಧದಲ್ಲಿ, ಭಗವಂತನನ್ನು , ತನ್ನ ರಥದ ಸಾರಥಿ ಯನ್ನಾಗಿ ಮಾಡಿಕೊಂಡು ರಥ ಓಡಿಸುವ ಕೆಲಸ ಮಾಡಿಸಿದ್ದಾನೆ. ಅವನು ಸಿಕ್ಕರು ಬಿಡುವುದಿಲ್ಲ ಎಂದನು. ಬ್ರಾಹ್ಮಣನ ಮಾತುಗಳನ್ನು ಕೇಳಿ, ತಾನೇ ಕೃಷ್ಣನ ದೊಡ್ಡ ಭಕ್ತ ಎಂದು ತಿಳಿದಿದ್ದ ಅರ್ಜುನನಿಗೆ ನೀರ ಮೇಲಣ ಗುಳ್ಳೆ ನಿಜವಲ್ಲ ಹರಿಯೇ ಎಂಬುದು. ತಿಳಿಯಿತು. 'ನಾನು' ಎಂಬು ದು ಹೋದರೆ ಭಗವಂತ ಎಲ್ಲರಿಗೂ ಅರ್ಥವಾಗುತ್ತಾನೆ. ಭಗವಂತನು ಭಕ್ತರು ಪ್ರೀತಿಯಿಂದ ಏನೇ ಕೊಟ್ಟರು ಸ್ವೀಕರಿಸುತ್ತಾನೆ. ಎಂಜಲನ್ನು ಕೊಟ್ಟರು ಸ್ವೀಕರಿಸುತ್ತಾನೆ. ರಥದ ಸಾರಥಿ ಯಾಗುತ್ತಾನೆ, ಮರದ ಕೆಳಗೆ ಮಲಗುತ್ತಾನೆ, ಪುಟ್ಟ ಪಕ್ಷಿ ಸಹಾಯ ಕೇಳಿದರು ಮಾಡುತ್ತಾನೆ, ಭಕ್ತಿಯಿಂದ ಕರೆದವರಿಗೆ ಬಾಲಕನಾಗಿ ಬರುತ್ತಾನೆ, ಗೆಳೆಯನಾಗಿ ಇರುತ್ತಾ ನೆ, ಮಗನಂತೆ ಸೇವೆ ಮಾಡುತ್ತಾನೆ. ಬಂಧು ಭಾಂದವನಾಗಿ ಇರುತ್ತಾನೆ. ಅಹಂಕಾರವನ್ನು ಭಗವಂತ ಸಹಿಸುವುದಿಲ್ಲ. ನಿನಗರ್ಪಿತ ಪ್ರಭುವೇ ನಿನಗರ್ಪಿತ ! ಅನುದಿನವು ನಾಗೈದ ಪಾಪ ಪುಣ್ಯದ ಫಲವು ನಿನಗರ್ಪಿತ ಪ್ರಭುವೇ ನಿನಗರ್ಪಿತ! ಪರರೆನ್ನ ನಿಂದಿಸಲು ನಿನಗರ್ಪಿತ ! ಪರರೆನ್ನ ವಂದಿಸಲು ಅದು ಅರ್ಪಿತ ಪರರೊಳಗೆ ನೀದೋರಿ ಪರಮಾದರದಿಂದ ಪಾಮರನ ಪಾಲಿಪುದು ಅದು ಅರ್ಪಿತ!! ಎನ್ನಯ ನಡೆ-ನುಡಿ ನಿನಗರ್ಪಿತ, ಎನ್ನಯ ತನುಮನ ಅದು ಅರ್ಪಿತ ಏನ್ನೋಡಲ ಉಸಿರಾಟ ನಿನಗರ್ಪಿತ ಎನ್ನಯ ಸರ್ವಸ್ವ ಅದು ಅರ್ಪಿತ !! ಅನವರತ ನಿನ್ನ ಸ್ಮರಣೆ ನಿನಗರ್ಪಿತ ! ಅದ ಬಿಟ್ಟು ವ್ಯವಹರಿಸೆ ಅದು ಅರ್ಪಿತ ಅಚ್ಚುತಾ, ಅನಂತ, ಗೋವಿಂದ, ಮುಕುಂದ, ಅಂಬೆ ಶಾರದಯೇ ನಿನಗರ್ಪಿತ!! ವಂದನೆಗಳೊಂದಿಗೆ, ಬರಹ: ©ಆಶಾ ನಾಗಭೂಷಣ ▬▬ஜ۩۞۩ஜ▬▬▬*▬▬▬ஜ۩۞۩ஜ▬▬ !! ಸರ್ವಂ ಶ್ರೀ ಕೃಷ್ಣಾರ್ಪಣಮಸ್ತು !! 🙏 ಸರ್ವೇ ಜನಾಃ ಸುಖಿನೋ ಭವಂತುಸರ್ವೇ ಸಂತು ನಿರಾಮಯಾಃ 🙏 !! ಧರ್ಮೋ ರಕ್ಷತಿ ರಕ್ಷಿತಃ !! ▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬ 🙏 ಹರಿ ಸರ್ವೋತ್ತಮ ವಾಯು ಜೀವೋತ್ತಮ 🙏